'ರೋಹಿತ್‌ ಶರ್ಮ ತರ ಇರ್ಬೇಕು..' ವಿಶ್ವಕಪ್‌ಗೂ ಮುನ್ನ ಶುರುವಾಯ್ತು ಬಾಂಗ್ಲಾ ಟೀಮ್‌ನಲ್ಲಿ ಕಿತ್ತಾಟ!

By Santosh NaikFirst Published Sep 28, 2023, 3:08 PM IST
Highlights

ವಿಶ್ವಕಪ್‌ ಆರಂಭಕ್ಕೂ ಮುನ್ನ ಬಾಂಗ್ಲಾದೇಶ ಟೀಮ್‌ನಲ್ಲಿ ಕಿತ್ತಾಟ ಶುರುವಾಗಿದೆ. ವಿಶ್ವಕಪ್‌ಗೆ ಪ್ರಕಟ ಮಾಡಿರುವ ತಂಡದಲ್ಲಿ ಆರಂಭಿಕ ಆಟಗಾರ ತಮೀಮ್‌ ಇಕ್ಬಾಲ್‌ ಸ್ಥಾನ ಪಡೆದಿಲ್ಲ. ಶಕೀಬ್‌ ಅಲ್‌ ಹಸನ್‌ ಅವರನ್ನು ನಾಯಕರನ್ನಾಗಿ ನೇಮಕ ಮಾಡಿದ್ದೇ ಈಗ ವಿವಾದದ ಮೂಲವಾಗಿದೆ.

ನವದೆಹಲಿ (ಸೆ.28): ಬಾಂಗ್ಲಾದೇಶ ಕ್ರಿಕೆಟ್‌ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌, ತಂಡದ ಸಹ ಆಟಗಾರ ತಮೀಮ್‌ ಇಕ್ಬಾಲ್‌ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಅವರದು ಬಾಲಿಶ ವ್ಯಕ್ತಿತ್ವ ಎಂದಿರುವ ಶಕೀಬ್‌ ಅಲ್‌ ಹಸನ್‌, 2023ರ ಏಕದಿನ ವಿಶ್ವಕಪ್‌ನಲ್ಲಿ ತಂಡದ ಅಗತ್ಯಕ್ಕಿಂತ ವೈಯಕ್ತಿ ಹಿತಾಸಕ್ತಿಗಳೇ ಅವರಿಗೆ ಮುಖ್ಯವಾಗಿದೆ ಎಂದು ಟೀಕೆ ಮಾಡಿದ್ದಾರೆ. ವಿಶ್ವಕಪ್‌ ಟೂರ್ನಿ ಆರಂಭವಾಗುವ ಕೆಲವೇ ದಿನಗಳ ಮೊದಲು ಬಾಂಗ್ಲಾದೇಶ ತಂಡದಲ್ಲಿ ಈ ಕಿತ್ತಾಟ ಶುರುವಾಗಿದೆ. ನಿರಂತರವಾಗಿ ಬೆನ್ನುನೋವಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಅನುಭವಿ ಅಟಗಾರ ತಮೀಮ್‌ ಇಕ್ಬಾಲ್‌ರನ್ನು ಆರೋಗ್ಯದ ಕಾರಣ ನೀಡಿ ವಿಶ್ವಕಪ್‌ ತಂಡದಿಂದ ಕೈಬಿಡಲಾಗಿದೆ. ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯೇ ತಿಳಿಸಿತ್ತು. ಆದರೆ, ಅಚ್ಚರಿ ಎನ್ನುವಂತೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡ ತಮೀಮ್‌ ಇಕ್ಬಾಲ್‌, ತಾವು ಸಂಪೂರ್ಣವಾಗಿ ಫಿಟ್‌ ಆಗಿದ್ದು, ವಿಶ್ವಕಪ್‌ ಟೂರ್ನಿ ಆಡಲು ಸಿದ್ಧವಾಗಿದ್ದೆ. ಆದರೆ, ನನ್ನ ಆಯ್ಕೆ ಮಾಡದಿರುವಲ್ಲಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ ಕೈವಾಡವಿದೆ ಎಂದು ದೂರಿದ್ದರು. ಬಿಸಿಬಿಯ ಹಿರಿಯ ಅಧಿಕಾರಿಯೊಬ್ಬರು, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲು ಸಾಧ್ಯವಾದರೆ ಮಾತ್ರವೇ ತಂಡಕ್ಕೆ ಆಯ್ಕೆ ಮಾಡುವುದಾಗಿ ತಿಳಿಸಿದ್ದರು ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಕೀಬ್ ಅಲ್ ಹಸನ್ ಟಿ-ಸ್ಪೋರ್ಟ್ಸ್‌ನೊಂದಿಗಿನ ಸಂದರ್ಶನದಲ್ಲಿ ಇದನ್ನೂ ಸಂಪೂರ್ಣವಾಗಿ ತಿರಸ್ಕರಿಸಲಿಲ್ಲ. ಆದರೆ, ತಮೀಮ್ ಅವರ ವಿಧಾನವನ್ನು ಟೀಕಿಸಿದರು ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಿಂತ ತಂಡದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಮಹತ್ವವನ್ನು ಒತ್ತಿ ಹೇಳಿದರು.

ತಂಡದ  ಪರವಾದ ಅಧಿಕೃತ ವ್ಯಕ್ತಿ ತಮೀಮ್‌ ಅವರಿಗೆ ಈ ಮಾತುಗಳನ್ನು ಹೇಳಿರಬಹುದು ಎಂದು ಶಕೀಬ್‌ ಹೇಳಿದ್ದಾರೆ. ಆದರೆ, ಅವರಿಗೆ ಯಾರು ಈ ಮಾತನ್ನು ಹೇಳಿದ್ದಾರೋ, ಅವರಿಗೆ ತಂಡದ ಬಗ್ಗೆ ಬಹಳಷ್ಟು ಯೋಚಿಸಿದ್ದಾರೆ ಎಂದುಕೊಳ್ಳುತ್ತೇನೆ. ಒಂದು ಪಂದ್ಯದಕ್ಕೆ ತಂಡವನ್ನು ರೆಡಿ ಮಾಡಬೇಕಾದಲ್ಲಿ, ಸಾಕಷ್ಟು ಸಂಯೋಜನೆಗಳು ವರ್ಕ್‌ಔಟ್‌ ಮಾಡಬೇಕಾಗುತ್ತದೆ. ಹಾಗಾಗಿ ತಂಡದ ಅಧಿಕಾರಿಯೊಬ್ಬರು, ಅವರಿಗೆ ಈ ಮಾತು ಹೇಳಿದ್ದಾರೆ ಎಂದರೆ, ಅದರಲ್ಲಿ ತಪ್ಪೇನಿದೆ. ಅವರಿಗೆ ನಾವು ಈ ಪ್ರಸ್ತಾಪವನ್ನು ಮಾಡಲೇಬಾರದಿತ್ತೇ? ನೀವು ಏನು ಬೇಕಾದರೂ ಮಾಡಬಹುದು ಅದಕ್ಕೆ ನಿಮಗೆ ಸ್ವಾತಂತ್ರ್ಯವಿದೆ ಎಂದು ಹೇಳುತ್ತೇನೆ. ಆದರೆ, ನಿಮಗೆ ತಂಡ ಮುಖ್ಯವೋ, ವೈಯಕ್ತಿಕ ಹಿತಾಸಕ್ತಿ ಮುಖ್ಯವೋ? ಎಂದು ಪ್ರಶ್ನೆ ಮಾಡುತ್ತೇನೆ ಎಂದು ಶಕೀಬ್‌ ಹೇಳಿದ್ದಾರೆ.

ಭಿನ್ನ ಬ್ಯಾಟಿಂಗ್‌ ಕ್ರಮಾಂಕವನ್ನು ಒಪ್ಪಿಕೊಳ್ಳಲು ತಮೀಮ್‌ ನಿರಾಕರಿಸಿದ ಬಗ್ಗೆ ಶಕೀಬ್‌ ಅವರಿಗೆ ಪ್ರಶ್ನಿಸಲಾಯಿತು. ಈ ವೇಳೆ ರೋಹಿತ್‌ ಶರ್ಮ ಅವರ ಉದಾಹರಣೆಯನ್ನು ಶಕೀಬ್‌ ನೀಡಿದರು. ಭಾರತ ತಂಡದ ಪರವಾಗಿ ಮೊದಲು  ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದ ರೋಹಿತ್‌ ಶರ್ಮ ಈಗ ಆರಂಭಿಕರಾಗಿದ್ದಾರೆ. ತಂಡದ ಯಶಸ್ಸಿಗಾಗಿ ಆಡುವುದು ಯಾವಾಗಲೂ ವೈಯಕ್ತಿಕ ದಾಖಲೆಗಳು ಮತ್ತು ಖ್ಯಾತಿಗಿಂತ ಆದ್ಯತೆ ನೀಡಬೇಕು ಎಂದು ಶಕೀಬ್ ಪ್ರಮುಖವಾಗಿ ತಿಳಿಸಿದ್ದಾರೆ.

ಪತ್ನಿ ಜೊತೆ ತಿರುಪತಿ ವೆಂಕಟರಮಣ ಸ್ವಾಮಿಯ ದರ್ಶನ ಪಡೆದ ಗಂಭೀರ್‌!

ತಮೀಮ್‌ನ ಫಿಟ್‌ನೆಸ್‌ಗೆ ಸಂಬಂಧಿಸಿದಂತೆ, ಶಕೀಬ್ ಗಾಯದ ಕಾಳಜಿ ಹೊಂದಿರುವ ಆಟಗಾರನನ್ನು ಸೇರಿಸಿಕೊಳ್ಳದಿರುವ ಮಂಡಳಿಯ ನಿರ್ಧಾರವನ್ನು ಸಮರ್ಥಿಸಿಕೊಂಡರು. ಇದೇ ವೇಳೆ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಮಾತನ್ನು ಮತ್ತೊಮ್ಮೆ ಪುನರಾವರ್ತಿಸಿದರು. ಅನ್‌ಫಿಟ್‌ ಆಗಿರುವ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಿದರೆ, ಆತ ಬರೀ ತಂಡಕ್ಕೆ ಮಾತ್ರವಲ್ಲ ದೇಶಕ್ಕೂ ಮೋಸ ಮಾಡಿದಂತೆ ಎಂದು ಹೇಳಿದರು.

ಬೃಹತ್ ಮೊತ್ತಕ್ಕೆ ಭಾರತ ಕಂಗಾಲು, 3ನೇ ಏಕದಿನಲ್ಲಿ ಆಸ್ಟ್ರೇಲಿಯಾಗೆ 66 ರನ್ ಗೆಲುವು!

"ರೋಹಿತ್ ಶರ್ಮಾ ಅವರಂತಹವರು ತಮ್ಮ ವೃತ್ತಿಜೀವನವನ್ನು 7ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ನಿಂದ ಆರಂಭಿಕ ಆಟಗಾರನವರೆಗೆ ಏರಿಸಿದರು. ಅದರೊಂದಿಗೆ 10,000 ಪ್ಲಸ್ ರನ್ ಗಳಿಸಿದರು. ಬ್ಯಾಟ್ಸ್‌ಮನ್‌ವೊಬ್ಬ 3 ಅಥವಾ 4ನೇ ಕ್ರಮಾಂಕದಲ್ಲಿ ಆಡಿದರೆ ಸಮಸ್ಯೆ ಆಗುತ್ತದೆಯೇ? ಅವರ ಧೋರಣೆಯೇ ಬಾಲಿಶ. ಇದು ನನ್ನ ಕ್ರಮಾಂಕ. ಇಲ್ಲಿ ನಾನೇ ಆಡಬೇಕು ಬೇರೆ ಯಾರೂ ಆಡಬಾರದು ಎನ್ನುವುದು ನಡೆಯುವುದಿಲ್ಲ. ಆಟಗಾರ ಯಾವುದೇ ಕ್ರಮಾಂಕದಲ್ಲಿ ಆಡಲೂ ಕೂಡ ಸಿದ್ದವಾಗಿರಬೇಕು. ತಂಡವೇ ಮೊದಲ ಆದ್ಯತೆಯಾಗಿರಬೇಕು. ನೀವು 100-200 ಗಳಿಸಿ ತಂಡ ಸೋಲು ಕಂಡರೆ ಅದು ಪ್ರಯೋಜನವಿಲ್ಲ. ನಿಮ್ಮ ವೈಯಕ್ತಿಕ ಸಾಧನೆಯೊಂದಿಗೆ ಏನು ಮಾಡುತ್ತೀರಿ? ನಿಮ್ಮ ಹೆಸರು ಮಾಡಿಕೊಳ್ಳೋದಕ್ಕೆ ತಂಡ ಇರೋದಲ್ಲವಲ್ಲ? ಎಂದು ಶಕೀಬ್‌ ಖಾರವಾಗಿ ಮಾತನಾಡಿದ್ದಾರೆ.
 

click me!