
ನವದೆಹಲಿ(ಜು.18): ರಾಜಕೀಯ ಘರ್ಷಣೆ, ಆರ್ಥಿಕ ಸಮಸ್ಯೆಯಿಂದ ತತ್ತರಿಸಿರುವ ಶ್ರೀಲಂಕಾದಿಂದ ಏಷ್ಯಾಕಪ್ ಟಿ20 ಟೂರ್ನಿಯು ಯುಎಇಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ ಎಂದು ಸ್ವತಃ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಹೇಳಿದ್ದಾರೆ. ತವರಿನಲ್ಲಿ ಆಸ್ಪ್ರೇಲಿಯಾ ವಿರುದ್ಧದ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಳಿಕ, ಸದ್ಯ ಲಂಕಾ ಕ್ರಿಕೆಟ್ ಮಂಡಳಿ ಪಾಕಿಸ್ತಾನ ತಂಡಕ್ಕೆ ಆತಿಥ್ಯ ವಹಿಸುತ್ತಿದೆ. ಹೀಗಿದ್ದರೂ ಏಷ್ಯಾಕಪ್ ಟೂರ್ನಿಯನ್ನು ಸ್ಥಳಾಂತರಿಸಲು ಏಷ್ಯಾ ಕ್ರಿಕೆಟ್ ಸಮಿತಿ ನಿರ್ಧರಿಸಬಹುದು ಎನ್ನಲಾಗಿದೆ. ಟೂರ್ನಿಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್ 27ರಿಂದ ಸಪ್ಟೆಂಬರ್ 11ರ ವರೆಗೆ ನಡೆಯಲಿದ್ದು, ದುಬೈ ಹಾಗೂ ಶಾರ್ಜಾದಲ್ಲಿ ಪಂದ್ಯಾಟಗಳು ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ವಾರ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಈ ರೀತಿಯ ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದ್ದರೂ ಎಸಿಸಿ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ಕಳೆದ ವಾರದವರೆಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿಯು, ತಮ್ಮ ದ್ವೀಪರಾಷ್ಟ್ರದಲ್ಲೇ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಯೋಜಿಸುವ ಬಗ್ಗೆ ಸಂಪೂರ್ಣ ಆತ್ಮವಿಶ್ವಾಸವನ್ನು ಹೊಂದಿತ್ತು. ಆದರೆ ರಾಜಕೀಯ ಘರ್ಷಣೆ, ಆರ್ಥಿಕ ಸಮಸ್ಯೆಯಿಂದ ತತ್ತರಿಸಿರುವ ಶ್ರೀಲಂಕಾವೂ ಇದೀಗ ಏಷ್ಯಾಕಪ್ ಟೂರ್ನಿ ಆಯೋಜಿಸುವ ಕುರಿತಂತೆ ಕೊಂಚ ಮೆತ್ತಗಾದಂತೆ ಇದೆ.
ಒಂದು ಕಡೆ ರಾಜಕೀಯ ಅರಾಜಕತೆಯ ನಡುವೆಯೇ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತವರಿನಲ್ಲಿ ಆಸ್ಟ್ರೇಲಿಯಾದ ಎದುರು ದ್ವಿಪಕ್ಷೀಯ ಸರಣಿ ನಡೆಸಿ ಸೈ ಎನಿಸಿಕೊಂಡಿತ್ತು. ಆಸ್ಟ್ರೇಲಿಯಾ ತಂಡವು ಶ್ರೀಲಂಕಾದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿ, 5 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಿತ್ತು. ಇದಾದ ಬಳಿಕ ಸದ್ಯ ಪಾಕಿಸ್ತಾನ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ದ್ವೀಪ ರಾಷ್ಟ್ರ ಆತಿಥ್ಯವನ್ನು ವಹಿಸಿದೆ.
Sri Lanka Crisis ಏಷ್ಯಾಕಪ್ ಲಂಕಾದಿಂದ ಬಾಂಗ್ಲಾಗೆ ಸ್ಥಳಾಂತರ?
ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಿಸುವುದಕ್ಕೂ ಏಷ್ಯಾಕಪ್ನಂತಹ ಟೂರ್ನಿ ನಡೆಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇದೇ ಜುಲೈ 22ರಂದು ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎರಡೆರಡು ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಒಂದು ವೇಳೆ ಈ ಬಾರಿ ಏಷ್ಯಾಕಪ್ ಟೂರ್ನಿಯು ಯುಎಇಗೆ ಸ್ಥಳಾಂತರವಾದರೇ ಕಳೆದ 5 ವರ್ಷಗಳಲ್ಲಿ ಎರಡನೇ ಬಾರಿಗೆ ಏಷ್ಯಾಕಪ್ ಟೂರ್ನಿಗೆ ಯುಎಇ ಆತಿಥ್ಯ ವಹಿಸಿದಂತಾಗುತ್ತದೆ. 2018ರಲ್ಲೂ ಯುಎಇ, ಏಷ್ಯಾಕಪ್ ಟೂರ್ನಿಗೆ ಆತಿಥ್ಯ ವಹಿಸಿತ್ತು.
ವಿಂಡೀಸ್ ಏಕದಿನ ಸರಣಿ: ಬಾಂಗ್ಲಾ 3-0 ಕ್ಲೀನ್ಸ್ವೀಪ್
ಜಾಜ್ರ್ಟೌನ್: ವೆಸ್ಟ್ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡ 4 ವಿಕೆಟ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 3-0 ಕ್ಲೀನ್ಸ್ವೀಪ್ ಮಾಡಿದೆ. ಮೊದಲು ಬ್ಯಾಟ್ ಮಾಡಿದ ವಿಂಡೀಸ್ ನಾಯಕ ನಿಕೋಲಸ್ ಪೂರನ್(73) ಹೋರಾಟದ ಹೊರತಾಗಿಯೂ 48.4 ಓವರಲ್ಲಿ 178ಕ್ಕೆ ಆಲೌಟಾಯಿತು. ತೈಜುಲ್ ಇಸ್ಲಾಂ 5 ವಿಕೆಟ್ ಪಡೆದರು. ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾ 48.3 ಓವರ್ಗಳಲ್ಲಿ ಜಯಗಳಿಸಿತು. ಲಿಟನ್ ದಾಸ್ 50 ರನ್ ಸಿಡಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.