
ಬೆಂಗಳೂರು: ಭಾರತದ ಮಾಜಿ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ದಿಢೀರ್ ವಿದಾಯ ಘೋಷಿಸಿದ ಬೆನ್ನಲ್ಲೇ, ಅವರ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿಗೆ ಅಭಿನಂದನೆ ಸಲ್ಲಿಸಿರುವ ಅನುಷ್ಕಾ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವಪೂರ್ಣ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಈ ಸೋಷಿಯಲ್ ಮೀಡಿಯಾ ಪೋಸ್ಟ್ ಈಗ ವೈರಲ್ ಆಗಿದೆ
“ನೀನು ಯಾವ ಮಾರ್ಗವನ್ನು ತೋರಿಸಿದ್ದೀಯೋ, ಅದು ನನ್ನನ್ನೂ ಪ್ರೇರಿತಳನ್ನಾಗಿಸಿದೆ” ಎಂದು ಅನುಷ್ಕಾ ಬರೆದಿದ್ದು, ವಿರಾಟ್ನ ನಿಷ್ಠೆ, ಶಿಸ್ತು ಮತ್ತು ಕ್ರಿಕೆಟ್ ಬದ್ಧತೆಯ ಕುರಿತು ಮನಬಿಚ್ಚಿ ಬರೆದುಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಪ್ರತಿಕ್ರಿಯೆ:
'ಅವರೆಲ್ಲಾ ನಿನ್ನ ರೆಕಾರ್ಡ್ಸ್ ಹಾಗೂ ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ನೀವು ಎಂದಿಗೂ ತೋರಿಸದ ಕಣ್ಣೀರು, ಯಾರೂ ನೋಡದ ಹೋರಾಟ ಮತ್ತು ಈ ಆಟದ ಸ್ವರೂಪಕ್ಕೆ ನೀವು ನೀಡಿದ ಅಚಲ ಪ್ರೀತಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಪ್ರತಿ ಟೆಸ್ಟ್ ಸರಣಿಯ ನಂತರ, ನೀವು ಸ್ವಲ್ಪ ಬುದ್ಧಿವಂತರಾಗಿ, ಸ್ವಲ್ಪ ವಿನಮ್ರರಾಗಿ ಹಿಂತಿರುಗಿದ್ದೀರಿ ಮತ್ತು ನೀವು ಅದರ ಮೂಲಕ ವಿಕಸನಗೊಳ್ಳುವುದನ್ನು ನೋಡುವುದು ನೋಡಲು ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ.
'ನೀವು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೆಸ್ಟ್ನಿಂದ ನಿವೃತ್ತರಾಗುತ್ತೀರಿ ಎಂದು ನಾನು ಯಾವಾಗಲೂ ಊಹಿಸಿದ್ದೆ. ಆದರೆ ನೀವು ಯಾವಾಗಲೂ ನಿಮ್ಮ ಹೃದಯದ ಮಾತನ್ನು ಅನುಸರಿಸಿದ್ದೀರಿ, ನೀವು ವಿದಾಯಕ್ಕೆ ಅರ್ಹರಿದ್ದೀರ' ಎಂದು ಅನುಷ್ಕಾ ಶರ್ಮಾ, ಕೊಹ್ಲಿ ಟೆಸ್ಟ್ ನಿವೃತ್ತಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.
'ನೀನು ಆಟವನ್ನೂ, ದೇಶವನ್ನೂ ಎಷ್ಟು ಪ್ರೀತಿಸುತ್ತೀಯೆ ಎಂಬುದು ನನಗೆ ಬಹಳ ಚೆನ್ನಾಗಿ ಗೊತ್ತಿದೆ. ನಿನ್ನ ಈ ಸಂಯಮ, ಶ್ರಮ, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮ ನನಗೆ ಸದಾ ಪ್ರೇರಣೆಯಾಗಿದೆ. ನಿನ್ನಿಂದ ನಾನು ಸಾಕಷ್ಟು ಕಲಿತಿದ್ದೇನೆ. ನಿನ್ನ ಈ ಪ್ರಯಾಣದಲ್ಲಿ ನಾನು ಜತೆಯಾಗಿದ್ದೇನೆ. ನಿನ್ನ ಜೀವನದ ಈ ಟೆಸ್ಟ್ ಕ್ರಿಕೆಟ್ನ ಅಧ್ಯಾಯವನ್ನು ಎಷ್ಟು ಚೆನ್ನಾಗಿ ಮುಕ್ತಾಯಗೊಳಿಸಿದ್ದಕ್ಕೂ ನಮನ ಎಂದು ಬರೆದಿದ್ದಾರೆ.”
ಅಭಿಮಾನಿಗಳ ಆರೋಪ:
ವಿರಾಟ್ ಕೊಹ್ಲಿಯ ನಿವೃತ್ತಿಯ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಅಭಿಮಾನಿಗಳು ಅನುಷ್ಕಾ ಶರ್ಮಾರ ಮೇಲೆಯೇ ಆರೋಪ ಮಾಡಿದ್ದಾರೆ. "ಕೊಹ್ಲಿ ಬದುಕು ಬದಲಾಗಿದ್ದು ಅನುಷ್ಕಾ ಶರ್ಮಾ ಆಗಮನಿದಂದ" ಎಂಬ ಆರೋಪ ಮತ್ತೆ ಕೇಳಿಬರುತ್ತಿದೆ. ಆದರೆ, ಅನೇಕರು ಅನುಷ್ಕಾದ ಈ ಭಾವನಾತ್ಮಕ ಸಂದೇಶಕ್ಕೆ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.
ಕೊಹ್ಲಿಯ ಟೆಸ್ಟ್ ವೃತ್ತಿಜೀವನದ ಸಂಕ್ಷಿಪ್ತ ಪರಿಚಯ:
ಪಂದ್ಯಗಳು: 123
ಇನ್ನಿಂಗ್ಸ್ಗಳು: 210
ಒಟ್ಟು ರನ್ಗಳು: 9230
ಸರಾಸರಿ: 46.85
ಶತಕಗಳು: 30
ಅರ್ಧಶತಕಗಳು: 31
ಅತ್ಯುತ್ತಮ ಸ್ಕೋರ್: 254*
ವಿರಾಟ್ ಕೊಹ್ಲಿಗೆ 10,000 ರನ್ ಕ್ಲಬ್ ಸೇರಲು ಕೇವಲ 770 ರನ್ ಅಗತ್ಯವಿತ್ತು. ಆದರೂ, ಅವರು ಭಾವುಕವಾಗಿ ಆಟದಿಂದ ವಿದಾಯ ಹೇಳಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.
ಅಭಿಮಾನಿಗಳಿಂದ ಬೆಂಬಲ:
ಅನೇಕರು ಕೊಹ್ಲಿಯ ಈ ನಿರ್ಧಾರವನ್ನು ಗೌರವಿಸುತ್ತಾ, ಅನುಷ್ಕಾ ಅವರ ಭಾವನಾತ್ಮಕ ಮಾತುಗಳು ನಿಜಕ್ಕೂ ಮನ ತಟ್ಟಿದವು ಎಂದು ಹೇಳುತ್ತಿದ್ದಾರೆ. "ಅವನ ಮುಂದಿನ ಜೀವನಕ್ಕೆ ಶುಭವಾಗಲಿ" ಎಂಬ ಆಶಯಗಳನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಸೋತಿತ್ತು. ಇದರ ಬೆನ್ನಲ್ಲೇ ಹಿರಿಯ ಆಟಗಾರರ ಮೇಲೆ ಟೀಕೆಗಳು ಕೇಳಿಬಂದಿದ್ದವು. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯದಲ್ಲೇ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರೆ, ರೋಹಿತ್ ಶರ್ಮಾ ಹಾಗೂ ಕೊಹ್ಲಿ ಕೂಡಾ ವಿದಾಯ ಹೇಳಿರುವುದು ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.