
"ದುಡ್ಡಿಲ್ಲದಿದ್ರೆ ಮಕ್ಕಳನ್ನ ಯಾಕೆ ಹೆರ್ತೀರಾ? ಫ್ಯಾಕ್ಟರಿ ರೀತಿ ಮಕ್ಕಳನ್ನ ಹಡೆಯಬೇಡಿ!": ನಟಿ ವರಲಕ್ಷ್ಮಿ ಶರತ್ಕುಮಾರ್ ಖಡಕ್ ಮಾತು!
ಬೆಂಗಳೂರು/ಚೆನ್ನೈ: ಬಹುಭಾಷಾ ನಟಿ ವರಲಕ್ಷ್ಮಿ ಶರತ್ಕುಮಾರ್ (Varalaxmi Sarathkumar) ಅವರು ಸದಾ ತಮ್ಮ ನೇರ ನಡೆ ಹಾಗೂ ನುಡಿಯಿಂದಲೇ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ 'ಎಸ್ ಸರಸ್ವತಿ' ಎಂಬ ಕ್ರೈಮ್ ಥ್ರಿಲ್ಲರ್ ಸಿನಿಮಾ ಮೂಲಕ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿರುವ ವರಲಕ್ಷ್ಮಿ, ಈಗ ಮಕ್ಕಳನ್ನು ಪಡೆಯುವ ವಿಚಾರದಲ್ಲಿ ನೀಡಿರುವ ಒಂದು ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. "ಆರ್ಥಿಕವಾಗಿ ಸಬಲರಾಗುವ ಮುನ್ನ ಮಕ್ಕಳನ್ನು ಪಡೆಯಬೇಡಿ" ಎಂದು ಅವರು ಪೋಷಕರಿಗೆ ನೀಡಿರುವ ಸಲಹೆ ಈಗ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ಫ್ಯಾಕ್ಟರಿಯಂತೆ ಮಕ್ಕಳನ್ನು ಪಡೆಯಬೇಡಿ ಎಂದ ನಟಿ:
ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ವರಲಕ್ಷ್ಮಿ ಶರತ್ಕುಮಾರ್, ಇಂದಿನ ಕಾಲದಲ್ಲಿ ಮಕ್ಕಳನ್ನು ಸಾಕಲು ಬೇಕಾದ ಹಣಕಾಸಿನ ಯೋಜನೆಗಳ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. "ನಮ್ಮ ದೇಶದಲ್ಲಿ ಲೈಂಗಿಕತೆ (Sex) ಬಗ್ಗೆ ಮಾತನಾಡಲು ಎಲ್ಲರೂ ಮುಜುಗರ ಪಡುತ್ತಾರೆ, ಆದರೆ ಜನಸಂಖ್ಯೆಯಲ್ಲಿ ನಾವೇ ನಂಬರ್ ಒನ್! ಇದು ನಿಜಕ್ಕೂ ವಿಚಿತ್ರ. ಜನರು ಮಕ್ಕಳನ್ನು ಫ್ಯಾಕ್ಟರಿಯಂತೆ ಪಡೆಯುತ್ತಾರೆ. ಮಕ್ಕಳಾದ ಮೇಲೆ ನಮಗೆ ತುಂಬಾ ಕಷ್ಟವಿದೆ, ಆರ್ಥಿಕ ಸಮಸ್ಯೆ ಇದೆ ಎಂದು ಅಳುತ್ತಾರೆ. ಕಷ್ಟವಿದ್ದರೆ ಮಕ್ಕಳನ್ನು ಪಡೆಯಲು ಯಾರು ಹೇಳಿದರು? ಮೊದಲು ಪ್ಲಾನ್ ಮಾಡಿ, ನಂತರ ಮಕ್ಕಳನ್ನು ಪಡೆಯಿರಿ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳನ್ನು ಪಡೆಯುವ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇಂದಿನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದರು. "ಈಗಿನ ಕಾಲದಲ್ಲಿ ಜೀವನ ನಿರ್ವಹಣೆ ತುಂಬಾ ದುಬಾರಿಯಾಗಿದೆ. ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪಾಲನೆಗೆ ಸಾಕಷ್ಟು ಹಣ ಬೇಕು. ನಾನು ಅನೇಕ ಬಾರಿ ನೋಡಿದ್ದೇನೆ, ಜನರು ಮಕ್ಕಳನ್ನು ಹೆತ್ತು ಆಮೇಲೆ ಅವರ ಓದಿಗೆ ಅಥವಾ ಖರ್ಚಿಗೆ ನನ್ನ ಬಳಿ ಸಹಾಯ ಕೇಳಲು ಬರುತ್ತಾರೆ. ನಾನೇನೂ ಅವರಿಗೆ ಜನ್ಮ ನೀಡಿದ್ದೇನೆಯೇ? ನೀವು ಮಾಡಿದ ತಪ್ಪಿಗೆ ನಾನು ಯಾಕೆ ಬೆಲೆ ತೆರಬೇಕು? ನಿಮ್ಮ ಮಕ್ಕಳನ್ನು ಜವಾಬ್ದಾರಿಯಿಂದ ಸಾಕುವುದು ನಿಮ್ಮ ಕರ್ತವ್ಯ," ಎಂದು ವರಲಕ್ಷ್ಮಿ ಖಾರವಾಗಿ ನುಡಿದಿದ್ದಾರೆ.
ಈ ಸಂದರ್ಶನದಲ್ಲಿ ವರಲಕ್ಷ್ಮಿ ಜೊತೆಗಿದ್ದ ನಟಿ ಪ್ರಿಯಾಮಣಿ ಕೂಡ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ವರಲಕ್ಷ್ಮಿ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಭಾಗವಾಗಿದ್ದಾರೆ. ಒಂದು ವರ್ಗದ ಜನರು "ವರಲಕ್ಷ್ಮಿ ಹೇಳುತ್ತಿರುವುದು ನೂರಕ್ಕೆ ನೂರು ನಿಜ, ಜವಾಬ್ದಾರಿ ಇಲ್ಲದೆ ಮಕ್ಕಳನ್ನು ಪಡೆಯುವುದು ಸರಿಯಲ್ಲ" ಎಂದು ಬೆಂಬಲಿಸುತ್ತಿದ್ದಾರೆ. ನಟಿ ಲಕ್ಷ್ಮಿ ಮಂಚು ಕೂಡ ಚಪ್ಪಾಳೆಯ ಎಮೋಜಿಗಳನ್ನು ಹಾಕುವ ಮೂಲಕ ವರಲಕ್ಷ್ಮಿ ನಿಲುವನ್ನು ಸ್ವಾಗತಿಸಿದ್ದಾರೆ.
ಆದರೆ, ಇನ್ನೊಂದು ವರ್ಗದ ನೆಟ್ಟಿಗರು ನಟಿಯ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. "ಮಕ್ಕಳನ್ನು ಪಡೆಯುವುದು ವೈಯಕ್ತಿಕ ನಿರ್ಧಾರ. ಬಡತನದಲ್ಲೂ ಮಕ್ಕಳು ಬೆಳೆಯುತ್ತಾರೆ, ಎಲ್ಲವನ್ನೂ ಹಣದ ಕನ್ನಡಕದಿಂದಲೇ ನೋಡಬಾರದು" ಎಂದು ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ವರಲಕ್ಷ್ಮಿ ಶರತ್ಕುಮಾರ್ ಅವರ ಈ 'ಪ್ರಾಕ್ಟಿಕಲ್' ಮಾತುಗಳು ಈಗ ಚಿತ್ರರಂಗ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.