
ವಿಜಯ್ ದೇವರಕೊಂಡ ಆತಂಕ
ತೆಲುಗು ಚಿತ್ರರಂಗದ ಯುವ ಸ್ಟಾರ್ ನಟ ವಿಜಯ್ ದೇವರಕೊಂಡ (Vijay Deverakonda) ಅವರು ಚಿತ್ರರಂಗಕ್ಕೆ ಮಾರಕವಾಗಿ ಪರಿಣಮಿಸಿರುವ ಒಂದು ದೊಡ್ಡ ಸಮಸ್ಯೆ ಬಗ್ಗೆ ಮಾತನ್ನಾಡಿದ್ದಾರೆ. ಅವರದೇ ದೃಷ್ಟಿಕೋನದಲ್ಲಿ ಈ ಬಗ್ಗೆ ಹೇಳಿರುವ ನಟ ವಿಜಯ್ ದೇವರಕೊಂಡ ಅವರು ಹೀಗೆ ಹೇಳಿದ್ದಾರೆ. 'ಸಿನಿಮಾ ರಂಗಕ್ಕೆ ದೊಡ್ಡ ಸಮಸ್ಯೆಯಾಗಿ ನಕಲಿ ವಿಮರ್ಶೆಗಳು ಬೆಳೆಯುತ್ತಿವೆ. ಈ ಬಗ್ಗೆ ನನಗಂತೂ ಗಂಭೀರ ಆತಂಕ ಇದೆ. ಕಥೆ, ನಿರ್ದೇಶನ, ನಟನೆ ಸೇರಿದಂತೆ ಎಲ್ಲ ಅಂಶಗಳು ಉತ್ತಮವಾಗಿದ್ದರೂ, ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ನಕಲಿ ವಿಮರ್ಶೆಗಳನ್ನು ಹರಡಿ ಸಿನಿಮಾಗೆ ಹಿನ್ನಡೆ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿವೆ' ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ದೀರ್ಘವಾಗಿ ಪ್ರತಿಕ್ರಿಯಿಸಿರುವ ವಿಜಯ್ ದೇವರಕೊಂಡ, 'ಇತ್ತೀಚೆಗೆ ನಕಲಿ ರಿವ್ಯೂಗಳ ವಿರುದ್ಧ ಆದೇಶ ಹೊರಬಂದಿರುವುದು ಸಂತೋಷದ ವಿಷಯವಾದರೂ, ಅದೇ ಸಂದರ್ಭದಲ್ಲಿ ಅದು ನೊವನ್ನೂ ಕೂಡ ಹೊತ್ತು ತಂದಿದೆ' ಎಂದಿದ್ದಾರೆ.
"ಬುಕ್ ಮೈ ಶೋನಲ್ಲಿ ಈ ಬದಲಾವಣೆಯನ್ನು ನೋಡುವುದು ಒಂದೇ ಸಮಯದಲ್ಲಿ ಸಂತೋಷ ಹಾಗೂ ದುಃಖವೂ ಎರಡನ್ನೂ ತರುತ್ತವೆ' ಎಂದಿದ್ದಾರೆ. ಈ ಕ್ರಮದಿಂದ ಅನೇಕ ಜನರು ತಮ್ಮ ಕನಸುಗಳು, ಶ್ರಮ ಮತ್ತು ಹಣವನ್ನು ಉಳಿಸಿಕೊಳ್ಳಲು ಅಸಾಧ್ಯವಾಗುತ್ತಿದೆ. ಆದರೆ ದುಃಖಕರವೆಂದರೆ ನಮ್ಮದೇ ಜನರು ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ" ಎಂದು ವಿಜಯ್ ಹೇಳಿದ್ದಾರೆ.
'ಡಿಯರ್ ಕಾಮೈಡ್' ಚಿತ್ರವು ಬಿಡುಗಡೆಯಾದ ಸಮಯವನ್ನು ನೆನಪಿಸಿಕೊಂಡ ವಿಜಯ್ ದೇವರಕೊಂಡ ಅವರು 'ಸಂಘಟಿತ ರಾಜಕೀಯದ ದಾಳಿಗಳನ್ನು ಕಂಡು ನಾನು ನಿಜವಾಗಿಯೂ ಅಂದು ಆಘಾತಕ್ಕೊಳಗಾಗಿದ್ದೆ.. ನಾನು ಮಾತನಾಡಿದಾಗಲೆಲ್ಲಾ ಕಿವುಡ ವ್ಯಕ್ತಿಯ ಮುಂದೆ ಶಂಖ ಊದಿದಂತಾಗಿತ್ತು. ಒಳ್ಳೆಯ ಸಿನಿಮಾವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಕೆಲವರು ನನಗೆ ಧೈರ್ಯ ನೀಡಿದರು. ಜೊತೆಗೆ, ನನ್ನೊಂದಿಗೆ ಕೆಲಸ ಮಾಡಿದ ನಿರ್ದೇಶಕರು ಹಾಗೂ ನಿರ್ಮಾಪಕರು ಈ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದರು" ಎಂದು ಹೇಳಿದ್ದಾರೆ.
ಆದರೆ ಅಂದು ಅನುಭವಿಸಿದ ಕೆಟ್ಟ ಕ್ಷಣಗಳು ಇನ್ನೂ ಮರೆತುಹೋಗಿಲ್ಲ. "ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಯೋಚಿಸುತ್ತಾ ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ನನ್ನ ಕನಸುಗಳನ್ನು ಉಳಿಸಿಕೊಳ್ಳಲು ನಾನು ಹೇಗೆಲ್ಲಾ ಹೋರಾಡಬೇಕು ಎಂದು ಯೋಚಿಸಿದೆ. ಇಷ್ಟು ವರ್ಷಗಳ ಬಳಿಕ ಈ ವಿಚಾರ ಬಹಿರಂಗ ಚರ್ಚೆಗೆ ಬಂದಿರುವುದು ನಿಜವಾಗಿಯೂ ಸಂತೋಷದ ಸಂಗತಿ. ಚಿರಂಜೀವಿಯಂತಹ ದೊಡ್ಡ ನಟರ ಚಿತ್ರಕ್ಕೂ ಇಂತಹ ಬೆದರಿಕೆ ಇದೆ ಎಂದು ನ್ಯಾಯಾಲಯ ಗುರುತಿಸಿರುವುದು ಧೈರ್ಯ ನೀಡಿದೆ" ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
ಒಟ್ಟಿನಲ್ಲಿ, ನಕಲಿ ಸಿಡಿ, ಫೈರಸಿ ಹಾವಳಿ ಜೊತೆಗೆ, ಇದೀಗ ನಕಲಿ ವಿಮರ್ಶೆಗಳ ಹಾವಳಿಯೂ ವಕ್ಕರಿಸಿರುವುದು ಮೊದಲೇ ಕಷ್ಟದಲ್ಲಿರುವ ಚಿತ್ರರಂಗ ಎಂಬ ಉದ್ಯಮಕ್ಕೆ ಇನ್ನೂ ಹೆಚ್ಚಿನ ಆಘಾತ ನೀಡಿದೆ. ವಿಜಯ್ ದೇವರಕೊಂಡ ಸಿನಿಮಾಗೂ ಈ ಬಿಸಿ ತಟ್ಟಿದೆ ಎಂಬುದು ಈ ಮೂಲಕ ಜಗತ್ತಿಗೆ ಆರ್ಥವಾದಂತಾಗಿದೆ.
ಅಂದಹಾಗೆ, ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರಿಬ್ಬರ ಎಂಗೇಜ್ಮೆಂಟ್ ಆಗಿದ್ದು, ಮುಂದಿನ ತಿಂಗಳು ಅಂದರೆ 26 ಫೆಬ್ರವರಿ 2026ರಂದು ಉದಯಪುರದಲ್ಲಿ ಅವರಿಬ್ಬರ ವಿವಾಹ ಸಮಾರಂಭ ನಡೆಯಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಜಯ್-ರಶ್ಮಿಕಾ ಇಬ್ಬರೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ ಎಂಬುದು ವಿಶೇಷ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.