
ತಮಿಳು ನಟ ವಿಶಾಲ್ ಕಾರ್ಯಕ್ರಮವೊಂದರಲ್ಲಿ ತಲೆ ಸುತ್ತಿ ಬಿದ್ದಿದ್ದಾರೆ. ಸೋಮವಾರ, ಮೇ 11 ರಂದು ಹಿದು ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿಯೇ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈಗ ಸ್ಥಿತಿ ಸ್ಥಿರವಾಗಿದೆ. ಈ ಘಟನೆ ಅನೇಕರಿಗೆ ಆತಂಕಕ್ಕೀಡು ಮಾಡಿತ್ತು.
ಕಾರ್ಯಕ್ರಮದ ಅತಿಥಿಯಾಗಿದ್ದ ವಿಶಾಲ್!
ಕೋವಾಗಂ ಗ್ರಾಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶಾಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಮಿಳು ತಿಂಗಳ ಹಬ್ಬದ ಭಾಗವಾಗಿ, ಮಂಗಳಮುಖಿ ಸಮುದಾಯಕ್ಕೆ ಸೇರಿದ ಮಹಿಳೆಯರಿಗಾಗಿ "ಮಿಸ್ ಕೋವಾಗಂ 2025" ಎಂಬ ಸೌಂದರ್ಯ ಸ್ಪರ್ಧೆಯನ್ನು ಭಾನುವಾರ ರಾತ್ರಿ ಆಯೋಜಿಸಲಾಗಿತ್ತು. ಅಲ್ಲಿನ ವೇದಿಕೆಯಲ್ಲಿ ವಿಶಾಲ್ ಅವರು ಬಿದ್ದಿದ್ದಾರೆ. ಕಾರ್ಯಕ್ರಮದ ಆಯೋಜಕರು ಮತ್ತು ಅಭಿಮಾನಿಗಳು ತಕ್ಷಣ ತುರ್ತು ಚಿಕಿತ್ಸೆ ನೀಡಿದ ಪರಿಣಾಮ, ಅವರು ಸುಧಾರಿಸಿಕೊಂಡಿದ್ದಾರೆ. ಮಾಜಿ ಸಚಿವ ಕೆ. ಪೊನ್ನಮುಡಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು, ವಿಶಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದರು.
ಸ್ಪಷ್ಟನೆ ನೀಡಿದ ವಿಶಾಲ್ ತಂಡ!
ವಿಶಾಲ್ ಅವರ ಟೀಂ ಈ ಬಗ್ಗೆ ಮಾತನಾಡಿದ್ದು, "ವಿಶಾಲ್ಗೆ ಇತ್ತೀಚೆಗೆ ಸಾಮಾನ್ಯ ಜ್ವರ ಬಂದಿತ್ತು, ಈಗ ಸಂಪೂರ್ಣವಾಗಿ ಗುಣಮುಖವಾಗಿದ್ದಾರೆ. ದಯವಿಟ್ಟು ಆರೋಗ್ಯದ ಬಗ್ಗೆ ಊಹಾಪೋಹ ಹರಡಬೇಡಿ. ಇದರಿಂದ ಅವರಿಗೆ ಮೂರು ಅಥವಾ ಆರು ತಿಂಗಳು ಕೆಲಸ ಮಾಡೋಕಾಗಲ್ಲ ಎಂಬ ಮಾತು ಕೇಳಿಬಂದಿತ್ತು, ಅದು ಸತ್ಯವಲ್ಲ. ಸರಿಯಾಗಿ ಊಟ ಮಾಡದೆ, ಕೇವಲ ಜ್ಯೂಸ್ ಕುಡಿದಿದ್ದಕ್ಕೆ ವಿಶಾಲ್ಗೆ ಈ ರೀತಿ ಆಗಿದೆ. ಶಕ್ತಿ ಕಡಿಮೆಯಾಗಿ ಕುಸಿದು ಬಿದ್ದಿದ್ದಾರೆ. ವೈದ್ಯರು ಸರಿಯಾದ ಟೈಮ್ಗೆ ಆಹಾರ ಸೇವಿಸುವಂತೆ ಹೇಳಿದ್ದಾರೆ. ವಿಶಾಲ್ ಅವರು ಚೆನ್ನಾಗಿದ್ದಾರೆ, ಹೆದರುವ ಅಗತ್ಯ ಇಲ್ಲ" ಎಂದು ಹೇಳಿದೆ.
ಈ ಹಿಂದೆಯೂ ಇದೇ ಥರ ಆಗಿತ್ತು!
ಈ ಘಟನೆ ಬಳಿಕ ನಟನ ಆರೋಗ್ಯದ ಬಗ್ಗೆ ಸಾಕಷ್ಟು ಆತಂಕ ಉಂಟು ಮಾಡಿದೆ. ಈ ಹಿಂದೆಯೂ ಕೂಡ ಇದೇ ರೀತಿ ಆಗಿತ್ತು. ಆಗತಾನೇ ಬಂದಿದ್ದ ಜ್ವರದಿಂದ ಗುಣಮುಖರಾಗಿದ್ದ ಅವರು ಕಳೆದ ಜನವರಿಯಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. "ಮಧ ಗಜ ರಾಜ" ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ, ನಟ ವಿಶಾಲ್ ಅವರ ಆರೋಗ್ಯ ಕೆಟ್ಟಿದ್ದಂತೆ ಕಾಣುತ್ತಿತ್ತು. ಜ್ವರದ ಕಾರಣ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಕೂಡ ಅಸ್ವಸ್ಥರಾಗಿದ್ದರು. ವೇದಿಕೆ ಮೇಲೆ ನಿಂತುಕೊಂಡು ಮಾತನಾಡಲು ಅವರಿಗೆ ಬೇರೆಯವರ ಸಹಾಯ ಬೇಕಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿರುವ ವಿಡಿಯೋದಲ್ಲಿ ವಿಶಾಲ್ ಅವರು ಕಂಪಿಸುವಂತೆ ಕಂಡು ಬಂದಿತ್ತು. ಇದನ್ನು ನೋಡಿ ಇವರ ಫ್ಯಾನ್ಸ್ ಆತಂಕಗೊಂಡಿದ್ದರು.
"ಮಧ ಗಜ ರಾಜ" ಸಿನಿಮಾವು ಸುಂದರ್ ಸಿ ನಿರ್ದೇಶನದಲ್ಲಿ ನಿರ್ಮಾಣವಾಗಿದ್ದು, ಇವರು ಅಂಜಲಿ, ವರಲಕ್ಷ್ಮೀ ಶರತ್ಕುಮಾರ್ ಜೊತೆಯಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು 2013ರಲ್ಲಿ ರಿಲೀಸ್ ಮಾಡಬೇಕಿತ್ತು, ಆದರೆ ಅನೇಕ ಆರ್ಥಿಕ ಮತ್ತು ಕಾನೂನು ಸಮಸ್ಯೆಗಳ ಕಾರಣದಿಂದ ಈಗ 2025 ಜನವರಿ 12 ರಂದು ರಿಲೀಸ್ ಮಾಡಲಾಗಿತ್ತು.
ನಟ ವಿಶಾಲ್ ಅವರು ಸಣ್ಣಗಾಗಿದ್ದು, ವೇದಿಕೆ ಮೇಲೆ ಮಾತನಾಡುವಾಗ ಅವರ ಕೈ ಕೂಡ ಶೇಕ್ ಆಗುತ್ತಿತ್ತು. ಅವರನ್ನು ನೋಡಿ ಇನ್ನೇನಾದರೂ ಆರೋಗ್ಯ ಸಮಸ್ಯೆ ಇದೆಯಾ ಅಂತ ಅಭಿಮಾನಿಗಳು ಆತಂಕಗೊಂಡಿದ್ದಂತೂ ಸತ್ಯ. ಒಟ್ಟಿನಲ್ಲಿ ಈಗ ವಿಶಾಲ್ ಆರೋಗ್ಯವಾಗಿದ್ದಾರೆ ಎನ್ನೋದು ಖುಷಿಯ ವಿಷಯ. ಮುಂಬರುವ ದಿನಗಳಲ್ಲಿ ಅವರು ಇನ್ನಷ್ಟು ಸಿನಿಮಾ ಕೆಲಸಗಳಲ್ಲಿ, ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿ ಆಗಲಿ ಅಂತ ಹಾರೈಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.