ಖ್ಯಾತ ಗಾಯಕಿ ಮಂಗ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ ಭೀಕರ ಅಪಘಾತ: ಆಗಿದ್ದೇನು?

By Suvarna NewsFirst Published Mar 18, 2024, 11:54 AM IST
Highlights

ಖ್ಯಾತ ಗಾಯಕಿ ಮಂಗ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ ಭೀಕರ ಅಪಘಾತ: ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರು. ಅಷ್ಟಕ್ಕೂ ಆಗಿದ್ದೇನು?
 

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅದ್ಭುತ  ಕಂಠಸಿರಿಯಿಂದ ಫೇಮಸ್​ ಆದವರು ಗಾಯಕಿ ಮಂಗ್ಲಿ  ಅವರು ಭೀಕರ ಅಪಘಾತದಲ್ಲಿ ಸ್ವಲ್ಪದಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಟಾಲಿವುಡ್‌ನ ಹೆಚ್ಚು ಬೇಡಿಕೆಯ ಹಿನ್ನೆಲೆ ಗಾಯಕಿಯಾಗಿರುವ ಮಂಗ್ಲಿ ಅವರ ಅಪಘಾತದ ಸುದ್ದಿ ಸಿನಿಮಾ ಜಗತ್ತಿನಲ್ಲಿ ಬರಸಿಡಿಲಿನಂತೆ ಎರಗಿದೆ. ಇಬ್ಬರು ಪರಿಚಯಸ್ಥರೊಂದಿಗೆ ಶಂಶಾಬಾದ್‌ನಿಂದ  ಹಿಂತಿರುಗುತ್ತಿದ್ದ ಸಂದರ್ಭದಲ್ಲಿ  ತೊಂಡಪಲ್ಲಿ ರಸ್ತೆಯಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್​ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಭಾರಿ ಅಪಘಾತ ಸಂಭವಿಸಿದೆ. ಆದರೆ ಅದೃಷ್ಟವಶಾತ್​, ಸಣ್ಣಪುಟ್ಟ ಗಾಯಗಳೊಂದಿಗೆ ಮಂಗ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
 
ಅಷ್ಟಕ್ಕೂ ಗಾಯಕಿ ಮಂಗ್ಲಿ  ಮನರಂಜನಾ ಕ್ಷೇತ್ರದಲ್ಲಿ ಸದಾ ಚಾಲ್ತಿಯಲ್ಲಿ ಇರುವ ಹೆಸರು.  ತಮ್ಮ ಬ್ಯಾಕ್-ಟು-ಬ್ಯಾಕ್   ಹಿನ್ನೆಲೆ ಗಾಯನ, ಆಲ್ಬಮ್‌ಗಳು ಮತ್ತು ಹಲವಾರು ಕಾರ್ಯಕ್ರಮಗಳೊಂದಿಗೆ ತೆಲುಗು ಚಲನಚಿತ್ರದ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.  ಕನ್ನಡದಲ್ಲಿ ಈಗಾಗಲೇ ಕೆಲವು ಹಾಡುಗಳನ್ನು ಹಾಡಿದ್ದಾರೆ. ಚಿನ್ಮಯ್ ಬಾವಿಕೆರೆ ಬರೆದಿರುವ ‘ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನೆಸಿಕೊಳ್ಳಿ’ ಗೀತೆಗೆ ಮಂಗ್ಲಿ ದನಿಯಾಗಿದ್ದಾರೆ. ‘ಏಕ್ ಲವ್ ಯಾ’  ಚಿತ್ರದ ‘ಎಣ್ಣೆಗೂ ಹೆಣ್ಣಿಗೂ’ ಹಾಡು ಸೇರಿದಂತೆ ‘ಅಲಾ ವೈಕುಂಠಪುರಮುಲೋ’ ಚಿತ್ರದ ‘ರಾಮುಲೋ ರಾಮುಲಾ’, ‘ರಾಬರ್ಟ್’ (ತೆಲುಗು ವರ್ಷನ್) ಚಿತ್ರದ ‘ಕಣ್ಣೆ ಅದಿರಿಂದಿ’ ಮುಂತಾದ ಹಿಟ್​ ಹಾಡುಗಳನ್ನು ನೀಡಿದ್ದಾರೆ.  ‘ಪುಷ್ಪ: ದಿ ರೈಸ್’ (ಕನ್ನಡ ವರ್ಷನ್) ಚಿತ್ರದ ‘ಊ ಅಂತಿಯಾ ಮಾವ..’ ಹಾಡು, ‘ತ್ರಿಬಲ್ ರೈಡಿಂಗ್’, ‘ದಿಲ್‌ಪಸಂದ್’ ಸಿನಿಮಾದ ‘ರಾಮಾ ರಾಮಾ ರಾಮಾ ಗೀತೆ, ‘ಶಿವ 143’, ‘ವೇದ’ ಮುಂತಾದ ಸಿನಿಮಾಗಳಲ್ಲಿನ ಇವರ ಹಾಡುಗಳು ಸಿನಿಪ್ರಿಯರನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿವೆ. ಅಷ್ಟೇ ಅಲ್ಲದೇ ಪ್ರವೀರ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಸೈರನ್’ ಚಿತ್ರಕ್ಕೂ ಇವರು ಹಾಡಿದ್ದಾರೆ.  

ನಾನು ಸೆಕ್ಸಿಯಲ್ಲ, ಲೈಂಗಿಕತೆ, ಮಾದಕತೆಯಲ್ಲಿ ತುಂಬಾ ಹಿಂದೆ ಎನ್ನುತ್ತ ಮಹತ್ವದ ಘೋಷಣೆ ಮಾಡಿದ ಸಮಂತಾ!

Latest Videos

ಅಂದಹಾಗೆ ಮಂಗ್ಲಿ ಅವರು, ತಿರುಪತಿಯ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಂಗೀತದಲ್ಲಿ ಡಿಪ್ಲೊಮಾ ಮುಗಿಸಿದರು. ಅದರ ನಂತರ ಅವರು ತಮ್ಮ ವೃತ್ತಿಜೀವನವನ್ನು ಆ್ಯಂಕರ್​ ಆಗಿ ಪ್ರಾರಂಭಿಸಿದರು. ಆಲ್ಬಂಗಳ ಮೂಲಕ ಸಂಗೀತ ಪಯಣ ಶುರು ಮಾಡಿರುವ ಮಂಗ್ಲಿ, ಹಲವಾರು ಆಲ್ಬಂ ಮಾಡಿದ್ದಾರೆ. ಇವರ ಬೋನಲ್ 2023 ಆಲ್ಬಣ ಸೂಪರ್ ಹಿಟ್ ಆಗಿದೆ. ತೆಲಂಗಾಣದ ಸಂಸ್ಕೃತಿಯನ್ನು ಬಿಂಬಿಸುವ,  ಅತ್ಯಂತ ಪ್ರತಿಷ್ಠಿತ ಹಬ್ಬಗಳಾದ ಬತುಕಮ್ಮ, ಸಮ್ಮಕ್ಕಸರಕ ಮತ್ತು ಬೋನಾಳಗಳಲ್ಲಿ  ಸಂಗೀತ ಆಲ್ಬಂಗಳನ್ನು ಮಾಡಿದ್ದಾರೆ.  ಹಬ್ಬ ಹರಿದಿನಗಳಲ್ಲಿ ಮಂಗ್ಲಿ ಹಾಡುವ ಹಾಡುಗಳು ಹಳ್ಳಿ ಹಳ್ಳಿಗೆ ಕೇಳಿ ಬರುತ್ತವೆ. ಈ ಆಲ್ಬಂಗಳು ಆಕೆಯನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದವು. ಬಳಿಕ ಹಿನ್ನೆಲೆ ಗಾಯಕಿಯಾದರು.
 
ಕೆಲ ತಿಂಗಳ ಹಿಂದೆ ಮಂಗ್ಲಿಯವರ ಮದುವೆ ಸುದ್ದಿ ಸಕತ್​ ಸದ್ದು ಮಾಡಿತ್ತು.  ಮಂಗ್ಲಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಅಷ್ಟಕ್ಕೂ  ಲಂಬಾಣಿ ಸಮುದಾಯಕ್ಕೆ ಸೇರಿದ ಮಂಗ್ಲಿ ನಿಜವಾದ ಹೆಸರು ಸತ್ಯವತಿ ರಾಥೋಡ್. ಮಂಗ್ಲಿ ತನ್ನ ಸೋದರ ಮಾವನ ಜೊತೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.  ಆದ್ರೆ ಈ ಸುದ್ದಿಗೆ ಮಂಗ್ಲಿ ಕೆಂಡಾಮಂಡಲವಾಗಿ ಪ್ರತಿಕ್ರಿಯೆ ನೀಡಿದ್ದರು. 'ಇದೆಲ್ಲಾ ಬರೀ ವದಂತಿ' ಎಂದು ಆಕೆ ಪ್ರತಿಕ್ರಿಯಿಸಿದ್ದರು. 'ನನ್ನ ಮದುವೆನಾ? ಅಯ್ಯೋ ನನ್ನ ಕರ್ಮ.. ಯಾವ ಮದುವೆನೂ ಇಲ್ಲ. ಇದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ (Social media) ಹಬ್ಬಿಸುತ್ತಿರುವ ಸುಳ್ಳು ಸುದ್ದಿ. ನನ್ನ ಭಾವನನ್ನು ನಾನು ಮದುವೆ ಆಗೋದಾ? ಅದ್ಯಾರು ನನ್ನ ಭಾವ? ಆ ಸುದ್ದಿ ಹಬ್ಬಿಸಿದವರನ್ನೇ ತೋರ್ಸೋಕೆ ಹೇಳಿ' ಎಂದು ಗರಂ ಆಗಿದ್ದರು. ಜೊತೆಗೆ 'ಸದ್ಯಕ್ಕೆ ಮದುವೆ ಆಲೋಚನೆಯೇ ಇಲ್ಲ' ಎಂದು ಮಂಗ್ಲಿ ಹೇಳಿದ್ದರು.

ಹುಟ್ಟುಹಬ್ಬದ ದಿನ ಮಂತ್ರಾಲಯದಿಂದಲೇ ಕ್ಷಮೆ ಕೋರಿದ ನಟ ಜಗ್ಗೇಶ್: ಸಿನಿಮಾದ ಕುರಿತೂ ನಟ ಹೇಳಿದ್ದೇನು?

click me!