
ಆಸ್ಕರ್ ವಿಜೇತ ಸಂಗೀತಗಾರ.. ಇದೆಂಥಾ ಅಪಸ್ವರ..?
ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman) ಇತ್ತೀಚಿಗೆ ನೀಡಿದ ಒಂದು ಹೇಳಿಕೆ ದೊಡ್ಡ ವಿವಾದಕ್ಕೆ ಮುನ್ನುಡಿ ಬರೆದಿತ್ತು. ತಾನು ಮಸ್ಲಿಂ ಅನ್ನೋ ಕಾರಣಕ್ಕೆ ಕಳೆದ ಕೆಲ ವರ್ಷಗಳಿಂದ ಬಾಲಿವುಡ್ ತನಗೆ ಅವಕಾಶ ಕೊಡ್ತಿಲ್ಲ ಅಂದಿದ್ದ ರೆಹಮಾನ್ ಮಾತು ಚಿತ್ರರಂಗದಲ್ಲಿ ಕಿಡಿ ಹೊತ್ತಿಸಿತ್ತು. ಈಗ ಆ ಮಾತಿಗೆ ರೆಹಮಾನ್ ಸ್ಪಷ್ಟನೆ ಕೊಟ್ಟಿದ್ದಾರೆ.
ಮುಸ್ಲಿಂ ಅಂತ ಅವಕಾಶವಿಲ್ಲ.. ರೆಹಮಾನ್ ಧರ್ಮಯುದ್ಧ..!
ಆಸ್ಕರ್ ವಿಜೇತ ಸಂಗೀತಗಾರ.. ಇದೆಂಥಾ ಅಪಸ್ವರ..?
ಎ.ಆರ್ ರೆಹಮಾನ್... ಭಾರತೀಯ ಸಿನಿರಂಗ ಕಂಡ ಪ್ರತಿಭಾನ್ವಿತ ಸಂಗೀತ ನಿರ್ದೇಶಕ. ತಮಿಳು ಚಿತ್ರರಂಗದಿಂದ ಕರೀಯರ್ ಆರಂಭಿಸಿದ ರೆಹಮಾನ್ ಅಲ್ಲಿಂದ ಬಾಲಿವುಡ್, ಹಾಲಿವುಡ್ಗೂ ಹಾರಿದ್ರು. ತನ್ನ ಸಂಗೀತ ಪ್ರತಿಭೆಯಿಂದ ಆಸ್ಕರ್ ಕೂಡ ಗಳಿಸಿದ ಸಂಗೀತ ಮಾಂತ್ರಿಕ ರೆಹಮಾನ್.
ಇಂಥಾ ರೆಹಮಾನ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ವಿವಾದದ ಕಿಡಿ ಹೊತ್ತಿಸಿದ್ವು. ಇತ್ತೀಚಿಗೆ ಬಾಲಿವುಡ್ ನಲ್ಲಿ ತನಗೆ ಅವಕಾಶಗಳು ಕಡಿಮೆ ಆಗೋದಕ್ಕೆ ತನ್ನ ಧರ್ಮ ಕಾರಣವಿರಬಹುದು ಅಂದುಬಿಟ್ಟಿದ್ರು ಎ,ಆರ್. ರೆಹಮಾನ್. ಹೀಗಿದೆ ರೆಹಮಾನ್ ಪೋಸ್ಟ್ ಇದು-
(ಕಳೆದ ಎಂಟು ವರ್ಷಗಳಿಂದ ನನಗೆ ಹಿಂದಿ ಸಿನಿಮಾ ರಂಗದಲ್ಲಿ ಆಫರ್ಗಳು ಬಂದಿಲ್ಲ. ಸೃಜನಶೀಲರಲ್ಲದ ಜನರು ಬಾಲಿವುಡ್ನಲ್ಲಿ ವಿಷಯಗಳನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿದ್ದಾರೆ. ಧರ್ಮದ ವಿಷಯದ ಕಾರಣಕ್ಕೂ ನನಗೆ ಆಫರ್ ಬರದೆ ಇರಬಹುದು. ಸಿನಿಮಾಗೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಬರುತ್ತದೆ. ಆದರೆ, ನಂತರ ಮ್ಯೂಸಿಕ್ ಕಂಪನಿ ಅವರದ್ದೇ ಆದ ಐದು ಮ್ಯೂಸಿಕ್ ಕಂಪೋಸರ್ ಗಳನ್ನು ಆಯ್ಕೆ ಮಾಡಿಕೊಂಡಿರುತ್ತದೆ. )
ಹೌದು ಕಳೆದ ಎಂಟು ವರ್ಷಗಳಲ್ಲಿ ಅಧಿಕಾರ ಸೃಜನಶೀಲದಲ್ಲವರ ಕೈಗೆ ಹೋಯ್ತು. ನನ್ನ ಧರ್ಮದ ಕಾರಣಕ್ಕೂ ನನಗೆ ಕೆಲಸ ಕೊಟ್ಟಿಲ್ಲ ಅಂದಿದ್ದಾರೆ ರೆಹಮಾನ್. ರೆಹಮಾನ್ ರ ಧರ್ಮವನ್ನ ನೋಡದೇ ಅವರ ಸಂಗೀತವನ್ನ ಪ್ರೀತಿಸಿದ, ಅವರನ್ನ ಮುಗಿಲೆತ್ತರಕ್ಕೆ ಬೆಳೆಸಿದ ಭಾರತೀಯರಿಗೆ ಇದು ಶಾಕ್ ತಂದಿದ್ದು ಸುಳ್ಳಲ್ಲ.
ಹೌದು ರೆಹಮಾನ್ರ ಈ ಹೇಳಿಕೆಗೆ ಬಾಲಿವುಡ್ ತೀವ್ರ ಆಕ್ರೋಶದ ಪ್ರತಿಕ್ರಿಯೆ ನೀಡಿದೆ. ಅನೇಕ ನಟ, ನಟಿಯರು, ಗಾಯಕರು, ಚಿತ್ರಸಾಹಿತಿಗಳು ರೆಹಮಾನ್ ಹೇಳಿಕೆಯನ್ನ ಖಂಡಿಸಿದ್ರು.
ಕಂಗನಾ ಪೋಸ್ಟ್ :
ನನ್ನ ನಿರ್ದೇಶನದ ಎಮರ್ಜೆನ್ಸಿ ಸಿನಿಮಾದ ಸಂಗೀತ ನಿದೇರ್ಶನಕ್ಕಾಗಿ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ನೀವು ಸಿನಿಮಾದ ಕಥೆ ಕೇಳೋದಿರಲಿ, ಅಪಾಯಿಂಟ್ಮೆಂಟ್ ಕೂಡ ನೀಡಲಿಲ್ಲ. ನನ್ನ ಸಿನಿಮಾ ಪ್ರೊಪಗಂಡಾದ ಭಾಗ ಎಂದು ಭಾವಿಸಿ ದೂರ ಉಳಿದಿರಿ. ಎಮರ್ಜೆನ್ಸಿ ಸಿನಿಮಾವನ್ನ ವಿಮರ್ಶಕರು ಮತ್ತು ವಿರೋಧ ಪಕ್ಷಗಳ ನಾಯಕರೂ ಮೆಚ್ಚಿಕೊಂಡ್ರು. ನೀವು ನಿಮ್ಮ ದ್ವೇಷದ ಮನಸ್ಥಿತಿಯಿಂದ ಕುರುಡರಾಗಿದ್ರಿ .
ಹೌದು ರೆಹಮಾನ್ರನ್ನ ಪೂರ್ವಾಗ್ರಹ ಪೀಡಿತ ಮತ್ತು ದ್ವೇಷಪೂರಿತ ವ್ಯಕ್ತಿ ಅಂತ ಕರೆದಿರೋ ಕಂಗನಾ, ಸಿನಿಮಾಗೆ ಅವಕಾಶ ಕೊಟ್ಟರೂ ನೀವೇ ಮಾಡ್ಲಿಲ್ಲ ಅಂತ ಆರೋಪ ಹೊರೆಸಿದ್ದಾರೆ. ಇನ್ನೂ ಹಿರಿಯ ಚಿತ್ರಸಾಹಿತಿ ಜಾವೇದ್ ಅಖ್ತರ್ ಕೂಡ ರೆಹಮಾನ್ ಹೇಳಿಕೆಯನ್ನ ಅಲ್ಲಗಳೆದಿದ್ದಾರೆ. ರೆಹಮಾನ್ಗೆ ಬಾಲಿವುಡ್ನಲ್ಲಿ ಅವಕಾಶಗಳು ಕಮ್ಮಿಯಾಗಲು ಧರ್ಮ ಕಾರಣ ಅಲ್ಲ. ಮುಂಬೈನಲ್ಲಿ ರೆಹಮಾನ್ರನ್ನ ಪ್ರತಿಯೊಬ್ಬರು ಗೌರವಿಸುತ್ತಾರೆ. ಅಂತಾರಾಷ್ಟ್ರೀಯ ಪ್ರಾಜೆಕ್ಟ್ ಮತ್ತು ತಮ್ಮ ಮ್ಯೂಸಿಕ್ ಕನ್ಸರ್ಟ್ಗಳಲ್ಲಿ ಬ್ಯುಸಿಯಾಗಿರ್ತಾರೆ ಅಂತ ಹಿಂದಿ ಸಿನಿಮಾ ಮೇಕರ್ಸ್ ಭಾವಿಸಿರಬಹುದು. ಆ ಕಾರಣಕ್ಕೆ ಅವರಿಗೆ ಚಾನ್ಸ್ ಸಿಗದಿರಬಹುದು ಅಂತ ಜಾವೇದ್ ಅಖ್ತರ್ ಹೇಳಿದ್ದಾರೆ.
ಬಾಲಿವುಡ್ ನ ಫೇಮಸ್ ಸಿಂಗರ್ ಶಾನ್..ಮುಸ್ಲಿಂ ಅನ್ನೋ ಕಾರಣಕ್ಕೆ ರೆಹಮಾನ್ಗೆ ಅವಕಾಶಗಳು ಸಿಕ್ತಿಲ್ಲ ಅನ್ನೋದಾದ್ರೆ.. ಕೆಲ ಹೀರೋಗಳು ಬಾಲಿವುಡ್ ಸೂಪರ್ ಸ್ಟಾರ್ಗಳಾಗ್ತಿರಲಿಲ್ಲ ಅಂತ ಚಾಟಿ ಬೀಸಿದ್ದಾರೆ.
ಹೀಗೆ ತಮ್ಮ ಹೇಳಿಕೆ ದೊಡ್ಡ ವಿವಾದ ಎಬ್ಬಿಸ್ತಾ ಇದೆ ಅನ್ನೋದು ಯಾವಾಗ ಗೊತ್ತಾಯ್ತೋ ರೆಹಮಾನ್ ಯಾರನ್ನೂ ನೋಯಿಸೋ ಉದ್ದೇವಿಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.
"ಸಂಗೀತವು ಯಾವಾಗಲೂ ನಮ್ಮ ಸಂಸ್ಕೃತಿಯನ್ನು ಬೆಸೆಯಲು, ಆಚರಿಸಲು ಮತ್ತು ಗೌರವಿಸಲು ನನ್ನ ಮಾರ್ಗವಾಗಿದೆ. ಭಾರತ ನನ್ನ ಸ್ಫೂರ್ತಿ, ನನ್ನ ಶಿಕ್ಷಕಿ ಮತ್ತು ನನ್ನ ತವರು. ಕೆಲವೊಮ್ಮೆ ಉದ್ದೇಶಗಳು ತಪ್ಪಾಗಿ ಅರ್ಥೈಸಲ್ಪಡಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಉನ್ನತೀಕರಿಸುವುದು, ಗೌರವಿಸುವುದು ಮತ್ತು ಸೇವೆ ಸಲ್ಲಿಸುವುದಾಗಿದೆ. ನಾನು ಎಂದಿಗೂ ನೋವನ್ನುಂಟುಮಾಡಲು ಬಯಸುವುದಿಲ್ಲ, ಮತ್ತು ನನ್ನ ಪ್ರಾಮಾಣಿಕತೆ ನಿಮಗೆ ಅರ್ಥವಾಗುತ್ತದೆ ಎಂದು ನಾನು ಭಾವಿಸುತ್ತೇನೆ"
ಹೌದು ತಮ್ಮ ಮಾತುಗಳು ವಿವಾವದ ಸ್ವರೂಪ ಪಡೆಯುತ್ತಿದ್ದಂತೆ, ಎ.ಆರ್ ರಹಮಾನ್ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆಯ ವಿಡಿಯೋ ರಿಲೀಸ್ ಮಾಡಿದ್ದಾರೆ. ನನ್ನ ಮಾತುಗಳನ್ನ ತಿರುಚಲಾಗಿದೆ. ಯಾರನ್ನೂ ನೋಯಿಸುವ ಉದ್ದೇಶ ನನ್ನದಲ್ಲ.. ಭಾರತ ನನ್ನ ಮನೆ, ಇಲ್ಲೇ ನಾನು ಸಂಗೀತ ಕಲಿತಿದ್ದೇನೆ. ದೇಶದ ಮೇಲಿರುನ ನನ್ನ ಅಭಿಮಾನ ಯಾವತ್ತಿಗೂ ಕಡಿಮೆಯಾಗಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ಇಷ್ಟು ದಿನ ತಮ್ಮ ಸಂಗೀತದಿಂದ ಸುದ್ದಿಯಾಗ್ತಿದ್ದ ರೆಹಮಾನ್ ಈಗ ಈ ವಿವಾದದಿಂದ ಸುದ್ದಿಯಾಗಿದ್ದಾರೆ. ರೆಹಮಾನ್ ಏನೋ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ರೆ ಅವರು ಎಸೆದ ಕಲ್ಲು ಹಲವಾರು ತರಂಗ ಎಬ್ಬಿಸ್ತಾ ಇದೆ. ಈ ಬಗ್ಗೆ ಪರ-ವಿರೋದ ಚರ್ಚೆಗಳು ಜೋರಾಗೇ ನಡೀತಾ ಇವೆ. ಸುಮಧರ ಸಂಗೀತದ ನಡುವೆ ಈ ಮಾತುಗಳು ಅಪಸ್ವರದಂತೆ ಕೇಳ್ತಾ ಇವೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.