ವಂಶಿಕಾ ಹೆಸರಲ್ಲಿ ವಂಚಿಸಿದವಳು ಅರೆಸ್ಟ್, 14 ದಿನಗಳು ನ್ಯಾಯಾಂಗ ಬಂಧನ

By Kannadaprabha NewsFirst Published Jul 15, 2023, 5:20 AM IST
Highlights

ಖ್ಯಾತ ನಿರೂಪಕ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರು ದುರ್ಬಳಕೆ ಮಾಡಿಕೊಂಡು ಕೆಲ ಮಕ್ಕಳ ಪೋಷಕರಿಂದ ಹಣ ಪಡೆದು ವಂಚಿಸಿದ ಆರೋಪದಡಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಮುಖ್ಯಸ್ಥೆ ನಿಶಾ ನರಸಪ್ಪ(24) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜು.15) : ಖ್ಯಾತ ನಿರೂಪಕ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರು ದುರ್ಬಳಕೆ ಮಾಡಿಕೊಂಡು ಕೆಲ ಮಕ್ಕಳ ಪೋಷಕರಿಂದ ಹಣ ಪಡೆದು ವಂಚಿಸಿದ ಆರೋಪದಡಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಮುಖ್ಯಸ್ಥೆ ನಿಶಾ ನರಸಪ್ಪ(24) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ಎನ್‌.ಎನ್‌. ಪ್ರೊಡಕ್ಷನ್‌ ಸಂಸ್ಥೆಯ ಮುಖ್ಯಸ್ಥೆ ನಿಶಾ, ವಂಶಿಕಾ ಹೆಸರು ದುರ್ಬಳಕೆ ಮಾಡಿಕೊಂಡು ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಕೆಲ ಮಕ್ಕಳ ಪೋಷಕರಿಂದ ಹಣ ಪಡೆದು ವಂಚಿಸಿದ್ದಾಳೆ ಎಂದು ಆರೋಪಿಸಿ ವಂಶಿಕಾ ತಾಯಿ ಯಶಸ್ವಿನಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು ಆರೋಪಿ ನಿಶಾಳನ್ನು ಬಂಧಿಸಿ ಶುಕ್ರವಾರ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.

Latest Videos

ಮಾಸ್ಟರ್‌ ಆನಂದ್‌ ಪುತ್ರಿ ಲಿಟಲ್‌ಸ್ಟಾರ್‌ ವಂಶಿಕಾಗೆ ಆರಂಭದಲ್ಲಿಯೇ ವಿಘ್ನ!

ಆರೋಪಿ ನಿಶಾ ಸದಾಶಿವನಗರದ ಕೆಫೆಯಲ್ಲಿ ಗುರುವಾರ ಮಕ್ಕಳ ಪೋಷಕರ ಜತೆ ಮಾತುಕತೆ ನಡೆಸುವಾಗ ಹಣ ಕಳೆದುಕೊಂಡಿದ್ದ ಕೆಲ ಪೋಷಕರು ಕೆಫೆಗೆ ತೆರಳಿ ಗಲಾಟೆ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸದಾಶಿವನಗರ ಪೊಲೀಸರು, ಕೂಡಲೇ ಸ್ಥಳಕ್ಕೆ ತೆರಳಿ ನಿಶಾಳನ್ನು ವಶಕ್ಕೆ ಪಡೆದಿದ್ದರು. ಬಳಿಕ ಯಶಸ್ವಿನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದರು.

ಕನ್ನಡದ ಮನರಂಜನಾ ಟಿವಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿದ್ದ ‘ನಮ್ಮಮ್ಮ ಸೂಪರ್‌ ಸ್ಟಾರ್‌’ ಹಾಗೂ ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋಗಳಲ್ಲಿ ಮಾಸ್ಟರ್‌ ಆನಂದ್‌ ಮತ್ತು ಯಶಸ್ವಿನಿ ದಂಪತಿ ಪುತ್ರಿ ವಂಶಿಕಾ ಭಾಗವಹಿಸಿ ಅಪಾರ ಖ್ಯಾತಿ ಗಳಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಖ್ಯೆಯ ಫಾಲೋವ​ರ್‍ಸ್ ಹೊಂದಿದ್ದಾಳೆ. ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ನಿಶಾ ಹಾಗೂ ಯಶಸ್ವಿನಿ ಪರಿಚಿತರಾಗಿದ್ದು, ಈ ಗೆಳೆತನದಲ್ಲಿ ಕೆಲ ಕಾರ್ಯಕ್ರಮಗಳನ್ನು ಮಾಡಿದ್ದರು. ಬಳಿಕ ಮನಸ್ತಾಪ ಬಂದು ಇಬ್ಬರು ದೂರವಾಗಿದ್ದರು.

Vasnhika Special : ಕಿರುತೆರೆಯ ಪಟಾಕಿಪೋರಿ ವಂಶಿಕಾ ಅಂಜನಿ ಕಷ್ಯಪ್

ವಂಶಿಕಾಳ ಹೆಸರು ದುರ್ಬಳಕೆ ಮಾಡಿಕೊಂಡು ಕೆಲ ಪೋಷಕರಿಗೆ ನಿಮ್ಮ ಮಕ್ಕಳಿಗೆ ಸಹ ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಇತ್ತೀಚೆಗೆ ನಿಶಾ ಹಣ ಪಡೆದಿದ್ದಳು. ಬಳಿಕ ಅವಕಾಶವನ್ನೂ ಕೊಡಿಸದೆ, ಹಣವನ್ನೂ ವಾಪಸ್‌ ನೀಡದೆ ವಂಚಿಸಿದ್ದಳು ಎನ್ನಲಾಗಿದೆ. ಕೆಫೆಯಲ್ಲಿ ಕೆಲ ಮಕ್ಕಳ ಪೋಷಕರ ಜತೆ ಮಾತುಕತೆ ಮಾಡುವಾಗ ಹಣ ಕಳೆದುಕೊಂಡ ಪೋಷಕರು ನಿಶಾಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಗಲಾಟೆ ವಿಚಾರ ಗೊತ್ತಾಗಿ ಯಶಸ್ವಿನಿ ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!