
ತಾಳಿ ಖರೀದಿಸಲು ಹಣವಿರಲಿಲ್ಲ: ಮದುವೆಗೆ ಒಂದು ದಿನ ಇರುವವರೆಗೂ ತಾಳಿ ಖರೀದಿಸಲು ಹಣವಿರಲಿಲ್ಲ, ನನಗೆ ಸಹಾಯ ಮಾಡಿದ್ದು ಕ್ರಿಶ್ಚಿಯನ್, ಮುಸ್ಲಿಂ ಸ್ನೇಹಿತರು ಎಂದು ಮಲಯಾಳಂ ನಟ ಶ್ರೀನಿವಾಸನ್ ಭಾವುಕರಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಶ್ರೀನಿವಾಸನ್ ನಟ ಮಾತ್ರವಲ್ಲದೆ ಡಬ್ಬಿಂಗ್ ಕಲಾವಿದ, ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿಯೂ ಕೆಲಸ ಕೆಲಸವನ್ನು ಮಾಡಿದ್ದಾರೆ. 1970 ರಿಂದ 2023 ರವರೆಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರನ್ನು ನಿನ್ನೆ ಬೆಳಗ್ಗೆ ( ಡಿಸೆಂಬರ್ 21) ಡಯಾಲಿಸಿಸ್ಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಉಸಿರಾಟದ ತೊಂದರೆ ಉಂಟಾದ ಕಾರಣ, ಅಲ್ಲಿ ಅವರು ಕೊನೆಯುಸಿರೆಳೆದರು. ಟೌನ್ ಹಾಲ್ ಮತ್ತು ಅವರ ನಿವಾಸದಲ್ಲಿ ಇರಿಸಲಾಗಿದ್ದ ಪಾರ್ಥಿವ ಶರೀರಕ್ಕೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
48 ವರ್ಷಗಳ ಸಿನಿಮಾ ಜೀವನ ಅಂತ್ಯಗೊಂಡಿದೆ. ಸಾಮಾನ್ಯ ಜನರ ಸಮಸ್ಯೆಗಳನ್ನು ಹಾಸ್ಯದೊಂದಿಗೆ ಪ್ರಸ್ತುತಪಡಿಸುವಲ್ಲಿ ಶ್ರೀನಿವಾಸನ್ಗೆ ವಿಶೇಷ ಪ್ರತಿಭೆ ಇತ್ತು. ಗಾಂಧಿನಗರ ಸೆಕೆಂಡ್ ಸ್ಟ್ರೀಟ್, ನಾಡೋಡಿಕ್ಕಾಟ್ಟು, ಟಿಪಿ ಬಾಲಗೋಪಾಲನ್ ಎಂ.ಎ, ಸಂದೇಶಂ ಮುಂತಾದ ಚಿತ್ರಗಳನ್ನು ಮಲಯಾಳಿಗರು ಮರೆಯಲು ಸಾಧ್ಯವಿಲ್ಲ. ಅವರು ಐದು ಬಾರಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಅವರು ಬರೆದು, ನಿರ್ದೇಶಿಸಿ, ನಟಿಸಿದ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿದೆ. ಮಲಯಾಳಿಗರ, ಸಿನಿಮಾ ಅಭಿಮಾನಿಗಳ ಮನಸ್ಸಿನಲ್ಲಿ ಶ್ರೀನಿವಾಸನ್ಗೆ ಸಾವಿಲ್ಲ. ನಟ ಶ್ರೀನಿವಾಸನ್ ನಿಧನಕ್ಕೆ ತಮಿಳು ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ನಟ ಸೂರ್ಯ ಖುದ್ದು ಭೇಟಿ ನೀಡಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದು ಗಮನಾರ್ಹ.
ನಟ ಶ್ರೀನಿವಾಸನ್ ಮತ್ತು ವಿಮಲಾ ಅವರ ಮದುವೆ ನಿಶ್ಚಯವಾದಾಗ ನಡೆದ ಘಟನೆಯ ಬಗ್ಗೆ ಅವರು ವೇದಿಕೆಯೊಂದರಲ್ಲಿ ಮಾತನಾಡಿದ್ದರು. ಅದರಲ್ಲಿ, ನಾನು ಸಿನಿಮಾಗೆ ಬಂದ ಸಮಯ ಅದು. ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣದ ಕಾಲ. ಸ್ವಂತಕ್ಕೆ ಒಂದು ಉಂಗುರವನ್ನು ಸಹ ಖರೀದಿಸಲು ಸಾಧ್ಯವಾಗದಷ್ಟು ಆರ್ಥಿಕ ಸಂಕಷ್ಟದಲ್ಲಿ ಇದ್ದೆ. ಅಷ್ಟು ಹಣ ಇರಲಿಲ್ಲ.
ಮದುವೆಗೆ ಒಂದು ದಿನ ಇರುವವರೆಗೂ ತಾಳಿ ಖರೀದಿಸಲು ಸಹ ಹಣವಿರಲಿಲ್ಲ. ಆಗ ಕ್ರಿಶ್ಚಿಯನ್ ಸ್ನೇಹಿತ ಇನ್ನೊಸೆಂಟ್ ತನ್ನ ಹೆಂಡತಿಯ ಒಡವೆಯನ್ನು ಅಡವಿಟ್ಟು 400 ರೂ. ಕೊಟ್ಟರು. ಹಾಗೆಯೇ ಮುಸ್ಲಿಂ ಆದ ಮಮ್ಮುಟ್ಟಿ 2000 ರೂ. ಕೊಟ್ಟರು. ಆ ಹಣದಿಂದಲೇ ನಾನು ಹಿಂದೂ ಹುಡುಗಿಯಾದ ನನ್ನ ಹೆಂಡತಿಗೆ ಚಿನ್ನದ ತಾಳಿ ಖರೀದಿಸಿ, ಅದನ್ನು ರಿಜಿಸ್ಟರ್ ಆಫೀಸ್ನಲ್ಲಿ ಕಟ್ಟಿದೆ ಎಂದು ಭಾವುಕರಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಮದುವೆಯ ಹಿಂದಿನ ದಿನ ಮಮ್ಮುಟ್ಟಿ ಮನೆಗೆ ಹೋಗಿ 2000 ರೂ. ಬೇಕು ಎಂದು ಕೇಳಿದೆ. ಮದುವೆ ಇದೆ, ತಾಳಿ ಖರೀದಿಸಬೇಕು ಎಂದು ಕೇಳಿದೆ. ಅವರೂ ಕೊಟ್ಟರು ಎಂದು ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.