
ದಳಪತಿ ವಿಜಯ್ ವಿದಾಯದ ಚಿತ್ರಕ್ಕೆ 'ಸೋರಿಕೆ' ಬಿಸಿ: 'ಜನ ನಾಯಗನ್' ಮೇಲೆ ಕಣ್ಣಿಟ್ಟ ಕಿಡಿಗೇಡಿಗಳು; ವಿಜಯ್ ಅಭಿಮಾನಿಗಳ ಆಕ್ರೋಶದ ಕಟ್ಟೆ ಬಿಟ್ಟಿದೆ!
ಬಾಲಿವುಡ್ನಿಂದ ಸ್ಯಾಂಡಲ್ವುಡ್ವರೆಗೆ ಈಗ ದಳಪತಿ ವಿಜಯ್ (Thalapathy Vijay) ಅವರ ಕೊನೆಯ ಚಿತ್ರ 'ಜನ ನಾಯಗನ್' (Jana Nayagan) ಕುರಿತೇ ಚರ್ಚೆ ನಡೆಯುತ್ತಿದೆ. ವಿಜಯ್ ಅವರು ಸಿನಿರಂಗಕ್ಕೆ ಗುಡ್ ಬೈ ಹೇಳಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ಹೊರಹೊಮ್ಮುವ ಮುನ್ನ ನಟಿಸುತ್ತಿರುವ ಈ ಸಿನಿಮಾ, ಈಗೊಂದು ಆಘಾತಕಾರಿ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಚಿತ್ರದ ಅತ್ಯಂತ ಪ್ರಮುಖವಾದ ಆರಂಭದ ದೃಶ್ಯಗಳು ಮತ್ತು ಟೈಟಲ್ ಕ್ರೆಡಿಟ್ಸ್ ಒಳಗೊಂಡ ಬರೋಬ್ಬರಿ 5 ನಿಮಿಷಗಳ ವಿಡಿಯೋ ಕ್ಲಿಪ್ ಅಂತರ್ಜಾಲದಲ್ಲಿ ಸೋರಿಕೆಯಾಗಿದ್ದು, ಇಡೀ ಚಿತ್ರತಂಡವನ್ನು ಬೆಚ್ಚಿಬೀಳಿಸಿದೆ.
"ಜನ ನಾಯಗನ್" ಚಿತ್ರಕ್ಕೆ ನಿರ್ಮಾಪಕರು ಮತ್ತು ವಿಶೇಷ ಹಕ್ಕುಸ್ವಾಮ್ಯ ಮಾಲೀಕರು ಕೆವಿಎನ್ ಪ್ರೊಡಕ್ಷನ್ಸ್ ಆಗಿರುತ್ತದೆ. ಚಿತ್ರದ ಮೇಲೆ ನಿಗೂಢ ವ್ಯಕ್ತಿಗಳಿಂದ ಅಕ್ರಮ ಪ್ರವೇಶವಾಗಿದೆ. ಕಾಪಿ ಮಾಡಿದ್ದಾರೆ ಮತ್ತು ಪ್ರಸಾರ ಮಾಡಿದ್ದಾರೆ, ಇದು ಡಿಜಿಟಲ್ ಪೈರಸಿಯಾಗಿದೆ.
ಸೋರಿಕೆಯಾದ ಚಿತ್ರವನ್ನು ವಾಟ್ಸಾಪ್, ಟೆಲಿಗ್ರಾಮ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಎಕ್ಸ್, ಯೂಟ್ಯೂಬ್, ವೆಬ್ಸೈಟ್ಗಳು, ಟೊರೆಂಟ್ಗಳು ಅಥವಾ ಯಾವುದೇ ಇತರ ಮಾಧ್ಯಮಗಳ ಮೂಲಕ ಡೌನ್ಲೋಡ್ ಮಾಡುವುದು, ವೀಕ್ಷಿಸುವುದು, ಸಂಗ್ರಹಿಸುವುದು, ಫಾರ್ವರ್ಡ್ ಮಾಡುವುದು, ಹಂಚಿಕೊಳ್ಳುವುದು, ಅಪ್ಲೋಡ್ ಮಾಡುವುದು ಅಥವಾ ಪ್ರಸಾರ ಮಾಡುವುದು ಕ್ರಿಮಿನಲ್ ಅಪರಾಧ ಮತ್ತು ಕಾಪಿರೈಟ್ ಉಲ್ಲಂಘನೆಯಾಗಿದೆ.
ಪ್ರತಿಯೊಂದು ಡಿಜಿಟಲ್ ಚಟುವಟಿಕೆಗಳನ್ನು ಪತ್ತೆಹಚ್ಚಬಹುದಾಗಿದೆ, ಈಗಾಗಲೇ FSL ಕಳಿಸಿದ್ದೇವೆ. ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ದೂರು ಕೊಡಲಾಗಿದೆ. ಚೈನ್ ಲಿಂಕ್ ಗುರುತಿಸಿದ್ದೇವೆ. ಪತ್ತೆಯಾದವರಿಗೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತದೆ..' ಎಂದು ಚಿತ್ರ ಸೋರಿಕೆ ಬಗ್ಗೆ ಎಚ್ಚರಿಕೆ ನೀಡಿದೆ ಚಿತ್ರತಂಡ.
ಎಡಿಟ್ ಟೇಬಲ್ನಿಂದಲೇ ಲೀಕ್ ಆಯ್ತಾ ವಿಡಿಯೋ?
ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿರುವ ಈ ವಿಡಿಯೋದಲ್ಲಿ ವಿಜಯ್ ಅವರ ಭರ್ಜರಿ ಎಂಟ್ರಿ ದೃಶ್ಯಗಳಿವೆ. ವರದಿಗಳ ಪ್ರಕಾರ, ಈ ವಿಡಿಯೋ ಬಹುಶಃ ಎಡಿಟ್ ಟೇಬಲ್ನಿಂದಲೇ ಸೋರಿಕೆಯಾಗಿರಬಹುದು ಎನ್ನಲಾಗುತ್ತಿದೆ. ಯಾಕಂದರೆ, ವಿಡಿಯೋದ ಕೊನೆಯಲ್ಲಿ ವ್ಯಕ್ತಿಯೊಬ್ಬರು ದೃಶ್ಯವನ್ನು ವಿರಾಮಗೊಳಿಸುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದನ್ನು ಕಂಡ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ನಿರ್ಮಾಣ ಸಂಸ್ಥೆಯಾದ 'ಕೆವಿಎನ್ ಪ್ರೊಡಕ್ಷನ್ಸ್' (KVN Production) ಅನ್ನು ಟ್ಯಾಗ್ ಮಾಡುತ್ತಿರುವ ಅಭಿಮಾನಿಗಳು, ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಸದ್ಯಕ್ಕೆ ಕೆವಿಎನ್ ಸಂಸ್ಥೆಯು ಕಾರ್ಯಪ್ರವೃತ್ತವಾಗಿದ್ದು, ಎಕ್ಸ್ (ಟ್ವಿಟರ್) ನಂತಹ ವೇದಿಕೆಗಳಿಂದ ಈ ವಿಡಿಯೋವನ್ನು ಕಿತ್ತುಹಾಕುವ ಕೆಲಸ ಮಾಡುತ್ತಿದೆ.
ವಾಸ್ತವವಾಗಿ, 'ಜನ ನಾಯಗನ್' ಈ ವರ್ಷದ ಜನವರಿ 9 ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ನಿರಾಕರಿಸಿದ್ದರಿಂದ ಬಿಡುಗಡೆ ಮುಂದೂಡಲ್ಪಟ್ಟಿತು. ಚಿತ್ರದ ಕೆಲವು ದೃಶ್ಯಗಳು ಸಾರ್ವಜನಿಕರ ಭಾವನೆಗೆ ಧಕ್ಕೆ ತರುತ್ತವೆ ಎಂಬ ಕಾರಣ ನೀಡಿ ಮಂಡಳಿಯು ತಡೆಹಿಡಿದಿತ್ತು. ಸುಮಾರು ಒಂದು ತಿಂಗಳ ಕಾಲ ಕಾನೂನು ಹೋರಾಟ ನಡೆಸಿದ ಚಿತ್ರತಂಡ, ಕೊನೆಗೆ ಚಿತ್ರವನ್ನು ಪರಿಷ್ಕರಣಾ ಸಮಿತಿಗೆ (Revision Committee) ಕಳುಹಿಸಲು ಒಪ್ಪಿಕೊಂಡಿದೆ. ದುರಾದೃಷ್ಟವಶಾತ್, ಸಮಿತಿಯ ಸದಸ್ಯರೊಬ್ಬರು ಅನಾರೋಗ್ಯಕ್ಕೆ ಒಳಗಾದ ಕಾರಣ ಇತ್ತೀಚೆಗೆ ನಡೆಯಬೇಕಿದ್ದ ಪ್ರದರ್ಶನ ಕೂಡ ರದ್ದಾಗಿದೆ.
ರಾಜಕೀಯ ನಂಟು ಮತ್ತು 500 ಕೋಟಿಯ ಬೃಹತ್ ಬಜೆಟ್:
ದಳಪತಿ ವಿಜಯ್ ಅವರು ತಮ್ಮದೇ ಆದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಮೂಲಕ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ, ಚುನಾವಣೆ ಮುಗಿಯುವವರೆಗೆ ಈ ಚಿತ್ರಕ್ಕೆ ಕ್ಲಿಯರೆನ್ಸ್ ಸಿಗುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಸುಮಾರು 500 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಪ್ರಕಾಶ್ ರಾಜ್, ಮಮಿತಾ ಬೈಜು ಮತ್ತು ಪ್ರಿಯಾಮಣಿ ಅಂತಹ ಘಟಾನುಘಟಿ ಕಲಾವಿದರಿದ್ದಾರೆ.
ಅಭಿಮಾನಿಗಳ ಪಾಲಿಗೆ ಇದು ಕೇವಲ ಸಿನಿಮಾವಲ್ಲ, ಇದು ತಮ್ಮ ನೆಚ್ಚಿನ ನಟನ ಸಿನಿರಂಗದ 'ಲಾಸ್ಟ್ ಶೋ'. ಇಂತಹ ಭಾವನಾತ್ಮಕ ಚಿತ್ರಕ್ಕೆ ಈ ರೀತಿ ಸೋರಿಕೆ ಮತ್ತು ಕಾನೂನು ವಿಘ್ನಗಳು ಎದುರಾಗುತ್ತಿರುವುದು ವಿಜಯ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಚಿತ್ರತಂಡವು ಶೀಘ್ರದಲ್ಲೇ ಈ ಎಲ್ಲಾ ಅಡೆತಡೆಗಳನ್ನು ದಾಟಿ ಬರುತ್ತದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.