ಚಾಮರಾಜನಗರ:ಶಾಸಕರ ಮನೆ ಸಮೀಪದಲ್ಲೇ ಕಳಪೆ ಕಾಮಗಾರಿ

By Kannadaprabha NewsFirst Published Oct 19, 2019, 12:00 PM IST
Highlights

ಶಾಸಕರ ಮನೆ ಸಮೀಪದಲ್ಲಿಯೇ ಕಳಪೆ ಕಾಮಗಾರಿ ನಡೆಸಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಶಾಸಕರ ಮನೆ ಸಮೀಪದಲ್ಲಿಯೇ ಕಳಪೆ ಕಾಮಗಾರಿ ಮಾಡಿದರೆ ಇನ್ನು ಜಿಲ್ಲೆಯಾದ್ಯಂತ ನಡೆಯೋ ಕಾಮಗಾರಿಗಳು ಎಷ್ಟು ಗುಣಮಟ್ಟ ಕಾಯ್ದುಕೊಳ್ಳಬಹುದೆಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ(ಅ.19): ಶಾಸಕ ಮಹೇಶ್‌ ವಾಸವಿರುವ ಕೊಳ್ಳೇಗಾಲದ ಆದರ್ಶ ನಗರ ಮನೆ ಸಮೀಪದ 24ನೇ ವಾರ್ಡ್‌ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡ ಘಟನೆ ಶುಕ್ರವಾರ ಜರುಗಿತು.

ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಗುಣಮಟ್ಟಕಾಪಾಡಿಲ್ಲ. ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಎಂದರೆ ನಾನು ಮಾಡುವುದೆ ಹೀಗೆ. ಇಲ್ಲ ಕಾಮಗಾರಿ ನಿಲ್ಲಿಸಿ ಬಿಡಲೇ ಎಂದು ಉದ್ದಟತನ ಪ್ರದರ್ಶಿಸುತ್ತಾರೆ ಎಂಬುದು ಸ್ಥಳೀಯ ದೂರು.

ಚರಂಡಿ ಕಾಮಗಾರಿಗೆ ನಿಯಮದಂತೆ ಕಬ್ಬಿಣದ ಸಲಾಕೆ ಅಳಡಿಸದೆ ಕಳಪೆ ಸಲಾಕೆ ಅಳವಡಿಸಲಾಗಿದೆ. ಕಾಮಗಾರಿ ನೆಪದಲ್ಲಿ ರಸ್ತೆ ಅಗೆದು ಸಂಚಾರಕ್ಕೂ ತೊಂದರೆ ನೀಡಲಾಗಿದೆ. ಇದರಿಂದ ನಾಗರಿಕರು ದಿನನಿತ್ಯ ಬವಣೆ ಪಡಬೇಕಾಗಿದೆ ಎಂದು ನಿವಾಸಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಹೆದ್ದಾರಿ ಬೀದಿ ದೀಪಗಳು ಕೆಟ್ಟು ತಿಂಗಳಾದರೂ ಕೇಳೋರೇ ಇಲ್ಲ..!

ಇದಕ್ಕೂ ಮುನ್ನ ನಿವಾಸಿಗಳು ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಕಳಪೆ ಕಾಮಗಾರಿ ಖಂಡಿಸಿ ಕಾಮಗಾರಿ ತಡೆದಿದ್ದರು. ಈ ಹಿನ್ನೆಲೆ ಸ್ಥಳಕ್ಕೆ ಲೋಕೋಪಯಾಗಿ ಇಲಾಖೆಯ ಎಂಜಿನಿಯರ್‌ ಆಗಮಿಸುತ್ತಿದ್ದಂತೆ ನಿವಾಸಿಗಳು ಕಾಮಗಾರಿ ಕಳಪೆಯಿಂದ ಕೂಡಿರುವುದಕ್ಕೆ ಸಾಕ್ಷಿ ತೋರಿಸಿದರು. ಅಲ್ಲದೆ, ಇದು ಕಾಮಗಾರಿ ನಿರ್ವಹಿಸುವ ಪರಿಯೇ? ಇದು ನಿಮಗೆ ತಿಳಿಯುತ್ತಿಲ್ಲವೆ ಎಂದು ಸ್ಥಳೀಯರು ಅಧಿಕಾರಿಗಳನ್ನೇ ತರಾಟೆ ತೆಗೆದುಕೊಂಡರು.

ಮಾಡುವುದಾದರೆ ಗುಣಮಟ್ಟದ ಕಾಮಗಾರಿ ಮಾಡಿಸಿ. ಇಲ್ಲ ಇಂತಹ ಕಳಪೆ ಕಾಮಗಾರಿ ಏಕೆ ಮಾಡಿಸುತ್ತಿರಾ ಎಂದು ನಿವಾಸಿಗಳಾದ ಚಂದ್ರು, ಲಲಿತಾ, ಪ್ರಮೀಳಾ, ನಾಗರಾಜು, ಗುರು ಖಾರವಾಗಿ ಪ್ರಶ್ನಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ಎಇಇ ಮಹದೇವಸ್ವಾಮಿ ಸ್ಥಳಕ್ಕೆ ಆಗಮಿಸಿ, ರಸ್ತೆ ಕಳಪೆಯಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗುತ್ತಿಗೆದಾರರ ಬಳಿ ಚರ್ಚಿಸಿ ಒಂದು ವಾರದೊಳಗೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿ ಹಿಂತಿರುಗಿಸಿದರು.

ಭೂಮಿ ಪೂಜೆ ಬಳಿಕ ತಿರುಗಿಯೂ ನೋಡದ ಶಾಸಕ, ಅಧಿಕಾರಿಗಳು!

ಶಾಸಕರು ಹಾಗೂ ಸಂಬಂಧಪಟ್ಟಅಧಿಕಾರಿಗಳು ತರಾತುರಿಯಲ್ಲಿ ಭೂಮಿ ಪೂಜೆ ಮಾಡಿ ನಿರ್ಗಮಿಸಿದ ಬಳಿಕ ಪುನಃ ಆ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದರೆ ಏನಾಗುತ್ತದೆ ಎಂಬುದಕ್ಕೆ ಶಾಸಕರ ಮನೆ ಸಮೀಪದಲ್ಲಿರುವ ಆದರ್ಶ ನಗರದ ಕಳಪೆ ಕಾಮಗಾರಿ ತಾಜಾ ಉದಾಹರಣೆಯಾಗಿದೆ.

ಶಾಸಕ ಮಹೇಶ್‌ ಅವರೇ ಈ ಕಾಮಗಾರಿಗೆ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಿದ್ದರು. ಅಂದಿನಿಂದ ಸಂಬಂಧಪಟ್ಟಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರೂ ಸೇರಿದಂತೆ ಸಂಬಂಧಪಟ್ಟಜನಪ್ರತಿನಿಧಿಗಳು ಪರಿಶೀಲಿಸಿದ್ದರೆ ಕಾಮಗಾರಿ ವಿವಾದಕ್ಕಿಡಾಗುವ ಪ್ರಸಂಗ ಎದುರಾಗುತ್ತಿರಲಿಲ್ಲ.

ಉದ್ಯಾವನಕ್ಕೆಂದು ಜಾಗ ಬಿಟ್ಟರೆ ಅಲ್ಲಿಯೇ ಮನೆ ಕಟ್ಟಿದ ನಗರಸಭೆ ಸದಸ್ಯ..!

ಕೇವಲ ಭೂಮಿ ಪೂಜೆ ನೆರವೇರಿಸಿದ ಬಳಿಕ ಇಂತಹ ಸಾಕಷ್ಟುಅಧ್ವಾನಗಳು ನಡೆಯುತ್ತವೆ. ಈ ಕುರಿತು ಇನ್ನಾದರೂ ಶಾಸಕರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಕಳಪೆ ಕಾಮಗಾರಿಗೆ ಶಾಸಕರೇ ಖುದ್ದು ಪರಿಶೀಲಿಸಿ ತಡೆಯಬೇಕು. ಭೂಮಿ ಪೂಜೆ ನೆರವೇರಿಸಿ ಪ್ರಚಾರಗಿಟ್ಟಿಸಿಕೊಳ್ಳುವ ಜನಪ್ರತಿನಿಧಿಗಳು, ಕಾಮಗಾರಿ ಚಾಲನೆ ನೀಡಿದ ಬಳಿಕ ಪರಿಶೀಲಿಸಿ ಕಾಮಗಾರಿ ಮುಗಿದ ಬಳಿಕ ಸರ್ಕಾರದ ಅನುದಾನ ಪೋಲಾಗದಂತೆ ತಡೆಯುವ ನಿಟ್ಟಿನಲ್ಲಿ ಮುಂದಾಗಬೇಕು ಎಂಬುದು ಆದರ್ಶ ನಗರ ಬಡಾವಣೆಯ ಪ್ರಜ್ಞಾವಂತರ ಆಗ್ರಹವಾಗಿದೆ.

click me!