ಕೊರೋನಾ ಹೋರಾಟಕ್ಕೆ ಕೈಜೋಡಿಸಿದ ಹೊಂಡಾ ಇಂಡಿಯಾ ; 6.5 ಕೋಟಿ ರೂ ಪ್ಯಾಕೇಜ್ ಘೋಷಣೆ!

By Suvarna NewsFirst Published May 10, 2021, 2:42 PM IST
Highlights

ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೋವಿಡ್ ಆರೈಕೆಯ ಪ್ರತ್ಯೇಕ ಕೇಂದ್ರಗಳು ಮತ್ತು ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ ಸೇರಿದಂತೆ ಕೊರೋನಾ ವಿರುದ್ಧದ ಹೋರಾಟಕ್ಕೆ ಹೊಂಡಾ ಇಂಡಿಯಾ ಕೈ ಜೋಡಿಸಿದೆ. ಇದಕ್ಕಾಗಿ 6.5 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

ನವದೆಹಲಿ(ಮೇ.10): ಕೋವಿಡ್  ವಿರುದ್ಧ ಭಾರತ ಸರ್ಕಾರದ ನಿರಂತರ ಹೋರಾಟಕ್ಕೆ ಹೊಂಡಾ ಇಂಡಿಯಾ ಕೈ ಜೋಡಿಸಿದೆ. ಅದರಲ್ಲೂ ಪ್ರಮುಖವಾಗಿ ಕರ್ನಾಟಕ, ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಕ್ಕೆ ಹೊಂಡಾ ವೈದ್ಯಕೀಯ ಸಲಕರಣೆ ಸೇರಿದಂತೆ ತುರ್ತು ಅಗತ್ಯತೆಯನ್ನು ಪೂರೈಸಲು ಸಜ್ಜಾಗಿದೆ. ಇದಕ್ಕಾಗಿ ಹೊಂಡಾ ಬರೋಬ್ಬರಿ 6.50 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ.  

ದೇಶದಲ್ಲಿ ಆಕ್ಸಿಜನ್ ಸಾಗಾಣೆಗೆ ಟೋಲ್ ಉಚಿತ; NHAI ಮಹತ್ವದ ನಿರ್ಧಾರ!

ಕೋವಿಡ್-19 ಪಿಡುಗಿನ ಈ ಎರಡನೇ ಅಲೆಯು ನಮ್ಮೆಲ್ಲರನ್ನು ತೀವ್ರವಾಗಿ ಬಾಧಿಸಿದೆ. ನೆರವು ಅಗತ್ಯವಿರುವ ಈ ಸೂಕ್ಷ್ಮ ಕಾಲಘಟ್ಟದಲ್ಲಿ, ಜನರು ಮತ್ತು ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅನಿವಾರ್ಯತೆ ಇದೆ.  ನಾವು ಕಾರ್ಯನಿರ್ವಹಿಸುತ್ತಿರುವ ಸಮುದಾಯಕ್ಕಾಗಿ ಮತ್ತು ವಿಶಾಲ ಅರ್ಥದಲ್ಲಿ ಇಡೀ ದೇಶದ ಒಳಿತಿಗಾಗಿ ನಮ್ಮಿಂದ ಸಾಧ್ಯವಿರುವ ಗರಿಷ್ಠ ಪ್ರಯತ್ನ ಮಾಡುತ್ತೇವೆ. ಸರ್ಕಾರ ಮತ್ತು ಉದ್ದಿಮೆಯ ಇಂತಹ ಪ್ರಯತ್ನಗಳು ಈ ವಿಪತ್ತಿನ ಜತೆಗೆಯೇ ದಿನಗಳನ್ನು ದೂಡುತ್ತಿರುವ ಕುಟುಂಬಗಳಿಗೆ ಗಮನಾರ್ಹವಾಗಿ ನೆರವಾಗಲಿವೆ ಎನ್ನುವುದು ನಮ್ಮ ಆಶಯವಾಗಿದೆ. ಪಿಡುಗಿಗೆ ಕಡಿವಾಣ ಹಾಕುವ ಸದ್ಯದ ಪ್ರಯತ್ನಗಳು ಸುಗಮವಾಗಿ ಮುಂದುವರೆಯುವುದನ್ನು ಖಾತರಿಪಡಿಸುವುದಕ್ಕೆ ನಾವು ವಿವಿಧ ಪಾಲುದಾರರ ಜತೆ ಕಾರ್ಯನಿರ್ವಹಿಸಲಿದ್ದೇವೆ. ನಾವು ಈ ಕಠಿಣ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಗೆಲುವು ಸಾಧಿಸಬಲ್ಲೆವು ಎನ್ನುವ ನಂಬಿಕೆಯೊಂದಿಗೆ, ಪ್ರತಿಯೊಬ್ಬರೂ ಪರಸ್ಪರರ ನೆರವಿಗೆ ನಿಲ್ಲುವ ಸಮಯ ಇದಾಗಿದೆ ಎಂದು ಹೊಂಡಾ ಇಂಡಿಯಾ ಫೌಂಡೇಷನ್ ಅಧ್ಯಕ್ಷ ಅತ್ಸುಶಿ ಒಗಟಾ ಹೇಳಿದ್ದಾರೆ.

ಕೊರೋನಾ ತುರ್ತು ಚಿಕಿತ್ಸೆಗೆ 2ಡಿಜಿ ‘ಸಂಜೀವಿನಿ’; ರೋಗಿಗಳಲ್ಲಿ ಶೀಘ್ರ ಚೇತರಿಕೆ

ಈ ನೆರವಿನ ಭಾಗವಾಗಿ, ಹೋಂಡಾ ಇಂಡಿಯಾ ಫೌಂಡೇಷನ್, ಕರ್ನಾಟಕ, ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೋವಿಡ್ ಆರೈಕೆಯ  ತಾತ್ಕಾಲಿಕ   ಪ್ರತ್ಯೇಕ ಕೇಂದ್ರಗಳನ್ನು ಮತ್ತು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ. ಹರಿಯಾಣದ ಹೋಂಡಾದ ಗೋದಾಮಿನ ಆವರಣದಲ್ಲಿ 100 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗಿದೆ.  ರಾಜಸ್ಥಾನದ ತಪುಕರದಲ್ಲಿರುವ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ 50-100 ಹಾಸಿಗೆ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದೆ.   ಕೋವಿಡ್-19 ತಾತ್ಕಾಲಿಕ ಆರೈಕೆಯ ಈ ಕೇಂದ್ರಗಳು ಮುಂದಿನ ವಾರದಿಂದ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಕರ್ನಾಟಕ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿಯೂ ಇದೇ ಬಗೆಯ ಪ್ರತ್ಯೇಕ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗುವುದು.

ಕರ್ನಾಟಕದ ಕೋಲಾರ, ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಮತ್ತು ಹರಿಯಾಣದ ಮಾನೇಸರ್ ಜಿಲ್ಲೆಗಳಲ್ಲಿ    ಆಮ್ಲಜನಕ ಉತ್ಪಾದನಾ ಘಟಕ  ಸ್ಥಾಪಿಸಲು ಫೌಂಡೇಷನ್, ಸಂಬಂಧಿಸಿದ   ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಲಿದೆ.

ಕೋವಿಡ್ ಸಮರದ ಮುಂಚೂಣಿ ಯೋಧರಿಗೆ ವೈಯಕ್ತಿಕ ರಕ್ಷಣಾ ಕಿಟ್‍ಗಳು (ಪಿಪಿಇ, ಮುಖಗವಸು, ಸ್ಯಾನಿಟೈಸರ್) ಮತ್ತು ಆಹಾರ ಪ್ಯಾಕೆಟ್‍ಗಳನ್ನು ಒದಗಿಸುವ ಈ ಎಲ್ಲ 5 ರಾಜ್ಯಗಳ ಸ್ಥಳೀಯ ಆಡಳಿತ ಸಂಸ್ಥೆಗಳ ಪ್ರಯತ್ನಗಳಿಗೆ ನೆರವು ನೀಡಲು ಹೋಂಡಾ ಇಂಡಿಯಾ ಫೌಂಡೇಷನ್ ಈಗಾಗಲೇ ವ್ಯಾಪಕ ಬಗೆಯಲ್ಲಿ ಅಗತ್ಯ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ವೈದ್ಯಕೀಯ ಪರಿಕರಗಳಾದ ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುತ್ತಿದೆ.
  
ಸಾಮಾಜಿಕವಾಗಿ ಜವಾಬ್ದಾರಿಯುತ ಕಾರ್ಪೊರೇಟ್ ಆಗಿರುವ ಹೋಂಡಾ, ತನ್ನ ಎಲ್ಲಾ ಭಾಗಿದಾರರು ಮತ್ತು ಸಮುದಾಯದ   ಸುರಕ್ಷತೆಗಾಗಿ ಸಾಧ್ಯವಿರುವ ಪ್ರತಿಯೊಂದು ಕ್ರಮ ತೆಗೆದುಕೊಳ್ಳಲು   ದೃಢ ನಿಶ್ಚಯ ಮಾಡಿದೆ.

click me!