ಹೊಸ ಹಾಗೂ ಹಳೆ ತೆರಿಗೆ ಪದ್ಧತಿ ನಡುವಿನ ವ್ಯತ್ಯಾಸವೇನು..?

By Kannadaprabha NewsFirst Published Feb 2, 2023, 10:11 AM IST
Highlights

ಹಳೆ  ಹಾಗೂ ಹೊಸ  ತೆರಿಗೆ ಪದ್ಧತಿಯ ನಡುವಿನ ವ್ಯತ್ಯಾಸವೇನು ಎಂಬ ಡಿಟೇಲ್ ಇಲ್ಲಿದೆ. 

ನವದೆಹಲಿ:  ಸರ್ಕಾರವು ಹೊಸ ಆದಾಯ ತೆರಿಗೆ ಪದ್ಧತಿಯನ್ನು ತೆರಿಗೆದಾರರಿಗೆ ಹೆಚ್ಚು ಆಕರ್ಷಕವಾಗಿಸಿದೆ ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಅದರ ರಚನೆಯಲ್ಲಿ ಗಣನೀಯ ಬದಲಾವಣೆ ತಂದಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.  ಬುಧವಾರ ಬಜೆಟ್‌ ಮಂಡನೆ ನಂತರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2020-21ರಲ್ಲಿ ಪರಿಚಯಿಸಲಾಗಿದ್ದ ಹೊಸ ಐಚ್ಛಿಕ ತೆರಿಗೆ ಪದ್ಧತಿಯಲ್ಲಿ 2023-24ರಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ದೇಶವು ಇಂದು ಸುಲಭವಾಗಿ ಅನುಸರಿಸಲು ಅನುಕೂಲವಾಗುವ ಸರಳೀಕೃತ ನೇರ ತೆರಿಗೆ ಪದ್ಧತಿಗೆ ಕಾಯುತ್ತಿದೆ’ ಎಂದರು.

‘ವೈಯಕ್ತಿಕ ಆದಾಯ ತೆರಿಗೆಯು ಬಜೆಟ್‌ನಲ್ಲಿ ಗಣನೀಯ ಬದಲಾವಣೆಗಳನ್ನು ಪಡೆದುಕೊಂಡಿದೆ. ಇದು ಮಧ್ಯಮ ವರ್ಗದವರಿಗೆ ಪ್ರಯೋಜನ ನೀಡುತ್ತದೆ. ಹೊಸ ತೆರಿಗೆ ವ್ಯವಸ್ಥೆಯು ಈಗ ಹೆಚ್ಚಿನ ವೇಗ ಹೊಂದಿದೆ. ಇದರಿಂದಾಗಿ ಜನರು ಈಗ ಹಳೆಯ ತೆರಿಗೆ ಪದ್ಧತಿಗಿಂತ ಹೊಸ ತೆರಿಗೆ ಪದ್ಧತಿಗೆ ಹಿಂಜರಿಕೆ ಇಲ್ಲದೇ ಸೇರಿಕೊಳ್ಳಬಹುದು’ ಎಂದರು. ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳ ಪ್ರಕಾರ, ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ 7 ಲಕ್ಷ ರು.ವರೆಗಿನ ವಾರ್ಷಿಕ ಆದಾಯ ಹೊಂದಿರುವ ಜನರಿಗೆ ಯಾವುದೇ ತೆರಿಗೆ ವಿಧಿಸುವುದಿಲ್ಲ. ಆದರೆ ಎಚ್‌ಆರ್‌ಎ ಮತ್ತು ಇತರ ಬಂಡವಾಳಗಳನ್ನು ಉಲ್ಲೇಖಿಸಿದರೆ ತೆರಿಗೆ ವಿನಾಯಿತಿ ಮತ್ತು ಕಡಿತಗಳನ್ನು ಒದಗಿಸುವ ಹಳೆಯ ತೆರಿಗೆ ಪದ್ಧತಿಯಲ್ಲಿ ಮುಂದುವರಿಯುವವರಿಗೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಹಳೆಯ ತೆರಿಗೆ ಪದ್ಧತಿಯಡಿ 5 ಲಕ್ಷ ರು.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ.

‘ಹೊಸ ತೆರಿಗೆ ಪದ್ಧತಿಯನ್ನು ಸಾಕಷ್ಟುಆಕರ್ಷಕವಾಗಿಸಲು ಸರ್ಕಾರ ಬಯಸುತ್ತದೆ ಮತ್ತು ಅನುಸರಣೆ ತೆರಿಗೆದಾರರ ಮೇಲೆ ಹೊರೆಯಾಗಬಾರದು ಎಂಬ ಉದ್ದೇಶವಿದೆ. ಆದರೆ ಹಳೆಯ ತೆರಿಗೆ ಪದ್ಧತಿ ಹೆಚ್ಚು ಪ್ರಯೋಜನಕಾರಿ ಎಂದು ಭಾವಿಸಿದರೆ, ತೆರಿಗೆದಾರರು ಅದರಲ್ಲೇ ಮುಂದುವರಿಯಬಹುದು’ ಎಂದು ಅವರು ಹೇಳಿದರು. 
ಕಂದಾಯ ಕಾರ್ಯದರ್ಶಿ ಸಂಜಯ ಮಲ್ಹೋತ್ರಾ ಮಾತನಾಡಿ, ‘ಹೆಚ್ಚಿನ ವೈಯಕ್ತಿಕ ತೆರಿಗೆದಾರರು ಹೊಸ ತೆರಿಗೆ ಪದ್ಧತಿಯತ್ತ ಹೊರಳಲು ಆಸಕ್ತಿ ತೋರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ, 2020-21ರಿಂದ ಹೊಸ ತೆರಿಗೆ ಪದ್ಧತಿಗೆ ವಲಸೆ ಬಂದ ತೆರಿಗೆದಾರರ ಸಂಖ್ಯೆಯ ಬಗ್ಗೆ ವಿವರಗಳನ್ನು ಅವರು ನೀಡಲಿಲ್ಲ.

ಆದಾಯ ತೆರಿಗೆ ಸ್ಲಾಬ್ ಬದಲಿಲ್ಲ ದರ, ರಿಯಾಯ್ತಿ, ವಿನಾಯ್ತಿ ಎಲ್ಲವೂ ಯಥಾಸ್ಥಿತಿ 

ಕೋವಿಡ್‌ ಸಂಕಷ್ಟಗಳ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ತೆರಿಗೆದಾರರ ನೆರವಿಗೆ ಬರಬಹುದು ಎಂಬ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಸೋಮವಾರ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ಎಲ್ಲಾ ಸಾಮಾನ್ಯ ವಿಷಯಗಳನ್ನು ಹಿಂದಿನಂತೆಯೇ ಮುಂದುವರೆಸಲಾಗಿದೆ. 
ಆದಾಯ ತೆರಿಗೆ ಸ್ಲಾ್ಯಬ್‌ (ಸ್ತರ), ತೆರಿಗೆ ದರ, ತೆರಿಗೆ ವಿನಾಯ್ತಿ, ತೆರಿಗೆ ರಿಯಾಯ್ತಿ ಸೇರಿದಂತೆ ಯಾವುದೇ ವಿಷಯವನ್ನು ಮುಟ್ಟುವ ಗೋಜಿಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಹೋಗಿಲ್ಲ. ಈ ಮೂಲಕ ಮಧ್ಯಮ ವರ್ಗದ ಜನರ ಬಹುದೊಡ್ಡ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ.

ಆದರೆ 2021ರ ಏಪ್ರಿಲ್‌1 ರಿಂದ ವೇತನ ಪಡೆಯುವ ವರ್ಗ ಹಳೆಯ ಅಥವಾ ಹೊಸ ತೆರಿಗೆ ಪದ್ಧತಿಗಳ ಪೈಕಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಕೊಳ್ಳಬೇಕಿದೆ. ಈ ಕುರಿತ ಬದಲಾವಣೆಯನ್ನು ಕೇಂದ್ರ ಸರ್ಕಾರ 2020ರ ಬಜೆಟ್‌ನಲ್ಲೇ ಮುಂದಿಟ್ಟಿತ್ತು. ಆದರೆ ಹೊಸ ಪದ್ಧತಿಯಲ್ಲಿ ತೆರಿಗೆ ದರ ಕಡಿಮೆ ಇದೆಯಾದರೂ, ಸುಮಾರು 70 ತೆರಿಗೆ ವಿನಾಯ್ತಿ ಪಡೆಯುವ ಅವಕಾಶವನ್ನು ಕೈಬಿಡಬೇಕು. ಆದರೆ ಇದು ಐಚ್ಛಿಕ. ತೆರಿಗೆದಾರರು ಬಯಸಿದರೆ ಮಾತ್ರವೇ ಹೊಸ ಪದ್ಧತಿ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲದೆ ಹೋದಲ್ಲಿ ಈಗ ಜಾರಿಯಲ್ಲಿರುವ ತೆರಿಗೆ ಪದ್ಧತಿಯಲ್ಲೇ ಮುಂದುವರೆಯಬಹುದು.

click me!