ವಾಹನ ಟೈರ್ ಸ್ಫೋಟಕ್ಕೆ ದೇವರು ಕಾರಣವೆಂದ ವಿಮಾ ಕಂಪನಿಗೆ ಬಾಂಬೆ ಹೈಕೋರ್ಟ್ ತರಾಟೆ, ಪರಿಹಾರ ಪಾವತಿಸಲು ಸೂಚನೆ

By Suvarna NewsFirst Published Mar 14, 2023, 4:11 PM IST
Highlights

ವಾಹನದ ಟೈರ್ ಸ್ಫೋಟಕ್ಕೆ ದೇವರೇ ಕಾರಣ, ಹೀಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದ ವಿಮಾ ಕಂಪನಿಯೊಂದಕ್ಕೆ ಬಾಂಬೆ ಹೈಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ. ಟೈರ್ ಸ್ಫೋಟಗೊಳ್ಳಲು ಅತೀವೇಗದ ಚಾಲನೆ ಅಥವಾ ಟೈರ್ ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಅಥವಾ ಕಡಿಮೆ ಗಾಳಿ ತುಂಬಿರೋದೇ ಕಾರಣ. ಹೀಗಾಗಿ ಇದಕ್ಕೆ ದೇವರನ್ನು ಹೊಣೆ ಮಾಡದೆ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಕೋರ್ಟ್ ಸೂಚಿಸಿದೆ. 
 

ಮುಂಬೈ (ಮಾ.14): ವಾಹನದ ಟೈರ್ ಸ್ಪೋಟಕ್ಕೆ ದೇವರನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಇದು ಮಾನವನ ನಿರ್ಲಕ್ಷ್ಯದ ಪರಿಣಾಮವಾಗಿದ್ದು, ಇದಕ್ಕೆ ಚಾಲಕನೇ ನೇರ ಹೊಣೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಅಲ್ಲದೆ, ಟೈರ್ ಸ್ಫೋಟದಿಂದ ಸಂಭವಿಸಿದ ಅಪಘಾತದಲ್ಲಿ ಮರಣ ಹೊಂದಿದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಿದೆ. ನ್ಯೂ ಇಂಡಿಯಾ ಅಸ್ಯುರೆನ್ಸ್ ಕೋ.ಲಿ. ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ. ಚಾಲಕನ ನಿರ್ಲಕ್ಷ್ಯದಿಂದ ಟೈರ್ ಸ್ಫೋಟಗೊಂಡಿಲ್ಲ. ಈ ಅಪಘಾತಕ್ಕೆ ದೇವರೇ ಕಾರಣ ಎಂದು ಮೇಲ್ಮನವಿಯಲ್ಲಿ ವಿಮಾ ಸಂಸ್ಥೆ ತಿಳಿಸಿತ್ತು. ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಸ್ .ಜೆ. ಡಿಗೆ ಈ ಅರ್ಜಿಯ ವಿಚಾರಣೆ ನಡೆಸಿ, ಅತೀವೇಗದ ಚಾಲನೆ ಅಥವಾ ಅತೀ ಕಡಿಮೆ ಅಥವಾ ಹೆಚ್ಚಿ ಗಾಳಿ ಟೈರ್ ನಲ್ಲಿ ತುಂಬಿರೋದ್ರಿಂದ ಟೈರ್ ಸ್ಫೋಟಗೊಳ್ಳುತ್ತದೆ. ಪ್ರಯಾಣ ಪ್ರಾರಂಭಿಸುವ ಮುನ್ನ ಟೈರ್ ಕಂಡೀಷನ್ ಹೀಗಿದೆ ಎಂದು ಪರಿಶೀಲಿಸೋದು ವಾಹನದ ಮಾಲೀಕ ಅಥವಾ ಚಾಲಕನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. 

ಟೈರ್ ಸ್ಫೋಟಗೊಂಡ ಕಾರಣ ಕಾರು ಪಲ್ಟಿಯಾಗಿದ್ದು, ಸ್ನೇಹಿತನ ಜೊತೆಗೆ ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದರು. ವಿಮಾ ಕಂಪನಿ ಟೈರ್ ಸ್ಫೋಟಗೊಳ್ಳಲು ಏನು ಕಾರಣ ಎಂಬುದನ್ನು ಅದರ ಚಾಲಕನ ಜೊತೆಗೆ ವಿಚಾರಿಸಿಲ್ಲ. ಟೈರ್ ಸ್ಫೋಟಕ್ಕೆ ದೇವರೆ ಕಾರಣ ಎಂದು ಸುಖಾಸುಮ್ಮನೆ ಹೇಳುವ ಮೂಲಕ ಪರಿಹಾರ ನೀಡದೆ ವಿಮಾ ಕಂಪನಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ. 

ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್‌..! ರೈಲ್ವೆ ಟಿಕೆಟ್‌ ರಿಯಾಯ್ತಿ ಶೀಘ್ರದಲ್ಲೇ ಪುನಾರಂಭ..?

ಪುಣೆಯ ವಾಹನ ಅಪಘಾತ ಕ್ಲೇಮ್ ನ್ಯಾಮ ಮಂಡಳಿ (MACT) ಪ್ರತಿ ವಾರಸುದಾರನಿಗೆ 2,25,000 ರೂ. ಪಾವತಿಸುವಂತೆ ವಿಮಾ ಕಂಪನಿಗೆ ಸೂಚಿಸಿತ್ತು. ಈ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು. ಎಂಎಸಿಟಿ ಪರಿಗಣಿಸಿರುವ ಮೃತಪಟ್ಟ ವ್ಯಕ್ತಿಯ ವೇತನ ಹೆಚ್ಚಿದೆ. ಭತ್ಯೆಗಳನ್ನು ವೇತನದ ಭಾಗ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಅದನ್ನು ವೇತನ ಲೆಕ್ಕಚಾರ ಮಾಡುವಾಗ ಪರಿಗಣಿಸಿರೋದು ಸರಿಯಲ್ಲ' ಎಂದು ವಿಮಾ ಕಂಪನಿ ವಾದ ಮಂಡಿಸಿತ್ತು. 

ವಿಮಾ ಕಂಪನಿ ವಾದದಲ್ಲಿ ಯಾವುದೇ ಹುರಳಿಲ್ಲ ಎಂಬುದನ್ನು ಕೋರ್ಟ್ ಗಮನಿಸಿತ್ತು. ಮೃತ ವ್ಯಕ್ತಿಯ ವೇತನ ಲೆಕ್ಕಚಾರದ ಸಂದರ್ಭದಲ್ಲಿ ಆದಾಯ ತೆರಿಗೆ, ವೃತ್ತಿ ತೆರಿಗೆಯನ್ನು ಕಡಿತ ಮಾಡಿ ಉಳಿದ ವೇತನವನ್ನು ಪರಿಗಣಿಸೋದು ಸಾಮಾನ್ಯ. ಹೀಗಾಗಿ ಮೃತವ್ಯಕ್ತಿಯ ವೇತನವನ್ನು ಹೆಚ್ಚಾಗಿ ಪರಿಗಣಿಸಲಾಗಿದೆ ಎಂಬ ವಾದದಲ್ಲಿ ಯಾವುದೇ ಪುಷ್ಟಿ ಇಲ್ಲ ಎಂದು ಕೋರ್ಟ್ ತಿಳಿಸಿದೆ. ಹೀಗಾಗಿ ಪ್ರತಿ ವಾರಸುದಾರನಿಗೆ 1,90,000ರೂ. ಪಾವತಿಸಬೇಕು. ಇನ್ನು ಕಂಪನಿ 1,24,60,960ರೂ. ಅನ್ನು  ಅರ್ಜಿ ಸಲ್ಲಿಕೆ ಮಾಡಿದ ದಿನಾಂಕದಿಂದ ಅದರ ಇತ್ಯರ್ಥದ ದಿನದ ತನಕ ವಾರ್ಷಿಕ ಶೇ.7.5 ಬಡ್ಡಿದರದಲ್ಲಿ ನೀಡಬೇಕು ಎಂದು ಆದೇಶಿಸಿದೆ. ಹಾಗೆಯೇ ಇದರಲ್ಲಿ ವಿಮಾ ಕಂಪನಿ ಹೆಚ್ಚುವರಿ ಎಂದು ಪರಿಗಣಿಸಿರುವ  35,000 ರೂ. ಅನ್ನು ಹಿಂಪಡೆಯಲು ಕೂಡ ಅವಕಾಶ ನೀಡಲಾಗಿದೆ.

ವಾಹನದ ವಿಮೆ ನವೀಕರಿಸಿಲ್ಲವೇ? ದಂಡದ ಜೊತೆಗೆ ಮನೆಗೆ ಬರಲಿದೆ ನೋಟಿಸ್!

ವಿಮಾ ನವೀಕರಣ ಕಡ್ಡಾಯ
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಶೇಕಡಾ 100 ರಷ್ಟು ವಿಮೆ ನವೀಕರಣ ಗುರಿ ಸಾಧಿಸಲು ಮುಂದಾಗಿದೆ. ಮೋಟಾರು ವಾಹನ ಕಾಯ್ದೆ ಪ್ರಕಾರ ಸಮಯಕ್ಕೆ ಸರಿಯಾಗಿ ವಿಮೆ ನವೀಕರಣ ಮಾಡದಿದ್ದರೆ, 2,000 ರೂಪಾಯಿ ದಂಡ ಪಾವತಿಸಬೇಕು. ಇಷ್ಟೇ ಅಲ್ಲ ಹೊಸ ವಿಮೆ ಮಾಡಿಸಿಕೊಳ್ಳಬೇಕು. ಇದೀಗ ಹೊಸ ನಿಯಮದ ಪ್ರಕಾರ, ವಿಮೆ ನವೀಕರಣ ಮಾಡದ ಪ್ರತಿಯೊಬ್ಬ ವಾಹನ ಮಾಲೀಕರ ವಿಳಾಸ ಹಾಗೂ ಮೊಬೈಲ್ ಸಂಖ್ಯೆಗೆ ನೋಟಿಸ್ ಕಳುಹಿಸಲಾಗುತ್ತದೆ. ನಿಗದಿತ ಸಮಯದೊಳಗೆ ವಿಮೆ ನವೀಕರಣ ಮಾಡಿಸಿಕೊಳ್ಳಬೇಕು. ಇದರ ಜೊತೆಗೆ ದಂಡವನ್ನು ಪಾವತಿಸಬೇಕು.  

click me!