ಅಂಬಿ ಅಣ್ಣ ಮತ್ತು ಬಿಸಿನೆಸ್: 'ಕೈ ಹಾಕಿದಲ್ಲೆಲ್ಲಾ ಗೌಡ್ರು ಸಕ್ಸೆಸ್!

By Web DeskFirst Published Nov 25, 2018, 1:36 PM IST
Highlights

ಮಂಡ್ಯದ ಗಂಡು, ರೆಬಲ್ ಸ್ಟಾರ್, ಕಲಿಯುಗದ ಕರ್ಣ! ಎಷ್ಟೊಂದು ಬಿರುದು ನಮ್ಮ ಅಂಬಿ ಅಣ್ಣಂಗೆ! ಅಂಬಿ ಅಣ್ಣ ಮುಟ್ಟಿದ್ದೆಲ್ಲಾ ಚಿನ್ನ, ಎಲ್ಲದರಲ್ಲೂ ಸೆಕ್ಸೆಸ್! ಚಿತ್ರರಂಗ, ರಾಜಕಾರಣದಲ್ಲಿ ಅಂಬರೀಷ್ ಮಾಸದ ಹೆಜ್ಜೆ ಗುರುತು! ಉದ್ಯಮ ಕ್ಷೇತ್ರದಲ್ಲೂ ಅಂಬರೀಷ್ ಕಂಡಿದ್ದರು ಭಾರೀ ಯಶಸ್ಸು! ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಿದ್ದ ಅಂಬರೀಷ್

ಬೆಂಗಳೂರು(ನ.25): ಕರುನಾಡು ಮತ್ತೋರ್ವ ಪ್ರೀತಿ ಪಾತ್ರ ನಟನನ್ನು ಕಳೆದುಕೊಂಡಿದೆ. ಅಭಿಮಾನಿಗಳ ಪಾಲಿನ ಮಂಡ್ಯದ ಗಂಡು, ರೆಬಲ್ ಸ್ಟಾರ್ ಅಂಬರೀಷ್ ಇನ್ನು ನಮ್ಮ ಜೊತೆಗಿಲ್ಲ.

ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರ ಎರಡರಲ್ಲೂ ಮಿಂಚಿದ ಅಂಬರೀಷ್, ತಮ್ಮ ಸಹಾಯ ಮನೋಭಾವದಿಂದಾಗಿ ಕಲಿಯುಗದ ಕರ್ಣ ಎಂದೇ ಖ್ಯಾತಿಗಳಿಸಿದವರು. ಸಿನಿಮಾ ನಟರಾಗಿ ಮನೆಮಾತಾದ ಅಂಬರೀಷ್, ರಾಜಕೀಯ ನೇತಾರರಾಗಿಯೂ ಜನರಿಗೆ ಹತ್ತಿರವಾದವರು.

ತಮ್ಮ ವಿಶಿಷ್ಟ ಮ್ಯಾನರಿಸಂ, ಜನರೊಂದಿಗೆ ಬೆರೆಯುವ ಸ್ವಭಾವ, ಒರಟು ಮಾತುಗಳಿಂದಲೇ ಜನರ ಸ್ನೇಹ ಸಂಪಾದಿಸುವ ಕಲೆ ಹಾಗೂ ಐಷಾರಾಮಿ ಜೀವನಶೈಲಿಯಿಂದಲೇ ಅಂಬರೀಶ್ ಜನರ ಹೃದಯ ಸಾಮ್ರಾಟರಾಗಿ ಮೆರೆದರು.

ಅದರಂತೆ ಅಂಬರೀಷ್ ಕೇವಲ ಚಿತ್ರರಂಗ, ರಾಜಕೀಯ ಕ್ಷೇತ್ರದಲ್ಲಷ್ಟೇ ಅಲ್ಲದೇ ವ್ಯಾಪಾರ ಕ್ಷೇತ್ರದಲ್ಲೂ ಹೆಸರು ಮಾಡಿದ್ದರು. ವಿವಿಧ ಕ್ಷೇತ್ರಗಳಲ್ಲಿ ಅವರು ಮಾಡಿದ್ದ ಹೂಡಿಕೆಗಳು ವ್ಯಾಪಾರ  ಕ್ಷೇತ್ರದಲ್ಲಿ ಅವರಿಗಿದ್ದ ಆಸಕ್ತಿ ಮತ್ತು ಜ್ಞಾನಕ್ಕೆ ಉದಾಹರಣೆಯಾಗಿದೆ.

ಅಂಬಿ ವ್ಯವಹಾರ ಹೇಗಿತ್ತು?:

ವ್ಯಾಪಾರ ಕ್ಷೇತ್ರದಲ್ಲಿ ಕೂಡ ಅಂಬರೀಷ್ ಅದ್ಭುತ ಎನ್ನಬಹುದಾದ ಯಶಸ್ಸನ್ನೇ ಗಳಿಸಿದ್ದರು. ಹಾಗೆ ನೋಡಿದರೆ ಅಂಬರೀಷ್ ನೇರವಾಗಿ ಯಾವುದೇ ವ್ಯಾಪಾರ ಒಡೆತನ ಹೊಂದಿರದೇ ಇದ್ದರೂ, ವಿವಿಧ ವಲಯಗಳಲ್ಲಿ ಬಂಡವಾಳ ಹೂಡುವ ಮೂಲಕ ಅಥವಾ ಪರೋಕ್ಷ ಪಾಲುದಾರ(ಸ್ಲೀಪಿಂಗ್ ಪಾರ್ಟ್ನರ್)ರಾಗುವ ಮೂಲಕ ಯಶಸ್ಸು ಗಳಿಸಿದವರು ಅಂಬರೀಶ್.

ಪೀಟಿಲು ಚೌಡಯ್ಯ ಅವರ ಮೊಮ್ಮಗರಾದ ಅಂಬರೀಶ್ ಹುಟ್ಟು ಶ್ರೀಮಂತರು. ಪೂರ್ವಜರ ಅಪಾರ ಆಸ್ತಿ ಮತ್ತು ಅದನ್ನು ನಿರ್ವಹಿಸುವ ಮ್ಯಾನೆಜ್ ಮೆಂಟ್ ಸ್ಕಿಲ್ ಅಂಬರೀಷ್ ಅವರಿಗೆ ಕರಗತವಾಗಿತ್ತು. ಹೀಗಾಗಿಯೇ ವಿವಿಧ ಉದ್ಯಮ ವಲಯದಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಅಂಬರೀಷ್ ಉದ್ಯಮ ವಲಯದಲ್ಲಿ ಯಶಸ್ಸುಗಳಿಸಿದರು.

ಎಲ್ಲೆಲ್ಲಿ ಹೂಡಿಕೆ?:

ಎಲ್ಲರಿಗೂ ತಿಳಿದಿರುವಂತೆ ಅಂಬರೀಷ್ ಅವರಿಗೆ ಹಾರ್ಸ್ ರೇಸಿಂಗ್ ಹವ್ಯಾಸವಿತ್ತು. ಹೀಗಾಗಿ ಬೆಂಗಳೂರು ಟರ್ಫ್ ಕ್ಲಬ್‌ನ ಖಾಯಂ ಸದಸ್ಯರಾಗಿದ್ದ ಅವರು, ಹಲವು ಕುದುರೆಗಳ ಮಾಲೀಕರಾಗಿಯೂ ಗಮನಸೆಳೆದಿದ್ದರು.

ಅದರಂತೆ ಬೆಂಗಳೂರಿನ ವಿಜಯ್ ಮಲ್ಯ ಒಡೆತನದ ಯುಬಿ ಸಿಟಿಯಲ್ಲೂ ಅಂಬರೀಶ್ ಹೂಡಿಕೆ ಮಾಡಿದ್ದರು. ಜೊತೆಗೆ ನಗರದಲ್ಲಿರುವ ಹಲವಾರು ವಾಣಿಜ್ಯ ಸಂಕೀರ್ಣಗಳಲ್ಲೂ ಅಂಬರೀಷ್ ಅವರ ಗಮನಾರ್ಹ ಪಾಲುದಾರಿಕೆ ಇದೆ.

ಇನ್ನು ಬಿಡದಿ ಸಮೀಪ ನಿರ್ಮಾಣವಾಗಿರುವ ಫಿಲ್ಮ ಸಿಟಿಯಲ್ಲೂ ಅಂಬರೀಷ್ ಹೂಡಿಕೆ ಮಾಡಿದ್ದರು. ಅಲ್ಲದೇ ಮಂಡ್ಯದಲ್ಲಿ ಸಾಕಷ್ಟು ಜಮೀನು ಕೂಡ ಅಂಬರೀಷ್ ಹೆಸರಲ್ಲಿದೆ.

ಇಷ್ಟೇ ಅಲ್ಲದೇ ಇನ್ನೂ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಇನ್ನೂ ಹಲವು ಕಡೆ ಅಂಬರೀಷ್ ಗಮನಾರ್ಹ ಹೂಡಿಕೆ ಮಾಡಿದ್ದರು. ಈ ಮೂಲಕ ನಟರಾಗಿ, ರಾಜಕೀಯ ನೇತಾರರಾಗಿ ಮತ್ತು ಓರ್ವ ಯಶಸ್ವಿ ಉದ್ಯಮಿಯಾಗಿಯೂ ಅಂಬರೀಷ್ ಹೆಸರುಗಳಿಸಿದ್ದರು.

click me!