
ನವದೆಹಲಿ: ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ ಬಳಕೆದಾರರಿಗೆ ಗುಡ್ನ್ಯೂಸ್ ನೀಡಲು ಕೇಂದ್ರ ಸರ್ಕಾರ ಸೂಪರ್ ಪ್ಲಾನ್ಗೆ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಕೇಂದ್ರ ಸಂವಹನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಬಿಎಸ್ಎನ್ಎಲ್ ಬಳಕೆದಾರರಿಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದೇ ವರ್ಷ ಜೂನ್ನಿಂದ 4G ಯಿಂದ 5Gಗೆ ಬದಲಾವಣೆಯ ಪ್ರಕ್ರಿಯೆ ಶುರುವಾಗಲಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಈಗಾಗಲೇ ದೇಶದಲ್ಲಿರುವ ಮೂರು ಖಾಸಗಿ ಟೆಲಿಕಾಂ ಕಂಪನಿಗಳಾದ ಏರ್ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ಬಳಕೆದಾರರಿಗೆ 5G ಕನೆಕ್ಟಿವಿಟಿ ನೀಡಲು ಶುರು ಮಾಡಿಕೊಂಡಿವೆ. ವೋಡಾಫೋನ್ ಐಡಿಯಾ ಮಾತ್ರ ಆಯ್ದ ಕೆಲವು ಪ್ರದೇಶಗಳಲ್ಲಿ 5G ಸೇವೆಯನ್ನು ನೀಡುತ್ತಿದೆ.
89 ಸಾವಿರ ಸ್ಥಳಗಳಲ್ಲಿ 4G ಅಳವಡಿಕೆ
1 ಲಕ್ಷ ಪ್ರದೇಶಗಳಲ್ಲಿ 4G ಕನೆಕ್ಟಿವಿಟಿ ಸ್ಥಾಪಿಸುವ ಗುರಿಯನ್ನು ಹೊಂದಲಾಗಿತ್ತು. ಇದರಲ್ಲಿ 89 ಸಾವಿರ 4G ಟವರ್ ಅಳವಡಿಕೆ ಮಾಡಲಾಗಿದ್ದು, ಸಿಗ್ನಲ್ ಟೆಸ್ಟ್ ಪ್ರಕ್ರಿಯೆಯೂ ಆರಂಭಗೊಂಡಿದೆ. ಮೇ ಅಥವಾ ಜೂನ್ ಅಂತ್ಯದೊಳಗೆ ಪೂರ್ಣವಾಗಿ 1 ಲಕ್ಷ ಸ್ಥಳಗಳಲ್ಲಿ 4G ಕನೆಕ್ಟಿವಿಟಿ ಆರಂಭವಾಗಲಿದೆ. ಇದಾದ ನಂತರ 5G ಕನೆಕ್ಟಿವಿಟಿ ಶುರುವಾಗಲಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
5G ಕನೆಕ್ಟಿವಿಟಿಗಾಗಿ ಹೆಚ್ಚುವರಿ ಹಾರ್ಡ್ವೇರ್ ಮತ್ತು ಅಪ್ಗ್ರೇಡ್ ಸಾಫ್ಟ್ವೇರ್ ಅಗತ್ಯವಿದೆ ಎಂದು ಹೇಳಿದ ಜ್ಯೋತಿರಾದಿತ್ಯ ಸಿಂಧಿಯಾ, ಚೀನಾ, ಸೌಥ್ ಕೊರಿಯಾ, ಫಿನ್ಲ್ಯಾಂಡ್ ಮತ್ತು ಸ್ವಿಡನ್ ಬಳಿಕ ಭಾರತ ಸ್ವಂತ 4G ಕನೆಕ್ಟಿವಿಟಿಯನ್ನು ಹೊಂದಿದೆ, ತನ್ನದೇ 4G ಟೆಕ್ನಾಲಜಿ ಹೊಂದಿರವ ದೇಶಗಳ ಪೈಕಿ ಭಾರತ ಐದನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್; ಅತೀ ಕಡಿಮೆ ಬೆಲೆ 90 ದಿನದ ಪ್ಲಾನ್
1.75 ಕೋಟಿ ನಂಬರ್ ಬಂದ್
ಇದೇ ಸಂದರ್ಶನದಲ್ಲಿ ಜ್ಯೋತಿರಾದಿತ್ಯಾ ಸಿಂಧಿಯಾ, ಸ್ಪ್ಯಾಮ್ ಕಾಲ್ ಮತ್ತು ಟೆಲಿಕಾಂ ಫ್ರಾಡ್ ನಿಯಂತ್ರಣಕ್ಕಾಗಿ ಸರ್ಕಾರ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದರು. ಸಂಚಾರ ಸಾಥಿ ಪೋರ್ಟಲ್ ಮೂಲಕ ಇದುವರೆಗೂ 1.75 ಕೋಟಿ ನಕಲಿ ಮೊಬೈಲ್ ಸಂಖ್ಯೆಗಳನ್ನು ಬಂದ್ ಮಾಡಲಾಗಿದೆ. ಇದೇ ರೀತಿ ಫ್ರಾಡ್ ಪ್ರಕರಣಗಳಿಗೆ ಸಂಬಂಧ 1.5 ಲಕ್ಷ ವಾಟ್ಸಪ್ ಗ್ರೂಪ್ ಗಳನ್ನು (WhatsApp Group) ಸಹ ಬಂದ್ ಮಾಡಲಾಗಿದೆ. ಮೋಸದ ಪ್ರಕರಣಗಳ ನಿಯಂತ್ರಣಕ್ಕಾಗಿ AI ಸಹಾಯವನ್ನು ಪಡೆದುಕೊಳ್ಳಲಾಗಿದೆ. I-Core ಸ್ಪೂಫ್ ಕಾಲ್ ಮಾನಿಟರಿಂಗ್ ಸಿಸ್ಟಮ್ ಮೂಲಕ ಪ್ರತಿನಿತ್ಯ 1.3 ಕೋಟಿ ಸ್ಪೂಫ್ ಕರೆಗಳನ್ನು ಬ್ಲಾಕ್ ಮಾಡಲಾಗುತ್ತಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: BSNL ಬಳಕೆದಾರರಿಗೆ ಗುಡ್ನ್ಯೂಸ್; 4 ರೂಪಾಯಿಯ ಪ್ಲಾನ್ ಕಂಡು ಖಾಸಗಿ ಕಂಪನಿಗಳು ಶಾಕ್!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.