ಬಾಡಿಗೆ ಮನೆ ವಾಸಿಗಳಿಗೆ ಗುಡ್ ನ್ಯೂಸ್; ಸ್ವಂತ ಸೂರು ಹೊಂದಲು ಶೀಘ್ರದಲ್ಲೇ ಕೇಂದ್ರದ ಹೊಸ ಯೋಜನೆ ಜಾರಿ

By Suvarna NewsFirst Published Aug 31, 2023, 5:17 PM IST
Highlights

ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಅನೇಕ ಜನರ ಸ್ವಂತ ಸೂರಿನ ಕನಸು ಶೀಘ್ರದಲ್ಲೇ ನನಸಾಗುವ ಸಾಧ್ಯತೆಯಿದೆ. ನಗರಗಳ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರೋರಿಗೆ ಹೊಸ ಯೋಜನೆಯೊಂದರ ಮೂಲಕ ಬ್ಯಾಂಕ್ ಗೃಹಸಾಲದ ಬಡ್ಡಿದರದ ಮೇಲೆ ವಿನಾಯ್ತಿ ಒದಗಿಸುವ ಹೊಸ ಯೋಜನೆಯನ್ನು ಸೆಪ್ಟೆಂಬರ್ ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸುವ ಸಾಧ್ಯತೆಯಿದೆ. 
 

ನವದೆಹಲಿ (ಆ.31): ಸ್ವಂತ ಮನೆ ಮಾಡಬೇಕು ಎಂಬ ಅನೇಕರ ಕನಸಿಗೆ ಗೃಹಸಾಲದ ಮೇಲಿನ ಅಧಿಕ ಬಡ್ಡಿದರ ದೊಡ್ಡ ತೊಡಕಾಗಿದೆ. ಆದರೆ, ಇಂಥವರಿಗೆ ಶೀಘ್ರದಲ್ಲೇ ಕೇಂದ್ರ ಸರ್ಕಾರ ಶುಭಸುದ್ದಿಯೊಂದನ್ನು ನೀಡಲಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ನಗರಗಳ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರೋರಿಗೆ ಹೊಸ ಯೋಜನೆಯೊಂದರ ಮೂಲಕ ಬ್ಯಾಂಕ್ ಗೃಹಸಾಲದ ಬಡ್ಡಿದರದ ಮೇಲೆ  ಸರ್ಕಾರ ವಿನಾಯ್ತಿ ಒದಗಿಸಲಿದೆ ಎಂಬ ಘೋಷಣೆ ಮಾಡಿದ್ದರು. ಈ ಯೋಜನೆಯನ್ನು ಮುಂದಿನ ತಿಂಗಳು ಅಂದರೆ  ಸೆಪ್ಟೆಂಬರ್ ನಲ್ಲಿ ಸರ್ಕಾರ ಪ್ರಾರಂಭಿಸಲಿದೆ ಎಂದು ವಸತಿ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈ ಯೋಜನೆಯ ರೂಪುರೇಷಗಳ ಕುರಿತಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದರು. ಇನ್ನು ನಗರಗಳಲ್ಲಿ ಸ್ವಂತ ಮನೆ ಹೊಂದಬೇಕು ಎಂಬ ಬಯಕೆ ಹೊಂದಿರುವ ಜನರಿಗೆ ಬ್ಯಾಂಕ್ ಸಾಲಗಳ ಬಡ್ಡಿದರದ ಮೇಲೆ ವಿನಾಯ್ತಿ ಒದಗಿಸುವ ಯೋಜನೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭಿಸೋದಾಗಿ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ ತಿಳಿಸಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನಗರ ಪ್ರದೇಶಗಳಲ್ಲಿ ವಾಸಿಸುವ, ಸ್ವಂತ ಮನೆ ಹೊಂದಿರದ ಮಧ್ಯಮ ವರ್ಗದ ಕುಟುಂಬಗಳಿಗೆ ಹೊಸ ಯೋಜನೆಯೊಂದನ್ನು ಘೋಷಿಸಿದ್ದರು. 'ನಗರಗಳಲ್ಲಿ ಸ್ವಂತ ಮನೆ ಹೊಂದಬೇಕು ಎಂದು ಮಧ್ಯಮ ವರ್ಗದ ಕುಟುಂಬಗಳು ಕನಸು ಕಾಣುತ್ತಿವೆ. ನಾವು ಶೀಘ್ರದಲ್ಲೇ ಅವರಿಗಾಗಿ ಹೊಸ ಯೋಜನೆ ಜಾರಿಗೊಳಿಸುತ್ತೇವೆ. ನಗರ ಪ್ರದೇಶಗಳ ಅನಧಿಕೃತ ಕಾಲನಿ ಹಾಗೂ ಗಲ್ಲಿಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಬ್ಯಾಂಕ್ ಸಾಲದ ಬಡ್ಡಿದರದ ಮೇಲೆ ವಿನಾಯ್ತಿ ನೀಡುವ ಮೂಲಕ ಅವರಿಗೆ ಲಕ್ಷಾಂತರ ರೂಪಾಯಿ ನೆರವು ನೀಡಲು ಆವು ನಿರ್ಧರಿಸಿದ್ದೇವೆ' ಎಂದು ಪ್ರಧಾನಿ ಕೆಂಪು ಕೋಟೆಯಲ್ಲಿ ನಿಂತು ಮಾತನಾಡುವ ಸಂದರ್ಭದಲ್ಲಿ ಘೋಷಿಸಿದ್ದರು.

Latest Videos

ಪ್ರಧಾನಿ ಮೋದಿಯಿಂದ ಪಿಎಂ ಅವಾಸ್ ಯೋಜನೆಯಡಿ ನಿರ್ಮಿಸಿದ 19,000 ಮನೆ ಗೃಹಪ್ರವೇಶ!

ಪಿಎಂಎವೈ-ಯು ವಿಸ್ತರಣೆ ಸಾಧ್ಯತೆ
ಭಾರತ ಸರ್ಕಾರದ ಮಹಾತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಆವಾಸ್ ಯೋಜನೆ -ನಗರ (ಪಿಎಂಎವೈ-ಯು)  2024ರ ಡಿಸೆಂಬರ್ ಗೆ ಅಂತ್ಯವಾಗಲಿದೆ. ಆದರೆ, ಈ ಯೋಜನೆಯನ್ನು ವಿಸ್ತರಿಸುವಂತೆ ಗೃಹ ಹಾಗೂ ನಗರ ವ್ಯವಹಾರಗಳ ಸ್ಥಾಯಿ ಸಮಿತಿ ಸಂಸತ್ತಿಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸ್ಸು ಮಾಡಿದೆ.  ಪ್ರಧಾನ ಮಂತ್ರಿ ಆವಾಸ್ ಯೋಜನೆ -ನಗರ (ಪಿಎಂಎವೈ-ಯು) 2015 ರ ಜೂನ್ ನಲ್ಲಿ ಪ್ರಾರಂಭವಾಗಿತ್ತು. ನಗರ ಪ್ರದೇಶದ ಎಲ್ಲ ಆರ್ಹ ಫಲಾನುಭವಿಗಳಿಗೆ ಮನೆಗಳನ್ನು ಒದಗಿಸೋದು ಈ ಯೋಜನೆಯ ಉದ್ದೇಶ. ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಈ ಯೋಜನೆ ಅಂತ್ಯವಾಗಲಿದೆ. ಆದರೆ, ಈ ಮಿಷನ್ ಈಗಲೂ ಕೂಡ ಅಪೂರ್ಣವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಅಗತ್ಯಗಳು, ಬೇಡಿಕೆ ಹಾಗೂ ಪೂರೈಕೆ ನಡುವೆ ಅಂತರವಿರೋದು. ಗೃಹ ಹಾಗೂ ನಗರ ವ್ಯವಹಾರಗಳ ಸ್ಥಾಯಿ ಸಮಿತಿ ಸಂಸತ್ತಿಗೆ ಸಲ್ಲಿಸಿರುವ ವರದಿಯು ಪ್ರಸ್ತುತ ಜಾರಿಯಲ್ಲಿರುವ ಯೋಜನೆಯನ್ನು ಮಾರ್ಪಾಡಿನೊಂದಿಗೆ  ವಿಸ್ತರಿಸುವಂತೆ ಅಥವಾ ಈ ಉದ್ದೇಶ ಪೂರೈಕೆಗೆ ಹೊಸ ಯೋಜನೆ ಬಿಡುಗಡೆಗೊಳಿಸುವ ಅಗತ್ಯವನ್ನು ಎತ್ತಿ ಹಿಡಿದಿದೆ. 

PMAY ಅಡಿ ಮನೆ ಸಾಲ ಸಬ್ಸಿಡಿ ನೀಡಲು ನಿರಾಕರಿಸಿದ ಬ್ಯಾಂಕ್‌ಗೆ ಶಾಕ್: ಕೇಸ್ ಗೆದ್ದ ಗ್ರಾಹಕ

ಪಿಎಂಎವೈ -ಯು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಗೃಹ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಪ್ರಾರಂಭದಲ್ಲಿ ಒಟ್ಟು 2ಕೋಟಿ ಮನೆಗಳನ್ನು ನೀಡುವ ಗುರಿ ಹೊಂದಿತ್ತು. ಆದರೆ, ಸರ್ಕಾರದ ಮಾಹಿತಿ ಅನ್ವಯ 2023ರ ಆಗಸ್ಟ್ 23ಕ್ಕೆ ಅನ್ವಯವಾಗುವಂತೆ ಒಟ್ಟು 1.19 ಕೋಟಿ ಮನೆಗಳಿಗೆ ಮಾತ್ರ ಅನುಮೋದನೆ ಸಿಕ್ಕಿದೆ. 

click me!