
ಮುಂಬೈ (ಆ.7): ಸಾಲದ ಕಂತುಗಳನ್ನು (ಇಎಂಐ) ಪಾವತಿಸಲು ಸಾಧ್ಯವಾಗದ ಗ್ರಾಹಕರಿಗೆ ನೀಡಲಾಗುವ ಕಿರುಕುಳ ಮತ್ತು ಮಾನಸಿಕ ಹಿಂಸೆಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಹತ್ವದ ಹೆಜ್ಜೆ ಇಟ್ಟಿದೆ. ಸಾಲ ವಸೂಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರ್ಬಿಐ ನೂತನ ಮತ್ತು ಕಠಿಣ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.
ಬ್ಯಾಂಕ್ಗಳು ಹಾಗೂ ನಿಯಂತ್ರಿತ ಸಾಲದಾತ ಸಂಸ್ಥೆಗಳು ಸಾಲ ವಸೂಲಿ ಮಾಡುವಾಗ ಅನುಸರಿಸಬೇಕಾದ ಕಟ್ಟುನಿಟ್ಟಿನ ನಿಯಮಗಳನ್ನು ಈ ನೂತನ ಚೌಕಟ್ಟು ಒಳಗೊಂಡಿದೆ. ಗ್ರಾಹಕರೊಂದಿಗೆ ಸಂವಹನ ನಡೆಸುವುದು, ವಸೂಲಾತಿ ಏಜೆಂಟರ ನಡೆನುಡಿ, ಮನೆ ಅಥವಾ ಕಚೇರಿ ಭೇಟಿ ಹಾಗೂ ತಂತ್ರಜ್ಞಾನ ಆಧಾರಿತ ವಸೂಲಾತಿ ವಿಧಾನಗಳಿಗೆ ಸಂಬಂಧಿಸಿದಂತೆ ಹಲವು ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ.
ಈ ಹೊಸ ನಿಯಮಗಳು 2027 ರ ಜನವರಿ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ. ಸಾಲ ನೀಡಿ ಖರೀದಿಸಿದ ಸ್ಮಾರ್ಟ್ಫೋನ್ಗಳು, ಟ್ಯಾಬ್ಲೆಟ್ಗಳು ಹಾಗೂ ಲ್ಯಾಪ್ಟಾಪ್ಗಳನ್ನು ಸಾಲ ಪಾವತಿಸದಿದ್ದಾಗ ರಿಮೋಟ್ ಮೂಲಕ ಲಾಕ್ ಮಾಡುವ ತಂತ್ರಜ್ಞಾನ ಆಧಾರಿತ ವಸೂಲಾತಿ ವಿಧಾನವನ್ನೂ ಸಹ ಆರ್ಬಿಐ ಇದೇ ಮೊದಲ ಬಾರಿಗೆ ನಿಯಂತ್ರಣ ಚೌಕಟ್ಟಿನೊಳಗೆ ತಂದಿದೆ.
ಹೊಸ ನಿಯಮಗಳ ಪ್ರಕಾರ, ಸಾಲದಾತ ಸಂಸ್ಥೆಗಳು ಹಾಗೂ ವಸೂಲಾತಿ ಏಜೆಂಟರು ಗ್ರಾಹಕರನ್ನು ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯ ನಡುವೆ ಮಾತ್ರ ಸಂಪರ್ಕಿಸಲು ಅನುಮತಿ ನೀಡಲಾಗಿದೆ. ಈ ನಿಗದಿತ ಸಮಯವನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಸಂವಹನ ನಡೆಸಲು ಗ್ರಾಹಕರು ಸ್ವತಃ ವಿನಂತಿಸಿದರೆ ಅಥವಾ ಪೂರ್ವ ಅನುಮತಿ ನೀಡಿದ್ದರೆ ಮಾತ್ರ ಅವಕಾಶವಿರುತ್ತದೆ. ಇದಷ್ಟೇ ಅಲ್ಲದೆ, ಗ್ರಾಹಕರ ಮನೆಯಲ್ಲಿ ಸಾವು-ನೋವು ಸಂಭವಿಸಿದಾಗ, ತುರ್ತು ವೈದ್ಯಕೀಯ ಪರಿಸ್ಥಿತಿಗಳು ಅಥವಾ ಮದುವೆಯಂತಹ ಶುಭ ಸಮಾರಂಭಗಳು ನಡೆಯುತ್ತಿರುವ ಸಂದರ್ಭಗಳಲ್ಲಿ ವಸೂಲಾತಿ ಏಜೆಂಟರು ಗ್ರಾಹಕರನ್ನು ಸಂಪರ್ಕಿಸಬಾರದು ಎಂದು ಆರ್ಬಿಐ ನಿರ್ದೇಶಿಸಿದೆ.
ಸಾಲ ವಸೂಲಾತಿ ವೇಳೆ ಬೆದರಿಕೆ ಹಾಕುವುದು, ನಿಂದನೀಯ ಅಥವಾ ಹೆದರಿಸುವ ಭಾಷೆಯನ್ನು ಬಳಸುವುದನ್ನು ನೂತನ ನಿಯಮಾವಳಿಗಳು ಸಂಪೂರ್ಣವಾಗಿ ನಿಷೇಧಿಸಿವೆ. ವಸೂಲಾತಿ ಏಜೆಂಟರು ಅನಾಮಧೇಯ ಕರೆಗಳನ್ನು ಮಾಡುವುದು, ಬೆದರಿಕೆ ಹಾಕುವುದು, ಪದೇ ಪದೇ ಕರೆ ಮಾಡಿ ಕಿರುಕುಳ ನೀಡುವುದು, ಸಾರ್ವಜನಿಕವಾಗಿ ಅಪಮಾನಿಸುವುದು ಅಥವಾ ಗ್ರಾಹಕರ ಕುಟುಂಬಸ್ಥರು, ಆಸ್ತಿ ಮತ್ತು ಗೌರವಕ್ಕೆ ಧಕ್ಕೆ ತರುವ ಬೆದರಿಕೆಗಳನ್ನು ಒಡ್ಡುವುದನ್ನು ತಡೆಹಿಡಿಯಲಾಗಿದೆ.
ಸಾಮಾಜಿಕ ಮಾಧ್ಯಮಗಳನ್ನು ವಸೂಲಾತಿಗಾಗಿ ದುರುಪಯೋಗಪಡಿಸಿಕೊಳ್ಳುವುದನ್ನೂ ಆರ್ಬಿಐ ನಿಷೇಧಿಸಿದೆ. ಗ್ರಾಹಕರನ್ನು ಸಾರ್ವಜನಿಕವಾಗಿ ನಿಂದಿಸುವ ಅಥವಾ ಮುಜುಗರಕ್ಕೀಡುಮಾಡುವ ಉದ್ದೇಶದಿಂದ ಅವರ ವೈಯಕ್ತಿಕ ಮಾಹಿತಿ, ಭಾವಚಿತ್ರಗಳು, ವೀಡಿಯೊಗಳು ಅಥವಾ ಆಡಿಯೊ ರೆಕಾರ್ಡಿಂಗ್ಗಳನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳುವಂತಿಲ್ಲ.
ಭೌತಿಕವಾಗಿ ಗ್ರಾಹಕರನ್ನು ಭೇಟಿಯಾಗುವ ವಿಚಾರದಲ್ಲೂ ಆರ್ಬಿಐ ಹೊಸ ರಕ್ಷಣಾತ್ಮಕ ನಿಯಮಗಳನ್ನು ತಂದಿದೆ. ವಸೂಲಾತಿ ಏಜೆನ್ಸಿಯು ಗ್ರಾಹಕರ ಮನೆ ಅಥವಾ ಕಚೇರಿಗೆ ಮೊದಲ ಬಾರಿಗೆ ನೇರವಾಗಿ ಭೇಟಿ ನೀಡುವ ಮೊದಲು, ಕನಿಷ್ಠ 1 ದಿನ ಮುಂಚಿತವಾಗಿ ಗ್ರಾಹಕರಿಗೆ ಮಾಹಿತಿ ನೀಡಬೇಕು. ಜೊತೆಗೆ, ಪ್ರಕರಣವನ್ನು ನಿರ್ವಹಿಸುತ್ತಿರುವ ವಸೂಲಾತಿ ಏಜೆನ್ಸಿಯ ವಿವರಗಳನ್ನು ಬ್ಯಾಂಕ್ಗಳು ಗ್ರಾಹಕರೊಂದಿಗೆ ಹಂಚಿಕೊಳ್ಳುವುದು ಕಡ್ಡಾಯ.
ಸಾಮಾನ್ಯವಾಗಿ ಗ್ರಾಹಕರು ಸೂಚಿಸಿದ ಸ್ಥಳದಲ್ಲೇ ಅವರನ್ನು ಸಂಪರ್ಕಿಸಬೇಕು. ಒಂದು ವೇಳೆ ಗ್ರಾಹಕರು ಯಾವುದೇ ನಿರ್ದಿಷ್ಟ ಸ್ಥಳವನ್ನು ಸೂಚಿಸದಿದ್ದರೆ ಅಥವಾ ಒಪ್ಪಿಕೊಂಡ ಸ್ಥಳಕ್ಕೆ ಪದೇ ಪದೇ ಬರಲು ವಿಫಲರಾದರೆ ಮಾತ್ರ ಏಜೆಂಟರು ಅವರ ನಿವಾಸ ಅಥವಾ ಕೆಲಸದ ಸ್ಥಳಕ್ಕೆ ಭೇಟಿ ನೀಡಬಹುದು.
ವಸೂಲಾತಿ ಏಜೆಂಟರು ಕಡ್ಡಾಯವಾಗಿ ಅಧಿಕೃತ ಗುರುತಿನ ಚೀಟಿ (ID Card), ಅಧಿಕಾರ ಪತ್ರ (Authorisation Letter) ಮತ್ತು ಸಂಬಂಧಿತ ನೋಟಿಸ್ ಪ್ರತಿಯನ್ನು ಜೊತೆಯಲ್ಲಿಟ್ಟುಕೊಂಡಿರಬೇಕು. ಈ ಅಧಿಕಾರ ಪತ್ರದಲ್ಲಿ ವಸೂಲಾತಿ ಏಜೆನ್ಸಿ ಹಾಗೂ ಬ್ಯಾಂಕಿನ ದೂರು ಪರಿಹಾರ ಅಧಿಕಾರಿಯ (Grievance Officer) ಸಂಪರ್ಕ ವಿವರಗಳಿರುವುದು ಕಡ್ಡಾಯ.
ವಸೂಲಾತಿಗೆ ಸಂಬಂಧಿಸಿದ ಎಲ್ಲಾ ಸಂವಹನಗಳ ದಾಖಲೆಗಳನ್ನು ನಿರ್ವಹಿಸುವ ಮೂಲಕ ವಸೂಲಾತಿ ಚಟುವಟಿಕೆಗಳ ಮೇಲಿನ ಉಸ್ತುವಾರಿಯನ್ನು ಬಿಗಿಗೊಳಿಸಲು ಬ್ಯಾಂಕ್ಗಳಿಗೆ ಸೂಚಿಸಲಾಗಿದೆ. ಸಾಲ ವಸೂಲಾತಿಗಾಗಿ ಮಾಡುವ ಎಲ್ಲಾ ದೂರವಾಣಿ ಸಂಭಾಷಣೆಗಳನ್ನು ಬ್ಯಾಂಕ್ಗಳು ರೆಕಾರ್ಡ್ ಮಾಡಬೇಕು ಹಾಗೂ ಕರೆ ಮಾಡಿದ ಸಮಯ ಮತ್ತು ಫೋನ್ ಸಂಖ್ಯೆಗಳ ವಿವರಗಳನ್ನು ಕನಿಷ್ಠ 6 ತಿಂಗಳ ಕಾಲ ಕಾಯ್ದಿರಿಸಬೇಕು.
ಹೊರಗುತ್ತಿಗೆ (Outsourcing) ನೀಡಿದ್ದರೂ ಸಹ, ವಸೂಲಾತಿ ಏಜೆನ್ಸಿಗಳು ಮಾಡುವ ಎಲ್ಲಾ ಕೆಲಸ ಕಾರ್ಯಗಳಿಗೆ ಸಾಲದಾತ ಸಂಸ್ಥೆಗಳೇ ನೇರ ಹೊಣೆಗಾರರಾಗಿರುತ್ತವೆ ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟಪಡಿಸಿದೆ. ಏಜೆಂಟರ ಚಟುವಟಿಕೆಗಳನ್ನು ಬ್ಯಾಂಕ್ಗಳು ಸದಾ ಮೇಲ್ವಿಚಾರಣೆ ನಡೆಸಬೇಕು. ಏಜೆಂಟರಿಗೆ ಸೂಕ್ತ ತರಬೇತಿ ನೀಡಬೇಕು ಹಾಗೂ ಅವರಿಗೆ ನೀಡುವ ಕಮಿಷನ್/ಇನ್ಸೆಂಟಿವ್ ಆಧಾರಿತ ವೇತನ ರಚನೆಯು ಆಕ್ರಮಣಕಾರಿ ವಸೂಲಾತಿ ಪ್ರವೃತ್ತಿಗೆ ಪ್ರೇರಣೆ ನೀಡದಂತೆ ಬ್ಯಾಂಕ್ಗಳು ನೋಡಿಕೊಳ್ಳಬೇಕು.
ಗ್ರಾಹಕರ ವೈಯಕ್ತಿಕ ಮಾಹಿತಿಯ ರಕ್ಷಣೆಗೆ ನೂತನ ಮಾರ್ಗದರ್ಶಿ ಸೂತ್ರಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಾಕಿ ಹಣ ವಸೂಲಿ ಮಾಡಲು ಅಗತ್ಯವಿರುವಷ್ಟು ಮಾಹಿತಿಯನ್ನು ಮಾತ್ರ ವಸೂಲಾತಿ ಏಜೆಂಟರಿಗೆ ನೀಡಲು ಅವಕಾಶವಿದೆ. ಗ್ರಾಹಕರ ಡೇಟಾ ದುರುಪಯೋಗವಾಗದಂತೆ ತಡೆಯಲು ಬ್ಯಾಂಕ್ಗಳು ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ರೂಪಿಸಬೇಕು.
ಸಾಲದ ಹಣದಿಂದ ಖರೀದಿಸಿದ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಹಾಗೂ ಲ್ಯಾಪ್ಟಾಪ್ಗಳನ್ನು ರಿಮೋಟ್ ಮೂಲಕ ಲಾಕ್ ಮಾಡುವ ಪ್ರಕ್ರಿಯೆಯನ್ನು ಸಹ ಆರ್ಬಿಐ ನಿಯಂತ್ರಿಸಿದೆ. ನಿರ್ದಿಷ್ಟ ಸಾಧನವನ್ನು (ಡಿವೈಸ್) ಖರೀದಿಸಲೆಂದೇ ಸಾಲ ಪಡೆದಿದ್ದಾಗ ಮಾತ್ರ ಇಂತಹ ರಿಮೋಟ್ ನಿಯಂತ್ರಣವನ್ನು ವಿಧಿಸಬಹುದು. ಸಾಮಾನ್ಯ ವೈಯಕ್ತಿಕ ಸಾಲಗಳಿಗೆ (Personal Loans) ಗ್ರಾಹಕರು ಈಗಾಗಲೇ ಬಳಸುತ್ತಿರುವ ಡಿವೈಸ್ಗಳನ್ನು ಬಂದ್ ಮಾಡುವಂತಿಲ್ಲ. ಇಎಂಐ ಬಾಕಿ ಉಳಿದ ತಕ್ಷಣವೇ ಡಿವೈಸ್ ಸೇವೆಯನ್ನು ಸ್ಥಗಿತಗೊಳಿಸುವಂತಿಲ್ಲ. ಸಾಲದ ಬಾಕಿ 30 ದಿನಗಳಿಗಿಂತ ಹೆಚ್ಚು ಕಾಲ ಪಾವತಿಯಾಗದೆ ಇದ್ದಾಗ ಮಾತ್ರ ಸೌಲಭ್ಯಗಳನ್ನು ಹಂತ ಹಂತವಾಗಿ ಸೀಮಿತಗೊಳಿಸಬಹುದು. 60 ದಿನಗಳ ಕಾಲ ಬಾಕಿ ಉಳಿದಾಗ ಮಾತ್ರ ಸಂಪೂರ್ಣ ಡಿವೈಸ್ ಲಾಕ್ ಮಾಡಬಹುದು.
ಆದರೆ, ಸಂಪೂರ್ಣ ಲಾಕ್ ಮಾಡಿದಾಗಲೂ ಅತ್ಯಗತ್ಯ ಸೇವೆಗಳನ್ನು ಬಂದ್ ಮಾಡುವಂತಿಲ್ಲ. ಒಳಬರುವ ಕರೆಗಳು (Incoming calls), ಎಸ್ಎಂಎಸ್ (SMS), ತುರ್ತು ಸಂವಹನ ಸೇವೆಗಳು (Emergency calls) ಮತ್ತು ಉದ್ಯೋಗ ಅಥವಾ ಕೆಲಸಕ್ಕೆ ಅಗತ್ಯವಿರುವ ಫೀಚರ್ಗಳು ಚಾಲನೆಯಲ್ಲಿರಬೇಕು. ಅಲ್ಲದೆ, ಗ್ರಾಹಕರ ಫೋನ್ನಲ್ಲಿರುವ ಕಾಂಟ್ಯಾಕ್ಟ್ಗಳು, ಫೋಟೋಗಳು, ವೀಡಿಯೊಗಳು, ಕಾಲ್ ಲಾಗ್ಗಳು, ಮೆಸೇಜ್ಗಳು ಅಥವಾ ಲೊಕೇಶನ್ ಹಿಸ್ಟರಿಯಂತಹ ಯಾವುದೇ ವೈಯಕ್ತಿಕ ಡೇಟಾವನ್ನು ಪಡೆಯುವುದನ್ನು ಆರ್ಬಿಐ ಸಂಪೂರ್ಣವಾಗಿ ತಡೆದಿದೆ.
ಗ್ರಾಹಕರು ಬಾಕಿ ಹಣವನ್ನು ಪಾವತಿಸಿದ ತಕ್ಷಣ ಅವರ ಡಿವೈಸ್ ಸೇವೆಯನ್ನು ಪುನರಾರಂಭಿಸಲು ಸಮಯವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ, ಪಾವತಿ ಪೂರ್ಣಗೊಂಡ 1 ಗಂಟೆಯ ಒಳಗಾಗಿ ಡಿವೈಸ್ ಮೇಲಿನ ನಿರ್ಬಂಧವನ್ನು ತೆರವುಗೊಳಿಸಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಡಿವೈಸ್ ಸೇವೆಯನ್ನು ಮರುಚಾಲನೆ ಮಾಡಲು ಬ್ಯಾಂಕ್ ವಿಫಲವಾದರೆ, ವಿಳಂಬವಾಗುವ ಪ್ರತಿಯೊಂದು ಗಂಟೆಗೆ ಗ್ರಾಹಕರಿಗೆ ₹250 ನಷ್ಟ ಪರಿಹಾರ ಪಾವತಿಸಬೇಕಾಗುತ್ತದೆ (ಇದು ಬಾಕಿ ಸಾಲದ ಮೊತ್ತದ ಮಿತಿಗೆ ಒಳಪಟ್ಟಿರುತ್ತದೆ). ದೀರ್ಘಾವಧಿಯ ಸಾಲದ ಒಪ್ಪಂದಗಳ ಮಧ್ಯೆ ಈ ನಿಯಮಗಳನ್ನು ಅಡಗಿಸಿಡುವ ಬದಲು, ರಿಮೋಟ್ ಲಾಕಿಂಗ್ ಸೌಲಭ್ಯದ ಬಗ್ಗೆ ಗ್ರಾಹಕರಿಗೆ ಸಾಲ ನೀಡುವ ಹಂತದಲ್ಲೇ ಸ್ಪಷ್ಟವಾಗಿ ತಿಳಿಸಬೇಕು ಎಂದು ಆರ್ಬಿಐ ಕಡ್ಡಾಯಗೊಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.