
ಬೆಂಗಳೂರು(ಫೆ.17): ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಲು ಸಾಧ್ಯವಾಗದ 80 ವರ್ಷ ದಾಟಿದ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಆಹಾರ ಧಾನ್ಯ ತಲುಪಿಸುವ ‘ಅನ್ನ-ಸುವಿಧಾ’ ಯೋಜನೆಯನ್ನು ಜಾರಿಗೆ ತರಲಾಗವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ್ದಾರೆ.
ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ 80 ವರ್ಷ ಮೇಲ್ಪಟ್ಟ ವೃದ್ಧ, ವೃದ್ಧೆ ಪಾಲಿನ ಆಹಾರ ಪದಾರ್ಥಗಳನ್ನು ಆಯಾ ತಿಂಗಳು ಹೋಮ್ ಡೆಲಿವೆರಿ ಆಪ್ ಮೂಲಕ ತಲುಪಿಸಲಾಗುವುದು. ಯೋಜನೆಯಿಂದ ರಾಜ್ಯದ ಅಂದಾಜು 80 ಸಾವಿರ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಸಾಮಾಜಿಕ ಭದ್ರತೆಯ ಕಳಕಳಿ ಇಟ್ಟುಕೊಂಡು ಇದನ್ನು ಜಾರಿಗೆ ತರಲಾಗುತ್ತಿದೆ.
ಅಲ್ಪಸಂಖ್ಯಾತರಿಗೆ ಸಿಎಂ ಸಿದ್ದರಾಮಯ್ಯ ಬಂಪರ್ ಬಜೆಟ್..!
‘ಹಸಿವು ಮುಕ್ತ ಕರ್ನಾಟಕ’ನಿರ್ಮಾಣದ ಕನಸಿನೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಉಚಿತ ಅಕ್ಕಿ ವಿತರಿಸುವ ‘ಅನ್ನಭಾಗ್ಯ’ಯೋಜನೆ ಜಾರಿಗೆ ತರಲಾಗಿತ್ತು. ಈ ಬಾರಿ ನಾವು ನೀಡಿದ್ದ ಭರವಸೆಯಂತೆ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಅಕ್ಕಿ ಲಭ್ಯವಾಗದ ಕಾರಣ ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರಿಗೆ ಅಕ್ಕಿ ಬದಲು ಹಣ ವರ್ಗಾವಣೆ ವ್ಯವಸ್ಥೆಯನ್ನು ಜು.10 ರಿಂದ ಜಾರಿಗೆ ತರಲಾಯತು. ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ನಲ್ಲಿರುವ ಪ್ರತಿ ಸದಸ್ಯನಿಗೆ ಕೆಜಿಗೆ 34 ರು. ನಂತೆ 5 ಕೆಜಿ ಅಕ್ಕಿಗೆ 170 ರು. ನಗದು ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗತ್ತಿದೆ.
ಅದೇ ರೀತಿ, ಅಂತ್ಯೋದಯ ಕಾರ್ಡ್ನಲ್ಲಿರುವ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರು.ನಂತೆ ಐದು ಸದಸ್ಯರಿದ್ದರೆ 510 ರು., ಆರು ಸದಸ್ಯರಿದ್ದರೆ 850 ರು.ಹಣ ಹಾಕಲಾಗುತ್ತಿದೆ. 2024ರ ಜನವರಿ ಅಂತ್ಯದವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರು.ಹಣವನ್ನು ಜಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ತಿಳಿಸಿದರು.
ಹಣದ ಬದಲು ಅಕ್ಕಿಯನ್ನೇ ಕೊಡಿ
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿಗೆ ಹಣ ನೀಡುವ ಬದಲು ಅಕ್ಕಿಯನ್ನೇ ಕೊಡಲು ಕ್ರಮವಹಿಸಬೇಕಿತ್ತು. ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೂ ರಾಜ್ಯದ ಭತ್ತ ಬೆಳೆಗಾರರಿಂದ ಅಕ್ಕಿ ಕರೀದಿ ಮಾಡಲು ಸರ್ಕಾರ ಮನವಿ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ಅಕ್ಕಿ ಬದಲಿಗೆ ರಾಗಿ, ಜೋಳ ಇತ್ಯಾದಿ ಧಾನ್ಯವನ್ನು ಪಡಿತರದಲ್ಲಿ ಕೊಡಲು ಕ್ರಮ ವಹಿಸಿದ್ದರೆ ಉತ್ತಮ. ಇದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೂ ಸಹಕಾರಿಯಾಗುತ್ತಿತ್ತು ಎಂದು ಕರ್ನಾಟಕ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಶಿವಾನಂದಪ್ಪ ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.