ಎನ್‌ಪಿಎ ಸಮಸ್ಯೆ: ಯುಪಿಎದತ್ತ ಬೊಟ್ಟು ಮಾಡಿದ ರಾಜನ್!

By Web DeskFirst Published Sep 11, 2018, 3:31 PM IST
Highlights

ಮರುಪಾವತಿಯಾಗದ ಸಾಲಗಳು ಹೆಚ್ಚಾಗಲು ಬ್ಯಾಂಕ್ ಗಳೇ ಕಾರಣ! ಸಂಸದೀಯ ಸಮಿತಿಗೆ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಉತ್ತರ! ನಿರ್ಧಾರ ಕೈಗೊಳ್ಳುವಲ್ಲಿ ಸರ್ಕಾರದ ವಿಳಂಬ ನೀತಿ ಟೀಕಿಸಿದ ರಾಜನ್! ಆರ್ಥಿಕ ಬೆಳವಣಿಗೆ ಕುಂಠಿತ ಎನ್‌ಪಿಎ ಹೆಚ್ಚಾಗಲು ಕಾರಣ
  

ನವದೆಹಲಿ(ಸೆ.11): ಮರುಪಾವತಿಯಾಗದ ಸಾಲಗಳು ಹೆಚ್ಚಾಗುತ್ತಿರುವುದಕ್ಕೆ ಬ್ಯಾಂಕ್‌ಗಳ ಅತಿಯಾದ ಆಶಾವಾದ, ಸರ್ಕಾರ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ನೀತಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿನ ಕುಂಠಿತವೇ ಮುಖ್ಯ ಕಾರಣವಾಗಿದೆ ಎಂದು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

ಮುರಳಿ ಮನೋಹರ್ ಜೋಷಿ ನೇತೃತ್ವದ ಸಂಸದೀಯ ಸಮಿತಿಗೆ ರಾಜನ್ ಉತ್ತರ ನೀಡಿದ್ದು, ಸರ್ಕಾರದ ಆಡಳಿತದಲ್ಲಿ ಹಲವು ರೀತಿಯ ಸಮಸ್ಯೆಗಳಿವೆ. ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿ ಸಂಶಯ ಉಂಟಾಗುತ್ತಿದೆ ಮತ್ತು ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದರಲ್ಲಿನ ನಿಧಾನಗತಿ ಕೂಡ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಈ ಎಲ್ಲಾ ಸಮಸ್ಯೆಗಳು ಹಿಂದಿನ ಯುಪಿಎ ಸರ್ಕಾರ ಅವಧಿಯಲ್ಲಿ ಕೂಡ ಇತ್ತು ಮತ್ತು ಇಂದಿನ ಎನ್‌ಡಿಎ ಅವಧಿಯಲ್ಲಿ ಮುಂದುವರಿದಿದೆ ಎಂದು ರಾಜನ್ ಹೇಳಿದ್ದಾರೆ.

ಬ್ಯಾಂಕ್‌ಗಳು ದೊಡ್ಡ ಸಾಲಗಳ ಮರುಪಾವತಿ ಬಗ್ಗೆ ಅಗತ್ಯ ಗಮನ ವಹಿಸುತ್ತಿಲ್ಲ. 2008ರ ಆರ್ಥಿಕ ಹಿಂಜರಿತ ಬಳಿಕ ತಮ್ಮ ಬೆಳವಣಿಗೆ ಬಗ್ಗೆ ಬ್ಯಾಂಕ್‌ಗಳ ಅಂದಾಜುಗಳು ಅವಾಸ್ತವಿಕವಾಗಿದ್ದವು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಸಮರ್ಪಕವಾಗಿ ಮರುಪಾವತಿಯಾಗದ ಸಾಲಗಳು ಅನುತ್ಪಾದಕ ಆಸ್ತಿಗಳಾಗುವುದನ್ನು ತಡೆಯಲು ಬ್ಯಾಂಕ್‌ಗಳು ಇನ್ನಷ್ಟು ಸಾಲಗಳನ್ನು ನೀಡಿದ್ದವು ಎಂದು ರಾಜನ್ ಸಮಿತಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಆರ್ಥಿಕ ಬೆಳವಣಿಗೆ ಬಲಿಷ್ಟವಾಗಿದ್ದ 2006ರಿಂದ 2008ರವರೆಗೆ ಅತಿ ಹೆಚ್ಚಿನ ಪ್ರಮಾಣದ ಅನುತ್ಪಾದಕ ಮತ್ತು ಮರು ಪಾವತಿಯಾಗದ ಸಾಲಗಳು ಸೃಷ್ಟಿಯಾದವು. ಇಂತಹ ಸಮಯದಲ್ಲಿ ಬ್ಯಾಂಕ್‌ಗಳು ತಪ್ಪುಗಳನ್ನು ಮಾಡುತ್ತವೆ ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ.

click me!