ಬೆಂಗಳೂರು ನನಗಿಷ್ಟ,ಇನ್ನೊಬ್ಬರನ್ನು ತುಳಿದು ಬೆಳೆಯುವ ಮನಸ್ಥಿತಿ ಇಲ್ಲಿಲ್ಲ: ನಿಖಿಲ್ ಕಾಮತ್

By Suvarna NewsFirst Published Mar 17, 2023, 2:14 PM IST
Highlights

ಜೆರೋಧಾ ಸಿಇಒ ನಿಖಿಲ್ ಕಾಮತ್ ಬೆಂಗಳೂರನ್ನು ಹಾಡಿ ಹೊಗಳಿದ್ದಾರೆ. ದೇಶದ ಇತರ ಎಲ್ಲ ಮೆಟ್ರೋ ನಗರಗಳಿಗಿಂತ ಬೆಂಗಳೂರು ಬೆಸ್ಟ್ ಎಂದಿದ್ದಾರೆ. ಇದಕ್ಕೆ ಕಾರಣ ನೀಡಿರುವ ಕಾಮತ್, ಇನ್ನೊಬ್ಬರನ್ನು ತುಳಿದು ಬೆಳೆಯುವ ಮನಸ್ಥಿತಿಯನ್ನು ಇಲ್ಲಿನ ಜನರು ಹೊಂದಿಲ್ಲ ಎಂದು ಹೇಳಿದ್ದಾರೆ. 

Business Desk: ಜೆರೋಧಾ ಸಹಸಂಸ್ಥಾಪಕ ಮತ್ತು ಸಿಇಒ ನಿಖಿಲ್ ಕಾಮತ್ ಭಾರತದಲ್ಲಿ ಬೆಂಗಳೂರಿಗಿಂತ ಉತ್ತಮ ನಗರ ಬೇರೆಯಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈ ಹೇಳಿಕೆಗೆ ಕಾರಣವನ್ನು ಕೂಡ ನೀಡಿದ್ದಾರೆ. ದೆಹಲಿ ಅಥವಾ ಮುಂಬೈಯಂತೆ ಇಲ್ಲಿ ಜನರು ಅಷ್ಟೊಂದು ಐಷಾರಾಮಿ ಅಲ್ಲ ಎಂದು ಹೇಳಿದ್ದಾರೆ. ಭಾರತದ ಅತೀ ದೊಡ್ಡ ಸ್ಟಾಕ್ ಬ್ರೋಕರೇಜ್ ಕಂಪನಿಯ ಸಹಸಂಸ್ಥಾಪಕರಾಗಿರುವ ಕಾಮತ್, ಬೆಂಗಳೂರನ್ನು ತಾನೇಕೆ ಇಷ್ಟಪಡುತ್ತೇನೆ ಎಂಬುದಕ್ಕೆ ಇನ್ನೂ ಅನೇಕ ಕಾರಣಗಳನ್ನು ನೀಡಿದ್ದಾರೆ. ಅಂದಹಾಗೇ ಭಾರತದ ಬಹುತೇಕ ಜನಪ್ರಿಯ ಉದ್ಯಮಿಗಳು ಮುಂಬೈನಲ್ಲಿ ನೆಲೆಸಿದ್ದರೆ ನಿಖಿಲ್ ಕಾಮತ್ ಹಾಗೂ ಅವರ ಸಹೋದರ ಬೆಂಗಳೂರಿನಲ್ಲೇ ನೆಲೆ ನಿಂತಿದ್ದಾರೆ. ಬೆಂಗಳೂರಿನ ಜನರು ಮುಂಬೈ, ದೆಹಲಿ, ಚೆನ್ನೈ ಅಥವಾ ಹೈದರಾಬಾದ್ ನಂತೆ ಇನ್ನೊಬ್ಬರನ್ನು ತುಳಿದು ಅವರ ಬೆನ್ನ ಮೇಲೇರಿ ಬೆಳೆಯುವ ಮನಸ್ಥಿತಿ ಹೊಂದಿಲ್ಲ ಎಂದು ನೇರವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಶಬ್ಲ ಇಂಡಿಯಾದ 'ಮಾರ್ನಿಂಗ್ ವಿಥ್ ಸಿದ್ಧಾರ್ಥ ಆಲಂಬಯನ್' 6ನೇ ಕಂತಿನಲ್ಲಿ ಮಾತನಾಡಿರುವ ನಿಖಿಲ್ ಕಾಮತ್, ಬೆಂಗಳೂರಿನ ಕುರಿತು ಪ್ರೀತಿ, ಮೆಚ್ಚುಗೆಯ ಮಾತನಾಡಿದ್ದಾರೆ. ಹಾಗಾದ್ರೆ ನಿಖಿಲ್ ಕಾಮತ್ ಬೆಂಗಳೂರು ಬಗ್ಗೆ ಇನ್ನು ಏನೇನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.

ಬೆಂಗಳೂರಿನ ಜನರು ಅಷ್ಟು ಸ್ಪರ್ಧಾತ್ಮಕತೆ ಹೊಂದಿಲ್ಲ. ಇದು ಒಳ್ಳೆಯ ಸಂಗತಿ ಅಲ್ಲ ಎಂದು ನಾನು ಹೇಳಬಹುದು. ಆದರೆ, ನಿಜ ಹೇಳುತ್ತೇನೆ ಇದು ಅತ್ಯಂತ ಉತ್ತಮ ಸಂಗತಿ. ಇತರ ನಗರಗಳಿಗಿಂತ ಇಲ್ಲಿನ ಜನರು ಇತರರ ಬೆನ್ನ ಮೇಲೇರಿ ಬೆಳೆಯಲು ಪ್ರಯತ್ನಿಸೋದಿಲ್ಲ' ಎಂದು ಕಾಮತ್ ಹೇಳಿದ್ದಾರೆ. 35 ವರ್ಷದ ನಿಖಿಲ್ ಕಾಮತ್ ತನ್ನ ಸಹೋದರ ನಿತಿನ್ ಕಾಮತ್ ಜೊತೆಗೂಡಿ 2010ರಲ್ಲಿ ಜೆರೋಧ ಪ್ರಾರಂಭಿಸುವ ಮುನ್ನ ಕಾಲ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿ ಶ್ರೀಮಂತ ವ್ಯಕ್ತಿ ಚಪ್ಪಲಿ ಧರಿಸಿ ರಸ್ತೆಗಳಲ್ಲಿ ಒಡಾಡಬಲ್ಲರು. ಆದರೆ, ಮುಂಬೈ ಅಥವಾ ಇನ್ಯಾವುದೇ ನಗರಗಳಲ್ಲಿ ಇಂಥ ದೃಶ್ಯ ನಿಮಗೆ ನೋಡಲು ಸಿಗೋದಿಲ್ಲ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. 

ಪತನದ ಭೀತಿಯಿಂದ ಪಾರಾದ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌

ದಕ್ಷಿಣ ಭಾರತದಲ್ಲಿ ಮಕ್ಕಳನ್ನು ಬೆಳೆಸುವ ರೀತಿಯಿಂದ ಬೆಂಗಳೂರಿನಲ್ಲಿ ಈ ರೀತಿಯ ವಾತಾವರಣ ಇದ್ದಿರಬಹುದು. ಇಲ್ಲಿನ ಜನರು ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಬಯಸೋದಿಲ್ಲ. ರಸ್ತೆಯಲ್ಲಿ ಕೆಲವು ಶ್ರೀಮಂತರು ಕಾಲಿಗೆ ಬರೀ ಚಪ್ಪಲಿ ಧರಿಸಿ ಸಾಮಾನ್ಯರಂತೆ ಓಡಾಟ ನಡೆಸೋದನ್ನು ನೀವು ಬೆಂಗಳೂರಿನಲ್ಲಿ ಮಾತ್ರ ನೋಡಬಹುದು ಎಂದು ಕಾಮತ್ ಹೇಳಿದ್ದಾರೆ. 

ಯುವ ತಲೆಮಾರು ಉದ್ಯಮ ರಂಗಕ್ಕೆ ಪ್ರವೇಶಿಸುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕೂಡ ಕಾಮತ್ ಹಂಚಿಕೊಂಡಿದ್ದಾರೆ. ಸಹಸ್ರಾರು ವರ್ಷಗಳಿಂದ ಯಶಸ್ವಿ ಅನಿಸಿದ ಸೂತ್ರ ಈ ತಲೆಮಾರಿನ ಉದ್ಯಮಿಗಳಿಗೆ ಅನ್ವಯಿಸದೇ ಇರಬಹುದು. ನಾವು ಇಂದು ಬದುಕುತ್ತಿರುವ ಜಗತ್ತು ತುಂಬಾ ವೇಗವಾಗಿ ಬದಲಾಗುತ್ತಿದೆ. ಹೀಗಾಗಿ ಅವರು ಉದ್ಯಮ ಜಗತ್ತನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವುದು ಅಗತ್ಯ. ಎಂದು ಕಾಮತ್ ಸಲಹೆ ನೀಡಿದ್ದಾರೆ. 

ಅತೀಹೆಚ್ಚು ತೆರಿಗೆ ಪಾವತಿಸಿದ ಮಹಿಳಾ ತೆರಿಗೆದಾರರಲ್ಲಿ ನನ್ನ ಪತ್ನಿಯೂ ಒಬ್ಬಳು: ಅಶ್ನೀರ್ ಗ್ರೋವರ್ ಟ್ವೀಟ್

1997-2012ನೇ ಅವಧಿಯಲ್ಲಿ ಜನಿಸಿರುವವರು ಉದ್ಯಮ ಕುರಿತ ತಮ್ಮ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕು. ಒಂದು ಉದ್ಯಮ ಯೋಜನೆಗೆ ಬೇರೆಡೆಯಿಂದ ಹೂಡಿಕೆ ಅಥವಾ ಹಣಕಾಸಿ ಸಹಾಯ ಸಿಗುತ್ತದೆ, ಅದು ಇಷ್ಟೇ ಮೊತ್ತದಾಗಿರುತ್ತದೆ ಎಂಬ ಊಹೆಗಳನ್ನು ಮಾಡಲು ಹೋಗಬಾರದು. ನಿರ್ದಿಷ್ಟ ಸಮಯದ ತನಕ ಸ್ವಂತ ಉದ್ಯಮ ಪ್ರಾರಂಭಿಸೋದು ಒಳ್ಳೆಯ ನಿರ್ಧಾರವಾಗಿರಬಹುದು. ಆದರೆ, ಇದು ಎಲ್ಲ ಕಾಲಕ್ಕೂ ಅನ್ವಯಿಸೋದಿಲ್ಲ. ಹೀಗಾಗಿ ನನ್ನ ಪ್ರಕಾರ ಜನರು ಉದ್ಯಮವನ್ನು ವಿಭಿನ್ನ ವಿಧಾನಗಳ ಮೂಲಕ ನಿರ್ಮಿಸಬೇಕು. ಹೀಗಾಗಿ ಉದ್ಯಮ ಯೋಜನೆಯಲ್ಲಿ ನಿಮಗೆ ಹಣ ಅಥವಾ ಹೂಡಿಕೆ ಇಂಥವರಿಂದಲೇ ಅಥವಾ ಇದೇ ಮೂಲದಿಂದ ಸಿಗುತ್ತದೆ ಎಂಬ ಊಹೆಯನ್ನು ಹೊಂದಿರಬಾರದು ಎಂಬ ಸಲಹೆಯನ್ನು ಕಾಮತ್ ಉದ್ಯಮ ರಂಗಕ್ಕೆ ಪ್ರವೆಶಿಸುತ್ತಿರುವ ಯುವಜನರಿಗೆ ನೀಡಿದ್ದಾರೆ. 
 

click me!