ನೋಟ್ ಬ್ಯಾನ್ ಭಾರತೀಯ ಅರ್ಥಶಾಸ್ತ್ರದ ಕಪ್ಪು ಚುಕ್ಕೆ! ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅಭಿಪ್ರಾಯ! ವಿಶ್ವದ ಯಾವುದೇ ಅರ್ಥಶಾಸ್ತ್ರಜ್ಞ ನೋಟ್ ಬ್ಯಾನ್ ಬೆಂಬಲಿಸಿಲ್ಲ!ಜಿಎಸ್ಟಿ ಸರ್ಕಾರದ ವಿಫಲ ಆರ್ಥಿಕ ನೀತಿಗೆ ಸಾಕ್ಷಿ
ನವದೆಹಲಿ(ಆ.29): 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ನೋಟು ಅಮಾನ್ಯೀಕರಣವನ್ನು ವಿಶ್ವದ ಯಾವುದೇ ಅರ್ಥಶಾಸ್ತ್ರಜ್ಞ ಬೆಂಬಲಿಸಿಲ್ಲ ಎಂದು ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.
ಎನ್ ಎಸ್ ಯುಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಚಿದಂಬರಂ, ಪ್ರಧಾನಿ ಮೋದಿ ನೋಟು ಅಮಾನ್ಯತೆ ಘೋಷಿಸಿದ್ದಾಗ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಹ್ಮಣ್ಯ ಕೇರಳದಲ್ಲಿದ್ದರು. ಪ್ರಧಾನಿ ಅವರೊಂದಿಗೆ ಸಮಾಲೋಚನೆ ಕೂಡಾ ನಡೆಸಿರಲಿಲ್ಲ ಎಂದು ಆರೋಪಿಸಿದರು.
ನವೆಂಬರ್ 8, 2016 ರಂದು ಕೇಂದ್ರ ಸರ್ಕಾರ ಜಾರಿಗೆ ತಂದ ನೋಟು ಅಮಾನ್ಯೀಕರಣ ಭಾರತೀಯ ಅರ್ಥವ್ಯವಸ್ಥೆಯ ಕಪ್ಪು ಚುಕ್ಕೆಯಾಗಿದೆ ಎಂದು ಚಿದಂಬರಂ ಹರಿಹಾಯ್ದಿದ್ದಾರೆ.
ಇತ್ತೀಚಿಗೆ ಆರ್ ಬಿಐ ನಡೆಸಿದ ಅಧ್ಯಯನದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಜಿಎಸ್ ಟಿ ವಿಧಿಸಿರುವುದು ಹಾಗೂ ನೋಟು ಅಮಾನ್ಯೀಕರಣ ಒಟ್ಟಾರೇ ಸಾಲದ ಮೇಲೆ ಪರಿಣಾಮ ಬೀರಲಿದೆ ಎಂಬುದು ತಿಳಿದುಬಂದಿದೆ. ಅಲ್ಲದೇ ಒಬಾಮಾ ಕೇರ್ ಮಾದರಿಯಲ್ಲೇ ಆಯುಷ್ಮನ್ ಭಾರತ್ ಆರೋಗ್ಯ ವಿಮೆ ಯೋಜನೆ ಕೂಡ ವಿಫಲವಾಗಲಿದೆ ಎಂದು ಚಿದಂಬರಂ ಹರಿಹಾಯ್ದಿದ್ದಾರೆ.