
ಮುಂಬೈ (ಆ.18): ಕೇಂದ್ರ ಸರ್ಕಾರದ ಅಧೀನದ ಗಣಿಗಾರಿಕೆ ದೈತ್ಯ ಸಂಸ್ಥೆ 'ನ್ಯಾಷನಲ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್' (NMDC), ಕರ್ನಾಟಕ ಸರ್ಕಾರದ Retrospective ಖನಿಜ ತೆರಿಗೆ ಮಸೂದೆಯಿಂದಾಗಿ ಬರೋಬ್ಬರಿ ₹15,785.72 ಕೋಟಿ ತೆರಿಗೆ ಪಾವತಿಸಬೇಕಾದ ಸಂಭಾವ್ಯ ಆರ್ಥಿಕ ಅಪಾಯವನ್ನು (Contingent Liability) ಎದುರಿಸುತ್ತಿದೆ. ಇತ್ತೀಚೆಗೆ ಪಾರ್ಲಿಮೆಂಟ್ನಲ್ಲಿ ಅಂಗೀಕಾರಗೊಂಡಿರುವ 'ಗಣಿ ಮತ್ತು ಖನಿಜ ಅಭಿವೃದ್ಧಿ ಹಾಗೂ ನಿಯಂತ್ರಣ' (MMDR) ತಿದ್ದುಪಡಿ ಕಾಯ್ದೆಯ ನಡುವೆಯೂ ಈ ತೆರಿಗೆ ಬಿಸಿಯು ಸಂಸ್ಥೆಗೆ ಕಂಠಕವಾಗಿ ಪರಿಣಮಿಸಿದೆ.
ಕಳೆದ ವಾರ ಷೇರು ಮಾರುಕಟ್ಟೆಗೆ ಸಲ್ಲಿಸಿದ ವರದಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಎನ್ಎಂಡಿಸಿ, ಕರ್ನಾಟಕ ಸರ್ಕಾರ ತಯಾರಿಸಿರುವ ಮಸೂದೆಯು ಪ್ರಸ್ತುತ ಇರುವ ರೂಪದಲ್ಲೇ ಜಾರಿಯಾದರೆ, ಕಂಪನಿಯು ವರದಿ ಸಲ್ಲಿಕೆಯ ದಿನಾಂಕದ ವೇಳೆಗೆ ಸುಮಾರು ₹15,785.72 ಕೋಟಿ ತೆರಿಗೆ ಪಾವತಿಸಲು ಬಾಧ್ಯಸ್ಥವಾಗಬಹುದು. ಈ ಮೊತ್ತವನ್ನು ಪ್ರಸ್ತುತ ಸಂಸ್ಥೆಯ ಸಂಭಾವ್ಯ ಸಾಲ/ಬಾಧ್ಯತೆ (Contingent Liability) ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ, "ಶಾಸನಸಭೆಯ ಪ್ರಕ್ರಿಯೆ ಬಾಕಿ ಇರುವುದು, ರಾಜ್ಯಪಾಲರ ಕಾಯ್ದಿರಿಸುವಿಕೆ ಹಾಗೂ ಪ್ರಸ್ತುತ ನಡೆಯುತ್ತಿರುವ ಪಾಲುದಾರರ ಚರ್ಚೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮೊತ್ತವನ್ನು 'ಸಂಭಾವ್ಯ ಬಾಧ್ಯತೆ' ಎಂದು ವರ್ಗೀಕರಿಸಲಾಗಿದೆ" ಎಂದು ಎನ್ಎಂಡಿಸಿ ಸೇರಿಸಿದೆ.
ಜುಲೈ 2024ರಲ್ಲಿ 'ಮಿನರಲ್ ಏರಿಯಾ ಡೆವಲಪ್ಮೆಂಟ್ ಅಥಾರಿಟಿ Vs ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಸಂವಿಧಾನದ 'ರಾಜ್ಯ ಪಟ್ಟಿ'ಯ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವಿದೆ ಎಂದು ಕೋರ್ಟ್ ಎತ್ತಿಹಿಡಿದಿತ್ತು. ಆಗಸ್ಟ್ 2024ರಲ್ಲಿ ನೀಡಿದ ಮತ್ತೊಂದು ಆದೇಶದಲ್ಲಿ, ಏಪ್ರಿಲ್ 1, 2005 ರಿಂದಲೇ ಜಾರಿಗೆ ಬರುವಂತೆ (ಪೂರ್ವಾನ್ವಯವಾಗಿ) ಖನಿಜ ಹಕ್ಕು ಮತ್ತು ಗಣಿ ಭೂಮಿಯ ಮೇಲೆ ತೆರಿಗೆ ವಿಧಿಸಲು ಅಥವಾ ನವೀಕರಿಸಲು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತು. ಜತೆಗೆ, ಕಂಪನಿಗಳು ಈ ತೆರಿಗೆ ಬಾಕಿಯನ್ನು ಏಪ್ರಿಲ್ 1, 2026 ರಿಂದ ಆರಂಭಿಸಿ 12 ವರ್ಷಗಳ ಕಂತುಗಳಲ್ಲಿ ಪಾವತಿಸಬಹುದು ಎಂದು ಸೂಚಿಸಿತ್ತು.
ಈ ಆದೇಶದ ಬೆನ್ನಲ್ಲೇ, ಕರ್ನಾಟಕ ಶಾಸನಸಭೆಯು ಡಿಸೆಂಬರ್ 2024ರಲ್ಲಿ 'ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ಮಸೂದೆ'ಯನ್ನು ಅಂಗೀಕರಿಸಿತು. ಇದರ ಪ್ರಕಾರ ಖನಿಜ ಹಕ್ಕುಗಳ ಮೇಲೆ ಜನವರಿ 2015 ರಿಂದ ಹಾಗೂ ಖನಿಜ ಭೂಮಿಯ ಮೇಲೆ ಏಪ್ರಿಲ್ 2005 ರಿಂದ ಪೂರ್ವಾನ್ವಯವಾಗಿ ತೆರಿಗೆ ವಿಧಿಸಲು ಪ್ರಸ್ತಾವಿಸಲಾಯಿತು. ಹರಾಜು ಮಾಡದ ಗಣಿಗಳಿಂದ ತೆಗೆಯುವ ಕಬ್ಬಿಣದ ಹದಿನೈದು ಭಾಗಗಳಿಗೆ (Iron Ore) ಪಾವತಿಸಬೇಕಾದ ರಾಯಲ್ಟಿಗಿಂತ 3 ಪಟ್ಟು ಹೆಚ್ಚಿನ ತೆರಿಗೆಯನ್ನು ವಿಧಿಸಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು.
ಆದರೆ, ಕರ್ನಾಟಕದ ರಾಜ್ಯಪಾಲರು ಈ ಮಸೂದೆಯ ಕಾನೂನುಬದ್ಧತೆಯ ಕುರಿತು ಕೆಲವು ಆಕ್ಷೇಪಣೆಗಳನ್ನು ಎತ್ತಿ, ರಾಷ್ಟ್ರಪತಿಯವರ ಅಂಕಿತಕ್ಕಾಗಿ ಕಳುಹಿಸಿಕೊಟ್ಟಿದ್ದಾರೆ. ಪ್ರಸ್ತುತ ಈ ಮಸೂದೆಯು ಕಾಯ್ದೆಯಾಗಿ ಜಾರಿಯಾಗದೆ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯುತ್ತಿದೆ.
ಎನ್ಎಂಡಿಸಿ ಸಂಸ್ಥೆಯು ದೇಶಾದ್ಯಂತ ಒಟ್ಟು ನಾಲ್ಕು ಕಬ್ಬಿಣದ ಅದಿರು ಗಣಿಗಳನ್ನು ನಿರ್ವಹಿಸುತ್ತಿದೆ. ಇವುಗಳಲ್ಲಿ ಎರಡು ಪ್ರಮುಖ ಗಣಿಗಳಾದ ಡೋಣಿಮಲೈ (Donimalai) ಮತ್ತು ಕುಮಾರಸ್ವಾಮಿ (Kumaraswamy) ಗಣಿಗಳು ಕರ್ನಾಟಕದಲ್ಲೇ ಇವೆ. ಎನ್ಎಂಡಿಸಿಯ ಒಟ್ಟು ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು (1/3rd) ಕೊಡುಗೆಯನ್ನು ಈ ಎರಡು ಗಣಿಗಳೇ ನೀಡುತ್ತವೆ.
ಸಂಸತ್ತು ಇತ್ತೀಚೆಗೆ ಅಂಗೀಕರಿಸಿರುವ 'MMDR ತಿದ್ದುಪಡಿ ಮಸೂದೆ'ಯ ಹಿನ್ನೆಲೆಯಲ್ಲಿ ಎನ್ಎಂಡಿಸಿಯ ಈ ಬಹಿರಂಗಪಡಿಸುವಿಕೆ ಮಹತ್ವ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ನಿಗದಿಪಡಿಸುವ "ನಿಬಂಧನೆಗಳು ಅಥವಾ ನಿರ್ಬಂಧಗಳಿಗೆ" ಒಳಪಟ್ಟು ಮಾತ್ರವೇ ರಾಜ್ಯ ಸರ್ಕಾರಗಳು ಖನಿಜ ಹಕ್ಕುಗಳ ಮೇಲೆ ತೆರಿಗೆ, ಸೆಸ್ ಅಥವಾ ಇತರೆ ಶುಲ್ಕಗಳನ್ನು ವಿಧಿಸಬೇಕು ಎಂದು ಈ ನೂತನ ತಿದ್ದುಪಡಿ ಕಾಯ್ದೆಯು ರಾಜ್ಯಗಳ ಅಧಿಕಾರವನ್ನು ಸೀಮಿತಗೊಳಿಸುತ್ತದೆ.
ಈ ಪ್ರಸ್ತಾವಿತ ತಿದ್ದುಪಡಿಯ ಪ್ರಕಾರ, ನೂತನ ಕಾಯ್ದೆ ಜಾರಿಗೆ ಬರುವ ಮೊದಲು ರಾಜ್ಯ ಸರ್ಕಾರಗಳು ಸಂಗ್ರಹಿಸದ ಅಥವಾ ಠೇವಣಿ ಮಾಡಿಕೊಳ್ಳದ ಯಾವುದೇ ತೆರಿಗೆ, ಸೆಸ್ ಅಥವಾ ಶುಲ್ಕಗಳನ್ನು ಕಾನೂನುಬಾಹಿರ ಅಥವಾ ರದ್ದು (Invalid) ಎಂದು ಪರಿಗಣಿಸಲಾಗುತ್ತದೆ. ಆದರೆ, ರಾಜ್ಯಗಳು ಈಗಾಗಲೇ ಸಂಗ್ರಹಿಸಿರುವ ಮೊತ್ತವನ್ನು ಕಂಪನಿಗಳಿಗೆ ಮರುಪಾವತಿಸುವ ಅಗತ್ಯವಿರುವುದಿಲ್ಲ. ಪ್ರಸ್ತುತ ಕರ್ನಾಟಕದ ಮಸೂದೆಯು ರಾಷ್ಟ್ರಪತಿಗಳ ಅಂಕಿತಕ್ಕೆ ಕಾಯುತ್ತಿರುವುದರಿಂದ ಮತ್ತು ಕೇಂದ್ರದ MMDR ಕಾಯ್ದೆ ತಿದ್ದುಪಡಿ ಜಾರಿಯಾಗುತ್ತಿರುವುದರಿಂದ ಎನ್ಎಂಡಿಸಿಯ ₹15,786 ಕೋಟಿ ತೆರಿಗೆ ಹೊಣೆಗಾರಿಕೆಯು ಕುತೂಹಲಕಾರಿ ಘಟ್ಟ ತಲುಪಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.