ತಂದೆ ಕಿರಾಣಿ ಅಂಗಡಿಯನ್ನೇ ಮಸಾಲ ಕಂಪನಿಯನ್ನಾಗಿ ಬದಲಾಯಿಸಿದ ಮಗ ಇಂದು ಬಹುಕೋಟಿ ಒಡೆಯ

Published : Dec 09, 2023, 05:45 PM ISTUpdated : Dec 09, 2023, 05:50 PM IST
ತಂದೆ ಕಿರಾಣಿ ಅಂಗಡಿಯನ್ನೇ ಮಸಾಲ ಕಂಪನಿಯನ್ನಾಗಿ ಬದಲಾಯಿಸಿದ ಮಗ ಇಂದು ಬಹುಕೋಟಿ ಒಡೆಯ

ಸಾರಾಂಶ

ತಂದೆಯ ಪುಟ್ಟ ಕಿರಾಣಿ ಅಂಗಡಿಯನ್ನೇ ಬಹುಕೋಟಿ ಉದ್ಯಮವನ್ನಾಗಿ ಬದಲಾಯಿಸಿದ ಮಗ ಇಂದು ಭಾರತದ ಜನಪ್ರಿಯ ಮಸಾಲ ಬ್ರ್ಯಾಂಡ್ ಮಾಲೀಕ. ಈ ಕಂಪನಿಯ ವಾರ್ಷಿಕ ವಹಿವಾಟು 50 ಕೋಟಿ ರೂ.   

Business Desk: ಇಂದು ಎಲ್ಲರ ಮನೆಯ ಅಡುಗೆ ಮನೆಗಳಲ್ಲಿ ಸಿದ್ಧ ಮಸಾಲಗಳು ಕಾಣಸಿಗುತ್ತವೆ. ಇಂದು ಮಹಿಳೆಯರು ಕೂಡ ಉದ್ಯೋಗಕ್ಕೆ ಹೋಗುತ್ತಿರುವ ಕಾರಣ ಈ ಮಸಾಲಗಳು ಅವರ ಅಡುಗೆ ಕೆಲಸವನ್ನು ಸುಲಭಗೊಳಿಸಿವೆ. ಅಲ್ಲದೆ, ಇವು ಅಡುಗೆಯ ಪರಿಮಳ ಹಾಗೂ ಸ್ವಾದ ಹೆಚ್ಚಿಸುವ ಕಾರಣ ಮಹಿಳೆಯರು ಸಹಜವಾಗಿ ಈ ಮಸಾಲಗಳನ್ನು ಇಷ್ಟಪಟ್ಟು ಬಳಸುತ್ತಿದ್ದಾರೆ. ಇಂಥ ಸಿದ್ಧ ಮಸಾಲಗಳನ್ನು ಉತ್ಪಾದಿಸುವ ಅನೇಕ ಕಂಪನಿಗಳು ಇಂದು ಮಾರುಕಟ್ಟೆಯಲ್ಲಿವೆ. ಅಂಥ ಕಂಪನಿಗಳಲ್ಲಿ ಕ್ವಾಲಿಟಿ ಫುಡ್ಸ್ ಕೂಡ ಒಂದು. ಈ ಕಂಪನಿ 2019ರಲ್ಲಿ 50 ಕೋಟಿ ರೂ. ವಹಿವಾಟು ನಡೆಸಿದೆ. ಬೆಂಗಳೂರು ಮೂಲದ ಈ ಕಂಪನಿಯ ಯಶಸ್ಸಿನ ಕಥೆ ಈಗಷ್ಟೇ ಉದ್ಯಮಿ ಜಗತ್ತಿಗೆ ಕಾಲಿಡುತ್ತಿರೋರಿಗೆ ಪ್ರೇರಣೆ ನೀಡುವಂಥದ್ದು ಕೂಡ. ತಂದೆಯ ಪುಟ್ಟ ಕಿರಾಣಿ ಅಂಗಡಿಯನ್ನೇ ಮಸಾಲ ಉತ್ಪಾದನಾ ಉದ್ಯಮಕ್ಕೆ ಏಣಿಯಾಗಿ ಬಳಸಿಕೊಂಡ ಪುತ್ರ ನರೇಶ್ ಪಗಾರಿಯಾ  ಇಂದು ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. 

ಕಿರಾಣಿ ಅಂಗಡಿಯಿಂದ ಮಸಾಲ ಕಂಪನಿ ತನಕ
ನರೇಶ್ ಪಗಾರಿಯಾ ಅವರ ತಂದೆ ಭವರ್ಲಾಲ್ಜಿ ಪಗಾರಿಯಾ  ರಾಜಸ್ಥಾನದ ಸೂಜತ್ ಮೂಲದವರು. 1960ರ ದಶಕದಲ್ಲಿ ಅವರು ಬೆಂಗಳೂರಿಗೆ ವಲಸೆ ಬರುತ್ತಾರೆ. ಇಲ್ಲಿ ಪುಟ್ಟ ಕಿರಾಣಿ ಅಂಗಡಿ ತೆರೆದು ಅದರಿಂದ ಬಂದ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇವರ ಕಿರಾಣಿ ಅಂಗಡಿಯಲ್ಲಿ ಮಸಾಲ ಪದಾರ್ಥಗಳನ್ನು ಹೆಚ್ಚಾಗಿ ಮಾರಾಟ ಮಾಡಲಾಗುತ್ತಿತ್ತು. ಸುಮಾರು 30 ವರ್ಷಗಳ ಕಾಲ ಪಗಾರಿಯಾ  ಕಿರಾಣಿ ಅಂಗಡಿ ನಡೆಸಿದ್ದರು. ತಂದೆಯ ಉದ್ಯಮವನ್ನು ಸಮೀಪದಿಂದ ನೋಡಿದ ಮಗ ನರೇಶ್ ಪಗಾರಿಯಾ , ಮಸಾಲ ಪದಾರ್ಥಗಳನ್ನು ನಾವೇ ಉತ್ಪಾದಿಸಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಸಲಹೆಯನ್ನು ತಂದೆಗೆ ನೀಡುತ್ತಾರೆ. ಈ ಸಮಯದಲ್ಲಿ ಮಗ ನರೇಶ್ ಇನ್ನೂ ಶಿಕ್ಷಣ ಪೂರ್ಣಗೊಳಿಸಿರಲಿಲ್ಲ. ಆದರೂ ತಂದೆಯ ಪುಟ್ಟ ಕಿರಾಣಿ ಅಂಗಡಿಯಲ್ಲಿ ನಾಲ್ಕು ವಿಧದ ಮಸಾಲ ತಯಾರಿಸುವ ಕೆಲಸಕ್ಕೆ ಸಾಥ್ ನೀಡುತ್ತಾರೆ. ಶಿಕ್ಷಣ ಪೂರ್ಣಗೊಂಡ ಬಳಿಕ ನರೇಶ್ ಸಂಪೂರ್ಣವಾಗಿ ಈ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಾರೆ.

ರೈತನ ಮಗ ಈಗ ದೇಶದ ಅತಿ ದೊಡ್ಡ ವಜ್ರ ವ್ಯಾಪಾರಿ, ಒಟ್ಟು ಆಸ್ತಿ ಹತ್ತು ತಲೆಮಾರಿಗೆ ಆಗುವಷ್ಟಿದೆ!

ಉದ್ಯಮ ವಿಸ್ತರಣೆ
ನರೇಶ್ 1998ರಲ್ಲಿ ಉದ್ಯಮವನ್ನು ವಿಸ್ತರಿಸುತ್ತಾರೆ. ಪುಟ್ಟ ಕಿರಾಣಿ ಅಂಗಡಿಯಿಂದ 300 ಚದರ ಅಡಿ ವಿಸ್ತೀರ್ಣದ ಸ್ಥಳವಕಾಶವಿರುವ ಕೋಣೆಯಲ್ಲಿ ಹೆಚ್ಚು ವಿಧದ ಮಸಾಲಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತಾರೆ. ಈ ಉದ್ಯಮಕ್ಕೆ 'ಪಗಾರಿಯಾ  ಫುಡ್ಸ್' ಎಂಬ ಹೆಸರಿಡುತ್ತಾರೆ. ಇನ್ನು ಈ ಬ್ರ್ಯಾಂಡ್ ಗೆ 'ಕ್ವಾಲಿಟಿ ಫುಡ್ಸ್' ಎಂಬ ಹೆಸರಿಡುತ್ತಾರೆ. ನಂತರ ಹಂತ ಹಂತವಾಗಿ ಉದ್ಯಮವನ್ನು ವಿಸ್ತರಿಸುತ್ತ ಸಾಗುತ್ತಾರೆ. ಬೆಂಗಳೂರಿನ ಹೊರಭಾಗಗಳಾದ ತುಮಕೂರು ಹಾಗೂ ಅನಂತಪುರಗಳಲ್ಲಿ ಮಸಾಲ ಮಾರಾಟ ಮಾಡಲು ಪ್ರಾರಂಭಿಸುತ್ತಾರೆ. ಕೆಲವೇ ಸಮಯದಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ದೊಡ್ಡ ಉತ್ಪಾದನಾ ಘಟಕ ಪ್ರಾರಂಭಿಸುತ್ತಾರೆ. 

ಬೇರೆ ಉತ್ಪನ್ನಗಳ ಸೇರ್ಪಡೆ
ಇತರ ಮಸಾಲ ಕಂಪನಿಗಳನ್ನು ಸೂಕ್ಷ್ಮವಾಗಿ ಗನಿಸುತ್ತಿದ್ದ ನರೇಶ್, ಅದಕ್ಕೆ ಅನುಗುಣವಾಗಿ ತಮ್ಮ ಉದ್ಯಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತ ಸಾಗಿದರು.2002ರಲ್ಲಿ ಮಸಾಲ ಜೊತೆಗೆ ಓಟ್ಸ್ ಸೇರಿದಂತೆ ವಿವಿಧ ಧಾನ್ಯಗಳನ್ನು ಕೂಡ ಕ್ವಾಲಿಟಿ ಬ್ರ್ಯಾಂಡ್ ಅಡಿಯಲ್ಲಿ ಪರಿಚಯಿಸಿದರು. ಅತೀಕಡಿಮೆ ಅವಧಿಯಲ್ಲಿ ಇವರ ಕಂಪನಿ ದಕ್ಷಿಣ ಭಾರತದಲ್ಲಿ ಮಾರುಕಟ್ಟೆ ಕಂಡುಕೊಳ್ಳಲು ಸಫಲವಾಯಿತು.ಮಾಡರ್ನ್ ಟ್ರೇಡ್ ಅನ್ನು ಕೂಡ ಕಂಪನಿ ಅಳವಡಿಸಿಕೊಂಡಿದ್ದು, ಡಿಮಾರ್ಟ್, ಬಿಗ್ ಬಜಾರ್, ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ, ರಿಲಯನ್ಸ್, ಮೋರ್, ವಾಲ್ ಮಾರ್ಟ್ ಮುಂತಾದ ಮಾಡರ್ನ್ ಚೈನ್ ಗಳಿಗೆ ಕೂಡ ಕ್ವಾಲಿಟಿ ಉತ್ಪನ್ನಗಳನ್ನು ಪೂರೈಕೆ ಮಾಡಲಾಗುತ್ತಿದೆ.'

ಮನೆಬಿಟ್ಟಾಗ ಕೈಯಲಿದ್ದಿದ್ದು 300 ರೂ, ಒಂದೊತ್ತಿನ ಊಟಕ್ಕೂ ಇಲ್ಲದವಳೀಗ ಕೋಟ್ಯಾಧಿಪತಿ

ವಿದೇಶಗಳಿಗೂ ರಫ್ತು
ಕ್ವಾಲಿಟಿ ಬ್ರ್ಯಾಂಡ್ ಪ್ರಸ್ತುತ ದಕ್ಷಿಣ ಭಾರತ ಹಾಗೂ ಪಶ್ಚಿಮ ಭಾರತದಲ್ಲಿ 450 ವಿತರಕರು ಹಾಗೂ 35,000 ದೇಶೀಯ ರಿಟೇಲರ್ ಗಳನ್ನು ಹೊಂದಿದೆ. ಕ್ವಾಲಿಟಿ ಬ್ರ್ಯಾಂಡ್ ಉತ್ಪನ್ನಗಳನ್ನು 20ಕ್ಕೂ ಅಧಿಕ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ ಹಾಗೂ ಇದು 5,000ಕ್ಕೂ ಅಧಿಕ ಅಂತಾರಾಷ್ಟ್ರೀಯ ಮಳಿಗೆಗಳನ್ನು ಹೊಂದಿದೆ.


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!
Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!