
ಬೆಂಗಳೂರು (ಜೂನ್ 22): ರಾಜ್ಯದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಎಳನೀರಿಗೆ ಭಾರೀ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಎಳನೀರು ಮಾರಾಟ ಹೆಚ್ಚಾಗಿದ್ದು, ಇದೀಗ ಕೊಬ್ಬರಿ ಎಣ್ಣೆ ಹಾಗೂ ಕೊಬ್ಬರಿ ಕಾಯಿ ಅಭಾವವನ್ನು ಎದುರಿಸುತ್ತಿದೆ. ಇದು ನೇರವಾಗಿ ಕೊಬ್ಬರಿ ಎಣ್ಣೆಯ ದರಕ್ಕೆ ಭಾರೀ ಹೊಡೆತ ನೀಡಿದೆ.
ಕೊಬ್ಬರಿ ಎಣ್ಣೆ ಬೆಲೆ ಏರಿಕೆ ಸ್ಥಿತಿ:
ರಾಜ್ಯದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಎಳನೀರು ಮಾರಾಟ ಮಾಡುವ ಪ್ರಮಾಣ ಹೆಚ್ಚಾಗೊತ್ತು. ಈ ಬಾರಿ ಒಂದು ಎಳನೀರಿನ ದರ ₹80ವರೆಗೆ ಏರಿತ್ತು. ಅಂದರೆ ಇದರಲ್ಲಿ ನೇರವಾಗಿ ರೈತರಿಗೇ ₹35-₹40ರ ಆದಾಯ ಸಿಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬಹುತೆಕ ಕೃಷಿಕರು ಎಳನೀರನ್ನೇ ಮಾರಾಟ ಮಾಡಲು ಮೊರೆಹೋದರು. ಇನ್ನು ಕರ್ನಾಟಕದಲ್ಲಿ ಮದ್ದೂರು, ಮಳವಳ್ಳಿ, ಮಂಡ್ಯ ಭಾಗದ ಜನರು ಮಾತ್ರ ಎಳನೀರನ್ನು ಮಾರಾಟ ಮಾಡಲು ಮುಂದಾಗುತ್ತಿದ್ದರು. ಇಲ್ಲಿನ ಎಳನೀರನ್ನು ಮುಂಬೈ, ದೆಹಲಿ ಸೇರಿದಂತೆ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಆದ್ದರಿಂದ ಗುಣಮಟ್ಟದ ಎಳನೀರು ದರ ಭಾರೀ ಮಟ್ಟದಲ್ಲಿ ಹೆಚ್ಚಳವಾಗಿತ್ತು.
ಕಲ್ಪತರು ನಾಡು ಎಂದು ಖ್ಯಾತಿ ಪಡೆದಿದ್ದ ತುಮಕೂರು, ತಿಪಟೂರು ಭಾಗದಲ್ಲಿ ಎಳನೀರು ಕಟಾವು ಕಡಿಮೆಯಿತ್ತು. ಆದರೆ, ಪ್ರತಿ ಒಂದು ಕಾಯಿ ಕೊಬ್ಬರಿಗೆ ಎಳನೀರಿಗೆ ಸಿಕ್ಕ ಬೆಲೆ ಸಿಗುವುದಿಲ್ಲವೆಂದು ತುಮಕೂರು ಜಿಲ್ಲೆ ಸೇರಿದಂತೆ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿಯೂ ಎಳನೀರು ಕಟಾವು ಮಾಡುವವರ ಸಂಖ್ಯೆ ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಒಣ ಕೊಬ್ಬರಿ ಅಭಾವ ಸೃಷ್ಟಿಯಾಗಿದೆ. ಜೊತೆಗೆ, ಈ ಬಾರಿ ರಾಜ್ಯದ ಹಲವೆಡೆ ತೆಂಗಿನಕಾಯಿ ಬೆಳೆಗೆ ಇಳುವರಿ ಕಡಿಮೆಯಾಗಿದೆ. ಜೊತೆಗೆ ರೋಗಬಾಧೆ ಕೂಡ ಕೆಲವು ಪ್ರದೇಶಗಳಲ್ಲಿ ತೆಂಗು ಗಿಡಗಳಿಗೆ ತೊಂದರೆಯಾಯಿತು.
ಹೊಸ ತೆಂಗು ಬೆಳೆ ಬರಲು ತಡ:
ಇನ್ನು ಈ ವರ್ಷದ ಹೊಸ ತೆಂಗಿನಕಾಯಿ ಇಳುವರಿ ಅಕ್ಟೋಬರ್–ನವೆಂಬರ್ ವೇಳೆಗೆ ಬರುವ ನಿರೀಕ್ಷೆಯಲ್ಲಿದೆ. ಅಲ್ಲಿಯತನಕ ಮಾರುಕಟ್ಟೆಗೆ ಒಣಕೊಬ್ಬರಿ ಲಭ್ಯತೆ ಹೆಚ್ಚಾಗುವ ಲಕ್ಷಣಗಳು ಇಲ್ಲ. ಹೀಗಾಗಿ, ಈ ಬೆಲೆ ಏರಿಕೆ ಸದ್ಯಕ್ಕೆ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ಹೊಸ ತೆಂಗು ಮಾರುಕಟ್ಟೆಗೆ ಬಂದ ನಂತರ ಇಳಿಕೆ ಸಾಧ್ಯವಾಗಬಹುದು. ಹೊರ ರಾಜ್ಯಗಳಿಂದ ಆಮದು ಮಾಡಿಕೊಂಡರೂ ಕೊಬ್ಬರಿ ಎಣ್ಣೆಯ ದರ ಸದ್ಯಕ್ಕೆ ಇಳಿಕೆಯಾಗುವ ಸೂಚನೆ ಸಿಗುತ್ತಿಲ್ಲ.
ಮಾರುಕಟ್ಟೆ ತಜ್ಞರ ಅಭಿಪ್ರಾಯ:
ಮಾರುಕಟ್ಟೆ ತಜ್ಞರ ಪ್ರಕಾರ, ಈಗಿನ ಸ್ಥಿತಿಯಲ್ಲಿ ಕೊಬ್ಬರಿ ಅಥವಾ ಎಣ್ಣೆಯ ದರ ಕಡಿಮೆಯಾಗುವ ಸಾಧ್ಯತೆ ಕಡಿಮೆ. ಸೆಪ್ಟೆಂಬರ್ ಅಂತ್ಯವರೆಗೂ ಬೇಡಿಕೆ ಹೆಚ್ಚಾಗಬಹುದು. ಈ ನಡುವೆ, ಇತ್ತಿಚೆಗೆ ಹವಾಮಾನ ಬದಲಾವಣೆಗಳಿಂದಾಗಿ ಇನ್ನುಷ್ಟು ಬೆಳೆಗಾರರು ಬೆಳೆ ಬೆಳೆಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂಬುದೂ ಕೂಡ ಚಿಂತಾಜನಕ ಸಂಗತಿ. ಇಲ್ಲಿ ರೈತರು ಎಳನೀರು ಮಾರಾಟದಿಂದ ಲಾಭ ಪಡೆದರೂ, ಮುಂದಿನ ಅವಧಿಗೆ ತಯಾರಿ ಮಾಡಿಕೊಳ್ಳಬೇಕಾಗಿದೆ. ಕೊಬ್ಬರಿ, ತೆಂಗಿನಕಾಯಿ, ಎಣ್ಣೆ ಹೀಗೆ ಪೂರೈಕೆ ಸರಪಳಿಯಲ್ಲಿ ಬರುವ ಅವ್ಯವಸ್ಥೆ ಈ ರೀತಿಯ ಬೆಲೆ ಏರಿಕೆಗಳಿಗೆ ಕಾರಣವಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.