ವಿಮಾನ ಹಾರಿಸಲೂ ದುಡ್ಡಿಲ್ಲದೇ ಜೆಟ್‌ ಏರ್‌ವೇಸ್‌ ಬಂದ್‌

By Web DeskFirst Published Apr 18, 2019, 10:53 AM IST
Highlights

ವಿವಿಧ ವಿಮಾನಯಾನ ಕಂಪನಿಗಳ ಸೇಲ್ಸ್‌ ಏಜೆಂಟ್‌ ಆಗಿದ್ದ ನರೇಶ್‌ ಗೋಯಲ್‌, 1993ರಲ್ಲಿ ಜೆಟ್‌ ಏರ್‌ವೇಸ್‌ ಹುಟ್ಟುಹಾಕಿ, ಅದನ್ನು ದೇಶದ ಮುಂಚೂಣಿ ವಿಮಾನಯಾನ ಕಂಪನಿಯಾಗಿ ಬೆಳೆಸಿದ್ದರು. ಇದೀಗ ಬಾಗಿಲು ಮುಚ್ಚುವ ಪರಿಸ್ಥಿತಿ ಬಂದೊದಗಿದೆ.

ಮುಂಬೈ(ಏ.18): 8500 ಕೋಟಿ ರುಪಾಯಿ ನಷ್ಟದಲ್ಲಿ ಸಿಲುಕಿರುವ ಜೆಟ್‌ ಏರ್‌ವೇಸ್‌ ಸಂಸ್ಥೆ ತನ್ನ ಸಂಚಾರ ಸ್ಥಗಿತಗೊಳಿಸಿದೆ. ವಿಮಾನಯಾನ ಮುಂದುವರೆಸಿಕೊಂಡು ಹೋಗಲು ತಕ್ಷಣಕ್ಕೆ 400 ಕೋಟಿ ರುಪಾಯಿ ನೀಡಿ ಎಂಬ ಆಡಳಿತ ಮಂಡಳಿಯ ಮನವಿಯನ್ನು ಸಾಲಗಾರರು ನಿರಾಕರಿಸಿದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸುತ್ತಿರುವುದಾಗಿ ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಕಳೆದ 5 ವರ್ಷಗಳಲ್ಲಿ ವಿಮಾನಯಾನ ಸಂಸ್ಥೆಗಳು ಬಾಗಿಲು ಹಾಕಿದ 7ನೇ ಪ್ರಕರಣವಿದು.

ಜೆಟ್‌ ಏರ್‌ವೇಸ್‌ಗೆ ಗೋಯಲ್‌ ಗುಡ್ ಬೈ: ತಾನೇ ಸ್ಥಾಪಿಸಿದ್ದ ಕಂಪೆನಿಯಿಂದ ಹೊರನಡೆದ ಉದ್ಯಮಿ!

25 ವರ್ಷಗಳ ಸೇವೆಯ ಬಳಿಕ ಕಂಪನಿಯ ಈ ಸ್ಥಿತಿ, 23000 ಸಿಬ್ಬಂದಿಗಳ ಭವಿಷ್ಯವನ್ನು ಡೋಲಾಯಮಾನವಾಗಿಸಿದೆ. ಜೊತೆಗೆ ಈಗಾಗಲೇ ಟಿಕೆಟ್‌ ಬುಕ್‌ ಮಾಡಿದ್ದವರ ಕಥೆ ಏನು ಎಂಬ ಪ್ರಶ್ನೆ ಮುಂದಿಟ್ಟಿದೆ.

ವಿವಿಧ ವಿಮಾನಯಾನ ಕಂಪನಿಗಳ ಸೇಲ್ಸ್‌ ಏಜೆಂಟ್‌ ಆಗಿದ್ದ ನರೇಶ್‌ ಗೋಯಲ್‌, 1993ರಲ್ಲಿ ಜೆಟ್‌ ಏರ್‌ವೇಸ್‌ ಹುಟ್ಟುಹಾಕಿ, ಅದನ್ನು ದೇಶದ ಮುಂಚೂಣಿ ವಿಮಾನಯಾನ ಕಂಪನಿಯಾಗಿ ಬೆಳೆಸಿದ್ದರು. ಆದರೆ ಅಗ್ಗದ ವಿಮಾನಯಾನ ಸೇವಾ ಕಂಪನಿಗಳ ದರ ಪೈಪೋಟಿ ಮತ್ತು ವೈಮಾನಿಕ ಇಂಧನ ದರ ಹೆಚ್ಚಳದ ಹೊಡೆತ ತಾಳಲಾಗದೇ ಕಂಪನಿ ಹಲವು ವರ್ಷಗಳಿಂದ ನಿರಂತರ ಸಾಲದ ತೆಕ್ಕೆಗೆ ಬಿದ್ದಿತ್ತು. ಪರಿಣಾಮ ಕೆಲವೇ ತಿಂಗಳ ಹಿಂದೆ 123 ವಿಮಾನಗಳ ಮೂಲಕ ನಿತ್ಯ 650 ಹಾರಾಟ ನಡೆಸುತ್ತಿದ್ದ ಜೆಟ್‌, ಬುಧವಾರ ಸಂಜೆ ವೇಳೆಗೆ ಕೇವಲ 5 ವಿಮಾನಗಳ ಮೂಲಕ 37 ಹಾರಾಟಕ್ಕೆ ಕುಸಿದಿತ್ತು.

ಪುನರುಜ್ಜೀವನದ ನಿಟ್ಟಿನಲ್ಲಿ ಇತ್ತೀಚೆಗೆ ಬ್ಯಾಂಕ್‌ಗಳು ಸಂಸ್ಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದವು. ಜೊತೆಗೆ ಸಂಸ್ಥಾಪಕ ನರೇಶ್‌ ಗೋಯಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗಿ ಬಂದಿತ್ತು. ಅದರ ಬೆನ್ನಲ್ಲೇ ಬ್ಯಾಂಕ್‌ಗಳು ತಮ್ಮ ಬಳಿ ಇರುವ ಷೇರುಗಳನ್ನು ಮಾರಲು ಕಂಪನಿಗಳಿಂದ ಬಿಡ್ಡಿಂಗ್‌ ಆಹ್ವಾನಿಸಿವೆ. ಈ ಬಿಡ್ಡಿಂಗ್‌ ಮಾಹಿತಿ ಹೊರಬಿದ್ದ ಬಳಿಕ ಕಂಪನಿಯ ಭವಿಷಯ ಏನೆಂಬುದು ಬಹಿರಂಗವಾಗಲಿದೆ.

ಅಂಕಿ-ಅಂಶ:
1993: ಸಂಸ್ಥೆ ಕಾರಾರ‍ಯಚರಣೆ ಆರಂಭ

23000: ಸಂಸ್ಥೆಯ ಸಿಬ್ಬಂದಿ ಸಂಖ್ಯೆ

8500: ಕಂಪನಿಯ ನಷ್ಟ 8500 ಕೋಟಿ

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!