ಯುದ್ಧದ ಎಫೆಕ್ಟ್‌: ಹೂಡಿಕೆ ಮಾಡುವವರು ಸದ್ಯಕ್ಕೆ ಸುಮ್ಮನಿರುವುದೇ ಸೇಫು

Published : Apr 21, 2026, 08:52 AM IST
Investment

ಸಾರಾಂಶ

ಯುದ್ಧದ ಸನ್ನಿವೇಶವು ತೀವ್ರ ಆರ್ಥಿಕ ಅನಿಶ್ಚಿತತೆಯನ್ನು ಸೃಷ್ಟಿಸಿದ್ದು, ಇಂತಹ ಸಮಯದಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಖರ್ಚುಗಳ ಮೇಲೆ ಹಿಡಿತ, ಸಾಲ ಕಡಿಮೆ ಮಾಡುವುದು ಮತ್ತು ಷೇರುಗಳನ್ನು ಗಾಬರಿಯಿಂದ ಮಾರದಿರುವುದು ಸೇರಿದಂತೆ ಪ್ರಮುಖ ಆರ್ಥಿಕ ಸಲಹೆಗಳು ಇಲ್ಲಿವೆ.

‘ಕೋವಿಡ್‌ ಸಮಯದಲ್ಲೂ ಆರ್ಥಿಕ ಅನಿಶ್ಚಿತತೆ ಇತ್ತು. ಆದರೆ ಅದು ಎಲ್ಲಿಗೆ ಹೋಗಿ ಮುಟ್ಟಬಹುದು ಅನ್ನುವ ಸಣ್ಣ ಅಂದಾಜಾದರೂ ಸಿಕ್ಕಿತ್ತು. ಆದರೆ ಇಂದಿನ ಈ ಯುದ್ಧದ ಸನ್ನಿವೇಶದಲ್ಲಿ ಪರಿಸ್ಥಿತಿ ಎಲ್ಲಿಗೆ ತಲುಪಬಹುದು ಅನ್ನೋದರ ಅಂದಾಜು ಸಿಗುತ್ತಿಲ್ಲ. ಆರ್ಥಿಕತೆಯ ಮೇಲೆ ಇದರ ಪರಿಣಾಮ ತೀವ್ರತರವಾಗಿರುತ್ತದೆ ಅಂದರೆ ಜನ ಪ್ಯಾನಿಕ್‌ ಆಗಿ ಬಿಡಬಹುದು. ಆದರೆ ವಾಸ್ತವಕ್ಕೆ ಮುಖಾಮುಖಿ ಆಗಲೇಬೇಕಲ್ಲಾ..’

ಪಾಲಿಸಬಹುದಾದ 5 ಆರ್ಥಿಕ ಸಲಹೆಗಳು

ಐಐಎಂನ ಪ್ರಾಧ್ಯಾಪಕ ಎಂ.ಎಸ್‌. ಶ್ರೀರಾಮ್‌ ಅವರ ಮಾತುಗಳಿವು. ಅವರ ಪ್ರಕಾರ ಹಾಗೂ ಜಾಗತಿಕ ಆರ್ಥಿಕ ತಜ್ಞರ ಪ್ರಕಾರ ಈಗ ಹೂಡಿಕೆಗೆ ಮುಂದಾಗುವುದು ಅಪಾಯಕರ. ಅದರ ಬದಲು ಸುರಕ್ಷಿತತೆಗೆ ಒತ್ತು ನೀಡಿ ಎಫ್‌.ಡಿಯಲ್ಲಿ ಹಣ ಹಾಕುವುದು ಸೇಫ್‌. ಈ ಸಮಯದಲ್ಲಿ ಪಾಲಿಸಬಹುದಾದ 4 ಆರ್ಥಿಕ ಸಲಹೆಗಳು ಹೀಗಿವೆ.

1. ಅಪಾಯದ ಬಗ್ಗೆ ಅರಿವಿರಲಿ, ಖರ್ಚಿನ ಮೇಲೆ ಹಿಡಿತವಿರಲಿ.

ನಮಗಿನ್ನೂ ಯುದ್ಧದ ಬಿಸಿ ತಟ್ಟಿದಂತಿಲ್ಲ. ಗ್ಯಾಸ್‌ ಸಪ್ಲೈಯಿಂದ ಹೋಟೆಲ್‌, ಆಟೋದವರಿಗೆ ಸಮಸ್ಯೆ ಆಗಿದೆಯಷ್ಟೇ ಅಂತ ಗ್ಯಾಸ್‌ ಬಳಕೆ ಕೊಂಚ ಕಡಿಮೆ ಮಾಡಿ ಇಂಡಕ್ಷನ್‌ ಸ್ಟೌ ತಂದಿಟ್ಟು ಆರಾಮವಾಗಿದ್ದೇವೆ. ಆದರೆ ನಾವು ಈಗ ಆರಾಮ ಇರುವಷ್ಟು ಪರಿಸ್ಥಿತಿ ತಿಳಿಯಾಗಿಲ್ಲ. ಇಂಧನದ ಕೊರತೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂಧನ ಆಧರಿತ ಇಂಡಸ್ಟ್ರಿಗಳ ವಹಿವಾಟು ಏಕಾಏಕಿ ಕುಸಿಯತೊಡಗಿದರೆ ಆರ್ಥಿಕತೆಗೆ ದೊಡ್ಡ ಪೆಟ್ಟು. ಹಣದುಬ್ಬರ ತಾರಕಕ್ಕೇರಿದಾಗ ಉದ್ಯೋಗ, ಜನಜೀವನ ಎಲ್ಲಾ ಕುಸಿಯತೊಡಗುತ್ತದೆ. ಹೀಗಾಗಿ ಅಗತ್ಯ ವಸ್ತುಗಳಿಗಷ್ಟೇ ಖರ್ಚು ಮಾಡಿ. ಉಳಿದ ಹಣವನ್ನು ಸೇವಿಂಗ್ಸ್‌ನಲ್ಲಿಡಿ.

2. ಹೂಡಿಕೆಗಿಂತ ಇರುವ ಹಣದ ಸುರಕ್ಷತೆಗೆ ಗಮನಕೊಡಿ

ಇಂಧನದ ವ್ಯತ್ಯಯದಿಂದ ನಿಧಾನಕ್ಕೆ ಸೌರಶಕ್ತಿ, ಪವನಶಕ್ತಿ, ಜಲಶಕ್ತಿಯತ್ತ ಹೆಚ್ಚೆಚ್ಚು ಪ್ರಯೋಗಗಳಾಗಿ ಪರ್ಯಾಯ ಇಂಧನಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಬಹುದು. ಹೂಡಿಕೆ ಮಾಡುವುದೇ ಆದಲ್ಲಿ ಇಂಥಾ ಕಡೆ ಎಚ್ಚರಿಕೆಯಿಂದ ಹೂಡಿಕೆ ಮಾಡಿ. ಅದಕ್ಕೂ ಮೊದಲು ಕೈಗೆ ತಕ್ಷಣಕ್ಕೆ ಸಿಗುವಂತೆ ಹಣದ ಲಭ್ಯತೆ ಇರಲಿ. ಏಕೆಂದರೆ ಯಾವ ಕ್ಷಣದಲ್ಲಾದರೂ ಇಂಡಸ್ಟ್ರಿಗಳು ಕುಸಿಯತೊಡಗಿದರೆ ಉದ್ಯೋಗಕ್ಕೆ ಗ್ಯಾರಂಟಿ ಇರೋದಿಲ್ಲ. ಹೀಗಾಗಿ ಸದ್ಯಕ್ಕೆ ಹೂಡಿಕೆಗಿಂತ ಎಫ್‌.ಡಿಯಲ್ಲಿ ಹಣವನ್ನು ಸುರಕ್ಷಿತವಾಗಿಡುವುದೇ ಉತ್ತಮ.

3. ಸಾಲದ ಹೊರೆ ಕಡಿಮೆ ಮಾಡಿ

ಹಣದುಬ್ಬರ ಉಂಟಾದಾಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತದೆ. ಆ ಹೊತ್ತಿಗೆ ಬ್ಯಾಂಕ್‌ಗಳೂ ಬಡ್ಡಿದರ ಏರಿಸುವ ಸಾಧ್ಯತೆ ಇದೆ. ಮೊದಲೇ ಕಂಗೆಟ್ಟ ಆರ್ಥಿಕತೆಯಲ್ಲಿ ಸಾಲ ತೀರಿಸಲು ಹೆಣಗಾಡಬೇಕಾಗಬಹುದು. ಇದರ ಬದಲು ಸಾಧ್ಯವಾದಷ್ಟು ಬೇಗ ಸಾಲ ತೀರಿಸುವ ಬಗ್ಗೆ ಯೋಚನೆ ಮಾಡುವುದು ಉತ್ತಮ.

ಇದನ್ನು ಓದಿ: ಮಾರುಕಟ್ಟೆ ಕುಸಿತದಲ್ಲಿದ್ದಾಗ ಎಸ್ಐಪಿ ತಡೆಹಿಡಿಯುವುದು ಹೂಡಿಕೆದಾರು ತೆಗೆದುಕೊಳ್ಳುವ ಅತ್ಯಂತ ಕಠಿಣ ನಿರ್ಧಾರ ಏಕೆ?

4. ಗಾಬರಿಬಿದ್ದು ಷೇರು ಮಾರಬೇಡಿ

ಯುದ್ಧದ ಕಾರಣ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಇಲ್ಲ. ಬಹು ದಿನಗಳಿಂದ ಇಳಿಮುಖವಾಗುತ್ತಲೇ ಇದೆ. ಹಾಗೆಂದು ಗಾಬರಿಬಿದ್ದು ಹಲವರು ಕಡಿಮೆ ಬೆಲೆಗೆ ಷೇರು ಮಾರಾಟ ಮಾಡಿ ನಷ್ಟ ಮಾಡಿಕೊಳ್ಳುವುದನ್ನು ಕಾಣಬಹುದು. ಆದರೆ ತಜ್ಞರ ಪ್ರಕಾರ ಕೊಂಚ ತಡೆಯಿರಿ. ಏಕಾಏಕಿ ಷೇರು ಮಾರಾಟ ಬೇಡ.

ಇದನ್ನೂ ಓದಿ: ಏಷ್ಯಾದಲ್ಲೇ ಬೆಂಗಳೂರಿಗೆ ಟಾಪ್ ಸ್ಥಾನ! ಸಿಲಿಕಾನ್ ಸಿಟಿ ನಂತ್ರದ ಸ್ಥಾನದಲ್ಲಿ ಮುಂಬೈ, ಚೆನ್ನೈ

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮಾರುಕಟ್ಟೆ ಕುಸಿತದಲ್ಲಿದ್ದಾಗ ಎಸ್ಐಪಿ ತಡೆಹಿಡಿಯುವುದು ಹೂಡಿಕೆದಾರು ತೆಗೆದುಕೊಳ್ಳುವ ಅತ್ಯಂತ ಕಠಿಣ ನಿರ್ಧಾರ ಏಕೆ?
ಬೆಂಗಳೂರಿನ ಐಟಿ ಹಬ್‌ಗೆ ಪ್ರಧಾನ ಕಚೇರಿ ಸ್ಥಳಾಂತರಿಸಿದ ಸ್ವಿಗ್ಗಿ: 4 ಮಹಡಿಯ ಪರಿಸರ ಸ್ನೇಹಿ ಕ್ಯಾಂಪಸ್‌ ವಿಶೇಷತೆಗಳಿವು