
ಕಾರ್ಪೋರೇಟ್ ಕೆಲಸ, ಸ್ಟಾರ್ಟ್ಅಪ್, ಟೆಕ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದುಡಿಯುವ ಲಕ್ಷಾಂತರ ಮಂದಿ ತಮ್ಮ ಕರಿಯರ್, ಟಾರ್ಗೆಟ್, ವೇತನ, ಕಮಿಟ್ಮೆಂಟ್ ಕಾರಣಗಳಿಂದ ರಜೆ ಪಡೆಯದೇ ದುಡಿಯುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ತಾವು ತಪ್ಪು ಮಾಡಿದ್ದೇವೆ ಎಂದು ಕಣ್ಣೀರಿಟ್ಟ ಹಲವು ಘಟನೆಗಳಿವೆ. ಇದೀಗ ಖ್ಯಾತ ಲಿಫ್ಟೋಪಿಯಾ ಸಾಫ್ಟ್ವೇರ್ ಕಂಪನಿಯ ಸಿಇಒ ತಾವು ಮಾಡಿದ ತಪ್ಪು ನಿರ್ಧಾರದ ಬಗ್ಗೆ ಕಣ್ಣೀರಿಟ್ಟಿದ್ದಾರೆ.
ರಾನ್ ಶ್ನೈನರ್ಮನ್ ಪ್ರತಿಷ್ಠಿತ ಕಂಪನಿಯ ಸಿಇಒ. ತಾವೇ ಹುಟ್ಟುಹಾಕಿದ ಕಂಪನಿಯನ್ನು ಸತತ ಪರಿಶ್ರಮಗಳ ಮೂಲಕ ಕಟ್ಟಿಬೆಳೆಸಿ ಅತೀ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ರಾನ್ ಹಾಕಿದ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲ ವರ್ಷಗಳ ಹಿಂದೆ ತಾವು ತೆಗೆದುಕೊಂಡ ತಪ್ಪು ನಿರ್ಧಾರವನ್ನು ಹೇಳಿ ಭಾವುಕರಾಗಿದ್ದಾರೆ.
ರಾನ್ ಸಾಫ್ಟ್ವೇರ್ ಕಂಪನಿಯನ್ನು ಹುಟ್ಟುಹಾಕಿ ಸತತ ಪರಿಶ್ರಮ ಪಟ್ಟಿದ್ದಾರೆ. ಆರಂಭಿಕ ದಿನಗಳಲ್ಲಿ ಬೆಳಗ್ಗೆ 7 ಗಂಟೆಗೆ ಕಚೇರಿಯಲ್ಲಿ ಹಾಜರಿರುತ್ತಿದ್ದರು. ರಾತ್ರಿಯಾದರೂ ಕೆಲಸ ಮುಗಿಯುತ್ತಿರಲಿಲ್ಲ. ಕಂಪನಿ ಕಟ್ಟಿ ಬೆಳೆಸಬೇಕಾದ ಜವಾಬ್ದಾರಿಯಿಂದ ತಾವು ಒಂದು ರೂಪಾಯಿ ವೇತನ ಪಡೆಯದೆ, ಕೆಲಸಗಾರರಿಗೆ ಹೂಡಿಕೆ ಮೊತ್ತದಲ್ಲಿ ವೇತನ ನೀಡಿದ್ದರು. ಬಾಡಿಗೆ ಮನೆಯಲ್ಲಿದ್ದುಕೊಂಡು ಈ ಕಂಪನಿ ಕಟ್ಟಿಬೆಳೆಸಿದ್ದರು. 2 ವರ್ಷಗಳ ಕಾಲ ಯಾವುದೇ ವೇತನ ಪಡೆಯಲು ಸಾಧ್ಯವಾಗಲಿಲ್ಲ. ಕಂಪನಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಂತೆ ಸಿಹಿ ಸುದ್ದಿಯೊಂದು ಬಂದಿದ್ದು. ಮಗಳ ಜನಿಸಿದ ಸುದ್ದಿ ಅತೀವ ಸಂತಸ ನೀಡಿತ್ತು. 2 ದಿನ ಮಾತ್ರ ರಜೆ ಹಾಕಿ ಪತ್ನಿ ಹಾಗೂ ಹಾಲುಗೆನ್ನೆಯ ಮಗಳ ಜೊತೆ ಕಳೆದಿದ್ದೆ. ಬಳಿಕ ತಕ್ಷಣವೇ ಕೆಲಸಕ್ಕೆ ಹಾಜರಾಗಿದ್ದೆ. ಕಂಪನಿ ಹುಟ್ಟು ಹಾಕಿ, ಕಂಪನಿ ಸಿಇಒ ಆಗಿ ನಾನು ಕಚೇರಿಗೆ ಬರದೇ ಇದ್ದರೆ ಕೆಲಸ ಹೇಗೆ ನಡೆಯುತ್ತದೆ ಎಂದು ದಿಢೀರ್ ಕೆಲಸಕ್ಕೆ ಹಾಜರಾಗಿದ್ದೆ. ಇದು ನಾನು ಮಾಡಿದ ತಪ್ಪು ಎಂದು ರಾನ್ ಹೇಳಿದ್ದಾರೆ.
ಮಗಳು ಜನಿಸಿದಾಗ ನಾನು ಕೇವಲ 2 ದಿನ ರಜೆ ಪಡೆದಿದ್ದೆ. ಕಂಪನಿ ಕೆಲಸ ಕಾರ್ಯಗಳಿಗೆ ನನ್ನ ಅವಶ್ಯಕತೆ ಅತೀಯಾಗಿದೆ. ನಾನು ಇದ್ದರೆ ಕೆಲಸ, ಕಂಪನಿ ಮುಂದೆ ಸಾಗಲಿದೆ ಎಂದು ಬೇಗನೆ ಮರಳಿದ್ದೆ. ಇದರಿಂದ ನನ್ನ ಮಗಳ ಆರಂಭಿಕ ದಿನಗಳನ್ನು ನಾನು ಕಳೆದುಕೊಂಡೆ. ಇದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಈ ನೋವು ನನ್ನನ್ನು ಕಾಡುತ್ತಿದೆ ಎಂದು ರಾನ್ ಹೇಳಿದ್ದಾರೆ.
ಕಂಪನಿ ಬೆಳೆದಿದೆ, ಹಣ ಸಂಪಾದಿಸಿದ್ದೇನೆ. ಕುಟುಂಬಕ್ಕೆ ಉತ್ತಮ ಜೀವನ, ಐಷಾರಾಮಿ ಜೀವನ ಕೊಟ್ಟ ಖುಷಿ ಇದೆ. ಆದರೆ ನನ್ನೊಳಗಿನ ನೋವು ಮಾತ್ರ ಮಾಸುತ್ತಿಲ್ಲ. ಕುಟುಂಬಕ್ಕೆ ಸಮಯ ನೀಡುವುದು ಅತ್ಯವಶ್ಯಕ. ಅದನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ ಎಂದು ರಾನ್ ಸಲಹೆ ನೀಡಿದ್ದಾರೆ. ಇದೇ ವೇಳೆ ಹಲವರು ಪರ ವಿರೋಧ ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕ ಕಂಪನಿಗಳು ರಜೆ ಪಡೆಯುವುದು ಅಪರಾಧ ರೀತಿ ನೋಡುತ್ತಾರೆ ಎಂದಿದ್ದಾರೆ. ಇತ್ತ ಸಿಇಒ ಆಗಿದ್ದ ಕಾರಣ ನೀವೆ ನಿರ್ಧರಿಸಿದ್ದೀರಿ. ಆದರೆ ಈಗಲೂ ಕೆಳಮಟ್ಟದ ಹಲವು ಉದ್ಯೋಗಿಗಳು 2 ರಜೆಗಾಗಿ ಪರದಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.