ಪೆಟ್ರೋಲ್ ರೇಟ್ ಇಳಿಸಲ್ಲ, ಜನರ ‘ಕೈ’ ಬಿಡಲ್ಲ: ಜೇಟ್ಲಿ!

By Web DeskFirst Published Sep 16, 2018, 8:21 AM IST
Highlights

ಹಣಕಾಸಿನ ಕೊರತೆ ಗುರಿಯನ್ನು ಶೇಕಡಾ 3.3 ಕ್ಕೆ! ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಹಿತಿ! ದೇಶದ ಆರ್ಥಿಕ ಸ್ಥಿತಿ ಬಗ್ಗೆ ಪ್ರಧಾನಿ ಮೋದಿ ತೃಪ್ತಿ! ಬೃಹತ್ ಆರ್ಥಿಕ ಶಕ್ತಿಯಾಗುವತ್ತ ಭಾರತದ ಹೆಜ್ಜೆ!ಇಂಧನ ತೆರಿಗೆ ಇಳಿಸಲು ಹಣಕಾಸು ಸಚಿವರ ನಕಾರ

ನವದೆಹಲಿ(ಸೆ.16): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಣಕಾಸಿನ ಕೊರತೆ ಗುರಿಯನ್ನು ಶೇಕಡಾ 3.3 ಕ್ಕೆ ಕಟ್ಟು ನಿಟ್ಟಾಗಿ ನಿಗದಿಪಡಿಸಿಕೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭರವಸೆ ನಿಡಿದ್ದಾರೆ.

ಈ ಕುರಿತು ಮಾತನಾಡಿರುವ ಜೇಟ್ಲಿ, ಪ್ರಧಾನಿ ಮೋದಿ ಹಣಕಾಸು ಸಚಿವಾಲಯದ ವಿವಿಧ ಇಲಾಖೆಗಳ ಪರಿಶೀಲನೆ ನಡೆಸಿ, ವಿಮರ್ಶಾ ವರದಿ ಪಡೆದುಕೊಂಡ ಬಳಿಕ ಆರ್ಥಿಕತೆಯ ಕುರಿತ ವಿಶಾಲವಾದ ನಿಯತಾಂಶಗಳ ಬಗೆಗೆ ತೃಪ್ತಿ ವ್ಯಕ್ತಪಡಿಸಿದರು ಎಂದು ಹೇಳಿದ್ದಾರೆ.

ಭಾರತ ಬೃಹತ್ ಆರ್ಥಿಕ ಶಕ್ತಿಯಾಗುವತ್ತ ಸಾಗಿದೆ ಎಂಬ ವಿಶ್ವಾಸ ಮೋದಿ ಅವರಲ್ಲಿದ್ದು, ಬಂಡವಾಳ ಹೂಡಿಕೆಯ ವೆಚ್ಚವನ್ನು ಹೆಚ್ಚಿಸುವುದಕ್ಕಾಗಿ, ಗರಿಷ್ಠ ಮಟ್ಟದ ಪ್ರಯತ್ನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾಗಿ ಜೇಟ್ಲಿ ತಿಳಿಸಿದರು.

ಈಗಾಗಲೇ ಸರ್ಕಾರ ನಾವು ಆಗಸ್ಟ್ 31 ರವರೆಗೆ ಶೇ.44 ರಷ್ಟು ಬಜೆಟ್ ಹಣವನ್ನು ವೆಚ್ಚ ಮಾಡಿದ್ದು, ಇದುವರೆಗೆ ಯಾವ ಕಡಿತಗಳಿಲ್ಲದೆ ಶೇ.100 ರಷ್ಟುಬಂಡವಾಳ ಹೂಡಿಕೆ ಸಾಧಿಸುವುದರ ಜೊತೆಗೆ ವರ್ಷವನ್ನು ಪೂರ್ಣಗೊಳಿಸಿದ್ದೇವೆ ಎಂದು ಜೇಟ್ಲಿ ಮಾಹಿತಿ ನೀಡಿದರು. 

ಹಣದುಬ್ಬರವು ನಿಯಂತ್ರಣದಲ್ಲಿದೆ ಎಂದಿರುವ ಸಚಿವರು ಈ ವರ್ಷದ ಆರಂಭದಲ್ಲಿ ಬಜೆಟ್ ನಲ್ಲಿ ಸೂಚಿಸಿರುವುದಕ್ಕಿಂತ ಹೆಚ್ಚಿನ ಬೆಳವಣಿಗೆ ದರವನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರ ವಿಶ್ವಾಸ ಹೊಂದಿದೆ ಎಂದರು.

ನರೇಂದ್ರ ಮೋದಿ ಸರ್ಕಾರದಿಂದ ಜಾರಿಯಾದ ಅಪನಗದೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ, ಕಪ್ಪು ಹಣ ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇದರಿಂದ ಅವಧಿಗೆ ಮುನ್ನವೇ ಫಲಿತಾಂಶ ಬರುತ್ತಿದೆ ಎಂದು ಹಣಕಾಸು ಸಚಿವರು ಸಂತಸ ವ್ಯಕ್ತಪಡಿಸಿದರು. 

ದೇಶದ ಬೆಳವಣಿಗೆಯ ದರ, ತೆರಿಗೆ ಸಂಗ್ರಹ, ಹಣಕಾಸಿನ ಕೊರತೆಯ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿದ್ದು, ಶೇ.3.3ರ ಪೂರೈಸಲು ಸಾಧ್ಯವಾಗಲಿದೆ ಎಂಬ ಭರವಸೆಯನ್ನು ಜೇಟ್ಲಿ ವ್ಯಕ್ತಪಡಿಸಿದರು. 

ಇಂಧನ ತೆರಿಗೆ ಇಳಿಕೆ ಇಲ್ಲ:
ಇದೇ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸುವುದಕ್ಕೆ ಸರ್ಕಾರ ಸಿದ್ದವಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. ಇಂಧನ ಬೆಲೆಗಳಲ್ಲಿ ಏರಿಕೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆದಿದ್ದರೂ, ಸಚಿವರು ಈ ಕುರಿತಂತೆ ಪ್ರತಿಕ್ರಯಿಸಲು ನಿರಾಕರಿಸಿದ್ದಾರೆ.

click me!