Electric Vehicle Plant: ಧಾರವಾಡದಲ್ಲಿ ಶೀಘ್ರ ಎಲೆಕ್ಟ್ರಿಕ್‌ ವಾಹನ ತಯಾರಿಕಾ ಘಟಕ ಸ್ಥಾಪನೆ..!

By Kannadaprabha NewsFirst Published Dec 19, 2021, 7:58 AM IST
Highlights

*  ಘಟಕಕ್ಕೆ 5 ಸಾವಿರ ಕೋಟಿ ಹೂಡಿಕೆ, ರಾಜೇಶ ಮೆಹ್ತಾ ಎಂಬವರಿಂದ ಸ್ಥಾಪನೆ
*  ರಾಯಪುರ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕಾ ಘಟಕ
*  2022ರ ಆರಂಭದಲ್ಲಿ ಘಟಕ ನಿರ್ಮಾಣ ಕಾಮಗಾರಿ ಆರಂಭದ ಸಾಧ್ಯತೆ
 

ಬಸವರಾಜ ಹಿರೇಮಠ

ಧಾರವಾಡ(ಡಿ.19):  ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲೆಕ್ಟ್ರಿಕ್‌ ವಾಹನ(Electric Vehicle) ಕ್ಷೇತ್ರದಲ್ಲಿ ಅಚ್ಚರಿಯ ಬೆಳವಣಿಗಳು ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಧಾರವಾಡದಲ್ಲಿ(Dharwad) ಈ ಮೊದಲೇ ನಿಗದಿಯಾಗಿದ್ದ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟನೆ ಸ್ಥಾಪನೆಗೆ ಮುಹೂರ್ತ ಕೂಡಿ ಬಂದಿದೆ.

ಬೆಂಗಳೂರು(Bengaluru) ಮೂಲದ ಶುಭಂ ಗೋಲ್ಡ್‌(Shubham Gold) ಮಾಲೀಕ ರಾಜೇಶ ಮೆಹ್ತಾ, 5 ಸಾವಿರ ಕೋಟಿ ಹೂಡಿಕೆ(Investment) ಮಾಡಿ ಇಲ್ಲಿನ ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ ಶುರು ಮಾಡಲು ಅಂತಿಮ ಸಿದ್ಧತೆಯಲ್ಲಿದ್ದಾರೆ. ಈ ಘಟಕದ ನಿರ್ಮಾಣಕ್ಕೆ 150 ಎಕರೆ ಜಮೀನು ಗುರುತಿಸಲಾಗಿದ್ದು, 2022ರ ಆರಂಭದಲ್ಲಿ ಘಟಕ ನಿರ್ಮಾಣ ಕಾಮಗಾರಿ ಸಹ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.

Electric Vehicle ಕಾರು ಸಾಲದಿಂದ ಆದಾಯ ತೆರಿಗೆ ಉಳಿಸಲು ಸಾಧ್ಯ, ಇಲ್ಲಿದೆ ಟಿಪ್ಸ್!

ಕಳೆದ ಎರಡು ವರ್ಷಗಳ ಹಿಂದೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದ ಜಗದೀಶ ಶೆಟ್ಟರ್‌(Jagadish Shettar) ಅವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕೈಗಾರಿಕಾ ಮೇಳದಲ್ಲಿ ಈ ಘಟಕ ಆರಂಭಿಸಲು ರಾಜೇಶ ಮೆಹ್ತಾ ಅವರು ರಾಜ್ಯ ಸರ್ಕಾರದ(Government of Karnataka) ಎದುರು ಪ್ರಸ್ತಾಪ ಮಾಡಿದ್ದರು. ಅಂತೆಯೇ ಇದೀಗ ಎಲ್ಲ ಸಿದ್ಧತೆಗಳೊಂದಿಗೆ ಘಟಕ ಸ್ಥಾಪನೆ ಸನ್ನಿಹಿತವಾಗಿದೆ. ಈ ಘಟಕದಲ್ಲಿ ಶೇ. 85ರಷ್ಟು ಸ್ಥಳೀಯರಿಗೆ ಉದ್ಯೋಗಾವಕಾಶ(Job) ಸೃಷ್ಟಿಮಾಡಬೇಕು ಎಂಬ ಚಿಂತನೆಯೂ ಇದೆ.

ಘಟಕ ಸ್ಥಾಪನೆ ಕುರಿತು ಮಾಹಿತಿ ನೀಡಿದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ(Murugesh Nirani), ತೈಲ ಬೆಲೆ ಏರಿಕೆಯಿಂದಾಗಿ ಪ್ರಸ್ತುತ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ(Electric Bikes) ಅಗತ್ಯತೆ ನಮ್ಮ ಸಮಾಜಕ್ಕಿದೆ. ಈಗಾಗಲೇ ಈ ಬಗ್ಗೆ ದೇಶಾದ್ಯಂತ ಅಚ್ಚರಿಯ ಬೆಳವಣಿಗೆ ಆಗುತ್ತಿದೆ. ಈ ಕ್ಷೇತ್ರದಲ್ಲಿ ಬೃಹತ್‌ ಅವಕಾಶಗಳು ತೆರೆಯಲಿದ್ದು, ಅವುಗಳನ್ನು ನಾವು ಬಳಸಿಕೊಳ್ಳಬೇಕಿದೆ. ಬರೀ ಧಾರವಾಡದ ರಾಯಾಪುರ ಮಾತ್ರವಲ್ಲದೇ ಎಲೆಕ್ಟ್ರಿಕ್‌ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳು ಬೆಂಗಳೂರಿನ ಬಿಡದಿ, ಕೋಲಾರ, ಹೊಸೂರಿನಲ್ಲೂ ಸ್ಥಾಪನೆಗೊಳ್ಳಲಿವೆ. ರಾಜ್ಯದಲ್ಲಿ ಬ್ಯಾಟರಿ ಚಾಲಿತ ವಾಹನಗಳ ಮಾರಾಟದಲ್ಲಿ ಶೇ. 31ರಷ್ಟು ಪ್ರಗತಿ ಕಂಡು ಬಂದಿರುವುದು ಸಂತಸದ ಸಂಗತಿ. ಇದನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ರಾಯಾಪುರ ಘಟಕಕ್ಕೆ ಮೊದಲು ಅನುಮೋದನೆ ನೀಡಲಾಗಿದೆ. ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ(Central Government) ಸಹ ಆರ್ಥಿಕ ನೆರವು ನೀಡುತ್ತಿದೆ ಎಂದು ಮಾಹಿತಿ ನೀಡಿದರು.

Electric Vehicle Sale: ವರ್ಷದಲ್ಲಿ 1.35 ಲಕ್ಷ ಇ-ಚಕ್ರ ವಾಹನ ದಾಖಲೆ ಮಾರಾಟ

ಈ ಹಿಂದೆ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ತಯಾರಿಕೆಯ ಹೀರೋ ಮೋಟಾರ್‌ ಕಂಪನಿ ಸ್ಥಾಪನೆ ಕೊನೆ ಕ್ಷಣದಲ್ಲಿ ಕೈ ಬಿಟ್ಟು ಹೋಗಿತ್ತು. ಇದರಿಂದ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಅವಕಾಶಗಳು ಕೈ ತಪ್ಪಿದ್ದವು. ಇದೀಗ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ ಬರುತ್ತಿದ್ದು ನಿರೀಕ್ಷೆಯಂತೆ ಶೇ. 85ರಷ್ಟು ಉದ್ಯೋಗಾವಕಾಶಗಳನ್ನು ಸ್ಥಳೀಯರಿಗೆ ನೀಡಬೇಕು ಎನ್ನುವುದು ಸ್ಥಳೀಯರ ಆಗ್ರಹ.

2019ರಲ್ಲಿಯೇ ಧಾರವಾಡದಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಸ್ಥಾಪನೆಯ ಘಟಕ ಕುರಿತು ಒಪ್ಪಂದವಾಗಿತ್ತು. ಕೋವಿಡ್‌(Covid19) ಕಾರಣದಿಂದ ವಿಳಂಬವಾಗಿದ್ದು ಇನ್ನೊಂದು ತಿಂಗಳಲ್ಲಿ ಈ ಕುರಿತು ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ. ಇದರೊಂದಿಗೆ ಮುಂಬೈ-ಬೆಂಗಳೂರು(Mumbai-Bengaluru) ಮಧ್ಯೆ ವಾಣಿಜ್ಯ ಕಾರಿಡಾರ್‌ ಸ್ಥಾಪಿಸುವ ಮೂಲಕ ಬೆಂಗಳೂರಿನಿಂದ ಕೈಗಾರಿಕಾ ಪ್ರದೇಶವನ್ನು ನಿಧಾನವಾಗಿ ರಾಜ್ಯದ ಧಾರವಾಡ ಸೇರಿದಂತೆ ಬೇರೆಡೆಯೂ ವಿಸ್ತರಿಸಲು ಯೋಜನೆ ರೂಪಿಸಲಾಗುತ್ತಿದೆ ಅಂತ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ. 
 

click me!