
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ 5 ವರ್ಷಗಳ ಹಿಂದೆ ಆರಂಭಿಸಿದ್ದ ಮಹತ್ವಾಕಾಂಕ್ಷಿ ಜನಧನ್ ಯೋಜನೆಯಡಿ ದೇಶದ ಜನಸಾಮಾನ್ಯರು ಇರಿಸಿದ ಠೇವಣಿಯ ಮೊತ್ತ ಒಂದು ಲಕ್ಷ ಕೋಟಿ ರು.ಗೆ ಸಮೀಪಿಸಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ಏ.3ಕ್ಕೆ ಜನಧನ್ ಖಾತೆಗಳಲ್ಲಿ ಒಟ್ಟು 97,665.66 ಕೋಟಿ ರು. ಠೇವಣಿ ಇತ್ತು. ಶೀಘ್ರದಲ್ಲೇ ಇದು ಲಕ್ಷ ಕೋಟಿ ರು.ಗೆ ತಲುಪುವ ಸಾಧ್ಯತೆಯಿದೆ.
ದೇಶದಲ್ಲೀಗ 35.39 ಕೋಟಿ ಜನಧನ್ ಖಾತೆಗಳಿವೆ. ಖಾತೆದಾರರಲ್ಲಿ ಶೇ.50ರಷ್ಟುಜನರು ಮಹಿಳೆಯರು ಎಂಬುದು ವಿಶೇಷ. ಗ್ರಾಮೀಣ ಹಾಗೂ ಅರೆ-ಪಟ್ಟಣ ಭಾಗದಲ್ಲೇ ಶೇ.59ರಷ್ಟುಖಾತೆಗಳು ತೆರೆಯಲ್ಪಟ್ಟಿವೆ. 27.89 ಕೋಟಿ ಖಾತೆದಾರರಿಗೆ ರುಪೇ ಡೆಬಿಟ್ ಕಾರ್ಡ್ ವಿತರಿಸಲಾಗಿದೆ. 2018ರ ಆಗಸ್ಟ್ 28ರ ನಂತರ ಖಾತೆ ತೆರೆದವರಿಗೆ 2 ಲಕ್ಷ ರು.ವರೆಗೆ ಅಪಘಾತ ವಿಮೆ ನೀಡಲಾಗುತ್ತಿದೆ ಹಾಗೂ ಓವರ್ಡ್ರಾಫ್ಟ್ ಮಿತಿಯನ್ನು 10000 ರು.ಗೆ ಏರಿಸಲಾಗಿದೆ. ಹೀಗಾಗಿ ಜನಧನ್ ಖಾತೆಗೆ ಬೇಡಿಕೆ ಹೆಚ್ಚಿದೆ. ಅದಕ್ಕೂ ಮುನ್ನ ಖಾತೆ ತೆರೆದವರಿಗೆ 1 ಲಕ್ಷ ರು. ಅಪಘಾತ ವಿಮೆ ಹಾಗೂ 5000 ರು. ಓವರ್ಡ್ರಾಫ್ಟ್ ಮಿತಿಯಿದೆ.
2014ರ ಆಗಸ್ಟ್ 28ರಂದು ಕೇಂದ್ರ ಸರ್ಕಾರ ದೇಶದ ಎಲ್ಲರಿಗೂ ಬ್ಯಾಂಕಿಂಗ್ ಸೌಲಭ್ಯ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಜನಧನ್ ಯೋಜನೆ ಆರಂಭಿಸಿತ್ತು. ಆರಂಭದಲ್ಲಿ ‘ಎಲ್ಲ ಮನೆಗೂ ಬ್ಯಾಂಕ್ ಖಾತೆ’ ಎಂಬ ಉದ್ದೇಶದಡಿ ಈ ಯೋಜನೆ ಜಾರಿಗೊಳಿಸಲಾಗುತ್ತಿತ್ತು. ನಂತರ ‘ಪ್ರತಿಯೊಬ್ಬ ವಯಸ್ಕನಿಗೂ ಬ್ಯಾಂಕ್ ಖಾತೆ’ ಎಂದು ಯೋಜನೆಯ ಗುರಿಯನ್ನು ಬದಲಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.