ಅಡುಗೆ ಮನೆಗೆ ತಟ್ಟಿದ ಇರಾನ್‌ ಯುದ್ಧದ ಬಿಸಿ: ಯುಗಾದಿ, ರಂಜಾನ್‌ಗೆ ಕೆಲವೇ ದಿನ ಇರೋವಾಗ ಎಣ್ಣೆ ಬೆಲೆಯಲ್ಲಿ ಭಾರೀ ಏರಿಕೆ!

Published : Mar 05, 2026, 12:53 PM IST
Cooking Oil Usage

ಸಾರಾಂಶ

ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ಬೆಂಗಳೂರಿನಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ಯುಗಾದಿ ಮತ್ತು ರಂಜಾನ್ ಹಬ್ಬದ ಹೊಸ್ತಿಲಲ್ಲಿ, ಗೋಲ್ಡ್ ವಿನ್ನರ್, ಸನ್‌ಪ್ಯೂರ್‌ನಂತಹ ಪ್ರಮುಖ ಬ್ರ್ಯಾಂಡ್‌ಗಳ ಬೆಲೆ ಲೀಟರ್‌ಗೆ ₹4-₹5 ರಷ್ಟು ಹೆಚ್ಚಾಗಿದೆ.

ಬೆಂಗಳೂರು (ಮಾ.5): ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ನೇರ ಪರಿಣಾಮ ಈಗ ಸಿಲಿಕಾನ್ ಸಿಟಿಯ ಅಡುಗೆ ಮನೆಗಳ ಮೇಲೆ ಬೀರಿದೆ. ಯಾವುದೇ ಸದ್ದಿಲ್ಲದೆ ಕಳೆದ ಒಂದು ವಾರದಿಂದ ಅಡುಗೆ ಎಣ್ಣೆಯ ಬೆಲೆ ಏರುತ್ತಲೇ ಸಾಗಿದೆ. ಹಿಂದುಗಳ ಯುಗಾದಿ ಹಬ್ಬ ಹಾಗೂ ಮುಸ್ಲಿಮರ ರಂಜಾನ್‌ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಇರುವಾಗ ಅಡುಗೆ ಎಣ್ಣೆ ಬೆಲೆಯಲ್ಲಿ ಆಗಿರುವ ಭಾರೀ ಏರಿಕೆ, ಸಾಮಾನ್ಯ ಜನರ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರೋದು ಗ್ಯಾರಂಟಿಯಾಗಿದೆ.

ಬ್ರ್ಯಾಂಡ್ ವಿಚಾರವಾಗಿ ಬೆಲೆ ಏರಿಕೆ ವಿವರ

ಕಳೆದ ವಾರಕ್ಕೆ ಹೋಲಿಸಿದರೆ ಪ್ರಮುಖ ಬ್ರ್ಯಾಂಡ್‌ಗಳ ಎಣ್ಣೆ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ₹4 ರಿಂದ ₹5 ರಷ್ಟು ಏರಿಕೆಯಾಗಿದೆ. ಮಾರುಕಟ್ಟೆಯ ಮೂಲಗಳ ಪ್ರಕಾರ, ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಪರಿಸ್ಥಿತಿ ತಿಳಿಯಾಗದಿದ್ದರೆ, ಮುಂದಿನ ವಾರದಲ್ಲಿ ಬೆಲೆಗಳು ಲೀಟರ್‌ಗೆ ಅಂದಾಜು ₹10 ರಿಂದ ₹15 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಪ್ರಮುಖ ಬ್ರ್ಯಾಂಡ್‌ಗಳ ಇಂದಿನ ದರ ಹೀಗಿದೆ

ಗೋಲ್ಡ್ ವಿನ್ನರ್ (Gold Winner): ಜನಪ್ರಿಯ ಅಡುಗೆ ಎಣ್ಣೆ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಗೋಲ್ಡ್‌ವಿನ್ನರ್‌ಗೆ ಕಳೆದ ವಾರ ಒಂದು ಲೀಟರ್‌ಗೆ 161 ರೂಪಾಯಿ ಬೆಲೆಯಿತ್ತು. ಈಗ ಅದರ ಬೆಲೆ 165 ರೂಪಾಯಿಗೆ ಏರಿದೆ.

ಸನ್‌ಪ್ಯೂರ್ (Sunpure): ಇನ್ನೊಂದು ಪ್ರಮುಖ ಬ್ರ್ಯಾಂಡ್‌ ಆಗಿರುವ ಸನ್‌ಪ್ಯೂರ್‌ನ ಒಂದು ಲೀಟರ್‌ ಎಣ್ಣೆಯಲ್ಲೂ ಇದೇ ರೀತಿ ಏರಿಕೆಯಾಗಿದೆ. ₹161 ರಿಂದ ಈ ವಾರ ₹165 ಕ್ಕೆ ತಲುಪಿದೆ.

ಫಾರ್ಚೂನ್ (Fortune): ಜನರ ಪಾಲಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿದ್ದ ಫಾರ್ಚೂನ್‌ ಎಣ್ಣೆ ಬೆಲೆಯಲ್ಲೂ ಏರಿಕೆ ಆಗಿದೆ. ₹152 ಇದ್ದ ಬೆಲೆ ಈಗ ₹157 ಕ್ಕೆ ಏರಿಕೆಯಾಗಿದೆ.

ಇವುಗಳಲ್ಲದೆ ಮಾರುಕಟ್ಟೆಯಲ್ಲಿರುವ ಇತರ ಪ್ರಮುಖ ಬ್ರ್ಯಾಂಡ್‌ಗಳ ಬೆಲೆಯಲ್ಲೂ ಸರಾಸರಿ ₹4 ರಿಂದ ₹5 ರಷ್ಟು ಏರಿಕೆ ದಾಖಲಾಗಿದೆ.

ಯುದ್ಧದ ನೆಪದಲ್ಲಿ ವರ್ತಕರ ಲಾಭಕೋರತನ?

ಬೆಲೆ ಏರಿಕೆಗೆ ಯುದ್ಧವೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದ್ದರೂ, ವರ್ತಕರ ಮೇಲೆ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಮಾರುಕಟ್ಟೆಯ ಮಾಹಿತಿ ಪ್ರಕಾರ, ಸದ್ಯ ಗೋದಾಮುಗಳಲ್ಲಿ ಕನಿಷ್ಠ ಒಂದು ತಿಂಗಳಿಗೆ ಆಗುವಷ್ಟು ಅಡುಗೆ ಎಣ್ಣೆಯ ದಾಸ್ತಾನು ಲಭ್ಯವಿದೆ. ಹೀಗೆ ಸಾಕಷ್ಟು ಪ್ರಮಾಣದ ಎಣ್ಣೆ ದಾಸ್ತಾನು ಇದ್ದರೂ ಸಹ, ಕೆಲವು ವರ್ತಕರು ಯುದ್ಧದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೃತಕವಾಗಿ ಬೆಲೆ ಏರಿಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎನ್ನುವ ಮಾತೂ ಕೇಳಿಬರುತ್ತಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬ್ಯಾಂಕ್ ಕೆಲಸ ಇದೆಯಾ? ಹಾಗಾದ್ರೆ ತಕ್ಷಣ ಈ ಸ್ಟೋರಿ ಓದಿ! ಮಾರ್ಚ್- 2026ರಲ್ಲಿ ಬ್ಯಾಂಕ್‌ಗಳಿಗೆ ಭರ್ಜರಿ ರಜೆ ಇದೆ, ಹುಶಾರು!
ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಮತ್ತೆ ಮಹಾ ಕುಸಿತ! ಇವತ್ತಿನ ಗೋಲ್ಡ್ ರೇಟ್ ಎಷ್ಟು?