
ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹಬ್ಬದ ಸೀಸನ್ ಮುನ್ನ ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಉದ್ದೇಶದಿಂದ ಆಗಸ್ಟ್ 1, 2026 ರಂದು (ಇಂದು) ತೆರಿಗೆ ಹಂಚಿಕೆಯ (Tax Devolution) ಹೆಚ್ಚುವರಿ ಕಂತಾಗಿ ಬರೋಬ್ಬರಿ 1,09,019 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ವಿಶೇಷವೆಂದರೆ ಆಗಸ್ಟ್ 10, 2026 ರಂದು ಬಿಡುಗಡೆಯಾಗಬೇಕಿದ್ದ ನಿಯಮಿತ ಮಾಸಿಕ ಕಂತಿನ ಹೊರತಾಗಿ, ಮುಂಗಡವಾಗಿ ಈ ಹೆಚ್ಚುವರಿ ಹಣವನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಈ ಬೃಹತ್ ಮೊತ್ತದಲ್ಲಿ ಕರ್ನಾಟಕದ ಪಾಲಿಗೆ 4,504 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಭಾರತ ಸರ್ಕಾರದ ಪ್ರಕಾರ, ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸುವ ಬದ್ಧತೆಯ ಅಡಿಯಲ್ಲಿ ಈ ಮುಂಗಡ ಕಂತನ್ನು ಬಿಡುಗಡೆ ಮಾಡಲಾಗಿದೆ. ಇದರ ಮುಖ್ಯ ಉದ್ದೇಶವೆಂದರೆ, ರಾಜ್ಯಗಳಲ್ಲಿನ ಬಂಡವಾಳ ವೆಚ್ಚ (Capital Expenditure) ಮತ್ತು ಅಭಿವೃದ್ಧಿ ಯೋಜನೆಗಳ ವೇಗವನ್ನು ಹೆಚ್ಚಿಸುವುದು. ಇದರಿಂದ ತಳಮಟ್ಟದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ವೇಗವಾಗಿ ನಡೆಯಲಿದೆ. ಜೊತೆಗೆ ಹಬ್ಬಗಳ ಸೀಸನ್ ಸಮೀಪಿಸುತ್ತಿರುವುದರಿಂದ, ರಾಜ್ಯಗಳಿಗೆ ತಮ್ಮ ಯೋಜನೆಗಳು ಮತ್ತು ಅಗತ್ಯ ವೆಚ್ಚಗಳನ್ನು ನಿರ್ವಹಿಸಲು ಈ ಹೆಚ್ಚುವರಿ ಫಂಡ್ ಬಹಳಷ್ಟು ಸಹಾಯ ಮಾಡಲಿದೆ.
ಹಣಕಾಸು ಸಚಿವಾಲಯದ ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರವು ಸಂಗ್ರಹಿಸುವ ಒಟ್ಟು ತೆರಿಗೆ ಆದಾಯದ ಶೇಕಡಾ 41% (41%) ರಷ್ಟು ಹಣವನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಈ ಮೊತ್ತವನ್ನು ಸಂಪೂರ್ಣ ಆರ್ಥಿಕ ವರ್ಷದಲ್ಲಿ ಒಟ್ಟು 14 ಕಂತುಗಳ ಮೂಲಕ ರಾಜ್ಯಗಳಿಗೆ ತಲುಪಿಸಲಾಗುತ್ತದೆ.
ಒಟ್ಟು 1.09 ಲಕ್ಷ ಕೋಟಿ ರೂ. ಅನುದಾನದಲ್ಲಿ ಉತ್ತರ ಪ್ರದೇಶ ಅತಿ ಹೆಚ್ಚು ಪಾಲು ಪಡೆದಿದ್ದರೆ, ಕರ್ನಾಟಕ 9ನೇ ಸ್ಥಾನದಲ್ಲಿದೆ. ರಾಜ್ಯವಾರು ಹಂಚಿಕೆಯ ವಿವರ ಈ ಕೆಳಗಿನಂತಿದೆ. (ಮೊತ್ತ ಕೋಟಿ ರೂ. ಗಳಲ್ಲಿ)
ಈ ಹೆಚ್ಚುವರಿ ಅನುದಾನದಿಂದ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ತಮ್ಮ ಆರ್ಥಿಕ ನಿರ್ವಹಣೆ ಮತ್ತು ಮೂಲಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆನೆಬಲ ಸಿಕ್ಕಂತಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.