
ಬೆಂಗಳೂರು: ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಇಚ್ಛಿಸುವ ಹಾಗೂ 'ಡೆಸ್ಟಿನೇಶನ್ ವೆಡ್ಡಿಂಗ್'ಗೆ ಜನಪ್ರಿಯವಾಗಿರುವ ಐತಿಹಾಸಿಕ ನಗರ ಉದಯಪುರಕ್ಕೆ ಭೇಟಿ ನೀಡಬೇಕು ಅಂದುಕೊಂಡಿರುವವರಿಗೆ ಒಂದು ಶುಭ ಸುದ್ದಿ ಇದೆ. ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ 'ಆಕಾಸಾ ಏರ್' ವಿಮಾನಯಾನ ಸಂಸ್ಥೆ ಇದೇ ಮೊದಲ ಬಾರಿಗೆ ರಾಜಸ್ಥಾನಕ್ಕೆ ಕಾಲಿಟ್ಟಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಮುಂಬೈನಿಂದ ಉದಯಪುರಕ್ಕೆ ನೇರ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಈ ವಿಮಾನಗಳು ಪ್ರತಿದಿನ ಕಾರ್ಯಾಚರಣೆ ನಡೆಸಲಿವೆ.
ಇದೇ ಅಕ್ಟೋಬರ್ 15, 2026 ರಿಂದ ಈ ಹೊಸ ಮಾರ್ಗದಲ್ಲಿ ವಿಮಾನಗಳ ಹಾರಾಟ ಶುರುವಾಗಲಿದೆ. ಈ ವಿಮಾನಗಳ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಆಸಕ್ತರು ಆಕಾಸಾ ಏರ್ನ ಅಧಿಕೃತ ವೆಬ್ಸೈಟ್, ಮೊಬೈಲ್ ಆ್ಯಪ್ ಅಥವಾ ಪ್ರಮುಖ ಆನ್ಲೈನ್ ಟ್ರಾವೆಲ್ ಏಜೆನ್ಸಿಗಳ ಟಿಕೆಟ್ ಅನ್ನು ಕಾಯ್ದಿರಿಸಬಹುದು.
ರಾಜಸ್ಥಾನದ ಲೇಕ್ ಸಿಟಿ ಉದಯಪುರವು ಭಾರತದ ಪ್ರೀಮಿಯಂ ಪ್ರವಾಸೋದ್ಯಮ, ಅದ್ದೂರಿ ವಿವಾಹಗಳು ಮತ್ತು ಸಾಂಸ್ಕೃತಿಕ ಪ್ರಯಾಣದ ಪ್ರಮುಖ ಕೇಂದ್ರವಾಗಿದೆ. ಮಹಾನಗರಗಳಿಂದ ಈ ತಾಣಕ್ಕೆ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಆಕಾಸಾ ಏರ್ ಈ ಹೊಸ ಮಾರ್ಗವನ್ನು ಪರಿಚಯಿಸಿದೆ.
ಈ ಬಗ್ಗೆ ವಿವರ ಹಂಚಿಕೊಂಡಿರುವ ಆಕಾಸಾ ಏರ್ನ ಸಹ-ಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್, "ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಉದಯಪುರಕ್ಕೆ ವಿಮಾನ ಸೇವೆ ಆರಂಭಿಸಲು ಅತೀವ ಸಂತೋಷವಾಗುತ್ತಿದೆ. ಬೆಂಗಳೂರು ಮತ್ತು ಮುಂಬೈನ ಗ್ರಾಹಕರು ಈಗ ದೇಶದ ಅತ್ಯಂತ ಸುಂದರ ತಾಣವೊಂದಕ್ಕೆ ಸುಲಭವಾಗಿ ಹಾಗೂ ಅನುಕೂಲಕರವಾಗಿ ಪ್ರಯಾಣಿಸಬಹುದು," ಎಂದಿರುವ ಅವರು, ಗ್ರಾಹಕ-ಸ್ನೇಹಿ ಜಾಲವನ್ನು ನಿರ್ಮಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದಿದ್ದಾರೆ.
ವಿನೂತನ ಹಾಗೂ ಪ್ರಯಾಣಿಕ-ಸ್ನೇಹಿ ಸೇವೆಗಳಿಗೆ ಹೆಸರುವಾಸಿಯಾಗಿರುವ ಆಕಾಸಾ ಏರ್ನ ವಿಮಾನಗಳಲ್ಲಿ ವಿಶಾಲವಾದ ಲೆಗ್ರೂಮ್ (ಕಾಲು ಚಾಚಲು ಜಾಗ) ಇದ್ದು, ಪ್ರಯಾಣದ ವೇಳೆ ಮೊಬೈಲ್/ಲ್ಯಾಪ್ಟಾಪ್ ಚಾರ್ಜ್ ಮಾಡಲು ಹೆಚ್ಚಿನ ಸೀಟ್ಗಳಲ್ಲಿ ಯುಎಸ್ಬಿ ಪೋರ್ಟ್ಗಳೂ ಇವೆ.
ತನ್ನ 'ಕೆಫೆ ಆಕಾಸಾ' ಮೂಲಕ ರುಚಿಕರವಾದ ಹಾಗೂ ಆರೋಗ್ಯಕರ ಊಟ, ಹಬ್ಬದ ವಿಶೇಷ ಮೆನುಗಳು ಮತ್ತು 'ಕೊಂಬುಚಾ'ದಂತಹ ವಿಶೇಷ ಪಾನೀಯಗಳನ್ನೂ ಪ್ರಯಾಣಿಕರಿಗೆ ಆಕಾಶದಲ್ಲೇ ಸವಿಯುವ ಅವಕಾಶ ಕಲ್ಪಿಸಿದೆ. ಇದರ ಜೊತೆ ಜೊತೆಗೆ 25ಕ್ಕೂ ಹೆಚ್ಚು ಕಸ್ಟಮೈಸ್ಡ್ ಸೇವೆಗಳನ್ನು ಸಹ ಪ್ರಯಾಣಿಕರು ಪಡೆಯಬಹುದು.
ಆಕಾಸಾ ಏರ್ ಬೆಂಗಳೂರು, ದೆಹಲಿ, ಅಯೋಧ್ಯೆ ಸೇರಿದಂತೆ ಭಾರತದ 28 ನಗರಗಳು ಹಾಗೂ ದೋಹಾ, ಅಬುಧಾಬಿ ಮುಂತಾದ 7 ಅಂತಾರಾಷ್ಟ್ರೀಯ ತಾಣಗಳಿಗೆ ವಿಮಾನ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.