
ಸೋಲಾಪುರ್ (ಫೆ.06) ಬೆಂಗಳೂರು ಉದ್ಯಮಿ ಸಿಜೆ ರಾಯ್ ದುರಂತ ಅಂತ್ಯ ಹಲವರನ್ನು ಬೆಚ್ಚಿ ಬೀಳಿಸಿತ್ತು. ಎದೆಗೆ ಗುಂಡು ಹಾರಿಸಿಕೊಂಡು ಸಿಜೆ ರಾಯ್ ತಮ್ಮ ಕಚೇರಿಯಲ್ಲೇ ಸಾವೀಗೀಡಾಗಿದ್ದರು. ಈ ಘಟನೆ ಉದ್ಯಮ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಮತ್ತೊಬ್ಬ ಉದ್ಯಮಿ ದುರಂತ ಸಾವು ಕಂಡಿದ್ದಾರೆ. ಜನಪ್ರಿಯ ಮುಲ್ತಾನಿ ಬೇಕರಿ ಮಾಲೀಕ, ಶ್ರೀಮಂತ ಉದ್ಯಮಿ ಸುನಿಲ್ ಮೋತಿಲಾಲ್ ಸದರಂಗನಿ ಬದುಕು ಅಂತ್ಯಗೊಳಿಸಿದ್ದಾರೆ. ಸುನಿಲ್ ಮೋತಿಲಾಲ್ 17 ಮಹಡಿಯಿಂದ ಜಿಗುದು ಸಾವು ಕಂಡಿದ್ದಾರೆ. ಈ ಘಟನೆ ಮತ್ತೆ ಉದ್ಯಮ ಜಗತ್ತನ್ನು ಬೆಚ್ಚಿ ಬೀಳಿಸಿದೆ.
ಮಹಾರಾಷ್ಟ್ರದ ಸೋಲಾಪುರದ ಪನಾಶ್ ಅಪಾರ್ಟ್ಮೆಂಟ್ನ 17ನೇ ಮಹಡಿಯಿಂದ ಜಿಗಿದು ಬದುಕು ಅಂತ್ಯಗೊಳಿಸಿದ್ದಾರೆ. ಮಧ್ಯಾಹ್ನದ ಬಳಿಕ ಅಪಾರ್ಟ್ಮೆಂಟ್ಗೆ ಆಗಮಿಸಿದ ಸುನಿಲ್ ಮೋತಿಲಾಲ್ ತೀವ್ರವಾಗಿ ಮಾನಸಿಕ ಒತ್ತಡದಲ್ಲಿದ್ದರು ಎಂದು ಸ್ಥಳೀಯರು ಗಮನಿಸಿದ್ದಾರೆ. ಸಾಮಾನ್ಯವಾಗಿ ಲಿಫ್ಟ್ ಮೂಲಕ ತೆರಳುತ್ತಿದ್ದ ಸುನಿಲ್ ಮೋತಿಲಾಲ್, 17 ಮಹಡಿಯನ್ನು ಮೆಟ್ಟಿಲು ಮೂಲಕ ಹತ್ತಿದ್ದಾರೆ. 17ನೇ ಮಹಡಿ ತುದಿಯಲ್ಲಿ ನಿಂತ ಮುಲ್ತಾನಿ ಬೇಕರಿ ಮಾಲೀಕನ ಪರಿಸ್ಥಿತಿ ಕಂಡು ಆತಂಕಗೊಂಡ ಇತರ ನಿವಾಸಿಗಳು ತಕ್ಷಣವೇ ಸಕ್ಯೂರಿಟಿ ಗಾರ್ಡ್ಗೆ ಸೂಚನೆ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ ಸ್ಥಳಕ್ಕೆ ಧಾವಿಸಿದ್ದಾರೆ. 17ನೇ ಮಹಡಿ ಬಳಿಕ ತೆರಳಿದ ಸೆಕ್ಯೂರಿಟಿ ಗಾರ್ಡ್ ಕೈಮುಗಿದು ಬೇಡಿಕೊಂಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಸತತವಾಗಿ ಮಾತುಕತೆ ನಡೆಸಿ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುನಿಲ್ ಮೋತಿಲಾಲ್ ಮನ ಒಲಿಸಿದ ಸೆಕ್ಯೂರಿಟಿ ಗಾರ್ಡ್ ಯಶಸ್ವಿಯಾಗಿ ಉದ್ಯಮಿಯನ್ನು ಕೆಳಗೆ ಕರೆ ತರುವ ಪ್ರಯತ್ನ ಮಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ಗೆ ಭರವಸೆ ನೀಡಿದ ಉದ್ಯಮಿ, ತಾನು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ತೀವ್ರ ಒತ್ತಡದಲ್ಲಿ ತಾನು ನಿರ್ಧಾರ ಮಾಡಿದ್ದೆ. ಇದೀಗ ಬದಲಾಯಿಸಿದ್ದೇನೆ ಎಂದಿದ್ದಾರೆ. ಸುನಿಲ್ ಮೋತಿಲಾಲ್ ಮಾತು ನಂಬಿಸಿದ ಸೆಕ್ಯೂರಿಟಿ ಗಾರ್ಡ್ ನಿಟ್ಟುಸಿರು ಬಿಟ್ಟು ಮೂರು ಫ್ಲೋರ್ ಇಳಿಯುತ್ತಿದ್ದಂತೆ ತನ್ನ ಕೀ ಮೇಲಿದೆ ತರುತ್ತೇನೆ ಎಂದು ಉದ್ಯಮಿ ಹೇಳಿದ್ದಾರೆ. ಮತ್ತೆ ಮೇಲಕ್ಕೆ ತೆರಳಿದ ಉದ್ಯಮಿ ಹಿಂದಿನಿಂದಲೇ ಸೆಕ್ಯೂರಿಟಿ ಗಾರ್ಡ್ ಕೂಡ ತೆರಳಿದ್ದಾರೆ. ಆದರೆ ಒಂದು ಒಂದೇ ಸಮನೇ ಓಡಿದ ಉದ್ಯಮಿ ರೂಫ್ ಟಾಪ್ ಮೇಲಿಂದ ಕೆಳಕ್ಕೆ ಜಿಗಿದಿದ್ದಾರೆ.
ಬರೋಬ್ಬರಿ 17ನೇ ಮಹಡಿಯಿಂದ ಕೆಳಕ್ಕೆ ಜಿಗಿದ ಉದ್ಯಮಿ ಸುನಿಲ್ ಮೋತಿಲಾಲ್ ಸ್ಥಳಕ್ಕೆ ಮೃತಪಟ್ಟಿದ್ದಾರೆ. ಇತರ ಅಪಾರ್ಟ್ಮೆಂಟ್ ನಿವಾಸಿಗಳು ನೋಡ ನೋಡುತ್ತಿದ್ದಂತೆ ಈ ಘಟನೆ ನಡೆದಿದೆ. ಹೀಗಾಗಿ ಹಲವರು ಬೆಚ್ಚಿ ಬಿದಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ.ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಗಳ ಪರಿಶೀಲನೆ ಆರಂಭಿಸಿದ್ದಾರೆ.
59 ವರ್ಷದ ಉದ್ಯಮಿ ಸುನಿಲ್ ಮೋತಿಲಾಲ್ ಸಾವು ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿದೆ. ಮುಲ್ತಾನಿ ಬೇಕರಿ ಅತ್ಯಂತ ಜನಪ್ರಿಯ ಬೇಕರಿಯಾಗಿದ್ದು, ಉತ್ತಮ ಆದಾಯವೂ ಗಳಿಸುತ್ತಿತ್ತು. ಉದ್ಯಮವನ್ನು ಕಟ್ಟಿ ಬೆಳೆಸಿದ ಸುನಿಲ್ ಮೋತಿಲಾಲ್ ಸಾವು ಆತಂಕ ಹೆಚ್ಚಿಸಿದೆ. ಉದ್ಯಮಿಗಳು ಅತೀವ ಒತ್ತಡಲ್ಲಿ ಬದುಕು ಅಂತ್ಯಗೊಳಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ ಅನ್ನೋ ಚರ್ಚೆಗಳು ಆರಂಭಗೊಂಡಿದೆ.
ವಿಶೇಷ ಸೂಚನೆ: ಬದುಕು ಅಂತ್ಯಗೊಳಿಸುವುದು ಯಾವುದಕ್ಕೂ ಪರಿಹಾರವಲ್ಲ. ದುಡುಕಿನಿ ನಿರ್ಧಾರಕ್ಕೂ ಮೊದಲು ಮನೋ ತಜ್ಞರನ್ನು, ಆಪ್ತರನ್ನು ಸಂಪರ್ಕಿಸಿ. ಸಮಸ್ಯೆ ಹೇಳಿಕೊಳ್ಳಿ. ಯಾವುದೇ ಸಂದರ್ಭದಲ್ಲಿ ಉಚಿತ ಸಹಾಯವಾಣಿಗೆ ಕರೆ ಮಾಡಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.