ತಿಕ್ಕಾಟದ ನಡುವೆಯೂ ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ 600 ಕೋಟಿ ರು: ಇತರ ನೆರೆ ದೇಶಗಳಿಗೆ 22154 ಕೋಟಿ ರು. ಹಂಚಿಕೆ

By Kannadaprabha NewsFirst Published Feb 2, 2024, 9:24 AM IST
Highlights

2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ವಿದೇಶಾಂಗ ಸಚಿವಾಲಯಕ್ಕೆ 22154 ಕೋಟಿ ರು. ಹಂಚಿಕೆ ಮಾಡಲಾಗಿದೆ. ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೂ ನೆರೆಯ ದ್ವೀಪರಾಷ್ಟ್ರ ಮಾಲ್ಡೀವ್ಸ್‌ಗೆ 600 ಕೋಟಿ ರು. ನೀಡಲಾಗಿದೆ.

ನವದೆಹಲಿ: 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ವಿದೇಶಾಂಗ ಸಚಿವಾಲಯಕ್ಕೆ 22154 ಕೋಟಿ ರು. ಹಂಚಿಕೆ ಮಾಡಲಾಗಿದೆ. ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೂ ನೆರೆಯ ದ್ವೀಪರಾಷ್ಟ್ರ ಮಾಲ್ಡೀವ್ಸ್‌ಗೆ 600 ಕೋಟಿ ರು. ನೀಡಲಾಗಿದೆ. ನೆರೆಯ ದೇಶಗಳಿಗೆ ಆದ್ಯತೆ ಎಂಬ ಭಾರತದ ಧೋರಣೆಯ ಪ್ರಕಾರ ಹಿಮಾಲಯದ ತಪ್ಪಲಿನಲ್ಲಿರುವ ಭೂತಾನ್‌ಗೆ 2068 ಕೋಟಿ ರು. ನೀಡಲಾಗಿದೆ. 2023-24ರಲ್ಲಿ 2400 ಕೋಟಿ ರು. ನೀಡಲಾಗಿತ್ತು. ಭಾರತದ ಸಂಪರ್ಕವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಇರಾನ್‌ನ ಚಾಬಹಾರ್‌ ಬಂದರು ಅಭಿವೃದ್ಧಿಗೆ 100 ಕೋಟಿ ರು. ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜತಾಂತ್ರಿಕ ತಿಕ್ಕಾಟ ನಡೆದಿದ್ದರೂ ಸಹ ಮಾಲ್ಡೀವ್ಸ್‌ಗೆ 600 ಕೋಟಿ ರು. ನೀಡಲಾಗಿದೆ. ಕಳೆದ ವರ್ಷ 770 ಕೋಟಿ ರು. ನೀಡಲಾಗಿತ್ತು.

ಅಫ್ಘಾನಿಸ್ತಾನದೊಂದಿಗಿನ ಸಂಬಂಧವನ್ನು ಮುಂದುವರೆಸಿರುವ ಭಾರತ 200 ಕೋಟಿ ರು. ನೀಡಿದೆ. ಜೊತೆಗೆ ಬಾಂಗ್ಲಾದೇಶಕ್ಕೆ 120 ಕೋಟಿ ರು., ನೇಪಾಳಕ್ಕೆ 700 ಕೋಟಿ ರು. ನೀಡಲಾಗಿದೆ. ಶ್ರೀಲಂಕಾ 75 ಕೋಟಿ ರು., ಮಾರಿಷನ್ಸ್‌ 370 ಕೋಟಿ ರು., ಮ್ಯಾನ್ಮಾರ್‌ 250 ಕೋಟಿ ರು.ಗಳನ್ನು ಪಡೆದುಕೊಂಡಿವೆ. ಆಫ್ರಿಕಾ ಖಂಡದ ದೇಶಗಳಿಗಾಗಿ ಈ ವರ್ಷ 200 ಕೋಟಿ ರು. ಮೀಸಲಿಡಲಾಗಿದೆ. ಯುರೇಷಿಯಾ ಮತ್ತು ಲ್ಯಾಟಿನ್‌ ಅಮೆರಿಕ ದೇಶಗಳಿಗೆ 4883 ಕೋಟಿ ರು. ಹಂಚಿಕೆ ಮಾಡಲಾಗಿದೆ.

ಗರ್ಭಕಂಠದ ಕ್ಯಾನ್ಸರ್‌ ತಡೆ ಲಸಿಕೆಗೆ ಕೇಂದ್ರದ ಒತ್ತು: ಒಂದು ಡೋಸ್ ಲಸಿಕೆ ಎಷ್ಟು ದುಬಾರಿ?

ಮಾಲ್ಡೀವ್ಸ್‌ಗೆ ಸಡ್ಡು ಹೊಡೆಯಲು ಲಕ್ಷದ್ವೀಪ ಪ್ರವಾಸೋದ್ಯಮ ಅಭಿವೃದ್ಧಿ

ಚೀನಾ ಜೊತೆ ಸೇರಿಕೊಂಡು ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಯತ್ನ ಮಾಡುತ್ತಿರುವ ಮಾಲ್ಡೀವ್ಸ್‌ಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ, ಮಾಲ್ಡೀವ್ಸ್‌ ಅನ್ನೇ ಹೋಲುವ ಲಕ್ಷದ್ವೀಪ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿದೆ. ದೇಶೀಯ ಪ್ರವಾಸೋದ್ಯಮ ಕಡೆ ಹೆಚ್ಚುತ್ತಿರುವ ಜನರ ಆಶೋತ್ತರಗಳನ್ನು ಉತ್ತಮ ರೀತಿಯಲ್ಲಿ ಈಡೇರಿಸುವ ನಿಟ್ಟಿನಲ್ಲಿ ಲಕ್ಷದ್ವೀಪ ಸೇರಿದಂತೆ ದೇಶದ ಸುಂದರ ದ್ವೀಪಸಮೂಹಗಳನ್ನು ಪ್ರವಾಸೋದ್ಯಮ ಹೊಸ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಬದ್ಧ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ನಮ್ಮ ಆರ್ಥಿಕ ಪ್ರಗತಿಯು, ದೇಶವನ್ನು ಉದ್ಯಮ ಮತ್ತು ಕಾನ್ಫರೆನ್ಸ್‌ ಪ್ರವಾಸೋದ್ಯಮ ಹೊಸ ಆಕರ್ಷಣೆಯ ಕೇಂದ್ರವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ದೇಶದ ಮದ್ಯಮ ವರ್ಗದ ಜನತೆ ಕೂಡಾ ಪ್ರವಾಸ ಮತ್ತು ಸಂಶೋಧನೆಯತ್ತ ಚಿತ್ತ ಹರಿಸಿದ್ಧಾರೆ. ಅದರಲ್ಲೂ ಧಾರ್ಮಿಕ ಪ್ರವಾಸೋದ್ಯಮ ಸ್ಥಳೀಯರಿಗೆ ಉದ್ಯೋಗದ ಹೊಸ ಅವಕಾಶಗಳ ಬಾಗಿಲನ್ನೇ ತೆರೆಯಲಿದೆ.

ಕೇವಲ 59 ನಿಮಿಷದಲ್ಲಿ ಬಜೆಟ್‌ ಓದಿ ಮುಗಿಸಿದ ಸಚಿವೆ : ಸೂಟ್‌ಕೇಸ್‌ನಿಂದ ಟ್ಯಾಬ್ಲೆಟ್‌ವರೆಗೆ ಬದಲಾದ ಬಜೆಟ್ ಪ್ರತಿ

ಈ ನಿಟ್ಟಿನಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ, ಬ್ರ್ಯಾಂಡಿಂಗ್‌ ಮಾಡಲು ಮತ್ತು ಇವುಗಳ ಕುರಿತು ಪ್ರಚಾರ ಮಾಡಲು ರಾಜ್ಯಗಳನ್ನು ಉತ್ತೇಜಿಸಲಾಗುವುದು. ಇಂಥ ಯೋಜನೆಗಳನ್ನು ಕೈಗೊಳ್ಳಲು ಬಡ್ಡಿರಹಿತ ದೀರ್ಘಕಾಲೀನ ಸಾಲ ಸೌಲಭ್ಯ ಕಲ್ಪಿಸಲಾಗುವುದು ಇಂಥ ಪ್ರವಾಸಿ ಕೇಂದ್ರಗಳಿಗೆ ಅಲ್ಲಿನ ಗುಣಮಟ್ಟದ ಸೇವೆಗಳ ಆಧಾರದ ಮೇಲೆ ರೇಟಿಂಗ್‌ ನೀಡಲು ವ್ಯವಸ್ಥೆಯೊಂದನ್ನು ರೂಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಮಾಹಿತಿ ನೀಡಿದ್ದಾರೆ.

ಜೊತೆಗೆ ಜಿ20 ಒಕ್ಕೂಟಕ್ಕೆ ಭಾರತ ಅಧ್ಯಕ್ಷತೆ ವಹಿಸಿಕೊಂಡಿದ್ದ ವೇಳೆ, 60 ಸ್ಥಳಗಳಲ್ಲಿ ಒಕ್ಕೂಟದ ವಿವಿಧ ಸಭೆಗಳನ್ನು ಆಯೋಜಿಸಿದ್ದು ಭಾರತದ ವೈವಿಧ್ಯತೆಯನ್ನು ಜಗತ್ತಿನ ಮುಂದೆ ಪ್ರದರ್ಶಿಸಿದೆ ಎಂದು ಸರ್ಕಾರ ಹೇಳಿದೆ.


ಮಾಲ್ಡೀವ್ಸ್‌ಗೆ ಮೋದಿ ಸಡ್ಡು!

ಇತ್ತೀಚೆಗೆ ಮಾಲ್ಡೀವ್ಸ್‌ ಅಧ್ಯಕ್ಷರಾಗಿ ಆಯ್ಕೆಯಾದ ಮೊಹಮ್ಮದ್‌ ಮುಯಿಜು, ಪದೇ ಪದೇ ಭಾರತ ವಿರೋಧಿ ನಿಲುವು ಪ್ರದರ್ಶಿಸಿದ್ದೂ ಅಲ್ಲದೆ ಚೀನಾದ ಜೊತೆ ಕೈಜೋಡಿಸಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ದಿಢೀರನೆ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶೀಯ ಪ್ರವಾಸಿಗರು ಬೀಚ್‌ಗಳನ್ನು ಹುಡುಕಿ ವಿದೇಶಗಳಿಗೆ ಹೋಗುವ ಬದಲು ನಮ್ಮದೇ ಆದ ಲಕ್ಷದ್ವೀಪಕ್ಕೆ ಭೇಟಿ ಕೊಡಿ ಎಂದು ಕರೆಕೊಟ್ಟಿದ್ದರು. ಇದಾದ ಬಳಿಕ ಪ್ರವಾಸಕ್ಕೆ ಮಾಲ್ಡೀವ್ಸ್‌ನತ್ತ ಹೊರಟ ಭಾರತೀಯರು ಲಕ್ಷದ್ವೀಪದತ್ತ ಗಮನ ಹರಿಸಿದ್ದರು.

ಇದರ ಬೆನ್ನಲ್ಲೇ ಮೋದಿ ಹೇಳಿಕೆ ಬಗ್ಗೆ ಮಾಲ್ಡೀವ್ಸ್‌ನ ಕೆಲ ಸಂಸದರು ವ್ಯಂಗ್ಯವಾಡಿದ್ದರು. ತದನಂತರದಲ್ಲಿ ಜಾಲತಾಣಗಳಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಆರಂಭವಾಗಿತ್ತು. ಭಾರೀ ಪ್ರಮಾಣದಲ್ಲಿ ಭಾರತೀಯತು ತಮ್ಮ ಮಾಲ್ಡೀವ್ಸ್‌ ಪ್ರವಾಸ ರದ್ದುಗೊಳಿಸಿದ್ದರು. ಅದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಮಾಲ್ಡೀವ್ಸ್‌ ಅನ್ನು ಪ್ರವಾಸೋದ್ಯಮದ ಹೊಸ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ.

click me!