ರಾಜ್ಯದಲ್ಲಿ 17,800 ಕೋಟಿ ಹೂಡಿಕೆಗೆ ಅಸ್ತು: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Mar 9, 2024, 6:59 AM IST
Highlights

ಕರ್ನಾಟಕದ ವಿಜಯಪುರ, ಕಲಬುರಗಿ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಹೂಡಿಕೆ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ಅನುಮತಿ ದೊರೆತಿದೆ. ತನ್ಮೂಲಕ 10,433.72 ಕೋಟಿ ಮೊತ್ತದ ಬಂಡವಾಳ ಈ ಭಾಗದಲ್ಲಿ ಹೂಡಿಕೆಯಾಗಲಿದೆ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ 

ಬೆಂಗಳೂರು(ಮಾ.09):  ರಾಜ್ಯದಲ್ಲಿ 14  ಕಂಪನಿಗಳಿಂದ 17,836 ಕೋಟಿ ರು. ಬಂಡವಾಳ ಹೂಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರಾಜ್ಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಈ ಯೋಜನೆಗಳಿಂದ 27,067 ಹೊಸ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 63ನೇ ಸಭೆಯಲ್ಲಿ ನೂತನ ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ಸಿಕ್ಕಿದೆ.  ಈ ಪೈಕಿ ಆರು ಹೊಸ ಕಂಪನಿಗಳಿಂದ 8220.05 ಕೋಟಿ ರು. ಹೂಡಿಕೆ ಹಾಗೂ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಎಂಟು ಕಂಪನಿಗಳಿಂದ 9,615 ಕೋಟಿ ರು. ಹೂಡಿಕೆಗೆ ಸಮ್ಮತಿ ಸೂಚಿಸಲಾಗಿದೆ. 

ಅಡಕೆ ಬೆಳೆಗಾರರಿಗೆ ಶಾಕ್ : ಶ್ರೀಲಂಕಾದಿಂದ 5 ಲಕ್ಷ ಟನ್‌ ಆಮದಿಗೆ ಕಂಪನಿ ಒಪ್ಪಂದ

ಉತ್ತರ ಕರ್ನಾಟಕಕ್ಕೆ 10,433 ಕೋಟಿ ರೂ.

ಕರ್ನಾಟಕದ ವಿಜಯಪುರ, ಕಲಬುರಗಿ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಹೂಡಿಕೆ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ಅನುಮತಿ ದೊರೆತಿದೆ. ತನ್ಮೂಲಕ 10,433.72 ಕೋಟಿ ಮೊತ್ತದ ಬಂಡವಾಳ ಈ ಭಾಗದಲ್ಲಿ ಹೂಡಿಕೆಯಾಗಲಿದೆ ಎಂದು ಸಿದ್ದರಾಮಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಸ್ಟಾನ್ ಇನ್ಫೋಕಾಂ ಮ್ಯಾನುಫ್ಯಾಕ್ಟರಿಂಗ್ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 2095 ಕೋಟಿ ರು. ವೆಚ್ಚದಲ್ಲಿ ವಿಸ್ತರಿತ ಸ್ಟಾರ್ಟ್‌ ಫೋನ್ ತಯಾರಿಕಾ ಘಟಕ ಆರಂಭಿಸಲಿದೆ ಎಂದೂ ತಿಳಿಸಿದರು. 

ಹೊಸ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು: 

ರಾಜ್ಯದಲ್ಲಿ ಎಸ್‌ಟಿಟಿ ಗ್ಲೋಬಲ್‌ ಡೇಟಾ ಸೆಂಟರ್ಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇಂಡಿಯನ್ ಕೇನ್ ಪವರ್ ಲಿಮಿಟೆಡ್, ಐಸಿಟಿಸರ್ವಿಸ್ ಮ್ಯಾನೇಜ್ ಮೆಂಟ್ ಸಲ್ಯೂಷನ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಶ್ರೀ ಬಾಲಾಜಿ ಪುಗರ್ಸ್ ಮತ್ತು ಕೆಮಿಕಲ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸೇರಿ 8220.05  ಕೋಟಿ ರು. ಮೊತ್ತದ ಬಂಡವಾಳ ಹೂಡಿಕೆಗಳಿಗೆ  ಸಮಿತಿಯು ಒಪಿಗೆ ನೀಡಿದೆ.

ನವೋದ್ಯಮದಲ್ಲೂ ಭಾರತೀಯ ನಾರಿ ಸಕ್ಸಸ್; ದೇಶದ 8000 ಸ್ಟಾರ್ಟ್ ಅಪ್ ಗಳ ಮಾಲೀಕರು ಮಹಿಳೆಯರೇ!

ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು: 

ಇನ್ನು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಸಾಮರ್ಥ ವಿಸ್ತರಣೆ ಉದ್ದೇಶದ ಎಂಟು ಹೆಚ್ಚುವರಿ ಹೂಡಿಕೆಯ ಪ್ರಸ್ತಾವನೆಗಳಿಗೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.  ಬಂಡವಾಳ ಹೂಡಿಕೆ ಹೆಚ್ಚಳದ ಪ್ರಸ್ತಾವನೆಗಳಲ್ಲಿ ಅಲ್ಪಾಟೆಕ್ ಸಿಮೆಂಟ್ ಲಿಮಿಟೆಡ್, ಆರ್.ಬಿಎಸ್ಎಸ್ ಎನ್‌ಫೆರಸ್‌ ಇಂಡಸ್ಟರೀಸ್‌ ಲಿಮಿಟೆಟ್‌, ಎಂವಿ ಎನರ್ಜಿ ಪ್ರೈವೇಟ್ ಲಿಮಿಟೆಡ್ (ಈ ಹಿಂದಿನ ಎಂದೆ ಫೋಟೊ ವೋಲ್ಟಾಯಿಕ್ ಪವರ್‌ಪ್ರೈವೇಟ್ ಲಿಮಿಟೆಡ್), ಇಂಡಿಯನ್ ಕೇನ್ ಪವರ್‌ ಲಿಮಿಟೆಡ್ (ಅಳಗವಾಡಿ ಬೀರೇಶ್ವರ ಷುಗರ್ಸ್ ಘಟಕ ), ಗ್ರೀನ್ನೊ ಕೆಎಂ ಸೋಲಾರ್‌ಎನರ್ಜಿ ಪ್ರೈವೇಟ್ , ಎಲೆಕ್ನಿಕ್ ಐಟಿ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇರಿದೆ. ಇವುಗಳಿಂದ9 615 ಕೋಟಿರು. ಹೆಚ್ಚುವರಿ ಹೂಡಿಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್. ಅಭಿವೃದ್ಧಿ ಆಯುಕ್ತ ಡಾ.ಶಾಲಿನಿ ರಜನೀಶ್ ಸೇರಿ ಹಲವರು ಹಾಜರಿದ್ದರು. 

click me!