
ಮುಂಬೈ (ಅ.11):ಸ್ಕ್ಯಾಮ್ ವೆಬ್ ಸಿರೀಸ್ ನೋಡಿದ್ರೆ ಅದರಲ್ಲಿ ಹರ್ಷ್ ಮೆಹ್ತಾ ಪಾತ್ರಧಾರಿ ಹೇಳುವ ಫೇಮಸ್ ಡೈಲಾಗ್ ಒಂದಿದೆ. 'ರಿಸ್ಕ್ ಹೇ ಥೋ ಇಷ್ಕ್ ಹೇ..'. ಇದರರ್ಥ ಇಷ್ಟೇ. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳೋ ಧೈರ್ಯ ಇದ್ದರೆ, ಯಶಸ್ಸು ಅನ್ನೋದು ಖಂಡಿತಾ ಸಿಗುತ್ತದೆ. ಅದಕ್ಕೆ ಈಗ ಜೀವಂತ ಉದಾಹರಣೆ ಭಾರತದ ಪ್ರಸಿದ್ದ ಷೇರು ದಲ್ಲಾಳಿ ಮತ್ತು ಬ್ರೋಕರೇಜ್ ಕಂಪನಿ ಏಂಜಲ್ ಒನ್ನ ಮಾಲೀಕ ದಿನೇಶ್ ಠಕ್ಕರ್. ಕೇವಲ 12ನೇ ಕ್ಲಾಸ್ ಓದಿದ್ದ ದಿನೇಶ್ ಠಕ್ಕರ್ ಇಂದು ಕೋಟ್ಯಂತರ ರೂಪಾಯಿ ಮೌಲ್ಯದ ಕಂಪನಿ ಕಟ್ಟುವ ಮೂಲಕ ದೊಡ್ಡ ಕನಸು ಕಾಣುವ ಮಧ್ಯಮವರ್ಗದ ಜನರ ಪಾಲಿಗೆ ಸ್ಪೂರ್ತಿಯಾಗಿದ್ದಾರೆ.
ಕುಟುಂಬದ ಬಟ್ಟೆ ವ್ಯಾಪಾರ ಇಷ್ಟವಾಗ್ತಾ ಇರಲಿಲ್ಲ: ದಿನೇಶ್ ಠಕ್ಕರ್ ಅವರ ಕುಟುಂಬ ಹಾಗೂ ಅವರ ತಂದೆ ಮುಂಬೈನ ಮುಲುಂಡ್ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಕೆಲವು ವರ್ಷಗಳ ಕಾಲ ದಿನೇಶ್ ಇದೇ ವ್ಯಾಪಾರವನ್ನು ಮುಂದುವರಿಸಿದ್ದರು. ಆದರೆ, ಬಟ್ಟೆ ವ್ಯಾಪಾರದ ಬಗ್ಗೆ ದಿನೇಶ್ಗೆ ಒಂಚೂರು ಇಷ್ಟವಿರಲಿಲ್ಲ.
12ನೇ ಕ್ಲಾಸ್ ಓದಿದ ಬಳಿಕ ಫೈನಾನ್ಸ್ ಕ್ಷೇತ್ರಕ್ಕೆ ಪ್ರವೇಶ: 12ನೇ ಕ್ಲಾಸ್ನ ನಂತರ ದಿನೇಶ್ಗೆ ಓದು ಹತ್ತಲಿಲ್ಲ. ಆದರೆ, ಹಣ ಗಳಿಸಬೇಕು, ಶ್ರೀಮಂತನಾಗಬೇಕು ಎನ್ನುವ ಆಸೆ ಇತ್ತು. ಅವರಿಗೆ ಕುಟುಂಬದ ಬಟ್ಟೆ ವ್ಯಾಪಾರದಲ್ಲಿ ಆಸಕ್ತಿ ಇರಲಿಲ್ಲ. ಆದರೆ ವ್ಯಾಪಾರಸ್ಥ ಕುಟುಂಬದಲ್ಲಿ ಬೆಳೆದಿದ್ದರಿಂದ ವ್ಯಾಪಾರದ ಮೂಲ ತತ್ವಗಳು ಅವರಿಗೆ ತಿಳಿದಿದ್ದವು.
20ನೇ ವರ್ಷಕ್ಕೆ ಮಾರುಕಟ್ಟೆಗೆ ಎಂಟ್ರಿ: ದಿನೇಶ್ ಠಕ್ಕರ್ 20ನೇ ವಯಸ್ಸಿನಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶಿಸಿದರು. 90ರ ದಶಕದಲ್ಲಿ ಅವರು ಷೇರು ಮಾರುಕಟ್ಟೆಗೆ ಪ್ರವೇಶಿಸಿದಾಗ ಹರ್ಷದ್ ಮೆಹ್ತಾ ಹೆಸರು ಎಲ್ಲೆಡೆ ಪ್ರಸಿದ್ಧವಾಗಿತ್ತು. ದಿನೇಶ್ ಠಕ್ಕರ್ ಆರಂಭದಲ್ಲಿ 3 ಜನರೊಂದಿಗೆ ಕೆಲಸ ಆರಂಭಿಸಿದರು. ಆದರೆ, ಷೇರು ಮಾರುಕಟ್ಟೆಯಿಂದ ಅವರಿಗೆ ಲಾಭವಾಗಲಿಲ್ಲ, ಬದಲಿಗೆ ಮೊದಲು ನಷ್ಟದಲ್ಲೇ ದಿನ ಕಳೆಯಿತು.
1992ರ ಹರ್ಷದ್ ಮೆಹ್ತಾ ಹಗರಣದಿಂದ ದೊಡ್ಡ ನಷ್ಟ: 1992ರಲ್ಲಿ ಹರ್ಷದ್ ಮೆಹ್ತಾ ಹಗರಣದಿಂದ ಷೇರು ಮಾರುಕಟ್ಟೆ ಕುಸಿಯಿತು. ಇದರಿಂದ ದಿನೇಶ್ ಠಕ್ಕರ್ ಅವರಿಗೂ ದೊಡ್ಡ ನಷ್ಟವಾಯಿತು. ಹೇಗೋ ನಷ್ಟದಿಂದ ಹೊರಬಂದ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದರು. ಏಕೆಂದರೆ, ಉದಾರೀಕರಣದ ಆ ದಿನಗಳಲ್ಲಿ ಪ್ರೀಮಿಯಂ ಆಸ್ತಿಗಳಿಗೆ ಬೇಡಿಕೆ ಹೆಚ್ಚಿತ್ತು.
ಸ್ವತಃ ದಿನೇಶ್ ಠಕ್ಕರ್ ಹೇಳುವ ಪ್ರಕಾರ, ಷೇರು ಮಾರುಕಟ್ಟೆ ಹೊರಗಿನಿಂದ ನೋಡಲು ಸುಲಭ ಎನಿಸುತ್ತದೆ. ಆದರೆ ವಾಸ್ತವ ವಿಭಿನ್ನ. ಸರಿಯಾದ ತಂತ್ರ ಮತ್ತು ಮಾಹಿತಿ ಇಲ್ಲದೆ ಹೂಡಿಕೆ ಮಾಡಿದರೆ ನಷ್ಟ ಖಚಿತ ಎಂದು ಹೇಳುತ್ತಾರೆ.ನಾನು ಯೋಚಿಸದೆ ಹೂಡಿಕೆ ಮಾಡಿದ್ದರಿಂದ ನಷ್ಟವಾಯಿತು. ಕೆಲವು ಹಣವನ್ನು ಸಾಲ ಮಾಡಿ ಹೂಡಿಕೆ ಮಾಡಿದ್ದೆ. ಷೇರು ವ್ಯಾಪಾರ ಕಠಿಣ ಮತ್ತು ಪರಿಣತಿ ಇಲ್ಲದೆ ಮಾಡುವುದು ಅಪಾಯಕಾರಿ ಎಂದು ಆಗಲೇ ನನಗೆ ಅರಿವಾಯುತು. ಹಣ ಗಳಿಸಲು ವ್ಯಾಪಾರ ಸಾಧನಗಳನ್ನು ಬಳಸಬೇಕು ಎಂದು ಅರ್ಥವಾಯಿತು ಎನ್ನುತ್ತಾರೆ.
ನಿಮ್ಮ ಜೀವನದಲ್ಲಿ ಗೊತ್ತಿಲ್ಲದೆ ಈ 10 ಹಣಕಾಸು ತಪ್ಪು ಮಾಡಿದ್ದರೆ, ಬೇಗನೇ ಸರಿಪಡಿಸಿಕೊಳ್ಳಿ!
ಷೇರು ಮಾರುಕಟ್ಟೆಯ ಏರಿಳಿತಗಳನ್ನು ಅರ್ಥಮಾಡಿಕೊಳ್ಳಲು ಪುಸ್ತಕಗಳನ್ನು ಓದಲು ಆರಂಭಿಸಿದೆ. ಮಾರುಕಟ್ಟೆಯ ಮೂಲಭೂತ ಮತ್ತು ತಾಂತ್ರಿಕ ವಿಶ್ಲೇಷಣೆಯ ಬಗ್ಗೆ ತಜ್ಞರೊಂದಿಗೆ ಮಾತನಾಡಿದೆ. ಕ್ಷೇತ್ರದ ಬಗ್ಗೆ ತಿಳುವಳಿಕೆ ಬೆಳೆಸಿಕೊಂಡು ಹೂಡಿಕೆ ಮಾಡಲು ಆರಂಭಿಸಿದೆ. ನಂತರ ಉತ್ತಮ ಲಾಭ ಗಳಿಸಲು ಆರಂಭಿಸಿದೆ.
ಕೇವಲ 250 ರೂಪಾಯಿಗೆ ಕೆಲಸ ಮಾಡ್ತಿದ್ದ ಹುಡುಗ 25 ಸಾವಿರ ಕೋಟಿಗೆ ಒಡೆಯನಾಗಿದ್ದು ಹೇಗೆ?
3 ಜನರೊಂದಿಗೆ ಆರಂಭವಾದ ಕೆಲಸ ಈಗ ಸಾವಿರಾರು ಜನರ ಕಂಪನಿಯಾಗಿದೆ. ದಿನೇಶ್ ಠಕ್ಕರ್ ಅವರ ಬ್ರೂಕರೇಜ್ ಕಂಪನಿ ಏಂಜಲ್ ಒನ್ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲ್ಪಟ್ಟಿದೆ ಮತ್ತು ಪ್ರಸ್ತುತ ಅದರ ಮಾರುಕಟ್ಟೆ ಮೌಲ್ಯ 24 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.