
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಸತತ ತಮ್ಮ ಒಂಬತ್ತನೇ ಕೇಂದ್ರ ಬಜೆಟ್ ಭಾಷಣಕ್ಕಾಗಿ ಕೈಯಿಂದ ತಯಾರಿಸಿದ, ತಮಿಳುನಾಡಿನ ಕಾಂಚಿವರಂ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿಕೊಂಡರು. ಈ ಸೀರೆ ದಕ್ಷಿಣ ಭಾರತದ ಕರಕುಶಲತೆ ಮತ್ತು ಸಂಪ್ರದಾಯವನ್ನು ಗೌರವಿಸುವುದಲ್ಲದೆ, ದೇಶದ ಶ್ರೀಮಂತ ಕೈಮಗ್ಗ ಇತಿಹಾಸವನ್ನು ಎತ್ತಿ ತೋರಿಸುತ್ತದೆ. ವರ್ಷದಿಂದ ವರ್ಷಕ್ಕೆ, ಬಜೆಟ್ ದಿನದಂದು ನಿರ್ಮಲಾ ಸೀತಾರಾಮನ್ ಅವರ ಸೀರೆ ಆಯ್ಕೆಯು ಅವರ ಬಜೆಟ್ ಭಾಷಣದಷ್ಟೇ ಚರ್ಚೆಯ ವಿಷಯವಾಗಿದೆ. ಪ್ರತಿಯೊಂದು ಸೀರೆಯು ವಿಭಿನ್ನ ಪ್ರದೇಶದ ಸಾಂಸ್ಕೃತಿಕ ಗುರುತನ್ನು ಪ್ರತಿಬಿಂಬಿಸುವುದಲ್ಲದೆ, ಸ್ಥಳೀಯ ನೇಕಾರರು, ಕುಶಲಕರ್ಮಿಗಳು ಮತ್ತು ಭಾರತೀಯ ಜವಳಿ ಪರಂಪರೆಯನ್ನು ಆಚರಿಸುತ್ತದೆ.
ಅಂದಹಾಗೆ ನಿರ್ಮಲಾ ಸೀತಾರಾಮನ್ ಪ್ರತಿ ವರ್ಷ ಸೀರೆಯನ್ನು ಆಯ್ಕೆ ಮಾಡುವುದು ರಾಜಕೀಯ ವಿಶ್ಲೇಷಕರಿಗೆ ಸಹ ಮಹತ್ವದ್ದಾಗಿದೆ, ಅದೇಕೆಂದು ಮುಂದೆ ಓದಿ...ಅದಕ್ಕೂ ಮುನ್ನ ಯಾವ ವರ್ಷ ಯಾವ ಸೀರೆ ಧರಿಸಿದ್ದರು ನೋಡೋಣ..
2025: ಮಧುಬನಿ ಆರ್ಟ್ ಸೀರೆ (ಬಿಹಾರ)
2025 ರಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾದ ಬಿಳಿ ಕೈಮಗ್ಗ ರೇಷ್ಮೆ ಸೀರೆಯು ಮೀನು ಮತ್ತು ಕಮಲದಂತಹ ಮಧುಬನಿ ಕಲೆಯನ್ನು ಒಳಗೊಂಡಿತ್ತು. ಈ ಸೀರೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ ಉಡುಗೊರೆಯಾಗಿ ನೀಡಿದ್ದರು. ಈ ಸೀರೆಯನ್ನು ತಯಾರಿಸಲು ಒಂದು ತಿಂಗಳು ಬೇಕಾಯಿತು ಎಂದು ದೇವಿ ವಿವರಿಸಿದರು. ಸೀರೆಯ ಮೇಲೆ ಮಧುಬನಿಯ 'ಕಚ್ನಿ' (ರೇಖೆ ಚಿತ್ರಣ) ಮತ್ತು 'ಭರಣಿ' (ವರ್ಣರಂಜಿತ) ಶೈಲಿಗಳಿತ್ತು.
2024: ಮಂಗಳಗಿರಿ ಕೈಮಗ್ಗ ಸೀರೆ (ಆಂಧ್ರ ಪ್ರದೇಶ)
2024 ರಲ್ಲಿ ಹಣಕಾಸು ಸಚಿವರು ಪ್ರಕಾಶಮಾನವಾದ ಕೆನ್ನೇರಳೆ ಬಣ್ಣದ ಅಂಚು ಹೊಂದಿರುವ ಆಕರ್ಷಕವಾದ ಬಿಳಿ ಬಣ್ಣದ ಮಂಗಳಗಿರಿ ಸೀರೆಯನ್ನು ಆಯ್ಕೆ ಮಾಡಿಕೊಂಡರು. ಸೂಕ್ಷ್ಮವಾದ ಹತ್ತಿ ವಿನ್ಯಾಸ ಮತ್ತು ಸರಳವಾದ ಜರಿ ಅಂಚು ಆಂಧ್ರಪ್ರದೇಶದ ಕೈಮಗ್ಗ ಪರಂಪರೆಯನ್ನು ಪ್ರದರ್ಶಿಸುತ್ತದೆ.
2024: ಕಾಂತ ಹೊಲಿಗೆಯೊಂದಿಗೆ ಟಸ್ಸರ್ ರೇಷ್ಮೆ ಸೀರೆ (ಪಶ್ಚಿಮ ಬಂಗಾಳ)
ಮಧ್ಯಂತರ ಬಜೆಟ್ಗಾಗಿ ಅವರು ಕಾಂತ ಕಸೂತಿ ಹೊಂದಿರುವ ನೀಲಿ ಟಸ್ಸರ್ ರೇಷ್ಮೆ ಸೀರೆಯನ್ನು ಧರಿಸಿದ್ದರು. ಕೈಯಿಂದ ಮಾಡಿದ ಈ ದಾರದ ವರ್ಕ್ ಪಶ್ಚಿಮ ಬಂಗಾಳದಲ್ಲಿ ಪ್ರಧಾನವಾಗಿದೆ.
2023 ರಲ್ಲಿ, ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಧಾರವಾಡದ ಕೈಯಿಂದ ನೇಯ್ದ 'ಇಳ್ಕಲ್' ರೇಷ್ಮೆ ಅಂದರೆ ಸಾಂಪ್ರದಾಯಿಕ 'ಕಸೂತಿ' ಒಳಗೊಂಡ ಮರೂನ್ ರೇಷ್ಮೆ ಸೀರೆಯನ್ನ ಧರಿಸಿದ್ದರು. ಇದು ರಥ, ನವಿಲು ಮತ್ತು ಕಮಲದ ವಿನ್ಯಾಸಗಳನ್ನು ಒಳಗೊಂಡಿತ್ತು.
2022: ಬೊನ್ಮಕೈ ಸೀರೆ(ಒಡಿಶಾ)
2022 ರಲ್ಲಿ, ಅವರು ಗಂಜಾಂ ಜಿಲ್ಲೆಯ ತುಕ್ಕು-ಕಂದು ಬಣ್ಣದ ಬೊನ್ಮಕೈ ಸೀರೆಯನ್ನು ಧರಿಸಿದ್ದರು. ವಿಸ್ತಾರವಾದ ದಾರ ಮತ್ತು ವಿಶಿಷ್ಟ ವಿನ್ಯಾಸದೊಂದಿಗೆ ಪೂರ್ವ ಭಾರತೀಯ ಕರಕುಶಲತೆಯನ್ನ ಪ್ರದರ್ಶಿಸಲಾಯ್ತು.
2021: ಪೋಚಂಪಲ್ಲಿ ಇಕಾಟ್ ಸೀರೆ(ತೆಲಂಗಾಣ)
2021 ರಲ್ಲಿ, ಹಣಕಾಸು ಸಚಿವರು ಕೆಂಪು ಮತ್ತು ಮಾಸಲು ಬಿಳಿ ಬಣ್ಣದ ಪೋಚಂಪಲ್ಲಿ ಇಕಾಟ್ ಸೀರೆಯನ್ನು ಆಯ್ಕೆ ಮಾಡಿಕೊಂಡರು. ಇದು ಜ್ಯಾಮಿತೀಯ ಮಾದರಿ ಮತ್ತು ರೆಸಿಸ್ಟ್-ಡೈಯಿಂಗ್ಗೆ ಹೆಸರುವಾಸಿಯಾಗಿದೆ.
2020: ಹಳದಿ ರೇಷ್ಮೆ ಸೇರೆ
ನೀಲಿ ಬಾರ್ಡರ್ ಹೊಂದಿರುವ ಹಳದಿ-ಚಿನ್ನದ ರೇಷ್ಮೆ ಸೀರೆಯು ಆಶಾವಾದಿ ಮತ್ತು ಸಕಾರಾತ್ಮಕ ಸಂದೇಶವನ್ನು ನೀಡಿತು.
2019: ಗುಲಾಬಿ ಬಣ್ಣದ ಮಂಗಳಗಿರಿ ಸೀರೆ (ಆಂಧ್ರ ಪ್ರದೇಶ)
ತಮ್ಮ ಮೊದಲ ಬಜೆಟ್ ಭಾಷಣದಲ್ಲಿ, ಅವರು ಗುಲಾಬಿ ಬಣ್ಣದ ಮಂಗಳಗಿರಿ ಸೀರೆ ಧರಿಸಿದ್ದರು ಮತ್ತು ವಸಾಹತುಶಾಹಿ ಬ್ರೀಫ್ಕೇಸ್ ಅನ್ನು ಸಾಂಪ್ರದಾಯಿಕ ಕೆಂಪು ಬಹಿ ಖಾತಾದಿಂದ ಬದಲಾಯಿಸಿದರು. ಇದು ಸಾಂಸ್ಕೃತಿಕ ಮತ್ತು ರಾಜಕೀಯ ಸಂಕೇತವಾಗಿದೆ.
ನಿರ್ಮಲಾ ಸೀತಾರಾಮನ್ ಪ್ರತಿ ವರ್ಷ ಸೀರೆಯನ್ನು ಆಯ್ಕೆ ಮಾಡುವುದು ರಾಜಕೀಯ ವಿಶ್ಲೇಷಕರಿಗೆ ಸಹ ಮಹತ್ವದ್ದಾಗಿದೆ. ಏಕೆಂದರೆ ಅದು ಆ ವರ್ಷದ ಬಿಜೆಪಿಯ ಚುನಾವಣಾ ಮತ್ತು ರಾಜಕೀಯ ಆದ್ಯತೆಗಳನ್ನು ಹೆಚ್ಚಾಗಿ ಸೂಚಿಸುತ್ತದೆ.