ಹಿರಿಯ ಪತ್ರಕರ್ತ, ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ಮಾಜಿ ಸಂಪಾದಕ, ಡಿಜಿಟಲ್ ಸುದಿ ಮಾಧ್ಯಮದ ದಿಗ್ಗಜ ಎಂದೇ ಗುರುತಿಸಿಕೊಂಡಿದ್ದ ಎಸ್ಕೆ ಶ್ಯಾಮ ಸುಂದರ್ ನಿಧನರಾಗಿದ್ದಾರೆ.
ಬೆಂಗಳೂರು(ಏ.14) ಕನ್ನಡ ಮಾಧ್ಯಮ ಲೋಕದ ಹಿರಿಯ ಪತ್ರಕರ್ತ, ಡಿಜಿಟಲ್ ಸುದ್ದಿ ಮಾಧ್ಯಮದ ದಿಗ್ಗಜ ಎಸ್ ಕೆ ಶ್ಯಾಮ ಸುಂದರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 72 ವರ್ಷದ ಶ್ಯಾಮ್ ಸುಂದರ್ ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ನ ಮಾಜಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಸರಿಸುಮಾರು 39 ವರ್ಷಗಳಿಗೂ ಅಧಿಕ ಅನುಭವ ಹೊಂದಿದ್ದ ಶ್ಯಾಮ್ ಸುಂದರ್ ಅಗಲಿಕೆಗೆ ಹಲವು ಹಿರಿಯ ಹಾಗೂ ಖ್ಯಾತ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲಿದ ಶ್ಯಾಮ್ ಸುಂದರ್ ಬೆಂಗಳೂರಿನ ದಿಗ್ವಿಶ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯ ಕ್ಷೀಣಿಸಿ ಕೋಮಾಗೆ ತಲುಪಿದ್ದರು. ನಿರಂತ ಚಿಕಿತ್ಸೆ ಬಳಿಕವೂ ಎಸ್ ಕೆ ಶ್ಯಾಮ ಸುಂದರ್ ಚೇತರಿಸಿಕೊಂಡಿರಲಿಲ್ಲ. ಚಿಕಿತ್ಸೆ ನಡುವೆ ಹೃದಯಾಘಾತದಿಂದ ಶ್ಯಾಮ್ ಸುಂದರ್ ಇಂದು ನಿಧನರಾಗಿದ್ದಾರೆ.
500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ
ಕನ್ನಡದಲ್ಲಿ ಡಿಜಿಟಲ್ ಮಾಧ್ಯಮ ಜಗತ್ತು ಕಣ್ಣು ಬಿಡುವ ವೇಳೆ ಶ್ಯಾಮ್ ಸುಂದರ್ ತಮ್ಮ ಅನುಭವ, ಹೊಸತನವನ್ನು ಸ್ವೀಕರಿಸುವ ಹಾಗೂ ಅದಕ್ಕೆ ಒಗ್ಗಿ ಕೊಳ್ಳುವ ವಿಶೇಷ ಗುಣಗಳಿಂದ ಡಿಜಿಟಲ್ ಮಾಧ್ಯಮದ ಹೆಮ್ಮರವಾಗಿ ಬೆಳೆದಿದ್ದರು. 2018ರಿಂದ 2022ರ ವರೆಗೆ ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ವಿಭಾಗದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 1991ರಿಂದ 2000ರ ವರೆಗೆ ಕನ್ನಡ ಪ್ರಭ ದಿನಪತ್ರಿಕೆಯ ಪುರವಣಿ ಸಂಪಾದಾಕರಾಗಿ ಸೇವೆ ಸಲ್ಲಿಸಿದ್ದಾರೆ. ಒನ್ ಇಂಡಿಯಾ ಕನ್ನಡ ಸುದ್ದಿ ಮಾಧ್ಯಮದ ಸಂಪಾದಕಾರಿಯೂ ಸೇವೆ ಸಲ್ಲಿಸಿದ್ದಾರೆ. ದಿನಪತ್ರಿಕೆಯಲ್ಲಿ ವರದಿಗಾರನಾಗಿ ಪತ್ರಿಕೋದ್ಯಮ ಆರಂಭಿಸಿದ ಶ್ಯಾಮ್ ಸುಂದರ್ ಬಳಿಕ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಸಂಪಾದಕರಾಗಿ ಬೆಳೆದಿದ್ದರು.
ಏಷ್ಯನ್ ಕಾಲೇಜು ಆಫ್ ಬೆಂಗಳೂರಿನಲ್ಲೂ ಕೆಲಸ ಮಾಡಿದ್ದಾರೆ. ಶ್ಯಾಮ್ ಸುಂದರ್ ಪದವಿ ಬಳಿಕ ನೇರವಾಗಿ ಪತ್ರಿಕೆ ಮೂಲಕ ಕೆಲಸ ಆರಂಭಿಸಿದ್ದರು. ಕನ್ನಡ ಸುದ್ದಿ ಮಾಧ್ಯಮ ಜಗತ್ತಿನಲ್ಲಿ ಶ್ಯಾಮ್ ಸುಂದರ್ ಅವರಿಗೆ ಅಪಾರ ಶಿಷ್ಯ ವರ್ಗವಿದೆ. ಕನ್ನಡ ಡಿಜಿಟಲ್ ಮಾಧ್ಯಮದಲ್ಲಿರುವ ಅನೇಕರು ಎಸ್ ಕೆ ಶ್ಯಾಮ್ ಸುಂದರ್ ಮಾರ್ಗದರ್ಶನದಲ್ಲಿ ಪಳಗಿದವರು.
2012-13ರ ಸಾಲಿನಲ್ಲಿ ಶ್ಯಾಮ್ ಸುಂದರ್ ಕರ್ನಾಟಕ ಮಾಧ್ಯಮ ಅಕಾಡಮೆ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದರ ಜೊತೆಗೆ ಹಲವು ಪ್ರಶಸ್ತಿಗಳು ಎಸ್ ಕೆ ಶ್ಯಾಮ್ ಸುಂದರ್ ಅವರನ್ನು ಅರಸಿ ಬಂದಿದೆ. ಸರಳ ವ್ಯಕ್ತಿತ್ವ, ಖಡಕ್ ಮಾತು, ಕೆಲಸದಲ್ಲಿ ಶ್ರದ್ಧೆ, ಡಿಜಿಟಲ್ ಮಾಧ್ಯಮದ ಎಲ್ಲಾ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ ಎಸ್ ಕೆ ಶ್ಯಾಮ್ ಸುಂದರ್ ಇನ್ನು ನೆನಪು ಮಾತ್ರ.
ಶ್ಯಾಮ್ ಸುಂದರ್ ನಿಧನಕ್ಕೆ ಹಲವು ಹಿರಿಯ ಪತ್ರಕರ್ತರು, ಸಂಪಾದಕರು ಸಂತಾಪ ಸೂಚಿಸಿದ್ದಾರೆ. ಕನ್ನಡ ಪ್ರಭ ಪುರವಣಿ ಸಂಪಾದಕ ಜೋಗಿ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಸೇರಿದಂತೆ ಹಲವರು ಅಗಲಿದ ಶ್ಯಾಮ್ ಸುಂದರ್ ಎಸ್ ಕೆ ಅವರಿಗೆ ಅಕ್ಷರ ನಮನದ ಮೂಲಕ ಸಂತಾಪ ಸೂಚಿಸಿದ್ದಾರೆ. ಬಹುಕಾಲದ ಸ್ನೇಹಿತ, ಸಹೋದ್ಯೋಗಿ, ಒಡನಾಡಿ, ಎಸ್.ಕೆ.ಶಾಮಸುಂದರ ಇಂದು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ನಾವಿಬ್ಬರೂ “ಸಂಯುಕ್ತ ಕರ್ನಾಟಕ” (ಆಗ ಅವರು ಕಸ್ತೂರಿ ಮಾಸಿಕದಲ್ಲಿದ್ದರು), “ಕನ್ನಡ ಪ್ರಭ” ಮತ್ತು “ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ”ನಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ನಮ್ಮೆಲ್ಲರ ಪಾಲಿಗೆ ಶಾಮಿ ಎಂದೇ ಪ್ರೀತಿಪಾತ್ರರಾಗಿದ್ದ ಶಾಮಸುಂದರ, ನಾನು ಕಂಡ ಅಪರೂಪದ ಪತ್ರಕರ್ತರಲ್ಲಿ ಒಬ್ಬರು. ಅವರ ಜತೆ ಇದ್ದಾಗ, ಪತ್ರಿಕೋದ್ಯಮ, ಪತ್ರಕರ್ತರು, ಪತ್ರಿಕೆ ಹೊರತಾಗಿ ಬೇರೆ ವಿಷಯ ಮಾತಾಡಿದ್ದು ಕಮ್ಮಿಯೇ ಎಂದು ಸುದೀರ್ಘ ಲೇಖನದಲ್ಲಿ ವಿಷಾದದೊಂದಿಗೆ ಶ್ಯಾಮ್ ಅವರನ್ನು ಬೀಳ್ಕೊಡುತ್ತಿದ್ದೇನೆ ಎಂದು ವಿಶ್ವೇಶ್ವರ್ ಭಟ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಶಿಕ್ಷಣ ತಜ್ಞ, ಪಿಇಎಸ್ ವಿಶ್ವವಿದ್ಯಾಲಯ ಸಂಸ್ಥಾಪಕ ಎಂ.ಆರ್. ದೊರೆಸ್ವಾಮಿ ಇನ್ನಿಲ್ಲ!