
ಬೆಂಗಳೂರು (ಸೆ.2): ರಾಜ್ಯ ರಾಜಧಾನಿಯ ಅತ್ಯಂತ ಐತಿಹಾಸಿಕ ಹಾಗೂ ಜನನಿಬಿಡ ಸಗಟು ಮಾರುಕಟ್ಟೆಯಾದ ಕೃಷ್ಣರಾಜೇಂದ್ರ (ಕೆ.ಆರ್.) ಮಾರ್ಕೆಟ್ಗೆ ಪ್ರವೇಶಿಸುವ ಸರಕು ಸಾಗಣೆ ವಾಹನಗಳಿಗೆ ಹಾಗೂ ತರಕಾರಿ, ಹೂವು-ಹಣ್ಣು ತರುವ ವ್ಯಾಪಾರಿಗಳಿಗೆ ಇನ್ಮುಂದೆ ಪ್ರವೇಶ ಶುಲ್ಕ ಕಡ್ಡಾಯವಾಗಲಿದೆ. ಮಾರುಕಟ್ಟೆಯ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಹಾಗೂ ಆದಾಯ ಸೋರಿಕೆಯನ್ನು ತಡೆಯಲು ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ (BCCC) 10 ವರ್ಷಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಡಿಜಿಟಲ್ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಸ್ತಾವನೆ ಸಲ್ಲಿಸಿದೆ.
ಈ ಹೊಸ ಯೋಜನೆಯ ಪ್ರಕಾರ, ಕೆ.ಆರ್. ಮಾರ್ಕೆಟ್ಗೆ ಆಗಮಿಸುವ ಸರಕು ವಾಹನಗಳಿಗೆ ನಿಗದಿತ ಎಂಟ್ರಿ ಫೀಸ್ ಇರಲಿದ್ದು, ವ್ಯಾಪಾರಿಗಳು ಮಾರುಕಟ್ಟೆಗೆ ತರುವ ಸರಕು ಮತ್ತು ಕೃಷಿ ಉತ್ಪನ್ನಗಳ ಪ್ರಮಾಣಕ್ಕೆ (Quantity) ಅನುಗುಣವಾಗಿ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ವಾಹನ ಶುಲ್ಕದ ಹೊರತಾಗಿ, ಮಾರುಕಟ್ಟೆಗೆ ತರಲಾಗುವ ಕೃಷಿ ಮತ್ತು ವಾಣಿಜ್ಯ ಉತ್ಪನ್ನಗಳಿಗೂ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ
ಮಾರುಕಟ್ಟೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಶುಲ್ಕ ಸಂಗ್ರಹವನ್ನು ಆಧುನಿಕಗೊಳಿಸಲು ಯುಪಿಐ (UPI), ಫಾಸ್ಟಾಗ್ (FASTag), ಕ್ರೆಡಿಟ್/ಡೆಬಿಟ್ ಕಾರ್ಡ್ಗಳು ಹಾಗೂ ಪಿಒಎಸ್ (POS) ಮೆಷಿನ್ಗಳ ಮೂಲಕವೇ ಡಿಜಿಟಲ್ ಮಾದರಿಯಲ್ಲಿ ಹಣ ಸಂಗ್ರಹಿಸಲಾಗುತ್ತದೆ. ಪ್ರತಿಯೊಂದು ವಹಿವಾಟಿಗೂ ಎಲೆಕ್ಟ್ರಾನಿಕ್ ರಸೀದಿಯನ್ನು (e-Receipt) ನೀಡಲಾಗುತ್ತದೆ.
ಶುಲ್ಕ ಪಾವತಿಸದೆ ನುಸುಳುವುದು, ವಂಚಿಸುವುದು ಅಥವಾ ತಂದಿರುವ ಸರಕಿನ ಪ್ರಮಾಣವನ್ನು ತಪ್ಪಾಗಿ ಘೋಷಿಸಿದರೆ (Under-declaration) ಕಾರ್ಪೊರೇಷನ್ ಭಾರಿ ದಂಡ ವಿಧಿಸಲಿದೆ.