ಡಿಕೆ ಶಿವಕುಮಾರ್ ಸರ್ಕಾರಕ್ಕೆ ಸುನಿಲ್ ಜೋಶಿ ಶಹಬ್ಬಾಶ್.. ಬೆಂಗಳೂರಿನ 233 ಅಂಗಡಿಗಳ ತೆರವಿಗೆ ಜೈ ಎಂದ ಮಾಜಿ ಕ್ರಿಕೆಟಿಗ

Published : Aug 08, 2026, 01:25 PM IST
cricketer sunil joshi on bengaluru encroachment removal

ಸಾರಾಂಶ

ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಮತ್ತು ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೃಹತ್ ಕಾರ್ಯಾಚರಣೆಯನ್ನು ಕಂಡು ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ಏನಂದ್ರು ಜೋಶಿ?

ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಜನದಟ್ಟಣೆಯ ಪ್ರದೇಶಗಳಾದ ಕೆ.ಆರ್.ಮಾರುಕಟ್ಟೆ ಮತ್ತು ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೃಹತ್ ಕಾರ್ಯಾಚರಣೆಯನ್ನು ಕಂಡು ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಸಂತಸ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರ ಧೈರ್ಯದ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸುನಿಲ್ ಜೋಶಿ ಹೇಳಿದ್ದೇನು?

ಟ್ವೀಟ್ ಮಾಡಿರುವ ಸುನಿಲ್ ಜೋಶಿ, ಬೆಂಗಳೂರಿನ ಐತಿಹಾಸಿಕ ಕೋಟೆಯ ದೃಶ್ಯಾವಳಿ ಮತ್ತು ಪರಂಪರೆಯನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ಪಾದಚಾರಿಗಳ ಸುರಕ್ಷತೆಗಾಗಿ ಫುಟ್‌ಪಾತ್‌ಗಳನ್ನು ಮರಳಿ ಪಡೆಯುವುದು ಅಷ್ಟೇ ಪ್ರಮುಖವಾಗಿದೆ. ಈ ಅತಿ ಅಗತ್ಯವಾದ ಕ್ರಮಕ್ಕಾಗಿ ಧನ್ಯವಾದಗಳು. ಇಂತಹ ಕಠಿಣ ಕ್ರಮಗಳು ನಿಜಕ್ಕೂ ಪ್ರಶಂಸನೀಯ ಎಂದು ಬರೆದುಕೊಂಡಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಅವರನ್ನು ಟ್ಯಾಗ್ ಮಾಡುವ ಮೂಲಕ ಸರ್ಕಾರದ ಇಚ್ಛಾಶಕ್ತಿಯನ್ನು ಸ್ವಾಗತಿಸಿದ್ದಾರೆ.

ಕಾರ್ಯಾಚರಣೆಯ ಹಿನ್ನೆಲೆ

ಬೆಂಗಳೂರು ಫೋರ್ಟ್ (ಕೋಟೆ), ವಿಕ್ಟೋರಿಯಾ ಆಸ್ಪತ್ರೆ ಮತ್ತು ಕೆ.ಆರ್. ಮಾರುಕಟ್ಟೆಯ ನಡುವಿನ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಸುಮಾರು 233 ಅಕ್ರಮ ಅಂಗಡಿಗಳನ್ನು ನಿರ್ಮಿಸಲಾಗಿತ್ತು. ಈ ಅಂಗಡಿಗಳ ಮಾಲೀಕರು ಹೊಂದಿದ್ದ ದಾಖಲೆಗಳು ನಕಲಿ ಎಂದು ಹೈಕೋರ್ಟ್ ಈ ಹಿಂದೆಯೇ ಸ್ಪಷ್ಟಪಡಿಸಿತ್ತು. 15 ದಿನಗಳೊಳಗೆ ಜಾಗ ಖಾಲಿ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೂ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ 20 ದಿನಗಳ ಕಾಲ ಕಾಯ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ತೆರವು ಕಾರ್ಯಾಚರಣೆ ನಡೆಸಿದೆ.

ಸಾಮಾನ್ಯ ಜನರಿಗೆ ಸಿಕ್ಕ ಗೆಲುವು

ಈ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಬೈರೇಗೌಡ, ಪ್ರತಿದಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಕೆ.ಆರ್. ಮಾರುಕಟ್ಟೆಯನ್ನು ಬಳಸುವ ಲಕ್ಷಾಂತರ ಜನ ಸಾಮಾನ್ಯರಿಗೆ ಸಿಕ್ಕ ದೊಡ್ಡ ಗೆಲುವು ಇದು. ಸಾರ್ವಜನಿಕ ಜಾಗವನ್ನು ಕಾನೂನಾತ್ಮಕವಾಗಿ ಮರಳಿ ಪಡೆದ ನಮ್ಮ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಪಾದಚಾರಿಗಳಿಗೆ ಹಕ್ಕು ಕಲ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಅದಕ್ಕೆ ಸುನಿಲ್ ಜೋಶಿ ಅವರಂತಹ ಗಣ್ಯರ ಬೆಂಬಲ ಸಿಕ್ಕಿರುವುದು ಸರ್ಕಾರದ ಉತ್ಸಾಹವನ್ನು ಹೆಚ್ಚಿಸಿದೆ. ಈ ಕಾರ್ಯಾಚರಣೆಯಿಂದಾಗಿ ಈಗ ಐತಿಹಾಸಿಕ ಬೆಂಗಳೂರು ಕೋಟೆಯ ಅಂದ ಕೂಡ ಹೆಚ್ಚಾಗಿದ್ದು ರಸ್ತೆಗಳು ವಿಶಾಲವಾಗಿ ಕಾಣುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

PREV
Read more Articles on
click me!

Recommended Stories

Bengaluru Crime News: ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ; ಡುಪ್ಲೆಕ್ಸ್ ಮನೆಯಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ, ವರ್ಷದ ಹಿಂದೆ ಸಾವನ್ನಪ್ಪಿರುವ ಶಂಕೆ
ನೀಲಿ ಮತ್ತು ಕಿತ್ತಳೆ ಲೈನ್​ ಮೆಟ್ರೋ ಬಗ್ಗೆ BMRCL ಬಿಗ್​ ಅಪ್​ಡೇಟ್: ಇವುಗಳ ಕಾರ್ಯಾರಂಭ ಯಾವಾಗ