Bengaluru: ಹೆಸರಘಟ್ಟದಲ್ಲಿ ಭಾರತದ ಮೊದಲ ಕ್ವಾಂಟಮ್ ಸಿಟಿ ನಿರ್ಮಾಣ: ಡಿಕೆ ಶಿವಕುಮಾರ್

Published : Aug 08, 2026, 08:57 AM IST
DK Shivakumar

ಸಾರಾಂಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದ ಅಮೆರಿಕ ಕಾನ್ಸುಲೇಟ್ ಸ್ಥಾಪನೆಗೆ ಮನವಿ ಮಾಡಿದ್ದಾರೆ. ಹೆಸರಘಟ್ಟದಲ್ಲಿ ಭಾರತದ ಮೊದಲ 'ಕ್ವಾಂಟಮ್ ಸಿಟಿ' ನಿರ್ಮಾಣವಾಗುತ್ತಿದ್ದು, ಈ ಮೂಲಕ ಕರ್ನಾಟಕವು ಕ್ವಾಂಟಮ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರಲು ಸಜ್ಜಾಗಿದೆ ಎಂದು ಅವರು 'ಕ್ವಾಂಟಮ್' ಪ್ರದರ್ಶನ ಉದ್ಘಾಟಿಸಿ ತಿಳಿಸಿದರು.

ಬೆಂಗಳೂರು: ಭಾರತ-ಅಮರಿಕ ನಡುವೆ ಐಟಿ ಮತ್ತಿತರ ವಲಯಗಳಲ್ಲಿ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಪೂರ್ಣ ಪ್ರಮಾಣದ ಅಮೆರಿಕ ಕಾನ್ಸುಲೇಟ್ ಸ್ಥಾಪನೆಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ಶುಕ್ರವಾರ ನಗರದ ಸೈನ್ಸ್ ಗ್ಯಾಲರಿಯಲ್ಲಿ ‘ಕ್ವಾಂಟಮ್’ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ 700ಕ್ಕೂ ಹೆಚ್ಚು ಅಮೆರಿಕದ ಕಂಪನಿಗಳು, 10 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹಾಗೂ 10 ಲಕ್ಷಕ್ಕೂ ಹೆಚ್ಚು ತಂತ್ರಜ್ಞಾನ ಉದ್ಯೋಗಿಗಳಿದ್ದಾರೆ. ಭಾರತದಲ್ಲಿ ಅಮೆರಿಕದ ಅತಿ ದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪಾಲುದಾರ ನಗರವಾಗಿರುವ ಬೆಂಗಳೂರಿಗೆ ಪೂರ್ಣ ಪ್ರಮಾಣದ ಕಾನ್ಸುಲೇಟ್ ಅಗತ್ಯವಿದೆ ಎಂದರು.

ಕರ್ನಾಟಕ ಸರ್ಕಾರದಿಂದ ಅಗತ್ಯ ಅನುಮತಿ

ನಾವು ಕೇವಲ ವ್ಯಾಪಾರ ಕಚೇರಿಯನ್ನು ಕೇಳುತ್ತಿಲ್ಲ. ಶಾಶ್ವತ ರಾಜತಾಂತ್ರಿಕ ಕಚೇರಿ ಇಲ್ಲಿ ಸ್ಥಾಪನೆಯಾಗಬೇಕು. ಇದರಿಂದ ತಂತ್ರಜ್ಞಾನ, ನಾವೀನ್ಯತೆ, ಸಂಶೋಧನೆ, ರಕ್ಷಣೆ, ಬಾಹ್ಯಾಕಾಶ ಮತ್ತು ವಿಮಾನಯಾನ ಕ್ಷೇತ್ರಗಳಲ್ಲಿ ಸಹಕಾರ ಮತ್ತಷ್ಟು ವಿಸ್ತರಣೆ ಸಾಧ್ಯವಾಗಲಿದೆ. ಕಾನ್ಸುಲೇಟ್ ಸ್ಥಾಪನೆಗೆ ಅಗತ್ಯವಿರುವ ರಾಜ್ಯಮಟ್ಟದ ಎಲ್ಲ ಅನುಮತಿಗಳನ್ನು ತ್ವರಿತವಾಗಿ ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ. ಅಮೆರಿಕದ ರಾಯಭಾರ ಕಚೇರಿ ಮತ್ತು ಸಂಬಂಧಿಸಿದ ಸಂಸ್ಥೆಗಳೊಂದಿಗೆ ಸರ್ಕಾರ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಅಮೆರಿಕದ ಪ್ರಮುಖ ಶೈಕ್ಷಣಿಕ ಹಾಗೂ ನಾವೀನ್ಯತಾ ಕೇಂದ್ರಗಳೊಂದಿಗೆ ತರಬೇತಿ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಲ್ಲಿ ಪಾಲುದಾರಿಕೆ ಬೆಳೆಸಲು ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ ಅವರ ನೆರವನ್ನು ಮುಖ್ಯಮಂತ್ರಿ ಕೋರಿದರು.

ಕ್ವಾಂಟಮ್ ವಿಜ್ಞಾನವು ಕಂಪ್ಯೂಟಿಂಗ್, ಸಂವಹನ, ಆರೋಗ್ಯ ಮತ್ತು ಆಧುನಿಕ ಉತ್ಪಾದನಾ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತದೆ. ಈ ಕ್ಷೇತ್ರದಲ್ಲಿ ನಮ್ಮ ಯುವಕರು ತೊಡಗಿಸಿಕೊಳ್ಳುವುದನ್ನು ಖಾತರಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಾರಿಗೆ ಸಚಿವ ಬೈರತಿ ಸುರೇಶ್, ಉದ್ಯಮಿ ಕಿರಣ್ ಮಜುಂದಾರ್ ಶಾ ಉಪಸ್ಥಿತರಿದ್ದರು.

ಹೆಸರಘಟ್ಟದಲ್ಲಿ ‘ಕ್ವಾಂಟಮ್ ಸಿಟಿ’ ಸ್ಥಾಪನೆ

ನಗರದ ಹೆಸರಘಟ್ಟದಲ್ಲಿ ಭಾರತದ ಮೊದಲ ‘ಕ್ವಾಂಟಮ್ ಸಿಟಿ’ ನಿರ್ಮಾಣವಾಗುತ್ತಿದ್ದು, ಸಂಶೋಧನಾ ಪ್ರಯೋಗಾಲಯಗಳ ಪ್ರಮುಖ ಕೇಂದ್ರವಾಗಲಿದೆ. ನಮ್ಮ ಬದ್ಧತೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ''ಲೋಕಲ್ ಎಕಾನಮಿ ಆಕ್ಸಿಲರೇಟರ್ ಪ್ರೋಗ್ರಾಂ'' ಅಡಿಯಲ್ಲಿ, ಧಾರವಾಡದ ಐಐಐಟಿಯಲ್ಲಿ ಕ್ವಾಂಟಮ್ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟಿಂಗ್ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲಾಗಿದೆ.‘ಕ್ವಾಂಟಮ್’ ಪ್ರದರ್ಶನವನ್ನು ಎಲ್ಲರಿಗಾಗಿ ಮುಕ್ತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.

PREV
Read more Articles on
click me!

Recommended Stories

ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ಭೀಕರ ಅಪಘಾತ: ಶೈನಿಂಗ್ ಬೋರ್ಡ್‌ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ!
ಕಂಠೀರವ ಸ್ಟುಡಿಯೋ To ಬಿಇಎಲ್ ವೃತ್ತದವರೆಗಿನ 4.5 km ಉದ್ದದ 6 ಲೇನ್‌ ಸುರಂಗ ಮಾರ್ಗ