
ಬೆಂಗಳೂರು (ಫೆ.21) ಕನ್ನಡ, ಕನ್ನಡಿಗರು ವಿಚಾರದಲ್ಲಿ ಬೆಂಗಳೂರಿನಲ್ಲಿ ಹಲವು ಬಾರಿ ಚರ್ಚೆಗಳು ನಡೆದಿದೆ. ತರ್ಕಗಳು ಆಗಿದೆ. ಈ ಪೈಕಿ ಹೊರ ರಾಜ್ಯದಿಂದ ಬಂದು ಬೆಂಗಳೂರನ್ನು ನಾವೇ ಉದ್ಧಾರ ಮಾಡಿರೋದು. ನಾವು ಇಲ್ಲದಿದ್ದರೆ ಬೆಂಗಳೂರು ಶೂನ್ಯ ಎಂದು ಹಲವರು ಮೊಂಡು ವಾದ ಮಂಡಿಸಿದ್ದು ಇದೆ. ಇದಕ್ಕೆ ಕನ್ನಡಿಗರು ತಕ್ಕ ತಿರುಗೇಟು ನೀಡಿದ್ದಾರೆ. ಆದರೆ ಇದೀಗ ಬಿಜೆಪಿ ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಕಾಂಗ್ರೆಸ್ ನಾಯಕರಿಗೆ ಉತ್ತರ ಕೊಡುವ ವೇಳೆ ನೀಡಿದ ಕೆಲ ಅಂಕಿ ಅಂಶಗಳ ವಿವರಣೆ ಇದೀಗ ಬೆಂಗಳೂರು ನಮ್ಮಿಂದನೇ ಉದ್ಧಾರ ಆಗಿದೆ ಎಂದವರಿಗೂ ಉತ್ತರವಾಗಿದೆ.
ಕಾಂಗ್ರೆಸ್ ವಕ್ತಾರ ಚರ್ಚೆ ವೇಳೆ ಭಾರತದಲ್ಲಿ ಏನಾದರೂ ಇದ್ದರೆ ಅದು ಮೊದಲ ಪ್ರಧಾನ ಮಂತ್ರಿ ಜವಾಹರ್ಲಾಲ್ ನೆಹರೂ ಅವರಿಂದ ಎಂದು ಚರ್ಚೆಯಲ್ಲಿ ಪ್ರಸ್ತುತ ಪಡಿಸಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿದ ಸುಧಾಂಶು ತ್ರಿವೇದಿ, ಜವಾಹರ್ಲಾಲ್ ನೆಹರು ಬಾಲಕನಾಗಿದ್ದಾಗ, ಭಾರತದಲ್ಲಿ ಏನೆಲ್ಲಾ ಆಗಿದೆ ಅನ್ನೋದ ವಿವರಣೆ ನೀಡಿದ್ದಾರೆ. ಈ ವಿವರಣೆ ಇದೀಗ ಬೆಂಗಳೂರು ಕುರಿತು ಕೆಲವರ ಪ್ರಶ್ನೆಗೂ ಉತ್ತರವಾಗಿದೆ. ಇಷ್ಟೇ ಅಲ್ಲ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ, ದೂರದೃಷ್ಟಿ ಏನು ಅನ್ನೋದು ಈ ಉತ್ತರದಲ್ಲಿ ಅಡಗಿದೆ.
ಸುಧಾಂಶು ತ್ರಿವೇದಿ ತಮ್ಮ ಉತ್ತರದಲ್ಲಿ ಭಾರತದ ಪ್ರಥಮಗಳ ಬಗ್ಗೆ ವಿವರಣೆ ನೀಡಿದ್ದಾರೆ. ಭಾರತದ ಮೊದಲ ಡ್ಯಾಮ್, ಕೃಷ್ಣಸಾಗರ ಅಣೆಕಟ್ಟು (ಕೆಆರ್ಎಸ್) ಮೈಸೂರು ಮಹಾರಾಜರು 1911ರಲ್ಲಿ ಆರಂಭಿಸಿ 1931ರಲ್ಲಿ ಪೂರ್ಣಗೊಳಿಸಿದರು. ಭಾರತದ ಮೊದಲ ಹೈಡ್ರೋ ಪವರ್ ಪ್ರಾಜೆಕ್ಟ್ ಶಿವನಸಮುದ್ರ. 1902ರಲ್ಲಿ ವಿದ್ಯುತ್ ಯೋಜನೆ ಆರಂಭಗೊಂಡಿದೆ. ವಿಶ್ವದಲ್ಲಿ ಯೂರೋಪ್ ಬಳಿಕ ಮೊದಲ ವಿದ್ಯುತ್ ಬೀದಿ ದೀಪ ಹಾಕಿದ್ದು ಬೆಂಗಳೂರಿನಲ್ಲಿ, 1902ರಲ್ಲೇ ಕಾರ್ಯಗತಗೊಂಡಿದೆ. ಭಾರತದ ಮೊದಲ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ ಆರಂಭಗೊಂಡಿದ್ದು 1909ರಲ್ಲಿ ಬೆಂಗಳೂರಿನಲ್ಲಿ. ಮಿಂಟೋ ಕಣ್ಣಿನ ಆಸ್ಪತ್ರೆ, ಇದು ವಿಶ್ವದ ಮೊದಲ ಕಣ್ಣಿನ ಆಸ್ಪತ್ರೆ 1903ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡಿತು. ಸಾಲು ಸಾಲು ಪ್ರಥಮಗಳು ಬೆಂಗಳೂರಿನಲ್ಲಿ ಆರಂಭಗೊಂಡಿತು. ಬಳಿಕ ಭಾರತದ ಇತರೆಡೆಗೆ ಸಾಗಿತ್ತು ಎಂದು ಸುಧಾಂಶು ತ್ರಿವೇದಿ ಹೇಳಿದ್ದಾರೆ.
ಇದೀಗ ಈ ವಿಡಿಯೋವನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ಬೆಂಗಳೂರು ಉದ್ದಾರ ಮಾಡಿದ್ದು ನಾವು ಎನ್ನುವ ಹಲವರಿಗೆ ಅವರದ್ದೇ ಬಾಷೆಯಲ್ಲಿ ಉತ್ತರ ಇದೆ. ಈ ವಿಡಿಯೋ ನೋಡಿಕೊಂಡು ಬಳಿಕ ಬೆಂಗಳೂರು, ಕರ್ನಾಟಕ, ಮೈಸೂರು ಮಹಾರಾಜರ ಆಡಳಿತ ಬಗ್ಗೆ ಮಾತನಾಡುವ ಧೈರ್ಯ ಮಾಡಿ ಎಂದು ಹಲವರು ಸಲಹೆ ನೀಡಿದ್ದಾರೆ.