ಬೆಂಗಳೂರಿನಲ್ಲಿ ನಿತ್ಯ ಸರಾಸರಿ 70 ಜನರಿಗೆ ಬೀದಿ ನಾಯಿ ಕಡಿತ!

By Kannadaprabha NewsFirst Published Jul 25, 2022, 7:28 AM IST
Highlights

* ಶಸ್ತ್ರಚಿಕಿತ್ಸೆ ಮಾಡಿದ್ದರೂ ನಿಯಂತ್ರಣ ಬಾರದ ನಾಯಿ ಸಂತತಿ
* ನಗರದಲ್ಲಿ 3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳು
* ಆರೇ ತಿಂಗಳಲ್ಲಿ15000, ಎರಡೂವರೆ ವರ್ಷದಲ್ಲಿ 52000 ಜನರಿಗೆ ದಾಳಿ

ಬೆಂಗಳೂರು (ಜುಲೈ 25): ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಕಳೆದ ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ. ಇದರಿಂದ ವೃದ್ಧರು, ಮಕ್ಕಳು ಮನೆಗಳಿಂದ ಹೊರ ಬರಲು ಆತಂಕ ಪಡುವಂತ ಪರಿಸ್ಥಿತಿ ಇದೆ. ಪಾಲಿಕೆಯ ಎಂಟು ವಲಯಗಳಲ್ಲಿಯೂ ಒಂದು ಸಾವಿರಕ್ಕಿಂತ ಕಡಿಮೆ ಇಲ್ಲದಂತೆ ನಾಯಿ ಕಚ್ಚಿದ ಪ್ರಕರಣಗಳು ಈವರೆಗೆ ದಾಖಲಾಗಿದ್ದು, ನಿತ್ಯ ಸರಾಸರಿ 70ಕ್ಕೂ ಹೆಚ್ಚು ಮಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿವೆ ಎನ್ನಲಾಗಿದೆ. ಪಾಲಿಕೆಯ ಮೂಲಗಳ ಪ್ರಕಾರ 2020 ಜನವರಿಯಿಂದ ಈವರೆಗೆ ಸುಮಾರು 52 ಸಾವಿರಕ್ಕೂ ಹೆಚ್ಚು ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. 2020ರ ಫೆಬ್ರವರಿಯಲ್ಲಿ ನಾಯಿ ಕಡಿತದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಪಾಲಿಕೆಯ ಪಶುಪಾಲನಾ ವಿಭಾಗದ ಮಾಹಿತಿಯಂತೆ ನಗರದಲ್ಲಿ 3 ಲಕ್ಷಕ್ಕೂ ಹೆಚ್ಚು ನಾಯಿಗಳಿವೆ. ಅವುಗಳಲ್ಲಿ ಈವರೆಗೆ ಶೇ.70ರಷ್ಟುನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (ಅನಿಮಲ್‌ ಬಥ್‌ರ್‍ ಕಂಟ್ರೋಲ್‌-ಎಬಿಸಿ) ಮಾಡಲಾಗಿದೆ. ಇನ್ನೂ ಶೇ.30ರಷ್ಟುನಾಯಿಗಳಿಗೆ ಎಬಿಸಿ ಮಾಡಿಲ್ಲ. ಹಾಗಾಗಿ ಎಬಿಸಿಗೆ ಒಳಗಾಗದ ನಾಯಿಗಳಿಂದ ಬೆಂಗಳೂರಿನ ಬಹುತೇಕ ವಾರ್ಡ್‌ಗಳಲ್ಲಿ ನಾಯಿಗಳ ಸಂತತಿ ಹೆಚ್ಚುತ್ತಿದೆ. ಆದರೂ ಸಂಪೂರ್ಣವಾಗಿ ನಾಯಿ ಸಂತತಿ ನಿಯಂತ್ರಿಸುವುದು ಕಷ್ಟಎಂಬುದು ಪಶುಪಾಲನಾ ವಿಭಾಗದ ಅಳಲು.

ಬಿಬಿಎಂಪಿಗೆ ತಲೆನೋವು: ಎಂಟು ವಲಯಗಳಲ್ಲಿ ನಿತ್ಯ 800 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಗುರಿಯನ್ನು ಈ ಹಿಂದೆ ನೀಡಲಾಗಿತ್ತು. ಇದೀಗ ನಿತ್ಯ 160ರಿಂದ 200 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಪ್ರತಿ ನಾಯಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು .1200 ಖರ್ಚು ಮಾಡಲಾಗುತ್ತಿದೆ. ಆದರೆ ನಾಯಿಗಳ ಸಂತಾನ ಮಾತ್ರ ನಿಯಂತ್ರಣಕ್ಕೆ ಬರದಿರುವುದು ಬಿಬಿಎಂಪಿ ತಲೆ ನೋವಿಗೆ ಕಾರಣವಾಗಿದೆ.

ರಾತ್ರಿ ಆಗುತ್ತಿದ್ದಂತೆ ನಾಯಿಗಳು ಹಾಜರ್: ಬೆಳಗ್ಗಿನ ಸಮಯದಲ್ಲಿ ಕಣ್ಮರೆಯಾಗುವ ನಾಯಿಗಳು ರಾತ್ರಿಯಾಗುತ್ತಿದ್ದಂತೆ ಬಡಾವಣೆಗಳಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತವೆ. ಒಂಟಿಯಾಗಿ ಓಡಾಡುವರನ್ನು ಅಟ್ಟಿಸಿಕೊಂಡು ಹೋಗುವ ನಾಯಿಗಳು ಕೈಗೆ ಮಕ್ಕಳು ಸಿಕ್ಕರೆ ಮುಂದೇನು? ಕೆಲವರು ತಮ್ಮ ಏರಿಯಾದಲ್ಲಿರುವ ನಾಯಿಗಳಿಗೆ ಊಟ, ಬಿಸ್ಕೆಟ್‌, ತಿಂಡಿ, ತಿನಿಸಿನ ಆಸೆ ತೋರಿಸಿ ಬೇರೆ ಏರಿಯಾಗಳಿಗೆ ಕರೆತಂದು ಬಿಡುತ್ತಿದ್ದಾರೆ ಎಂಬ ಆರೋಪಗಳು ಇವೆ. ಕೂಡಲೇ ಪಾಲಿಕೆಯ ಪಶುಸಂಗೋಪನಾ ವಿಭಾಗದ ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯ 2022ರಿಂದ ಈವರೆಗೆ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೀಗಿದೆ. ಜನವರಿ - 1677, ಫೆಬ್ರವರಿ - 1135, ಮಾರ್ಚ್- 1800, ಏಪ್ರಿಲ್‌- 1677, ಮೇ- 1841, ಜೂನ್‌- 1140, ಜುಲೈ- 483 ಜನರಿಗೆ ನಾಯಿ ಕಡಿದಿದೆ.

ಮಗುವನ್ನು ಕಿತ್ತು ತಿಂದ ಬೀದಿ ನಾಯಿಗಳು, ಹಾಸನದಲ್ಲೊಂದು ಹೃದಯ ವಿದ್ರಾವಕ ಘಟನೆ

ಕಣ್ಣಿಗೆ ಬೀದಿ ನಾಯಿ ಕಚ್ಚಿ 8ರ ಬಾಲಕ ದುರ್ಮರಣ
ಚಿತ್ರದುರ್ಗ:
ಬೀದಿನಾಯಿ ಕಚ್ಚಿ ಎಂಟು ವರ್ಷದ ಬಾಲಕ ಅಸುನೀಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಮೆದೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಿಕಲ್ಲು ನಾಯಕರಹಟ್ಟಿಯಲ್ಲಿ ನಡೆದಿದೆ. ಗ್ರಾಮದ ರೇಖಾ ಮತ್ತು ಕೇಶವ ದಂಪತಿ ಪುತ್ರ ಯಶವಂತ ಅಸುನೀಗಿದ ಬಾಲಕ. ವಾರದ ಹಿಂದೆ ಮನೆ ಮುಂಭಾಗ ಆಟ ಆಡುತ್ತಿರುವಾಗ ಬೀದಿ ನಾಯಿ ಯಶವಂತ್‌ನ ಕಣ್ಣಿಗೆ ಐದಾರು ಬಾರಿ ಕಚ್ಚಿದೆ. ತೀವ್ರ ಗಾಯಗೊಂಡು ಕುಸಿದು ಬಿದ್ದಿದ್ದ ಯಶವಂತನನ್ನು ತಕ್ಷಣವೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು.

Bhopal: ಆಸ್ಪತ್ರೆಯ ಆವರಣದಲ್ಲೇ ನಾಯಿಗಳಿಗೆ ಆಹಾರವಾದ ನವಜಾತ ಶಿಶುವಿನ ಶವ!

ನಾಯಿ ಕಚ್ಚಿದ ವಿಷ ಮೆದುಳಿಗೆ ಏರಿರುವುದಿರಂದ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ. ನಂತರ ದಾವಣಗೆರೆ ಹಾಗೂ ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಣಿಪಾಲ್‌ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ. ಚಿತ್ರದುರ್ಗ ಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

click me!