ಹುನಗುಂದ: ಈ ಗ್ರಾಮಗಳಲ್ಲಿ ದೀಪಾವಳಿ ಆಚರಿಸಲು ಬಿಡದ ಪ್ರವಾಹ

By Web DeskFirst Published Oct 24, 2019, 3:20 PM IST
Highlights

ಚಿಕ್ಕಮಾಗಿ, ಹಿರೇಮಾಗಿ ಸಂಪೂರ್ಣ ಜಲಾವೃತ| ಈಗಾಗಲೇ ನಾಲ್ಕು ಬಾರಿ ಪ್ರವಾಹಕ್ಕೆ ತುತ್ತಾದ ಈ ಗ್ರಾಮಗಳು| ಇನ್ನೂ ಗ್ರಾಮಸ್ಥರಿಗೆ ಸೂಕ್ತ ನೆಲೆ ದೊರೆತಿಲ್ಲ| ಚಿಕ್ಕಮಾಗಿ ಗ್ರಾಮದಲ್ಲಿ ಒಟ್ಟು 417 ಆಸರೆ ಮನೆಗಳಿವೆ| ಒಂದೊಂದು ಕುಟುಂಬವು ಎರಡೆರಡು ಮನೆಗಳಲ್ಲಿ ವಾಸಿಸುತ್ತಿರುವುದರಿಂದ ಎಲ್ಲ ಗ್ರಾಮಸ್ಥರಿಗೂ ಮನೆಗಳು ದೊರೆಯಲು ಸಾಧ್ಯವಾಗಿಲ್ಲ| ಪ್ರವಾಹ ಬಂದಾಗಲೆಲ್ಲ ಗ್ರಾಮಸ್ಥರು ಭಯಭೀತರಾಗಿ ಓಡಿ ಹೋಗುತ್ತಾರೆ|

ಅಮೀನಗಡ[ಅ.24]: ಮಲಪ್ರಭಾ ನದಿಯ ನೆರೆ ಹಾವಳಿಗೆ ಸಮೀಪದ ಚಿಕ್ಕಮಾಗಿ ಹಾಗೂ ಹಿರೇಮಾಗಿ ಗ್ರಾಮಗಳು ಜಲಾವೃತವಾಗಿ ಸಂಪರ್ಕ ಕಡಿದು ಹೋಗಿದೆ. ನೀರು ಗ್ರಾಮಗಳಲ್ಲಿ ನುಗ್ಗುತ್ತಿದ್ದಂತೆ ಎರಡೂ ಗ್ರಾಮಗಳ ಜನತೆ ಆಸರೆ ಮನೆಗಳಿಗೆ ಧಾವಿಸಿದ್ದಾರೆ.

ಈ ಎರಡು ಗ್ರಾಮಗಳು ಈಗಾಗಲೇ ನಾಲ್ಕು ಬಾರಿ ಪ್ರವಾಹಕ್ಕೆ ತುತ್ತಾಗಿವೆ. ಆದರೂ ಗ್ರಾಮಸ್ಥರಿಗೆ ಸೂಕ್ತ ನೆಲೆ ದೊರೆತಿಲ್ಲ. ಚಿಕ್ಕಮಾಗಿ ಗ್ರಾಮದಲ್ಲಿ ಒಟ್ಟು 417 ಆಸರೆ ಮನೆಗಳಿವೆ. ಒಂದೊಂದು ಕುಟುಂಬವು ಎರಡೆರಡು ಮನೆಗಳಲ್ಲಿ ವಾಸಿಸುತ್ತಿರುವುದರಿಂದ ಎಲ್ಲ ಗ್ರಾಮಸ್ಥರಿಗೂ ಮನೆಗಳು ದೊರೆಯಲು ಸಾಧ್ಯವಾಗಿಲ್ಲ. ಪ್ರವಾಹ ಬಂದಾಗಲೆಲ್ಲ ಗ್ರಾಮಸ್ಥರು ಭಯಭೀತರಾಗಿ ಓಡಿ ಹೋಗುತ್ತಾರೆ. ಗ್ರಾಮಸ್ಥರಿಗೆ ಸರ್ಕಾರ ಒಂದು ಸುಭದ್ರ ನೆಲೆ ಕಲ್ಪಿಸಬೇಕಾದ ಅವಶ್ಯಕತೆ ಇದೆ ಎಂದು ಚಿಕ್ಕಮಾಗಿ ಗ್ರಾಮದ ರವಿ ಸಜ್ಜನ ತಿಳಿಸುತ್ತಾರೆ.

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೀಪಾವಳಿ ಹಬ್ಬದ ನಿಮಿತ್ತ ಇಡೀ ಗ್ರಾಮದಲ್ಲಿ ಜನತೆ ಮನೆ ಸ್ವಚ್ಛಗೊಳಿಸಿ ಸುಣ್ಣಬಣ್ಣ ಹಚ್ಚುವಲ್ಲಿ ನಿರತರಾಗಿದ್ದರು. ಪ್ರತಿ ವರ್ಷ ದೀಪಾವಳಿ ಹಬ್ಬದಂದು ಲಕ್ಷ್ಮೀ ಪೂಜೆ ಆರಾಧನೆ ಮಾಡಿ ಸಂಭ್ರಮಿಸುತ್ತಿದ್ದರು. ಮಲಪ್ರಭೆಯ ರೌದ್ರಾವತಾರಕ್ಕೆ ದೀಪಾವಳಿ ಹಬ್ಬದ ಸಡಗರಕ್ಕೆ ಮಂಕು ಕವಿದಿದೆ. ಜನತೆ ತಾವು ಮತ್ತು ತಮ್ಮ ಜಾನುವಾರುಗಳನ್ನು ಸುರಕ್ಷಿತವಾಗಿರಿಸಲು ಹೆಣಗಾಡುತ್ತಿದ್ದಾರೆ. ಹಿರೇಮಾಗಿ ಗ್ರಾಮದಲ್ಲಿ ಅರ್ಧ ಜನತೆ ಸಂತ್ರಸ್ತ ಮನೆಗಳಿದ್ದರೆ ಇನ್ನರ್ಧ ಜನರು ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಮಲಪ್ರಭೆಯ ನೀರು ಗ್ರಾಮ ಸುತ್ತುವರೆದಿರುವುದರಿಂದ ಈಚೆ ಬರಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ವತಿಯಿಂದ ಐದು ಲೀಟರ್‌ ಸೀಮೆ ಎಣ್ಣೆ ವಿತರಿಸಿದ್ದರಿಂದ ಅಡುಗೆ ಮಾಡಿಕೊಳ್ಳಲು ಅನುಕೂಲವಾಗಿದೆ.

ಹಿರೇಮಾಗಿ ಸಂತ್ರಸ್ಥರ ಮನೆಗಳಿಗೆ ಸರಿಯಾದ ವಿದ್ಯುತ್‌ ವ್ಯವಸ್ಥೆ ಇಲ್ಲ. ವಿದ್ಯುತ್‌ ಇಲ್ಲದೇ ಕತ್ತಲಲ್ಲಿ ಬದುಕುವಂತಾಗಿದೆ. ಕಳೆದ ಆಗಸ್ಟ್‌ ತಿಂಗಳಿನಲ್ಲಿ ಬಂದ ಪ್ರವಾಹಕ್ಕೆ ಈ ಎರಡೂ ಗ್ರಾಮಗಳು ನಲುಗಿದ್ದವು. ಒಟ್ಟು ಐನೂರು ಮನೆಗಳಲ್ಲಿ 262 ಮನೆಗಳಿಗೆ ಹತ್ತು ಸಾವಿರ ಪರಿಹಾರ ನೀಡಲಾಗಿದೆ. ಸಂತ್ರಸ್ತ ಮನೆಗಳಿಂದ ತಮ್ಮ ಮೂಲ ಮನೆಗಳಿಗೆ ಸ್ಥಳಾಂತರಗೊಂಡಿದ್ದರು. ಈಗ ನೆರೆ ಹಾವಳಿಯಿಂದಾಗಿ ಮತ್ತೆ ಸಂತ್ರಸ್ತ ಶಿಬಿರಗಳಲ್ಲಿಯೇ ದೀಪಾವಳಿ ಆಚರಿಸುವಂತಾಗಿದೆ.

click me!