ಪ್ರಪಂಚದ ಏಕೈಕ ಸಸ್ಯಾಹಾರಿ ಬುಡಕಟ್ಟು ಜನಾಂಗ 'ಬೇಡಗಂಪಣರು'!

By Web DeskFirst Published Oct 17, 2019, 10:57 AM IST
Highlights

ತಮ್ಮದೇ ಆದ ವಿಶಿಷ್ಟಜೀವನ ಕ್ರಮವನ್ನು ರೂಢಿಸಿಕೊಂಡು ಚಾಮರಾಜನಗರದ ಕಾಡಿನಲ್ಲಿ ವಾಸ ಮಾಡುತ್ತಿರುವ ಬೇಡಗಂಪಣ ಎನ್ನುವ ಬುಡಕಟ್ಟು ಮಂದಿಯ ಜೀವನ ತುಂಬಾ ಸ್ವಾರಸ್ಯಕರವಾದುದು. ಮಾದೇಶ್ವರರಿಂದ ಪ್ರಭಾವಿತರಾಗಿ, ಅವರೇ ಎಲ್ಲಾ ಎಂದುಕೊಂಡು ತಲೆತಲಾಂತರದಿಂದ ಅವರ ಪೂಜೆ ಮಾಡಿಕೊಂಡು ಬರುತ್ತಿರುವ ಮಾದಪ್ಪನ ತಮ್ಮಡಿಗಳ ಪುಟ್ಟಪರಿಚಯಾತ್ಮಕ ವಿವರ ಇಲ್ಲಿದೆ.

ಡಾ. ಪ್ರಭುಸ್ವಾಮಿ ಕಟ್ನವಾಡಿ

ಇಡೀ ಪ್ರಪಂಚದಲ್ಲಿ ಇಂದಿಗೂ ಬುಡಕಟ್ಟು ಜನರಿದ್ದಾರೆ. ಇವರ ಆಚಾರ ವಿಚಾರ, ಸಂಸ್ಕೃತಿ, ಸಂಭ್ರಮಗಳು ಭಿನ್ನ. ನಮ್ಮ ನಾಡಿನಲ್ಲಿಯೂ ಸಾಕಷ್ಟುಬುಡಕಟ್ಟು ಜನಾಂಗಗಳು ಇದ್ದು, ಒಂದು ಪಂಗಡಕ್ಕಿಂತ ಮತ್ತೊಂದು ಪಂಗಡ ಭಿನ್ನ. ಸೋಲಿಗರು, ಗೊಲ್ಲರು, ಬೇಡರು ಹೀಗೆ ಇರುವ ಕಾಡಿನ ಜನರ ನಡುವಲ್ಲಿ ‘ಬೇಡಗಂಪಣರು’ ಎನ್ನುವ ಬುಡಕಟ್ಟು ಜನಾಂಗ ತುಂಬಾ ಭಿನ್ನ.

101 ವರ್ಷಗಳ ಹಿಂದೆ ಸಮಾಧಿಯಾದ ಶಿರಡಿ ಸಾಯಿ ಬಾಬಾರಿಗೆ ನಮಿಸುತ್ತಾ

ಎಲ್ಲಾ ಬುಡಕಟ್ಟುಗಳ ಪ್ರಮುಖ ಆಹಾರ ಮಾಂಸಹಾರವಾದರೆ ಈ ಬುಡಕಟ್ಟು ಮಾತ್ರ ಶುದ್ಧ ಸಸ್ಯಾಹಾರಿ. ಇದಕ್ಕೆ ಕಾರಣ ಮಾದೇಶ್ವರರು. ಶತಶತಮಾನಗಳ ಹಿಂದೆ ಮಾದೇಶ್ವರರ ಅನುಯಾಯಿಗಳಾದ ಈ ಪಂಗಡದ ಮಂದಿ ಪ್ರಾರಂಭದಲ್ಲಿ ಸೋಲಿಗರ ಜೊತೆ ಜೊತೆಯಲ್ಲೇ ಬೆಳೆದು, ಕಾಡಿನಲ್ಲಿ ಬೇಟೆಯಾಡಿಕೊಂಡು ಬದುಕು ಸಾಗಿಸಿದ್ದರು. ನಂತರ ಸೇನೆಗಳಲ್ಲಿ ಸೈನಿಕರಾಗಿ ಕೆಲಸ ನಿರ್ವಹಿಸುತ್ತಾ, ಅದಾದ ಮೇಲೆ ರಾಜ ಮಹಾರಾಜರ ಸೇನೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿಕೊಂಡು ಬಂದಿದ್ದಾರೆ. ಅದರಿಂದಾಗಿಯೇ ಇವರಿಗೆ ‘ಬೇಡಗಂಪಣರು’ ಎನ್ನುವ ಹೆಸರು ಬಂದಿದೆ ಎನ್ನುವ ಉಲ್ಲೇಖಗಳೂ ಕೆಲವು ಕಡೆಗಳಲ್ಲಿ ಸಿಕ್ಕುತ್ತವೆ.

ಮಾದಪ್ಪನ ತಮ್ಮಡಿಗಳು

ಇದೇ ತಿಂಗಳ ಕಡೆಗೆ ದೀಪಾವಳಿ. ಏಳು ಮಲೆ ಮಾದಪ್ಪನ ಬೆಟ್ಟಕ್ಕೆ ಭಕ್ತರು ದಂಡು ದಂಡಾಗಿ ಬಂದು ಮಾದಪ್ಪನಿಗೆ ಉಘೇ ಉಘೇ ಎಂದು ಕೂಗಿ, ಇಷ್ಟದೇವರಿಗೆ ಪೂಜೆ ಸಲ್ಲಿಸಿ ಎಲ್ಲರನ್ನೂ ರಕ್ಷಿಸು ಎಂದು ಕೇಳಿಕೊಂಡು ಹೋಗುವ ಹಬ್ಬವದು. ಮಾದಪ್ಪ ನಮ್ಮ ನಾಡಿನ ಸಾಂಸ್ಕೃತಿಕ ನಾಯಕ. ಪವಾಡ ಪುರುಷ. ನಮ್ಮ ಜಾನಪದರ ಬಾಯಲ್ಲಿ ಹೆಚ್ಚು ನಲಿದಾಡಿದವನು. ಇವನ ಪೂಜೆಯನ್ನು ಪ್ರಾರಂಭದಿಂದ ಇಂದಿನವರೆಗೂ ಇದೇ ಪಂಗಡದ ಜನ ಮಾಡಿಕೊಂಡು ಬಂದಿದ್ದಾರೆ. ಇವರ ಹೊರತಾಗಿ ಮತ್ತ್ಯಾರಿಗೂ ಗರ್ಭ ಗುಡಿಗೆ ಪ್ರವೇಶವಿಲ್ಲ.

ಭಗವದ್ಗೀತೆಯ 18 ಅಧ್ಯಾಯಗಳಲ್ಲಿ ಕೃಷ್ಣ ಹೇಳಿದ್ದೇನು?

ಜೊತೆಗೆ ಮಾದೇಶ್ವರ ದೇವಸ್ಥಾನದ ವ್ಯಾಪ್ತಿಗೆ ಒಳಪಟ್ಟಎಲ್ಲಾ ದೇವಸ್ಥಾನಗಳಲ್ಲಿಯೂ ಈ ಪಂಡಗದ ಜನರೇ ಪ್ರಧಾನ ಅರ್ಚಕರು. ಮಾದಪ್ಪನ ತಮ್ಮಡಿಗಳು ಎಂದು ಕರೆಸಿಕೊಳ್ಳುವ ಈ ಪಂಗಡದ ಜನಕ್ಕೆ ಭಕ್ತರಿಂದ ವಿಶೇಷ ಗೌರವ ಸಲ್ಲುತ್ತಿದೆ. ಮೊದಲಿನಿಂದಲೂ ತಮಗೆ ಅನ್ನಿಸಿದ ರೀತಿಯಲ್ಲಿ ಬಹಳ ಕಟ್ಟು ನಿಟ್ಟಿನಿಂದ, ಮಡಿವಂತಿಕೆಯಿಂದ ಪೂಜೆ ಮಾಡಿಕೊಂಡು ಬರುತ್ತಿದ್ದ ಇವರಿಗೆ ಮಾದೇಶ್ವರ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಬಳಿಕ ಸಂಸ್ಕೃತ ಕಲಿಸುವ ಕೆಲಸಗಳು ನಡೆಯುತ್ತಿವೆ. ಜೊತೆಗೆ ವೈದಿಕ ಧರ್ಮದ ಅನುಸಾರ ಪೂಜೆ ಮಾಡುವ ಕ್ರಮಗಳು ಜಾರಿಗೆ ಬಂದಿವೆ.

ಸೋಲಿಗರ ಜೊತೆ ಜೊತೆಗೇ ಬದುಕು ಕಟ್ಟಿಕೊಂಡವರು

ಇಂದಿಗೂ ಚಾಮರಾಜನಗರ, ತಮಿಳುನಾಡಿನ ಕೆಲವಾರು ಗುಡ್ಡಗಾಡು ಭಾಗದಲ್ಲಿ ಬೇಡಗಂಪಣರು ಇದ್ದಾರೆ. ಪ್ರತಿಯೊಂದು ಪೋಡಿಯಲ್ಲಿಯೂ ಒಂದು ಕಡೆ ಸೋಲಿಗರು ಇದ್ದರೆ ಮತ್ತೊಂದು ಕಡೆ ಬೇಡಗಂಪಣರು ಸಿಕ್ಕುತ್ತಾರೆ. ಈಗ ಕೃಷಿಯನ್ನು ಮುಖ್ಯ ಉದ್ಯೋಗವಾಗಿಸಿಕೊಂಡು ಜೀವನ ನಡೆಸುತ್ತಿದ್ದರೂ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಇವರು ಅಡಕತ್ತರಿಗೆ ಸಿಕ್ಕಿರುವುದು ಸತ್ಯ.

ಯಾಕೆಂದರೆ ಇಂದು ಇವರನ್ನು ಬುಡಕಟ್ಟು ಜನಾಂಗ ಎಂದು ಸರಕಾರ ಗುರುತಿಸಿಲ್ಲ. ಕೊರಳಲ್ಲಿ ಲಿಂಗ ಕಟ್ಟಿಕೊಂಡು ಮಾದೇಶ್ವರನಿಗೆ ನಿಷ್ಠೆಯಿಂದ ನಡೆದುಕೊಂಡು ಬದುಕು ಮಾಡುತ್ತಿದ್ದರೂ ಲಿಂಗಾಯತರು ಇವರೊಂದಿಗೆ ಯಾವುದೇ ಸಾಂಸ್ಕೃತಿಕ ಸಂಬಂಧ ಇಟ್ಟುಕೊಂಡಿಲ್ಲ. ಅಲ್ಲದೇ ಇವರು ಲಿಂಗಾಯತರ ಯಾವುದೇ ಉಪ ಜಾತಿಗಳ ಪಟ್ಟಿಯಲ್ಲಿಯೂ ಗುರುತಿಸಲ್ಪಟ್ಟಿಲ್ಲ. ಹಾಗಾಗಿ ಇವರದ್ದು ಆರ್ಥಿಕವಾಗಿ ಸರಿಯಾದ ನೆರವು ಸಿಗದ ಪಂಗಡವಾಗಿಯೇ ಉಳಿದಿದೆ.

ಕೃಷ್ಣ ಭಕ್ತೆ ಮೀರಾಭಾಯಿ ಹಿಂದಿನ ಜನ್ಮದಲ್ಲಿ ಯಾರಾಗಿದ್ದಳು ಗೊತ್ತೇ?

ಹಿಂದುಳಿದ ಪಂಗಡ

ಈ ಹಿಂದೆ ನಮ್ಮನ್ನು ಬುಡಕಟ್ಟು ಪಂಗಡಕ್ಕೆ ಸೇರಿಸಿ ಎಂದು ಬೇಡಗಂಪಣರು ಸಾಕಷ್ಟುಹೋರಾಟ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಇನ್ನು ಶೈಕ್ಷಣಿಕವಾಗಿಯೂ ಇವರು ಆಶಾದಾಯಕ ಬೆಳವಣಿಗೆ ಕಂಡಿಲ್ಲ. ತಮ್ಮ ಜೊತೆಯಲ್ಲಿಯೇ ಇರುವ ಸೋಲಿಗರಿಗೆ ಸರಕಾರಗಳಿಂದ ಸಿಗುತ್ತಿರುವಷ್ಟುಸೌಲಭ್ಯಗಳು ಇವರಿಗೆ ಸಿಗುತ್ತಿಲ್ಲ. ಹೆಚ್ಚಿನ ಯುವಕರು ಕೃಷಿ ಮಾಡುತ್ತಿದ್ದರೆ ಮತ್ತೆ ಕೆಲವರು ನಗರ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ.

ಮೂಲತಃ ವೀರರು

ಈಗಲೂ ಬೆಟ್ಟದ ಸುತ್ತಮುತ್ತ ಇವರಿಗೆ ಸಂಬಂಧಿಸಿದ ವೀರಗಲ್ಲುಗಳು ದೊರೆಯುತ್ತವೆ. ಅವುಗಳ ಮೂಲಕ ಇವರ ಹಿಂದೆ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದರು, ಬೇಟೆಯಾಡಿಕೊಂಡು ಜೀವನ ಮಾಡುತ್ತಿದ್ದರು ಎನ್ನುವುದಕ್ಕೆ ಪುರಾವೆಗಳು ದೊರೆಯುತ್ತವೆ. ನಂತರ ಮಾದೇಶ್ವರನ ಪ್ರಭಾವಕ್ಕೆ ಒಳಗಾಗಿ ಬದಲಾದವರು. ಇಂದಿಗೂ ಮಾದೇಶ್ವರನೇ ಎಲ್ಲಾ, ಅವನನ್ನು ಬಿಟ್ಟು ಬೇರೆ ಏನಿಲ್ಲ ಎಂದುಕೊಂಡು ಜೀವನ ಮಾಡುತ್ತಿದ್ದಾರೆ ಇವರು.

click me!
Last Updated Oct 17, 2019, 10:57 AM IST
click me!