ಬೆಂಗಳೂರಿನ 800 ವರ್ಷ ಇತಿಹಾಸದ ದ್ರೌಪದಿ ದೇಗುಲ!

By Web DeskFirst Published Feb 5, 2019, 4:24 PM IST
Highlights

ಬೆಂಗಳೂರೆಂಬ ಮಾಯ ನಗರಿಯಲ್ಲಿ ಮಾಲ್‌ಗಳು ಎಷ್ಟಿವೆಯೋ ಅಷ್ಟೇ ದೇವಾಲಯಗಳಿವೆ. ಪುರಾತನ ಕಾಲದಿಂದಲೂ ಕಾಪಾಡಿಕೊಂಡು ಬಂದಿರುವ ಕೆಲವೊಂದು ದೇವಾಲಯಗಳಲ್ಲಿ ಈ ದ್ರೌಪದಮ್ಮನ ಗುಡಿಯೂ ಒಂದು! 

ಪಂಚ ಪಾಂಡವರ ಪತ್ನಿಯಾದ ದ್ರೌಪದಿಯನ್ನು ಐವರು ಪತಿವ್ರತೆಯರ ಪೈಕಿ ವಿಶೇಷ ಸ್ಥಾನ ನೀಡುತ್ತೇವೆ. ಆದರೂ, ಆಕೆಗೆ ಸಲ್ಲಬೇಕಾದ ಗೌರವ ಎಲ್ಲಿಯೂ ಸಿಕ್ಕಿಲ್ಲ. ಪಾಂಚಾಲಿ ಎಂದು ಜರಿಯುತ್ತೇವೆ. ಇಂಥ ಮಹಾನ್ ಯಾಜ್ಞಸೇನಿಗೆ ದೇವಸ್ಥಾನವಿರುವುದಾದರೆ ಅದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾತ್ರ. 

ಬೆಂಗಳೂರಿನ ನ ಚಿಕ್ಕಪೇಟೆಯಲ್ಲಿ ಮಹಾನ್ ತಾಯಿ ದ್ರೌಪದಿಗೆ ದೇವಸ್ಥಾನವೊಂದಿದ್ದು, ಧರ್ಮರಾಯಸ್ವಾಮಿ ದೇವಾಲಯವೆಂದೂ ಹೇಳುತ್ತಾರೆ. ಪ್ರತಿ ವರ್ಷ ಏಪ್ರಿಲ್  ನಗರದ ಬ್ಯ್ರಾಂಡ್ ಹಬ್ಬವಾದ ಕರಗ ಮಹೋತ್ಸವ ನಡೆಯುವುದೂ ಇಲ್ಲಿಯೇ. 

ಪುರಾತನ ಕಾಲದಿಂದಲೂ ತಿಗಳರು ಎಂಬ ಸಮುದಾಯವೊಂದು ನಗರದಲ್ಲಿ ವಾಸಿಸುತ್ತಿದೆ. ಇವರು ನೆಚ್ಚಿಕೊಂಡಿರುವುದು ವ್ಯವಸಾಯ ಹಾಗೂ ತೋಟಗಾರಿಕೆಯನ್ನು. ಇವರು ದ್ರೌಪದಿಯನ್ನು ಪೂಜಿಸುತ್ತಾರೆ. ನಾಡಪ್ರಭು ಕೆಂಪೇಗೌಡ ಬೆಂಗಳೂರು ನಿರ್ಮಿಸುವ ಮುನ್ನವೇ ಮುನ್ನವೇ ಈ ಜನಾಂಗ ದ್ರೌಪದಿಯನ್ನು ಪೂಜಿಸುತ್ತಿದ್ದರೆಂಬ ಪ್ರತೀತಿ ಇದೆ. 

ಪಂಚ ಪಾಂಡವರು ಹಾಗೂ ಅವರ ಧರ್ಮಪತ್ನಿ ದ್ರೌಪದಿಗೆಂದೇ ಈ ದೇವಸ್ಥಾನ ನಿರ್ಮಾಣವಾಗಿದೆ. ಈ ಗುಡಿಯಲ್ಲಿ ದ್ರೌಪದಿ ವಿಗ್ರಹದ ಸುತ್ತ ಅರ್ಜುನ, ಭೀಮ, ನಕುಲ, ಸಹಾದೇವ ಹಾಗೂ ಧರ್ಮರಾಯರಿದ್ದಾರೆ. 

ವರ್ಷಕ್ಕೊಮ್ಮೆ ನಡೆಯುತ್ತೆ ಕರಗ:

ವರ್ಷಕ್ಕೊಮ್ಮೆ ನಡೆಯುವ ಕರಗದಲ್ಲಿ ದ್ರೌಪದಮ್ಮಳನ್ನು ಪೂಜಿಸಿದ ನಂತರವೇ ಬೆಂಗಳೂರಿನಲ್ಲಿ ಇನ್ನುಳಿದ ದೇವರಿಗೆ ಮಹಾ ಪೂಜೆ ನಡೆಯುವುದು. ಈ ಸಂದರ್ಭದಲ್ಲಿ ದೇವಾಲಯದ ಮುಖ್ಯ ಅರ್ಚಕರು ಹೆಣ್ಣಿನ ವೇಷ ಹಾಕಿ ಕೊಂಡು, ಕರಗ ಹೊರುತ್ತಾರೆ. ಹೂವಿನಿಂದ ಅಲಂಕೃತಗೊಂಡ ಕರಗವನ್ನು ಹೊತ್ತು ಊರೆಲ್ಲಾ ಮೆರವಣಿಗೆ ಹೋಗಲಾಗುತ್ತದೆ.

ಮಹಾಭಾರತದ ಯುದ್ಧ ಸಮಯದಲ್ಲಿ ದ್ರೌಪದಿ ತನ್ನ ರಕ್ಷಣೆಗೆಂದು ವೀರಕುಮಾರರೆಂಬ ಸೈನಿಕರನ್ನು ಸೃಷ್ಟಿಸಿಕೊಳ್ಳುತ್ತಾಳೆ. ಯುದ್ಧ ಮುಗಿದು ದ್ರೌಪದಿಯೊಂದಿಗೆ ಪಾಂಡವರು ಆಕಾಶ ಲೋಕಕ್ಕೆ ತೆರಳುವಾಗ, ದ್ರೌಪದಿಯನ್ನು ಉಳಿಯುವಂತೆ ಈ  ವೀರಕುಮಾರರು ಬೇಡಿಕೊಳ್ಳುತ್ತಾರೆ. ಆದರೆ, ಪತಿಯರನ್ನು ಅನುಸರಿಸುವುದು ಅನಿವಾರ್ಯವಾದ ದ್ರೌಪದಿ, ವರ್ಷಕ್ಕೊಮ್ಮೆ ಬರುವುದಾಗ ಭರವಸೆ ನೀಡಿ ನಡೆಯುತ್ತಾಳೆ. ಆ ದಿನವೇ ಕರಗವೆಂದು ಆಚರಿಸಲಾಗುತ್ತದೆ ಎಂಬ ಪ್ರತೀತಿ ಇದೆ. 

10 ದಿನಗಳ ಮಹೋತ್ಸವವಾದ ಕರಗದ ಪ್ರತಿಯೊಂದೂ ದಿನವೂ ಒಂದೊಂದು ವಿಶೇಷವಿರುತ್ತದೆ. ಈ ಆಚರಣೆಗೆ 6 ತಿಂಗಳ ಮುನ್ನವೇ ಅರ್ಚಕರು ತಮ್ಮ ಮಡದಿ ಮಾಂಗಲ್ಯವನ್ನು ಧರಿಸುತ್ತಾರೆ. ಆ ಸಮಯದಲ್ಲಿ ಅರ್ಚಕರ ಹೆಂಡತಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಸಂಪ್ರದಾಯದಂತೆ ದ್ರೌಪದಿ ಪೂಜೆಯ ಬಳಿಕವೇ ಅರ್ಚಕರ ಪತ್ನಿ ಹೊರಗೆ ಕಾಣಿಸುವುದು. 

click me!