ಶಾಂತಿ ಶಾಂತಿ ಶಾಂತಿ ಎಂದು 3 ಸಲ ಹೇಳುವುದೇಕೆ?

By Web DeskFirst Published Feb 2, 2019, 5:07 PM IST
Highlights

ನಾವು ಆಚರಿಸುವ ಪ್ರತೀ ಪದ್ಧತಿಯೂ, ಪಠಿಸುವ ಪ್ರತೀ ಮಂತ್ರಕ್ಕೂ ತನ್ನದೇ ಆದ ಅರ್ಥಗಳಿವೆ. ಮನಸ್ಸಿನ ನೆಮ್ಮದಿಗೆ, ಮನೆಯಲ್ಲಿ ಶಾಂತಿ ನೆಲೆಸಲು ಜತೆಗೆ ನಮ್ಮ ಆಧ್ಯಾತ್ಮಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಕೆಲವು ಸಂಪ್ರದಾಯಗಳನ್ನು ಹಿಂದಿನವರು ಆಚರಣೆಗೆ ತಂದಿದ್ದಾರೆ. ಇದರಲ್ಲಿ ಶಾಂತಿ, ಶಾಂತಿ,ಶಾಂತಿ ಎಂದು ಪಠಿಸುವುದೂ ಒಂದು. ಏನೀದರ ಅರ್ಥ?

ಸಾಮಾನ್ಯವಾಗಿ ಎಲ್ಲಾ ಮಂತ್ರಗಳ ಕೊನೆಯಲ್ಲಿ ಓಂ ಶಾಂತಿಃ ಶಾಂತಿಃ ಶಾಂತಿಃ ಎಂದು ಮೂರು ಸಲ ಹೇಳುತ್ತಾರೆ. ಶಾಂತಿ ಅಂದರೇನು? ಎಲ್ಲವೂ ನಮ್ಮ ಇಚ್ಛೆಯಂತೆ ಕೊನೆಗೊಳ್ಳುವುದು. ದೇವರನ್ನು ಸ್ತುತಿಸುವ ಮಂತ್ರದ ಕೊನೆಯಲ್ಲಿ ನಮಗೆ ಎಲ್ಲ ಸಮಸ್ಯೆ, ಅಡ್ಡಿ ಆತಂಕಗಳಿಂದಲೂ ಶಾಂತಿ ಸಿಗಲಿ ಎಂಬ ಆಶಯದಿಂದ ಓಂ ಶಾಂತಿಃ ಶಾಂತಿಃ ಶಾಂತಿಃ ಎಂದು ಹೇಳಲಾಗುತ್ತದೆ. ಇದನ್ನು ಒಂದೇ ಸಲ ಹೇಳಿದರೆ ಸಾಲದೆ? ಮೂರು ಸಲ ಏಕೆ?

ಈ ಮೂರೂ ಶಾಂತಿಗಳೂ ಬೇರೆ ಬೇರೆ ರೀತಿಯ ಶಾಂತಿಗಳು. ಮೊದಲನೆಯ ಶಾಂತಿ -  ಮಾನಸಿಕ ಹಾಗೂ ದೈಹಿಕ ಬಾಧೆಗಳಿಂದ ಶಾಂತಿ. ಎರಡನೆಯ ಶಾಂತಿ - ಶತ್ರುಗಳು, ಗ್ರಹ, ನಕ್ಷತ್ರ ಇತ್ಯಾದಿಗಳ ಉಪದ್ರವದಿಂದ ಶಾಂತಿ. ಮೂರನೆಯ ಶಾಂತಿ - ಬದುಕಿನಲ್ಲಿ ಎದುರಾಗುವ ಯಾವುದೇ ರೀತಿಯ ವೈಪರೀತ್ಯಗಳು ಅಥವಾ ನಾವು ಊಹಿಸಲಾಗದ ರೀತಿಯಲ್ಲಿ ಬಂದೊದಗುವ ಎಲ್ಲಾ ಸಮಸ್ಯೆಗಳಿಂದ ಶಾಂತಿ. ಈ ಮೂರೂ ಬಗೆಯ ತೊಂದರೆಗಳಿಂದ ನಮಗೆ ಶಾಂತಿ ಸಿಗಲಿ ಎಂಬ ಅರ್ಥದಲ್ಲಿ ಮೂರು ಬಾರಿ ಶಾಂತಿ ಎಂದು ಹೇಳಲಾಗುತ್ತದೆ.

ಮನುಷ್ಯನಿಗೆ ಸಮಸ್ಯೆಗಳು ಮೂರು ಮೂಲದಿಂದ ಬರುತ್ತವೆ ಎನ್ನುವುದು ಹಿರಿಯರ ಅನಿಸಿಕೆ. ಈ ಮೂಲಗಳನ್ನು ಆದಿದೈಹಿಕ, ಆದಿಭೌತಿಕ ಮತ್ತು ಆಧ್ಯಾತ್ಮಿಕ ಎಂದು ಹೇಳುವರು.

ಆದಿದೈಹಿಕ: ಮನುಷ್ಯರ ನಿಯಂತ್ರಣ ಅಸಾಧ್ಯವಾದ ಪ್ರಾಕೃತಿಕ ಅಡಚಣೆಗಳು. ಉದಾಹರಣೆಗೆ ಪರೀಕ್ಷೆಗೆ ಹೊರಟಾಗ ಅಕಾಲ ಮಳೆ ಸುರಿದು ಕಾಲಕ್ಕೆ ಸರಿಯಾಗಿ ಶಾಲೆಯನ್ನು ತಲುಪಲಾಗದ ಸ್ಥಿತಿ.

ಆದಿಭೌತಿಕ: ಅನಿರೀಕ್ಷಿತ ಶಾರೀರಿಕ ಇಲ್ಲವೇ ಮಾನಸಿಕ ಸಮಸ್ಯೆಗಳು ಬಂದು ವಿಘ್ನವಾಗಬಹುದು. ಅಪಘಾತಗಳಾಗಬಹುದು. ಹೊಡೆದಾಟ, ಜಗಳಗಳಾಗಬಹುದು. ಕಳ್ಳತನವಾಗಬಹುದು. 

ಅಧ್ಯಾತ್ಮಿಕ: ಇದು ನಮ್ಮ ಆತ್ಮ ಮತ್ತು ದೇಹಕ್ಕೆ ಸಂಬಂಧಿಸಿದ್ದು. (ವಿಜ್ಞಾನವು ಆತ್ಮದ ಅಸ್ತಿತ್ವವನ್ನು ಒಪ್ಪಿಲ್ಲ ಎನ್ನುವುದು ಬೇರೆಯ ಹಿಚಾರ) ನಮ್ಮ ಆತ್ಮದ ಪೂರ್ವಜನ್ಮ ದುಷ್ಕೃತಗಳಿಗೆ ಅನುಗುಣವಾಗಿ ಕಷ್ಟಗಳು ಬರಬಹುದು.

ಈ ಮೂರು ರೀತಿಯ ಕಷ್ಟ ಪರಂಪರೆಗಳಿಂದ ನಮ್ಮನ್ನು ರಕ್ಷಿಸು ಎನ್ನುವ ಆಶಯದಲ್ಲಿ ಓಂ ಶಾಂತಿಃ ಎಂದು ಮೂರು ಸಲ ಹೇಳುವುದುಂಟು.

ಹಳೆ ಆಚಾರ ಹೊಸ ವಿಚಾರಕ್ಕೆ ಸಂಬಂಧಿಸಿದ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

click me!